Advertisement

ಅಪ್ಪುಗೆ ಪ್ರೀತಿಯ ಅಜಾತಶತ್ರು

11:56 PM Oct 29, 2021 | Team Udayavani |

ಚಿತ್ರರಂಗವೆಂದರೆ ಒಂದು ಕುಟುಂಬ ಎನ್ನುತ್ತಾರೆ. ಅದು ಸತ್ಯ ಕೂಡ. ಆದರೆ, ಸಣ್ಣಪುಟ್ಟ ಮನಃಸ್ತಾಪ, ಬೇಸರ, ಮತ್ತೂಬ್ಬ ನಟನ ಬಗೆಗಿನ ಅಸೂಯೆ ಸಹಜ. ಆದರೆ, ಪುನೀತ್‌ ರಾಜ್‌ಕುಮಾರ್‌ ಮಾತ್ರ ಇವೆಲ್ಲದರಿಂದ ಮುಕ್ತರಾಗಿದ್ದವರು. ಚಿತ್ರರಂಗಕ್ಕೆ ಹೀರೋ ಆಗಿ ಪದಾರ್ಪಣೆ ಮಾಡಿದ ದಿನದಿಂದಲೇ ಪುನೀತ್‌ ಕಾಂಟ್ರವರ್ಸಿ, ಗಾಸಿಪ್‌ ಗಳಿಂದ ಮುಕ್ತರಾಗಿದ್ದವರು. ಅದೇ ಕಾರಣದಿಂದ ಪುನೀತ್‌ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.

Advertisement

ಸ್ಟಾರ್‌ ನಟನಾದರೂ ಅಹಂ ಇಲ್ಲ
ಇಡೀ ಚಿತ್ರರಂಗ ಪುನೀತ್‌  ಅವರನ್ನು ಇಷ್ಟಪಡಲು ಕಾರಣ ಅವರ ವ್ಯಕ್ತಿತ್ವ. ಸಾಮಾನ್ಯವಾಗಿ ಸ್ಟಾರ್‌ ನಟರಾದ ಮೇಲೆ ಸಹಜವಾಗಿಯೇ ಇನ್ನೊಬ್ಬ ಸ್ಟಾರ್‌ ನಟನ ಮೇಲೆ ಹೊಟ್ಟೆಕಿಚ್ಚು ಇರುತ್ತದೆ. ಮತ್ತೂಬ್ಬ ಸ್ಟಾರ್‌ ನಟ ಬರುವ ವೇದಿಕೆಯಲ್ಲಿ ತಾನು ಬೆರೆಯುವುದಿಲ್ಲ ಎಂಬ ಧೋರಣೆಯನ್ನು ಹೊಂದಿರುತ್ತಾರೆ.

ಆದರೆ, ಪುನೀತ್‌ ರಾಜ್‌ಕುಮಾರ್‌ ಮಾತ್ರ ಅವೆಲ್ಲದರಿಂದ ಮುಕ್ತರಾಗಿದ್ದವರು. ಯಾರ ಬಗ್ಗೆಯೂ ಅಸೂಯೆಯಾಗಲಿ, ಸಣ್ಣ ಮನಃಸ್ತಾಪವಾಗಲೀ ಇರಲಿಲ್ಲ. ಅದೇ ಕಾರಣದಿಂದ ಕನ್ನಡ ಚಿತ್ರರಂಗದ ಮುಂಚೂಣಿ ಸ್ಟಾರ್‌ ನಟರಾದ ಸುದೀಪ್‌, ದರ್ಶನ್‌, ಉಪೇಂದ್ರ, ಯಶ್‌… ಹೀಗೆ ಎಲ್ಲರೊಂದಿಗೂ ಸೌಹಾರ್ದಯುತ ಸಂಬಂಧ ಹೊಂದಿದ್ದರು. ಅದೇ ಕಾರಣದಿಂದ ಯಾವುದೇ ಸ್ಟಾರ್‌ ನಟರೊಂದಿಗೆ ವೈಮನಸ್ಸಿಲ್ಲದೇ ಖುಷಿಯಿಂದ ಪುನೀತ್‌ ಭಾಗವಹಿಸುತ್ತಿದ್ದರು.

ಹೊಸಬರಿಗೆ ಬೆನ್ನು ತಟ್ಟುತ್ತಿದ್ದ ಪುನೀತ್‌
ಬೇರೆ ನಟರ ಸಿನಿಮಾಗಳು ಬಿಡುಗಡೆಯಾದಾಗ, ಹುಟ್ಟುಹಬ್ಬವಾದಾಗ ಶುಭ ಕೋರುತ್ತಿದ್ದರು. ಇಂಥ ಆತ್ಮೀಯ ವ್ಯಕ್ತಿತ್ವದ ಪುನೀತ್‌ ರಾಜ್‌ಕುಮಾರ್‌ ಇವತ್ತು ನಮ್ಮೊಂದಿಗಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ.

