Advertisement

ಪುಶ್‌ ಪುಶ್‌ ಎಂದಿದೆ…

10:46 AM Jan 02, 2018 | |

ಜೀವನದ ಹಾದಿಯಲ್ಲಿ ಸಿಗೋ ಎಲ್ಲರೂ ನಮ್ಮ ಜೊತೆ ಕೊನೆ ತನಕ ನಡೆದು ಬರುವುದಿಲ್ಲ. ಅವರಲ್ಲಿ ಅದೆಷ್ಟೋ ಜನರು ಹಾದಿ ಮಧ್ಯ ಕಣ್ಮರೆಯಾಗಿಬಿಡುತ್ತಾರೆ. ಅಂದರೆ ಬೇರೆ ಬೇರೆ ದಾರಿಯನ್ನು ಹಿಡಿದುಬಿಡುತ್ತಾರೆ. ಕೆಲವೊಮ್ಮೆ ಪರಿಸ್ಥಿತಿಯ ಅನಿವಾರ್ಯತೆ ಇದಕ್ಕೆ ಕಾರಣವಾದರೆ ಇನ್ನು ಕೆಲವೊಮ್ಮೆ ನಾವೇ ಇದಕ್ಕೆ ಕಾರಣವಾಗಿಬಿಡುತ್ತೇವೆ. ವೈಮನಸ್ಯ, ಮನಸ್ತಾಪಗಳು ಇವಕ್ಕೆ ಕಾರಣವಾಗಿರಬಹುದು. ಇದು ಖಂಡಿತಾ ತಪ್ಪೆಂದು ಹೇಳುತ್ತಿಲ್ಲ. ವೈಮನಸ್ಯ, ಮನಸ್ತಾಪಗಳು ಒಂದು ರೀತಿಯಲ್ಲಿ ನಮ್ಮ ನಮ್ಮ ಬದುಕಿನ ಫಿಲ್ಟರ್‌ಗಳು. ಅವು ನಮ್ಮ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುವವರಿಂದ ರಕ್ಷಣೆ ಒದಗಿಸುತ್ತವೆ. ಆಗ ನಾವು ಸಜ್ಜನರೂ, ಸಮಾನ ಮನಸ್ಕರಿಂದ ಸುತ್ತುವರಿಯುತ್ತೇವೆ. ಇದು ನಮ್ಮ ಬದುಕಿನ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುತ್ತದೆ. ಅದಕ್ಕೇ ನಾವು ಎಚ್ಚರ ವಹಿಸಬೇಕಾದ 6 ಗುಣಲಕ್ಷಣಗಳ ಪಟ್ಟಿ ನೀಡಿದ್ದೇವೆ. ಅದಕ್ಕೂ ಮುಂಚೆ ಈ ಆರೂ ಅಂಶಗಳು ನಮ್ಮಲ್ಲಿ ಮೈಗೂಡದಂತೆ ಎಚ್ಚರವಹಿಸುವುದು ತುಂಬಾ ಮುಖ್ಯ.

