Advertisement

ನನಸಾಗದ ಪುನೀತ್‌ ಚಿತ್ರೀಕರಣದ ಕನಸು!

10:16 AM Oct 30, 2021 | Team Udayavani |

ಬೀದರ: ಐತಿಹಾಸಿಕ ಸ್ಮಾರಕಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿರುವ ಪ್ರವಾಸೋದ್ಯಮ ನಗರಿ ಬೀದರಗೆ ಮನಸೋತ್ತಿದ್ದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಇಲ್ಲಿ ತಮ್ಮ ಅಭಿನಯದ ಚಿತ್ರವೊಂದರ ಚಿತ್ರೀಕರಣ ಮಾಡಲು ಚಿಂತಿಸಿದ್ದರು.

Advertisement

ಆದರೆ, ಅವರ ಹಠಾತ್‌ ನಿಧನದಿಂದ ಆ ಕನಸು ಕೊನೆಗೂ ನನಸಾಗದೇ ಉಳಿಯಿತು. ಪಾರಂಪರಿಕ ಸ್ಮಾರಕಗಳು, ವಿಶಾಲ ಕೋಟೆ ಹೊಂದಿರುವ ಧರಿನಾಡು ಬೀದರ ಕನ್ನಡ ಮಾತ್ರವಲ್ಲ, ಹಿಂದಿ, ತೆಲಗು ಮತ್ತು ತಮಿಳು ಚಿತ್ರಗಳ ನಟ, ನಿರ್ಮಾಪಕರನ್ನು ಆಕರ್ಷಿಸಿದ್ದು, 20ಕ್ಕೂ ಹೆಚ್ಚು ಸಿನಿಮಾಗಳ ಕೆಲ ಭಾಗಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.

2016ರ ಭೇಟಿ ವೇಳೆ ಇಲ್ಲಿನ ಪಾರಂಪರಿಕ ವೈಭವಕ್ಕೆ ಮನಸೋತಿದ್ದ ಯುವ ಪ್ರತಿಭಾನ್ವಿತ ನಟ ಪುನೀತ್‌ ಸಹ ಬೀದರನಲ್ಲಿ ತಮ್ಮ ಚಿತ್ರದ ಚಿತ್ರೀಕರಣ ಮಾಡಬೇಕೆಂಬ ಆಶಯ ಹೊಂದಿದ್ದರು. ಆದರೆ, ಅವರ ನಿಧನದಿಂದ ಅವರ ಕನಸು ಸಹ ಮರೆಯಾಗಿಯೇ ಹೋಯಿತು.

ಚಿತ್ರೀಕರಣ ಬಗ್ಗೆ ಚರ್ಚಿಸಿದ್ದರು

ಉತ್ತರ ಕರ್ನಾಟಕದ ಕಥಾ ಹಂದರವನ್ನು ಹೊಂದಿದ್ದ, ಇನ್ನೂ ಹೆಸರಿಡದ ಚಿತ್ರವೊಂದವರ ಚಿತ್ರೀಕರಣವನ್ನು ಬೀದರನಲ್ಲಿ ಮಾಡಬೇಕು. ಈ ಕುರಿತಂತೆ ಬೀದರ ಮೂಲದ ಚಿತ್ರ ನಿರ್ದೇಶಕ ಉಮೇಶ ಸಲಗಾರ ಅವರ ಜತೆಗೆ ಕಳೆದ 20 ದಿನಗಳ ಹಿಂದೆಯಷ್ಟೇ ಚರ್ಚೆ ನಡೆಸಿದ್ದರು. ಚಿತ್ರದ ಎಲ್ಲ ಸಿದ್ಧತೆಗಳ ಬಳಿಕ ಚಿತ್ರೀಕರಣ ಆರಂಭಿಸಬೇಕು ಎಂಬ ಆಶಯವನ್ನೂ ಸಹ ವ್ಯಕ್ತಪಡಿಸಿದ್ದರು. ಅವರೊಂದಿಗೆ ಕೆಲಸ ಮಾಡುವುದು ನನ್ನ ಅದೃಷ್ಟವೂ ಆಗಿತ್ತು. ಆದರೆ, ವಿಧಿ ಯಾಟದ ಮುಂದೆ ಕನಸು ಕಮರಿ ಹೋಯಿತು ಎಂದು ಶೋಕ ವ್ಯಕ್ತಪಡಿಸುತ್ತಾರೆ ಉಮೇಶ.

