Advertisement

ಬಸ್‌ ನಲ್ಲಿ ಪರ್ಸ್‌ ಕಳವುಗೈದ ಕಳ್ಳಿ: ಸಿಸಿ ಕೆಮಾರದಲ್ಲಿ ದೃಶ್ಯ ಸೆರೆ

08:46 PM Sep 20, 2022 | Team Udayavani |

ಪುತ್ತೂರು: ಮಂಗಳೂರಿನಿಂದ ಪುತ್ತೂರಿಗೆ ಬರುತಿದ್ದ ಖಾಸಗಿ ಬಸ್‌ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕೆಯ ಪರ್ಸ್‌ ಅನ್ನು ಕಳ್ಳಿಯೋರ್ವಳು ಎಗರಿಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

Advertisement

ಪುತ್ತೂರು ತಾ.ಪಂ.ನಲ್ಲಿ ಯೋಜನಾಧಿಕಾರಿಯಾಗಿರುವ ಸುಕನ್ಯಾ ಅವರ ಪರ್ಸ್‌ ಕಳವು ಮಾಡಲಾಗಿದೆ. ಕಳವು ದೃಶ್ಯ ಬಸ್‌ ನ ಸಿಸಿ ಕೆಮಾರದಲ್ಲಿ ಸೆರೆಯಾಗಿದೆ.

ಬೆಳಗ್ಗೆ ಮಂಗಳೂರಿನಿಂದ ಮಹೇಶ್‌ ಖಾಸಗಿ ಬಸ್‌ ನಲ್ಲಿ ಪುತ್ತೂರಿಗೆ  ಬರುತ್ತಿದ್ದ ವೇಳೆ ಬೊಳುವಾರು ಸಮೀಪದ ಸೇತುವೆ ಹತ್ತಿರ ಕಳ್ಳಿ ಪರ್ಸ್‌ ಎಗರಿಸುತ್ತಿರುವ ದೃಶ್ಯ ಕಂಡು ಬಂದಿದೆ. ಐವತ್ತು ವರ್ಷದೊಳಗಿನ ಮಹಿಳೆಯು ಕಲ್ಲಡ್ಕ ಬಳಿ ಬಸ್‌ ಹತ್ತಿ ಸುಕನ್ಯಾ ಅವರ ಬಳಿಯ ಸೀಟಿನಲ್ಲಿ ಕುಳಿತಿದ್ದರು. ಪುತ್ತೂರು ಪೇಟೆ ಸಮೀಪಿಸಿದ ಕಾರಣ ಸುಕನ್ಯಾ ಅವರು ತನ್ನ ಕೈಯಲ್ಲಿದ್ದ ಮೊಬೈಲ್‌ ಅನ್ನು ಬ್ಯಾಗ್‌ ನೊಳಗೆ ಹಾಕಿ ಇಳಿಯಲೆಂದು ಎದ್ದು ನಿಂತಿದ್ದರು. ಈ ವೇಳೆ ಕಳ್ಳಿ ಬ್ಯಾಗ್‌ ಗೆ ಕೈ ಹಾಕಿ ಪರ್ಸ್‌ ಎಗರಿಸಿದ್ದಾರೆ. ಈಕೆಯ ವರ್ತನೆ ನೋಡುವಾಗ ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿ ಅದು ಸಿಗದೆ ಇದ್ದಾಗ ಕೈಗೆ ಸಿಕ್ಕ ಪರ್ಸ್‌ ಎಗರಿಸಿದ್ದಾಳೆ. ಈಕೆ ಕಳ್ಳತನದ ಗ್ಯಾಂಗ್‌ ನ ಸದಸ್ಯೆ ಆಗಿರುವ ಶಂಕೆ ವ್ಯಕ್ತವಾಗಿದೆ.

ಬಸ್‌ ನಿಂದ ಇಳಿದ ವೇಳೆ ಸುಕನ್ಯಾ ಅವರಿಗೆ ಪರ್ಸ್‌ ಕಳ್ಳತನ ವಾಗಿರುವ ವಿಷಯ ಬೆಳಕಿಗೆ ಬಂದು ಬಸ್‌ ಅನ್ನು ಸಂಪರ್ಕಿಸಿದ್ದಾರೆ. ಬಸ್‌ ಸಿಸಿ ಕೆಮಾರ ಪರಿಶೀಲಿಸಿದಾಗ ಕಳ್ಳಿಯ ಕರಾಮತ್ತು ಬಯಲಾಗಿದೆ. ಪರ್ಸ್‌ ನಲ್ಲಿ ಐದು ಸಾವಿರ ರೂ.ನಗದು, ದಾಖಲೆ ಪತ್ರಗಳಿತ್ತು. ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next