Advertisement

ಗ್ರಾಮ ಪಂಚಾಯಿತ್ ಸದಸ್ಯ ಸ್ಥಾನದಿಂದ ಶಾಸಕ, ಸಚಿವರಾದ ಪುಟ್ಟರಂಗಶೆಟ್ಟಿ!

05:34 PM Dec 03, 2020 | sudhir |

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆ ಮತ್ತೆ ಬಂದಿದೆ. ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ ಸದಸ್ಯರ ಅಧಿಕಾರ ಕಂಡ ಕೆಲವರು, ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನವೇನು ಮಹಾ? ಎಂದುಕೊಳ್ಳಬಹುದು. ಆದರೆ ಇಂದು ಸಚಿವ, ಶಾಸಕರಾಗಿರುವ ಕೆಲ ಪ್ರಮುಖರ ಮೊದಲ ರಾಜಕೀಯ ಪ್ರವೇಶ ಗ್ರಾಮ ಪಂಚಾಯಿತಿಯಿಂದಲೇ. ಅಂಥವರಲ್ಲೊಬ್ಬರು ಚಾಮರಾಜನಗರ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ.

Advertisement

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪ್ರವೇಶ ಮಾಡಿದವರು, ಒಮ್ಮೆಲೇ ಶಾಸಕ ಸ್ಥಾನದ ಟಿಕೆಟ್ ಬಯಸುತ್ತಾರೆ. ರಾಜಕೀಯದ ಕೆಳಹಂತದಲ್ಲಿ ದುಡಿಯದೇ, ಏಕ್‌ದಂ ಶಾಸಕನಾಗಿ ಬಿಡಬಹುದೆಂಬ ಲೆಕ್ಕಾಚಾರದಲ್ಲಿರುತ್ತಾರೆ. ಆದರೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಅನುಭವ ಪಡೆದು ಜನಮನ್ನಣೆ ಗಳಿಸಿ, ಪಕ್ಷದಲ್ಲಿ ಗುರುತಿಸುವ ಮುಖಂಡರಾಗಿ ಹಂತ ಹಂತವಾಗಿ ಬೆಳೆದರೆ ಶಾಸಕ ಸ್ಥಾನ ತಾನೇ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.

ಪುಟ್ಟರಂಗಶೆಟ್ಟಿ ಚಾಮರಾಜನಗರದ ಹ್ಯಾಟ್ರಿಕ್ ಶಾಸಕ. 2008ರ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರಕ್ಕೆ ಶಾಸಕರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿ, ನಂತರ 2013 ಹಾಗೂ 2018 ರ ಚುನಾವಣೆಯಲ್ಲೂ ಸತತವಾಗಿ ಆರಿಸಿಬಂದಿದ್ದಾರೆ.
ಆದರೆ ಅವರ ರಾಜಕೀಯದ ರಂಗ ಪ್ರವೇಶ ಆದದ್ದು ಗ್ರಾಮ ಪಂಚಾಯಿತಿ ಮೂಲಕ. ಪುಟ್ಟರಂಗಶೆಟ್ಟಿ ಅವರು 1987ರಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗೌಡಹಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿ ಪ್ರಥಮ ಬಾರಿಗೆ ರಾಜಕೀಯ ಪ್ರವೇಶ ಮಾಡಿದರು. ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಪಂಚಾಯತ್ ರಾಜ್ ಅನ್ನು ಜಾರಿಗೊಳಿಸಿದ್ದು ಅಂದಿನ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ಸರ್ಕಾರ. ಆಗ ಗೌಡಹಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಅವಿರೋಧ ಆಯ್ಕೆಯಾಗಿದ್ದರು. ಮೊದಲ ಆಯ್ಕೆಯಲ್ಲಿ ಉಪಪ್ರಧಾನರೂ ಆದರು.

