Advertisement

ಮಳೆ ನಡುವೆಯೂ ಖರೀದಿ ಬಿರುಸು

10:01 AM Aug 15, 2018 | |

ಮಹಾನಗರ: ಬುಧವಾರ ನಡೆಯುವ ನಾಗರಪಂಚಮಿ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳಿಗೆ ಸಿದ್ಧತೆ ಆರಂಭವಾಗಿದೆ. ದೇಗುಲ, ನಾಗಸನ್ನಿಧಿ, ಕುಟುಂಬದ ಮೂಲ ನಾಗಬನಗಳಲ್ಲಿ ನಾಗತಂಬಿಲ, ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕಗಳಿಗಾಗಿ ಮಂಗಳವಾರ ತಯಾರಿ ನಡೆಯಿತು. ನಗರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪೂಜಾ ಪರಿಕರ, ಹೂ ಹಣ್ಣುಗಳ ವ್ಯಾಪಾರ ವಹಿವಾಟು ನಡೆಸುವವರಿಗೆ ವ್ಯಾಪಾರಕ್ಕೆ ಸ್ವಲ್ಪ ಹಿನ್ನಡೆಯಾಗಿದೆ.

Advertisement

ನಗರದ ಐತಿಹಾಸಿಕ ನಾಗದೇವಸ್ಥಾನವಾದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಾಗರಪಂಚಮಿಗೆಂದೇ ವಿಶೇಷ ಸಿದ್ಧತೆಗಳು ನಡೆಯುತ್ತಿವೆ. ನಸುಕಿನ ವೇಳೆ 5.30ರಿಂದಲೇ ಇಲ್ಲಿನ ನಾಗಬನದಲ್ಲಿರುವ ಅಸಂಖ್ಯ ನಾಗಬಿಂಬಗಳಿಗೆ ವಿಶೇಷ ಪೂಜೆ, ಸೀಯಾಳ ಅಭಿಷೇಕ, ಕ್ಷೀರಾಭಿಷೇಕ ಹಾಗೂ ನಿರಂತರವಾಗಿ ನಾಗತಂಬಿಲ ಸೇವೆಗಳು ಜರಗಲಿವೆ. ಮಧ್ಯಾಹ್ನ 12ಕ್ಕೆ ಗರ್ಭ ಗುಡಿಯಲ್ಲಿರುವ ಶ್ರೀ ಅನಂತ ಪದ್ಮನಾಭ ದೇವರಿಗೆ ನಾಗರಪಂಚಮಿಯ ವಿಶೇಷ ಮಹಾಪೂಜೆ ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಶ್ರೀ ಶರವು ಮಹಾಗಣಪತಿ ದೇವಸ್ಥಾನ, ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಆಚರಣೆಗೆ ತಯಾರಿ ನಡೆಯುತ್ತಿದೆ.

ಮೂಲಬನಗಳಲ್ಲಿ ನಾಗಾರಾಧನೆ
ಕೇವಲ ದೇಗುಲಗಳಲ್ಲಿ ಮಾತ್ರವಲ್ಲದೆ, ವಿವಿಧ ಕುಟುಂಬ ಗಳ ಮೂಲಬನಗಳಲ್ಲಿಯೂ ನಾಗದೇವರಿಗೆ ತಂಬಿಲ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕ ಮುಂತಾದ ಸೇವೆಗಳು ಬುಧವಾರ ನೆರವೇರಲಿದೆ. 

ಪೂಜಾ ಪರಿಕರಗಳ ಖರೀದಿ
ನಾಗರ ಪಂಚಮಿ ಹಿನ್ನೆಲೆಯಲ್ಲಿ ಈಗಾಗಲೇ ವ್ಯಾಪಾರಸ್ಥರು ಬಿರುಸಿನ ವ್ಯಾಪಾರದಲ್ಲಿ ತೊಡಗಿದ್ದಾರೆ. ನಾಗನಿಗೆ ಪ್ರಿಯವಾದ ಹೂ ಹಣ್ಣು, ವಿವಿಧ ಪೂಜಾ ಪರಿಕರಗಳ ಖರೀದಿಯಲ್ಲಿ ಭಕ್ತರು ತೊಡಗಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕ ಭಾಗಗಳಿಂದಲೂ ವ್ಯಾಪಾರಸ್ಥರು ನಗರಕ್ಕೆ ಆಗಮಿಸಿದ್ದು, ಬೀದಿ ಬೀದಿಗಳಲ್ಲಿ ಹೂವಿನ ಮಾರಾಟದಲ್ಲಿ ತೊಡಗಿದ್ದಾರೆ. ಕಂಕನಾಡಿ ವೃತ್ತದ ನಾಲ್ಕೂ ಬದಿಗಳು, ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ, ಬಂಟ್ಸ್‌ ಹಾಸ್ಟೆಲ್‌, ಸ್ಟೇಟ್‌ ಬ್ಯಾಂಕ್‌, ಹಂಪನಕಟ್ಟೆ ಮುಂತಾದೆಡೆಗಳಲ್ಲಿ ಹೂವಿನ ವ್ಯಾಪಾರ ಜೋರಾಗಿದೆ.

