Advertisement

ಪೂಜೆ ಪುನಸ್ಕಾರಗಳೊಂದಿಗೆ ಪುತ್ತೂರ್ದ ಉಳ್ಳಾಯನ ಜಳಕದ ಸವಾರಿ

01:12 AM Apr 19, 2017 | Team Udayavani |

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಅಂಗವಾಗಿ ಮಂಗಳವಾರ ಸಂಜೆ ದೇವರ ಅವಭೃಥ ಸವಾರಿ 13 ಕಿ.ಮೀ. ದೂರವಿರುವ ವೀರಮಂಗಲ ಕುಮಾರಧಾರಾ ನದಿ ತಟಕ್ಕೆ ನಗರದ ಮೂಲಕ ವಿವಿಧ ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾ  ತೆರಳಿತು. ದಾರಿಯುದ್ದಕ್ಕೂ ದೇವರು ಭಕ್ತರಿಂದ ಆರತಿ, ಹಣ್ಣುಕಾಯಿ ಮತ್ತು ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾ ಎ. 19ರಂದು ಮುಂಜಾನೆ 6 ಗಂಟೆಗೆ ವೀರಮಂಗಲ ನದಿ ತಟಕ್ಕೆ ತಲುಪುತ್ತಾರೆ. ಅಲ್ಲಿ ಅವಭೃಥ ಮುಗಿಸಿ ಬೆಳಗ್ಗೆ 10 ಗಂಟೆಗೆ ದೇವರು ದೇವಾಲಯಕ್ಕೆ ಮರಳಿ ಧ್ವಜಾವರೋಹಣ ನಡೆಯುತ್ತದೆ.

Advertisement

ರಥೋತ್ಸವದ ಬಳಿಕ
ಎ. 17ರಂದು ರಾತ್ರಿ ದೇವರ ರಥೋತ್ಸವ ನಡೆದ ಬಳಿಕ ದೇವರ ಬಂಗಾರ್‌ ಕಾಯರ್‌ಕಟ್ಟೆ ಸವಾರಿ ನಡೆದು ಶ್ರೀ ಉಳ್ಳಾಲ್ತಿ ದೈವಗಳನ್ನು ಬೀಳ್ಕೊಡುವ ಕಾರ್ಯ ಪೂರ್ವಶಿಷ್ಟ ಸಂಪ್ರದಾಯದಂತೆ ನಡೆದು ಅನಂತರ ಶ್ರೀ ಭೂತ ಬಲಿ ನಡೆದು ದೇವರ ಶಯನ ನಡೆಯಿತು.

ದೈವ ಭೇಟಿ
ಎ. 18ರಂದು ದೇವಾಲಯದಲ್ಲಿ ಬೆಳಗ್ಗೆ ತುಲಾಭಾರ ಸೇವೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು. ಅಪರಾಹ್ನ ದೇವಾಲಯದ ದೈವಗಳಾದ ಹುಲಿಭೂತ, ಕಾಜುಕುಜುಂಬ ಅಂಙಣತ್ತಾಯ ದೈವಗಳ ಪ್ರತಿನಿಧಿ ದೈವವಾಗಿ ದೇವರೊಂದಿಗೆ ಹೋಗುವ ರಕ್ತೇಶ್ವರಿ ದೈವವು ದೇವರನ್ನು ರಥದ ಗದ್ದೆಯಲ್ಲಿ ಭೂತದ ಕಲ್ಲಿನ ಬಳಿಯಿಂದ ಬೀಳ್ಕೊಡುವ ಪದ್ಧತಿ ನಡೆಯಿತು. ಬಳಿಕ ದೇವರು ನಗರದ ರಾಜ ರಸ್ತೆಯ ಮೂಲಕ ವೀರಮಂಗಲ ಕುಮಾರಧಾರಾ ನದಿತಟಕ್ಕೆ ಅವಭೃಥ ಸ್ನಾನಕ್ಕೆ ತೆರಳಿದರು.


ಓದುಗ ರಮೇಶ್‌ ಕೆ. ಅವರು ಮೊಬೈಲ್‌ನಲ್ಲಿ  ತೆಗೆದ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದ ಚಿತ್ರ.

