Advertisement

ಕನ್ನಡ ಕೈಂಕರ್ಯಕ್ಕೆ ಬದ್ಧತೆ ತೋರಿದ ಸಾಹಿತ್ಯ ಸಮ್ಮೇಳನ

12:01 PM Sep 21, 2018 | |

ಪುತ್ತೂರು: ಸಂಘಟನೆ, ಸಾಹಿತ್ಯ ಸಹಿತ ಪ್ರತಿಯೊಂದು ಚಟುವಟಿಕೆಗೂ ತಾಯ್ನೆಲವಾಗಿ ಗುರುತಿಸಿಕೊಂಡ ಪುತ್ತೂರಿನಲ್ಲಿ ಎರಡು ದಿನಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನ ಗುರುವಾರ ಸಂಜೆ ಸಮಾಪನಗೊಂಡಿತು.

Advertisement

ಕನ್ನಡ ಭಾಷೆ ಗಟ್ಟಿಯಾಗಿ ಹಾಸು ಹೊಕ್ಕಾಗಿರುವ ನೆಲ ಗ್ರಾಮೀಣ ಭಾಗವೇ ಹೊರತು ಪಟ್ಟಣವಲ್ಲ. ಆಡು ಭಾಷೆಯಾಗಿ ದಿನಂಪ್ರತಿ ಬಳಕೆ ಆಗುತ್ತಿದೆ. ಆದ್ದರಿಂದ ಕನ್ನಡವನ್ನು ಉಳಿಸಿದ ಶ್ರೇಯಸ್ಸು ಗ್ರಾಮೀಣ ಭಾಗದ ಶ್ರಮಿಕ ವರ್ಗಕ್ಕೆ ಸೇರಬೇಕು ಎಂಬ ವೇದಿಕೆಯ ಮಾತಿಗೆ ಸಭೆ ರುಜು ಹಾಕಿತು.

ಮಣ್ಣಿನ ಭಾಷೆಯಾಗಿ ಕನ್ನಡವನ್ನು ಪ್ರಾಯೋಜಿಸಿದ್ದು 18ನೇ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದ ಹೆಚ್ಚುಗಾರಿಕೆ. ಬುಧವಾರ ಬೆಳಿಗ್ಗೆ ನಡೆದ ರಾಷ್ಟ್ರಧ್ವಜಾರೋಹಣದಿಂದ ಹಿಡಿದು ಗುರುವಾರ ಸಂಜೆ ನಡೆದ ಸಮಾರೋಪದವರೆಗೆ ವಿವಿಧ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿಬಂದಿತು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ನಡೆದ 18ನೆಯ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ 2 ದಿನಗಳ ಕಾಲ ನಡೆದಿದೆ ಎನ್ನುವುದು ಪುತ್ತೂರಿನ ಹೆಚ್ಚುಗಾರಿಕೆ. ಕಾರ್ಯಕ್ರಮದ ಕೇಂದ್ರಬಿಂದು ಸಮ್ಮೇಳನಾಧ್ಯಕ್ಷ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌. ವೇದಿಕೆಯ ಮುಂಭಾಗದಲ್ಲಿದ್ದ ಕನ್ನಡಾಂಬೆಯ ಭಾವಚಿತ್ರ ಸಭಾಂಗಣಕ್ಕೆ ಭಕ್ತಿಯ ಮೆರುಗು ನೀಡಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಹಿತಿಗಳು, ಕಲಾ ಪ್ರೇಮಿಗಳು ಸಮ್ಮೇಳನದ ಸೊಬಗನ್ನು ಇಮ್ಮಡಿಸಿದರು. ಎರಡೂ ದಿನವೂ ಸಭಾ ವೇದಿಕೆ ತುಂಬಿದ್ದು, ಕಾರ್ಯಕ್ರಮದ ಯಶಸ್ಸು ಎಂದೇ ಬಣ್ಣಿಸಲಾಗಿದೆ.