ಚಿತ್ರರಂಗಕ್ಕೆ ಬರುವ ಹೊಸಬರಿಗೆ ಒಂದು ಆಸೆ ಇರುತ್ತದೆ. ಅದೇನೆಂದರೆ ತಮ್ಮ ಸಿನಿಮಾದ ಹಾಡು, ಟ್ರೇಲರ್‌ ಅನ್ನು ಯಾರಾದರೊಬ್ಬರು ಸ್ಟಾರ್‌ ನಟರು ರಿಲೀಸ್‌ ಮಾಡಿದರೆ ಚೆಂದ ಎಂದು. ಇಂಥ ಹೊಸಬರಿಗೆ ಪ್ರೋತ್ಸಾಹ ನೀಡುವ ಸ್ಟಾರ್‌ ನಟರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದ ನಟ ಪುನೀತ್‌. ಯಾರೇ ಹೊಸಬರು ತಮ್ಮ ಬಳಿ ಬಂದು ಕೇಳಿಕೊಂಡರೂ, ತಮಗೆ ಸಮಯವಿದ್ದರೆ ಅವರ ಆಡಿಯೋ, ಟ್ರೇಲರ್‌ ರಿಲೀಸ್‌ ಮಾಡಿ ಶುಭ ಕೋರುತ್ತಿದ್ದರು ಪುನೀತ್‌. ಈ ಗುಣದಿಂದಲೇ ಚಿತ್ರರಂಗಕ್ಕೆ ಬಂದ ಹೊಸಬರು ಕೂಡಾ ಅವರೊಂದಿಗೆ ಬೇಗನೇ ಬೆರೆಯುತ್ತಿದ್ದರು.

Advertisement

ಪುನೀತ್‌  ಅವರು “ನಿರ್ಮಾಪಕ ಸ್ನೇಹಿ ನಟ’ ಕೂಡ ಆಗಿದ್ದರು. ಸ್ಟಾರ್‌ ನಟರಾಗಿದ್ದು, ದೊಡ್ಡ ಅಭಿಮಾನಿ ಸಮೂಹವನ್ನು ಹೊಂದಿದ್ದರೂ, ಯಾವತ್ತಿಗೂ  ದುರಹಂಕಾರ ಮೆರೆದವರಲ್ಲ. ನಿರ್ದೇಶಕರು ಹೇಳಿದ ಸಮಯಕ್ಕೆ ಶೂಟಿಂಗ್‌ ಸೆಟ್‌ನಲ್ಲಿರುವ ಜೊತೆಗೆ ದುಂದುವೆಚ್ಚದಿಂದ ನಿರ್ಮಾಪಕರನ್ನು ಪಾರು ಮಾಡುತ್ತಿದ್ದರು. ಅದೇ ಕಾರಣದಿಂದ ಪುನೀತ್‌ ಜೊತೆ ಒಮ್ಮೆ ಸಿನಿಮಾ ಮಾಡಿದ ನಿರ್ಮಾಪಕ, ನಿರ್ದೇಶಕರು ಮತ್ತೆ ಮತ್ತೆ ಸಿನಿಮಾ ಮಾಡಲು ಬಯಸುತ್ತಿದ್ದರು.

ಇದನ್ನೂ ಓದಿ:ವೆಸ್ಟ್‌ ಇಂಡೀಸ್‌ ಎದುರು ನಡೆದ ರೋಚಕ ಹೋರಾಟದಲ್ಲಿ ಬಾಂಗ್ಲಾಕ್ಕೆ ಸೋಲು

ಕೊನೆ ಕಾರ್ಯಕ್ರಮದಲ್ಲಿ ಪುನೀತ್‌ ಮಾತು
ಪುನೀತ್‌ ರಾಜ್‌ಕುಮಾರ್‌ ಸಾಕಷ್ಟು ಸಿನಿಮಾ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುತ್ತಿದ್ದರು. ಈ ಮೂಲಕ ಹೊಸಬರ ತಂಡವನ್ನು ಪ್ರೋತ್ಸಾಹಿಸುತ್ತಿದ್ದರು. ಇತ್ತೀಚೆಗೆ ಪುನೀತ್‌ರಾಜ್‌ಕುಮಾರ್‌ ಹಾಗೆ ಅತಿಥಿಯಾಗಿ ಹೋದ ಎರಡು ಕಾರ್ಯಕ್ರಮಗಳೆಂದರೆ “ಭಜರಂಗಿ-2′ ಪ್ರೀ ರಿಲೀಸ್‌ ಇವೆಂಟ್‌ ಮತ್ತು “ಮಹಾಯೋಗಿ ಸಿದ್ದರೂಢ’ ಚಿತ್ರದ ಟ್ರೇಲರ್‌ ಬಿಡುಗಡೆ.