ವಿವಿಧೆಡೆ ಕಟ್ಟೆ ಪೂಜೆ

ಆರಂಭದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ಕಟ್ಟೆ, ಸಿಟಿ ಹಾಸ್ಪಿಟಲ್‌ ಕಟ್ಟೆ, ಅರುಣಾ ಚಿತ್ರಮಂದಿರದ ವಠಾರದ ಕಟ್ಟೆ, ವಾಸುದೇವ್‌ ನಾಯಕ್‌ ನಿರ್ಮಿಸಿದ ಕಟ್ಟೆ, ಕೆನರಾ ಬ್ಯಾಂಕ್‌ ಎದುರಿನ ಕಟ್ಟೆ, ಯೆಳ್ತಿಮಾರ್‌ ಬಾಬಣ್ಣ ಶೆಣೈ ಅವರ ಕಟ್ಟೆ, ದಾಮೋದರ ಶೆಣೈ ಅವರ ಕಟ್ಟೆ, ಏಲ್ಮುಡಿ ನಾಗಪ್ಪ ಪೂಜಾರಿಯವರ ಕಟ್ಟೆ, ಕಲ್ಲಾರೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ, ರಾಘವೇಂದ್ರ ಮಠ, ಜೆ.ಕೆ. ಕಾಂಪ್ಲೆಕ್‌ ಕಟ್ಟೆ, ಕಲ್ಲಾರೆ ಆಳ್ವ ಗ್ಯಾರೇಜ್‌ ಕಟ್ಟೆ, ಧನ್ವಂತರಿ ಆಸ್ಪತ್ರೆಯ ವಠಾರದ ಕಟ್ಟೆ, ಕೆ.ಕೆ. ಶೆಣೈ ಕಂಪೌಂಡ್‌ ಕಟ್ಟೆ, ದರ್ಬೆ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಡಾಲ್ಫಿ ರೇಗೋ ವಠಾರದ ಕಟ್ಟೆ, ದರ್ಬೆ ಶ್ರೀ ಮಹಾಲಿಂಗೇಶ್ವರ ಭಕ್ತವೃಂದ ಸಾರ್ವಜನಿಕ ಕಟ್ಟೆ, ದರ್ಬೆ ವೃತ್ತದ ಬಳಿಯ ಕಟ್ಟೆ, ಗೋಪಾಲ ಪೈ ಕಟ್ಟೆ, ದಿ| ಮಹಾಲಿಂಗ ಪೈ ಕಟ್ಟೆ, ದರ್ಬೆ ಕಾವೇರಿಕಟ್ಟೆ, ಮುರಳಿ ಮೋಹನ ಶೆಟ್ಟಿಯವರ ವಠಾರದ ಕಟ್ಟೆ, ಶ್ರೀ ಮಹಾಲಿಂಗೇಶ್ವರ ಕಟ್ಟೆ, ಕೂರ್ನಡ್ಕ ಅಣ್ಣಪ್ಪ ಕಟ್ಟೆ, ಲಾರ್ಡ್ ಮಹಾಲಿಂಗೇಶ್ವರ ಪೀಠಂ ಟ್ರಸ್ಟ್‌ ಕ್ಯಾಂಪ್ಕೋ ವಠಾರದ ಕಟ್ಟೆ, ಕೃಷ್ಣಯ್ಯ ಮಾಸ್ಟರ್‌ ವಠಾರದ ಕಟ್ಟೆ, ಮರೀಲು ಮಹಾಲಿಂಗೇಶ್ವರ ಕಟ್ಟೆ, ಮರೀಲು ಸಾರ್ವಜನಿಕ ಕಟ್ಟೆ, ಮಹಾಲಿಂಗೇಶ್ವರ ಭಟ್‌ ವಠಾರದ ಕಟ್ಟೆ, ಬೆದ್ರಾಳ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಶ್ರೀ ನಂದಿಕೇಶ್ವರ ಕಟ್ಟೆ, ದೇವರಕಟ್ಟೆ ಬೆದ್ರಾಳ, ಮುಕ್ವೆ  ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ, ಪಿ. ಗಣಪತಿ ಭಟ್‌ ಕಟ್ಟೆ, ಮಜಲುಮಾರು ಉಮಾಮಹೇಶ್ವರ ದೇವಸ್ಥಾನ, ಪದ್ಮಾವತಿ ಅಮ್ಮ ಕಟ್ಟೆ, ಪಾದೆ ಕಟ್ಟೆ, ಪುತ್ತೂರಾಯ ಕಟ್ಟೆ, ನರಿಮೊಗರು ಕಾಳಿಂಗಹಿತ್ಲು ಕಟ್ಟೆ, ದುಬ್ರಾಯ ಹೆಬ್ಟಾರ್‌ ಅವರ ಕಟ್ಟೆ, ಕೆರೆಮನೆ ಕಟ್ಟೆ, ಕೊಡಿನೀರು ಸಾರ್ವಜನಿಕ ಅಶ್ವತ್ಥ ಕಟ್ಟೆ, ಅತಿಶಯ ಕ್ಷೇತ್ರ ಕೈಪಂಗಳ ಕಟ್ಟೆ, ಪುತ್ತೂರು ಸಾವಂತ ಕಟ್ಟೆ, ಆನಾಜೆ ಹೆಬ್ಟಾರರ ಕಟ್ಟೆ, ವೀರಮಂಗಲ ಆನಾಜೆ ಸಾರ್ವಜನಿಕ ಕಟ್ಟೆ, ವೀರ ಮಂಗಲ ಗುತ್ತು, ವೀರಮಂಗಲ ದೇವಸ್ಥಾನ, ನದಿ ಕಿನಾರೆ ಕಟ್ಟೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪೂಜೆ ನಡೆಯಿತು. ಸುಮಾರು 50 ಕಟ್ಟೆಗಳಲ್ಲಿ ಪೂಜೆಯ ಜತೆಗೆ ನಗರದಲ್ಲಿ ಹಾಗೂ ವೀರಮಂಗಲ ನದಿ ತೀರಕ್ಕೆ ತಲುಪುವ ಮೊದಲು ವಿವಿಧ ಕಡೆ ಗಳಲ್ಲಿ ಭಕ್ತರು  ದೇವರಿಗೆ ಸಲ್ಲಿಸುವ ಆರತಿ, ಹಣ್ಣುಕಾಯಿಗಳನ್ನು ಸ್ವೀಕರಿಸಿದರು.