ಸಾಂಸ್ಕೃತಿಕ ಲೇಪ
ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ವಸ್ತು ಪ್ರದರ್ಶನ ಸಹಿತ ಎಲ್ಲದರಲ್ಲೂ ಒಪ್ಪ ಓರಣ ಕಂಡುಬಂದಿತ್ತು. ವಿರಾಮದ ವೇಳೆ ಪ್ರೇಕ್ಷಕರ ಮನಸ್ಸನ್ನು ರಂಜಿಸಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು. ಕನ್ನಡ ನಾಡ-ನುಡಿಯನ್ನು, ನೃತ್ಯ, ಸಂಗೀತ ಪ್ರಕಾರಗಳನ್ನು ನೆನಪಿಸುವಂತಹ ವಿಶೇಷ ಕಾರ್ಯಕ್ರಮಗಳು ಕನ್ನಡ ನಾಡಿಗೆ ಮತ್ತಷ್ಟು ಮೆರುಗನ್ನು ನೀಡುವಂತೆ ಮಾಡಿತು.

Advertisement

ವಸ್ತು ಪ್ರದರ್ಶನ
ಸಮ್ಮೇಳನದ ಇನ್ನೊಂದು ಬದಿಯಲ್ಲಿ ವಸ್ತು ಪ್ರದರ್ಶನ ಸುಗಮವಾಗಿ ನಡೆಯಿತು. ಸಂಪ್ರದಾಯ ನೆನಪಿಸುವ ಪುಸ್ತಕಗಳು, ಅಲಂಕೃತ ಮಣ್ಣಿನ ಮಡಕೆಗಳು, ಬಾಳೆ ನಾರಿನ ಸೀರೆ, ನೈಸರ್ಗಿಕ ಐಸ್‌ಕ್ರೀಂ, ಬಿದಿರಿನ ಅಕ್ಕಿ ಇತ್ಯಾದಿಗಳು ಸಾರ್ವಜನಿಕರನ್ನು ಸೆಳೆಯುವಲ್ಲಿ ಸಫಲವಾದವು.

ಶಿವ ದಾಸೋಹಂ
ಸಮ್ಮೇಳನದ ಹೊಟ್ಟೆ ತಂಪಾಗಿಸಿದ್ದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಬೆಳಗ್ಗಿನ, ಮಧ್ಯಾಹ್ನ ಹಾಗೂ ಸಂಜೆಯ ಊಟ ಉಪಾಹಾರವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದಲೇ ನೀಡಲಾಯಿತು. ಎರಡನೇ ದಿನವಾದ ಗುರುವಾರ ನಡೆದ ಸಮ್ಮೇಳನದ ಮಧ್ಯಾಹ್ನದ ಊಟಕ್ಕೆ ಸುಮಾರು 2,500-3,000 ಜನರು ಪಾಲ್ಗೊಂಡರು.

ಸ್ವಯಂ ಸೇವಕರು
ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಕಾರಣ ಸ್ವಯಂಸೇವಕರು. ಆಸುಪಾಸಿನ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಶ್ರಮಿಸಿದರು. ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಸಾಹಿತ್ಯಾಭಿಮಾನಿಗಳು ಕನ್ನಡದ ಸವಿಯನ್ನು ಸವಿಯುವಲ್ಲಿ ಸಾಕ್ಷಿಯಾದರು.

ಗಾಂಧೀಜಿ ಚಿತ್ರಸಂಪುಟ
ಗಾಂಧೀಜಿ ಜೀವನದ ವಿವಿಧ ಘಟ್ಟಗಳ ಚಿತ್ರಗಳ ಸಂಗ್ರಹವನ್ನು ವಸ್ತು ಪ್ರದರ್ಶನದಲ್ಲಿ ಇಡಲಾಗಿತ್ತು. ಜೋನ್‌ ವೇಗಸ್‌ ಕಡಬ ಅವರ ಸಂಗ್ರಹಿಸಿರುವ ಚಿತ್ರಸಂಪುಟ ಜನರ ಮೆಚ್ಚುಗೆಗೆ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next