ಇದನ್ನೂ ಓದಿ:ಕ್ರೀಡಾ, ಕಲಾ, ಶಿಕ್ಷಣ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಿರಿ ವಯಸ್ಸಿನ ಸಾಧಕಿ ಪ್ರತೀಕ ರೈ

ತದ ನಂತರ, 1993ರಲ್ಲಿ ಮಂಡಲ ಪಂಚಾಯಿತಿಗಳು ಗ್ರಾಮ ಪಂಚಾಯಿತಿಗಳಾಗಿ ಪರಿವರ್ತನೆಯಾದ ನಂತರ, ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿಯಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸದಸ್ಯರಾಗಿ ಮತ್ತೆ ಅವಿರೋಧವಾಗಿ ಆಯ್ಕೆಯಾದರು.

Advertisement

ಗ್ರಾಮ ಪಂಚಾಯಿತಿಯಾದ ಬಳಿಕ ಶೆಟ್ಟರು ನಂತರ ಅವಿಭಜಿತ ಮೈಸೂರು ಜಿಲ್ಲೆಯ ಯಳಂದೂರು ಜಿಲ್ಲಾ ಪಂಚಾಯಿತಿ ಸದಸ್ಯರಾದರು. ಅದಾದ ನಂತರ ಚಾಮರಾಜನಗರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರೂ ಆಗಿದ್ದರು.
2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ನಂತರ 2013ರ ಚುನಾವಣೆ ಮತ್ತು 2018ರ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪುನರಾಯ್ಕೆಯಾಗಿದ್ದಾರೆ. ಅಲ್ಲದೇ ಕಾಂಗ್ರೆಸ್ ಜೆಡಿಎಸ್ ಸರ್ಕಾರದಲ್ಲಿ ಸಚಿವರೂ ಆಗಿದ್ದರು.

ಇದರಲ್ಲೂ ಒಂದು ವಿಶೇಷವಿದೆ. ಗ್ರಾಮ ಪಂಚಾಯಿತಿಯಿಂದ ಶಾಸಕರಾದ ಈ 33 ವರ್ಷ ರಾಜಕೀಯ ಜೀವನದಲ್ಲಿ ಪುಟ್ಟರಂಗಶೆಟ್ಟಿಯವರು ಪಕ್ಷ ಬದಲಿಸಿಲ್ಲ! ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಹಿಡಿದ ಅವರು, ಇದುವರೆಗೂ ಅದೇ ಚಿಹ್ನೆಗೆ ನಿಷ್ಠರಾಗಿದ್ದಾರೆ. ರಾಜಕೀಯದಲ್ಲಿ ಇದು ಬಹಳ ಅಪರೂಪ!

ಜನಸೇವೆ ಮಾಡಲು ರಾಜಕೀಯ ರಂಗಕ್ಕೆ ಬರುವವರು ತಳಮಟ್ಟದಿಂದ ಬರಬೇಕು. ಹಾಗಾದಾಗ ಗ್ರಾಮೀಣ ಜನರ ಕಷ್ಟ ಸುಖ ಅರ್ಥವಾಗುತ್ತದೆ. ಇದಕ್ಕೆ ನಾನೇ ಉದಾಹರಣೆ. ನಾನು (ಮಂಡಲ) ಗ್ರಾಮಪಂಚಾಯಿತಿ ಸದಸ್ಯನಾಗಿ ನನ್ನ ರಾಜಕೀಯ ಜೀವನ ಆರಂಭಿಸಿದೆ. ಜನರ ಕಷ್ಟ ಸುಖ ಸಮಸ್ಯೆಗಳನ್ನು ಅರಿತೆ. ನಂತರ ಜಿ.ಪಂ. ಸದಸ್ಯನಾಗಿ ಉಪಾಧ್ಯಕ್ಷನಾಗಿ ಈಗ ಶಾಸಕನಾಗಿದ್ದೇನೆ. ಈಗ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅಧಿಕಾರವಿದೆ. ಒಬ್ಬ ಶಾಸಕನಿಗೆ ಡ್ರಾಯಿಂಗ್ ಪವರ್ ಇಲ್ಲ. ಗ್ರಾ.ಪಂ. ಅಧ್ಯಕ್ಷನಿಗೆ ಇದೆ. ಗ್ರಾಪಂ ಅಧ್ಯಕ್ಷನಾಗಿ ಅನೇಕ ಕೆಲಸಗಳನ್ನು ಮಾಡಬಹುದಾಗಿದೆ.
-ಸಿ. ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ ಕ್ಷೇತ್ರ.

– ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next