Advertisement

ಇನ್ನೂ ನಟಸಾರ್ವಭೌಮ ಎನಿಸಿಕೊಂಡಿದ್ದ ಪುನೀತ್‌ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದರು. 1995ರಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ ಮಾಜಿ ಸೈನಿಕರಿಗಾಗಿ ನಿಧಿ ಸಂಗ್ರಹಕ್ಕಾಗಿ ಆಯೋಜಿಸಿದ್ದ ರಸ ಮಂಜರಿ ಕಾರ್ಯಕ್ಕಾಗಿ ಅವರ ತಂದೆ ಡಾ| ರಾಜ್‌ಕುಮಾರ್‌ ಅವರೊಂದಿಗೆ ಆಗಮಿಸಿದ್ದರು. ಸಹೋದರರಾದ ಶಿವರಾಜ್‌ಕುಮಾರ್‌ ಮತ್ತು ರಾಘವೇಂದ್ರ ಅವರೊಂದಿಗೆ ಹೆಜ್ಜೆ ಹಾಕಿದ್ದರಲ್ಲದೇ, ಬೀದರ ನಗರದಲ್ಲಿ ಬೈಕ್‌ ಮೇಲೆ ಸುತ್ತಾಡಿದ್ದರು ಎಂದು ನೆನಪಿಸುತ್ತಾರೆ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ.

ಇದನ್ನೂ ಓದಿ: ಎದ್ದು ಬಾರೋ ನನ್ನಪ್ಪನೇ..

ಸಂತ್ರಸ್ತ ಕುಟುಂಬಕ್ಕೆ ನೆರವು

ಮತ್ತೊಮ್ಮೆ 2016ರ ಅ.13ರಲ್ಲಿ “ದೊಡ್ಮನೆ ಹುಡುಗ’ ಚಿತ್ರದ ಪ್ರಚಾರಕ್ಕಗಿ ಬೀದರಗೆ ಭೇಟಿ ನೀಡಿದ್ದ ಪುನೀತ್‌ ಅವರು ತಮ್ಮ ಚಿತ್ರತಂಡದ ಮೂಲಕ ಜಿಲ್ಲೆಯಲ್ಲಿ ಸಾಲ ಬಾಧೆಯಿಂದ ಮೃತಪಟ್ಟ ರೈತ ಕುಟುಂಬ ಮತ್ತು ಪ್ರವಾಹದಿಂದ ಹಾನಿಯಾದ ಸಂತ್ರಸ್ತ 13 ಕುಟುಂಬಗಳಿಗೆ ತಲಾ 10 ಸಾವಿರ ರೂ. ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು. ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಸಾಂಗವಿ ಗ್ರಾಮದ ರೈತ ಶಂಕರೆಪ್ಪ ಮಾದಪ್ಪಾ ಅವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿ ಪರಿಹಾರ ವಿತರಿಸಿದ್ದರು.

ಜತೆಗೆ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರಿಗೆ ಮತ್ತು ವಿದ್ಯುತ್‌ ತಂತಿ ತಗಲು ಜೀವ ಕಳೆದುಕೊಂಡ ಕುಟುಂಬಕ್ಕೆ ಸಹಾಯಧನ ವಿತರಿಸಿದ್ದರು. ಬಳಿಕ ನಗರದ ಐತಿಹಾಸಿಕ ಗುರುದ್ವಾರಕ್ಕೆ ಭೇಟಿ ನೀಡಿ ದರ್ಶನ ಪಡೆದು, ಸಪ್ನಾ ಮಲ್ಟಿಪೆಕ್ಸ್‌ನಲ್ಲಿ ದೊಡ್ಮನ ಹುಡುಗ ಚಿತ್ರ ವೀಕ್ಷಣೆ ಮಾಡಿದ್ದರು. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್‌ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಸಾಥ್‌ ನೀಡಿದ್ದರು.

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next