Advertisement

1.ಅತೃಪ್ತ ಆತ್ಮ
ಅತೃಪ್ತ ಆತ್ಮ ಅನ್ನೋದು ಬರಿ ದೆವ್ವದ ಸಿನಿಮಾಗಳಲ್ಲಿ ಮಾತ್ರವೇ ಇರೋದಿಲ್ಲ. ನಮ್ಮ ಬದುಕಿನಲ್ಲೂ ಇರುತ್ತಾರೆ. ಅವರಿಗೆ ಜೀವನದಲ್ಲಿ ಯಾವ ವಸ್ತುಗಳೂ, ಸಂಗತಿಗಳೂ ಖುಷಿಯನ್ನುಂಟು ಮಾಡುವುದಿಲ್ಲ. ಏನಾದರೊಂದು ನೆಪ ಹೇಳಿ ಯಾವಾಗಲೂ ಕೊರಗುತ್ತಿರುತ್ತಾರೆ. ಗೆಳೆಯರ ಬಳಗದಲ್ಲಿ ಇಂಥವರಿದ್ದರೆ ಅದರ ಕಷ್ಟ ಅನುಭವಕ್ಕೆ ಬಂದೇ ಇರುತ್ತೆ. ಒಂದು ಸಿನಿಮಾ ನೋಡಿ ಖುಷಿ ಪಡೋದಾಗಲಿ, ಹೊಸ ಜಾಗದ ಸೌಂದರ್ಯ ಸವಿಯುವುದಾಗಲಿ ಇವರ ಹಣೆಯಲ್ಲಿ ಬರೆದಿಲ್ಲ. ನಮ್ಮ ಇದ್ದ ಬದ್ದ ಎನರ್ಜಿ, ಸ್ಪೂರ್ತಿಯೆಲ್ಲಾ ಇವರನ್ನು ಸಂಬಾಳಿಸುವುದರಲ್ಲಿಯೇ ಹೊರಟುಹೋಗಿ ಬಿಡುತ್ತೆ. ಇಂಥವರಿಂದ ದೂರವಾಗುವುದರಿಂದ ಯಾವುದೇ ನಷ್ಟವಿಲ್ಲ.

2. ಸಮಸ್ಯಾ ಸೃಷ್ಟಿಕರ್ತರು
ಸಮಸ್ಯೆಗಳು ಹೇಳಿ ಕೇಳಿ ಬರೋದಿಲ್ಲ ಅಂತಾರೆ. ಆದರೆ ಅದು ತಾನಾಗಿ ಬರದೇ ಹೋದರೂ ನಾವಾಗಿಯೇ ಎಳೆದುಕೊಂಡರೆ, ಅಥವಾ ತಂದುಕೊಂಡರೆ? ಹಾಗೂ ಇದೆಯೇ ಎಂದು ಅಚ್ಚರಿ ಪಡದಿರಿ. ಸಮಸ್ಯೆಗಳನ್ನು ಸೃಷ್ಟಿಸುವ ಮಂದಿಯ ಕೆಟಗರಿಯೂ ಇದೆ. ಸುಮ್ಮನೆ ಇರಲಾರದವರು ಇರುವೆ ಬಿಟ್ಟುಕೊಂಡಂತೆ ಎನ್ನುತ್ತಾರಲ್ಲ… ಹಾಗೆ.  ಇಂಥವರಿಂದ ನಮ್ಮ ಸಾಮರ್ಥ್ಯದ ಮೇಲೆ ನಮಗೇ ನಂಬಿಕೆ ಕಡಿಮೆಯಾಗುವ ಅಪಾಯವಿದೆ. ನಾವು ಎಲ್ಲಾ ಚೆನ್ನಾಗಿದೆ ಎಂದುಕೊಂಡರೂ ನಮ್ಮ ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಮಸ್ಯೆಗಳನ್ನು ತಂದು ಹಾಕಿ ತಾವು ಮಜಾ ನೋಡುವವರು. ಇವರಿಂದ ಯಾವುದೇ ಸಹಾಯವನ್ನು ಅಪೇಕ್ಷಿಸುವುದು ಮೂರ್ಖತನವಾಗುತ್ತದೆ. 

3. ಥ್ಯಾಂಕ್‌ಲೆಸ್‌
ಕನ್ನಡದಲ್ಲಿ “ವಂದನೆ ವಂದನೆ, ಸಾವಿರ ವಂದನೆ’ ಎಂಬ ಒಂದು ಹಾಡಿದೆ. ಸಾವಿರ ವಂದನೆಗಳು ಹೋಗಲಿ ಒಂದು ವಂದನೆಯನ್ನೂ ಸಲ್ಲಿಸದ ಮಂದಿಯೂ ಇರುತ್ತಾರೆ. ನಮ್ಮಿಂದ ಅವರಿಗೆ ಎಷ್ಠೆ ದೊಡ್ಡ ಸಹಾಯವಾಗಿದ್ದರೂ ಅದು ಅವರಿಗೆ ಕಮ್ಮಿಯೇ. ಹಾಗೆಂದು ಅವರು ನಿಮ್ಮಿಂದ ಸಹಾಯ ಪಡೆದುಕೊಳ್ಳುವುದನ್ನು ಯಾವತ್ತೂ ನಿಲ್ಲಿಸುವುದಿಲ್ಲ. ನಿಮಗೆ ಗೊತ್ತಿಲ್ಲದೇ ಇವರು ನಿಮ್ಮ ಮೇಲೆ ಸವಾರಿ ಮಾಡುತ್ತಿರುತ್ತಾರೆ. ತಮಗೆ ಬೇಕಾದ ಕೆಲಸಗಳನ್ನು ನಿಮ್ಮ ಮೂಲಕ ನಾಜೂಕಾಗಿ ಮಾಡಿಸಿಕೊಳ್ಳುತ್ತಿರುತ್ತಾರೆ. 

4. ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ
ನಿಮ್ಮ ಬಳಿ ಇಷ್ಟು ದಿನ ಚೆನ್ನಾಗಿಯೇ ಮಾತಾಡುತ್ತಿದ್ದ ಗೆಳೆಯ/ ಗೆಳತಿ ಏಕಾಏಕಿ ಮಾತು ನಿಲ್ಲಿಸಿಬಿಡುತ್ತಾರೆ. ಯಾಕಿರಬಹುದೆಂದು ಎಷ್ಟು ತಲೆ ಕೆಡಿಸಿಕೊಂಡರೂ ನಿಮಗೆ ಉತ್ತರ ಸಿಗೋದಿಲ್ಲ. ಆಮೇಲೊಂದು ದಿನ ಒಂದು ಸಂಗತಿ ನಿಮ್ಮ ಗಮನಕ್ಕೆ ಬರುತ್ತೆ. ಪರೀಕ್ಷೆ ಫ‌ಲಿತಾಂಶ ಪ್ರಕಟವಾದ ದಿನದಿಂದ ಅವರು ನಿಮ್ಮ ಜೊತೆ ಮಾತು ಬಿಟ್ಟಿರುತ್ತಾರೆ. ಪರೀಕ್ಷೆಯಲ್ಲಿ ನಿಮಗೆ ಅವರಿಗಿಂತ ಒಂದಷ್ಟು ಮಾರ್ಕು ಹೆಚ್ಚು ಬಂದಿರುವುದೇ ಅದಕ್ಕೆ ಕಾರಣವೆನ್ನುವ ಸಂಗತಿ ನಿಮಗೆ ಗೊತ್ತಾಗುತ್ತೆ. ಇಂಥವರ ಈ ಅಸೂಯೆ ಬರಿ ಮಾರ್ಕುಗಳಿಷ್ಟೇ ಸೀಮಿತವಾಗಿಲ್ಲ. ಪ್ರಮೊಷನ್‌, ಮಗು, ಪ್ರವಾಸ ಹೀಗೆ ಯಾವುದೇ ಖುಷಿಯ ವಿಚಾರ ಹೇಳಿದರೂ ಅವರಿಗೆ ಸಹಿಸಿಕೊಳ್ಳಲಿಕ್ಕಾಗದು. ಅದನ್ನು ಯಾವಯಾವುದೋ ರೂಪದಲ್ಲಿ ಅವರು ಪ್ರಕಟಪಡಿಸುತ್ತಿರುತ್ತಾರೆ. 

