ಪುತ್ತೂರು: ಸಚ್ಛ ಭಾರತ ಶ್ರೇಷ್ಠ ಭಾರತ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಅವರ ಕನಸನ್ನು ಸಾಕಾರ ಮಾಡಬೇಕಾದರೆ ಪ್ರತಿಯೊಬ್ಬರೂ ಸಚ್ಛತೆಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಅವರ ಹುಟ್ಟು ಹಬ್ಬದ ದಿನ ಸಚ್ಛತೆ ನಡೆಸುವ ಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಸಬೇಕಾಗಿದೆ ಎಂದು ಶಾಸಕ ಮಠಂದೂರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಪುತ್ತೂರು ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾದ ಸಚ್ಛತೆ ಕಾರ್ಯಕ್ರಮಕ್ಕೆ ಗಾಂಧಿಕಟ್ಟೆಯ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಸೆ. 15 ಮತ್ತು ಅ. 2 ಬಹಳಷ್ಟು ಪ್ರಾಮುಖ್ಯವುಳ್ಳ ದಿನಗಳು. ಹಳ್ಳಿ ಮತ್ತು ನಗರ ಸಚ್ಛವಾದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಪುತ್ತೂರಿನ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನಗರದ ಜನತೆ ಜವಾಬ್ದಾರಿ ಹೆಚ್ಚಿಸಿದ್ದಾರೆ.
ಸಚ್ಛ ಪುತ್ತೂರು ನಿರ್ಮಾಣವೇ ನಮ್ಮ ಗುರಿ. ಅದಕ್ಕಾಗಿ ಎಲ್ಲ ವಾರ್ಡ್ಗಳ ಬಿಜೆಪಿ ಅಭ್ಯರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಚ್ಛ ಪುತ್ತೂರು ಸಮೃದ್ಧ ಪುತ್ತೂರಾಗಿ ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಶಾಸಕರು ತಿಳಿಸಿದರು.
ಗಾಂಧಿಕಟ್ಟೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಬ್ರಹ್ಮನಗರ ಕಾಲನಿಗಳಲ್ಲಿ ಪೊರಕೆ ಹಿಡಿದು ಸಚ್ಛತೆಗೊಳಿಸುವ ಮೂಲಕ ಕಾರ್ಯಕರ್ತರು, ನಗರಸಭಾ ಸದಸ್ಯರು ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಶಾಸಕ ಸಂಜೀವ ಮಠಂದೂರು ಮಾಡಿದರು.
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ನಗರಸಭೆ ಮಾಜಿ ಉಪಾಧ್ಯಕ್ಷ ಬಿ. ವಿಶ್ವನಾಥ ಗೌಡ, ಬಿಜೆಪಿ ಪ್ರಮುಖರಾದ ಬಂಗಾರಡ್ಕ ವಿಶ್ವೇಶ್ವರ ಭಟ್, ಕಂಟ್ರಮಜಲ್ ಭಾಸ್ಕರ ರೈ, ಚಂದ್ರಶೇಖರ ರಾವ್ ಬಪ್ಪಳಿಗೆ, ಜಯಶ್ರೀ ಶೆಟ್ಟಿ, ಜಯಂತಿ ನಾಯಕ್, ವಿನೋದ್ ಕಲ್ಲೇಗ, ಅರ್ಪಣಾ ಶಿವಾನಂದ್, ರಫೀಕ್, ಉಮ್ಮರ್ ಹಾಗೂ 25 ಮಂದಿ ನಗರಸಭಾ ಸದಸ್ಯರು, ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೆ. ಜೀವಂಧರ್ ಜೈನ್ ಸ್ವಾಗತಿಸಿ, ವಂದಿಸಿದರು.