Advertisement

ನಾಗರಪಂಚಮಿಗಾಗಿ ಕೇದಿಗೆ, ಮಲ್ಲಿಗೆ, ಸೇವಂತಿಗೆ, ಹಬ್ಬಲ್ಲಿಗೆ, ಗುಲಾಬಿ ಹೂವುಗಳ ಮಾರಾಟ ಜೋರಾಗಿದೆ. ಮಲ್ಲಿಗೆ, ಸೇವಂತಿಗೆಗೆ ಮೊಳಕ್ಕೆ 20 ರೂ.ಗಳಿಂದ 30 ರೂ.ಗಳ ತನಕವೂ ಮಾರಾಟವಾಗುತ್ತಿದೆ. ಕೆಂಗುಲಾಬಿಗೆ 10 ರೂ.ಗಳಾಗಿವೆ. ಆದರೆ ಒಂದೊಂದು ಕಡೆ ಒಂದೊಂದು ರೀತಿಯ ದರಕ್ಕೆ ಈ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ನಾಗದೇವರಿಗೆ ಪ್ರಿಯವಾದ ಸೀಯಾಳದ ಬೆಲೆ 40-45 ರೂ. ದಾಟಿದೆ. ಬಾಳೆಹಣ್ಣು, ಕಿತ್ತಳೆ, ಸೇಬು ಹಣ್ಣುಗಳ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದ್ದು, ವಿವಿಧ ಕಡೆಗಳಿಂದ ಜನ ಆಗಮಿಸಿ ಖರೀದಿಯಲ್ಲಿ ತೊಡಗಿದ್ದಾರೆ.

ಮಳೆಯಿಂದ ವ್ಯಾಪಾರಕ್ಕೆ ಹಿನ್ನಡೆ
ಮಳೆ ನೀರು ಬೀಳದಿರುವ ಕಡೆಗಳಲ್ಲಿ ಅಥವಾ ಮಾರ್ಕೆಟ್‌ಗಳಲ್ಲಿ ವ್ಯಾಪಾರ ನಡೆಸುತ್ತಿರುವವರಿಗೆ ವ್ಯಾಪಾರ ಹೆಚ್ಚಿದ್ದರೂ ಹೊರ ಜಿಲ್ಲೆಗಳಿಂದ ಬಂದು ನಗರದ ರಸ್ತೆ ಬದಿಗಳಲ್ಲಿ ವ್ಯಾಪಾರ ನಡೆಸುತ್ತಿರುವವರಿಗೆ ಮಳೆಯಿಂದಾಗಿ ತುಸು ಹಿನ್ನಡೆಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೂವಿನ ಮೇಲೆ ನೀರು ಬಿದ್ದು ಹಾಳಾಗುವ ಸಾಧ್ಯತೆ ಹೆಚ್ಚಿರುವುದರಿಂದ ಜನ ಮಾರ್ಕೆಟ್‌ನತ್ತಲೇ ಹೆಚ್ಚು ಹೋಗುತ್ತಿದ್ದಾರೆ. ಅಲ್ಲದೆ ಸುರಕ್ಷಿತ ಸ್ಥಳವೂ ಇಲ್ಲದ್ದರಿಂದ ಮಳೆಯಲ್ಲಿ ನೆನೆದು ಕೊಂಡೇ ವ್ಯಾಪಾರ ನಡೆಸಿದರೂ ವ್ಯಾಪಾರ ಇಳಿಕೆಯಾಗಿದೆ ಎನ್ನುತ್ತಾರೆ ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ಹೂ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next