Advertisement

ನಗರ ಶೃಂಗಾರ
ಶ್ರೀ ದೇವರು ಅವಭೃಥಕ್ಕೆ ಹೋಗುವ ದಾರಿಯುದ್ದಕ್ಕೂ ತಳಿರು ತೋರಣ, ವಿದ್ಯುತ್‌ ದೀಪಗಳ ಅಲಂಕಾರ, ಹಣತೆಗಳ ಶೃಂಗಾರ, ಕಟ್ಟೆಗಳ ಶೃಂಗಾರ ಗಮನ ಸೆಳೆಯಿತು. ವಿವಿಧ ಕಟ್ಟೆಗಳಲ್ಲಿ ದೇವರಿಗೆ ಪೂಜೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗಾನ, ತಾಳಮದ್ದಳೆ, ನಾಟಕ, ಸಂಗೀತ ಕಾರ್ಯಕ್ರಮಗಳು ನಡೆದವು. ಸುಡುಮದ್ದು ಪ್ರದರ್ಶನವೂ ನಡೆಯಿತು.

ದೇವಸ್ಥಾನದಲ್ಲಿ ಇಂದು
ಶ್ರೀ ದೇವರು ಬೆಳಗ್ಗೆ ಅಂದಾಜು 6 ಗಂಟೆಗೆ ವೀರಮಂಗಲ ಕುಮಾರಧಾರಾ ನದಿಯಲ್ಲಿ ಸ್ನಾನ ಮುಗಿಸಿದ ಬಳಿಕ ಬೆಳಗ್ಗೆ 10 ಗಂಟೆಗೆ ದೇವಾಲಯಕ್ಕೆ ಮರಳಿ ತಲುಪುತ್ತಾರೆ. ಅನಂತರ ದೇವಾಲಯದಲ್ಲಿ ಧ್ವಜಾವರೋಹಣ ನಡೆಯಲಿದೆ. ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ, ಹುಲಿಭೂತ, ರಕ್ತೇಶ್ವರಿ ನೇಮ ಜರಗಲಿದೆ.

ಚಿತ್ರ: ಪದ್ಮ ಸ್ಟುಡಿಯೋ

Advertisement

Udayavani is now on Telegram. Click here to join our channel and stay updated with the latest news.

Next