Advertisement

5. ಅನುಕಂಪವೇ ಎಲ್ಲಾ 
ಇನ್ನು ಕೆಲವರಿರುತ್ತಾರೆ. ಅವರು ಸಾಮಾನ್ಯವಾಗಿ ಒಂದಲ್ಲಾ ಒಂದು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಲೇ ಇರುತ್ತಾರೆ. ಅವರನ್ನು ನೋಡಿದರೆ ಅಯ್ಯೋ ಪಾಪ ಯಾವಾಗಲೂ ಅವರಿಗೆ ಏನಾದರೊಂದು ಸಮಸ್ಯೆ ಇದ್ದೇ ಇರುತ್ತಪ್ಪಾ ಅನ್ನಿಸಬೇಕು. ಆ ರೇಂಜಿನಲ್ಲಿ ಸಮಸ್ಯೆ ತೋಡಿಕೊಳ್ಳುತ್ತಿರುತ್ತಾರೆ. ಹಾಗೆಂದು ಸಹಾಯ ಮಾಡಲು ಹೋದರೆ ನಾವೇ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಏಕೆಂದರೆ ಕ್ರಮೇಣ ಸಮಸ್ಯೆಯಲ್ಲಿರುವುದನ್ನೇ ಅವರು ಇಷ್ಟ ಪಡುತ್ತಿರುತ್ತಾರೆ ಎಂಬುದು ನಿಮಗೇ ತಿಳಿದು ಹೋಗುತ್ತೆ. ಯಾರು ಎಷ್ಟೇ ಸಹಾಯ ಮಾಡಿದರೂ ಅವರಿಗೆ ಮನಸ್ಸಿಲ್ಲದಿದ್ದರೆ ತೊಂದರೆ ನಿವಾರಣೆ ಹೇಗೆ ಹೇಳಿ. ಜೀವನ ಪರ್ಯಂತ ಸಮಸ್ಯೆಗಳೊಂದಿಗೇ ಜೀವಿಸುವವರಿವರು.

6. ತಪ್ಪುಗಳ ಚಿತ್ರಗುಪ್ತ
ನಮ್ಮ ಎಲ್ಲಾ ಸರಿ ತಪ್ಪುಗಳನ್ನು ಲೆಕ್ಕ ಇಡೋಕೆ ಅಂತಲೇ ಮೇಲೆ ಯಮಪುರಿಯಲ್ಲಿ ಚಿತ್ರಗುಪ್ತ ಎನ್ನುವ ಮಹಾಶಯ ಇರುತ್ತಾನಂತೆ. ಅವನ ಚಿಂತೆ ಬಿಡಿ, ಭೂಮಿ ಮೇಲೆಯೇ ಚಿತ್ರಗುಪ್ತನಂಥವರಿರುತ್ತಾರಲ್ಲ, ಅದಕ್ಕೇನನ್ನುತ್ತೀರಿ! ಹಾಗೆ ನೋಡಿದರೆ ಚಿತ್ರಗುಪ್ತನೇ ವಾಸಿ. ಆತ ನಮ್ಮ ಸರಿ ಮತ್ತು ತಪ್ಪು ಎರಡೂ ಕೆಲಸಗಳನ್ನು ನೋಟ್‌ ಮಾಡಿಟ್ಟುಕೊಳ್ಳುತ್ತಾರೆ. ಆದರೆ ಭೂಮಿ ಮೇಲಿನ ಚಿತ್ರಗುಪ್ತರಿರುತ್ತಾರಲ್ಲ, ಅವರು ನಮ್ಮ ತಪ್ಪುಗಳನ್ನು ಮಾತ್ರ ನೆನಪಿಟ್ಟುಕೊಂಡಿರುತ್ತಾರೆ. ಅಷ್ಟು ಸಾಲದೆಂಬಂತೆ ಆಗಾಗ ಅದನ್ನು ನಮ್ಮ ಗಮನಕ್ಕೆ ತಂದು ಚುಚ್ಚುತ್ತಿರುತ್ತಾರೆ. ಅವರ ಬಳಿ ಓಬಿರಾಯನ ಕಾಲದಲ್ಲಿ ನಾವು ಮಾಡಿದ ತಪ್ಪಿನ ವರದಿಯೂ ಇದ್ದಿರುತ್ತದೆ. ಇವರ ಬಾಯಲ್ಲಿ ನಮ್ಮ ಕುರಿತು ಒಳ್ಳೇ ಮಾತುಗಳು ಬರೋದು ಅಪರೂಪ. ಈ ರೀತಿಯ ನೆಗೆಟಿವ್‌ ಮನೋಭಾವದವರು ಯಾವತ್ತೂ ಹೊರೆಯೇ.

Advertisement

Udayavani is now on Telegram. Click here to join our channel and stay updated with the latest news.

Next