ಪುನೀತ್‌ ರಾಜ್‌ಕುಮಾರ್‌ ಭಾಗವಹಿಸಿದ ಕೊನೆಯ ಸಿನಿಮಾ ಕಾರ್ಯಕ್ರಮ “ಮಹಾಯೋಗಿ ಸಿದ್ದರೂಢ’. ಅ.27ರಂದು ನಡೆದಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುನೀತ್‌, ಮಠದ ಹಾಗೂ ತಮ್ಮ ಕುಟುಂಬದ ನಡುವಿನ ಸಂಬಂಧದ ಬಗ್ಗೆ

ಮಾತನಾಡಿದ್ದರು. ಕೊನೆಯ ಸಿನಿಮಾ ಕಾರ್ಯಕ್ರಮದಲ್ಲಿ ಪುನೀತ್‌ ಮಾತನಾಡಿದ ಮಾತು ಹೀಗಿದೆ, “ನಮ್ಮ ಮನೆಗೂ, ಸಿದ್ದರೂಢ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪಾಜಿ ಅವರಾಗಲಿ, ನಮ್ಮ ಕುಟುಂಬದ ಯಾರೇ ಆಗಲಿ, ಹುಬ್ಬಳ್ಳಿಗೆ ಹೋದಾಗ ಸಿದ್ದರೂಢರ ಮಠಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ನಮ್ಮ ಅಜ್ಜಿ ಅವರು ಕೆಲವು ದಿನಗಳ ಕಾಲ ಈ ಮಠದಲ್ಲೇ ಇದ್ದರು ಎಂದು ಅಪ್ಪಾಜಿ ಹೇಳುತ್ತಿದ್ದರು. ಈ ಚಿತ್ರದ ಟ್ರೇಲರ್‌ ಬಿಡುಗಡೆಗೆ ಬರಬೇಕೆಂದು ಸಾಧುಕೋಕಿಲ ಅವರು ಕರೆದಾಗ ಸಂತೋಷವಾಯಿತು’ ಎಂದಿದ್ದರು. ಅಂದು ಸ್ವಾಮೀಜಿ ಪುನೀತ್‌ ಅವರನ್ನು ಸಮ್ಮಾನಿಸಿದರು. ಮಲ್ಲೇಶ್ವರಂ ಎಸ್‌ಆರ್‌ವಿ ಮಿನಿ ಚಿತ್ರಮಂದಿರದಲ್ಲಿ ನಡೆದಿದ್ದ ಈ ಕಾರ್ಯಕ್ರಮ ಮುಗಿಸಿ ಪುನೀತ್‌ ಕೆಳಗಡೆ ಬರುತ್ತಿದ್ದಂತೆ, ಸಾಕಷ್ಟು ಮಂದಿ ಫೋಟೋ ತೆಗೆಸಿಕೊಳ್ಳಲು ಬಂದರು. ಅವರೆಲ್ಲರ ಜೊತೆ ನಗು ನಗುತ್ತಲೇ ಫೋಟೋಗೆ ಫೋಸ್‌ ಕೊಟ್ಟ ಪುನೀತ್‌ ಕಾರು ಹತ್ತಿಕೊಂಡು ಹೊರಟೇ ಬಿಟ್ಟರು. ಅದೇ ಅವರ ಕೊನೆಯ ಸಿನಿಮಾ ಕಾರ್ಯಕ್ರಮವಾಗುತ್ತದೆ ಎಂಬುದು ಯಾರಿಗೂ ಗೊತ್ತಾಗಲಿಲ್ಲ.

ಸೇವೆಗೆಂದೇ ನಿಗದಿತ ಮೊತ್ತ ಮೀಸಲಿಡುತ್ತಿದ್ದ ಪುನಿತ್‌
“ಡಾ. ರಾಜ್‌ ಫೌಂಡೇಶನ್‌’ ಮೂಲಕ ಪುನೀತ್‌ ರಾಜಕುಮಾರ್‌ ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಸದ್ದಿಲ್ಲದೆ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದರು. ತಮ್ಮ ಸಂಭಾವನೆಯಲ್ಲಿ ಬರುವ ಒಂದು ನಿಗದಿತ ಮೊತ್ತವನ್ನು ಪುನೀತ್‌ ತಮ್ಮ ಟ್ರಸ್ಟ್‌ನ ಸಾಮಾಜಿಕ ಕಾರ್ಯಗಳಿಗಾಗಿಯೇ ಮೀಸಲಿಡುತ್ತಿದ್ದರು. ತಾವು ಹಾಡುವ ಪ್ರತಿ ಸಿನಿಮಾದ ಹಾಡಿನ ಸಂಭಾವನೆಯನ್ನು ಪುನೀತ್‌ ತಮ್ಮ ಟ್ರಸ್ಟ್‌ನ ಸಾಮಾಜಿಕ ಕೆಲಸಗಳಿಗೆ ನೀಡುವಂತೆ ಅದರ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಹೇಳುತ್ತಿದ್ದರು. ರಾಜ್ಯದ ವಿವಿಧ ಭಾಗಗಳಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಆರ್ಥಿಕವಾಗಿ ಹಿಂದುಳಿದ ನೂರಾರು ಕುಟುಂಬಗಳಿಗೆ ತಮ್ಮ ಸಂಸ್ಥೆಯ ಮೂಲಕ ಪುನೀತ್‌ ವೈದ್ಯಕೀಯ ಮತ್ತು ಹಣಕಾಸು ನೆರವು ಒದಗಿಸುತ್ತಿದ್ದರು. ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮೀಣ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ಕಂಪ್ಯೂಟರ್‌ ಮತ್ತಿತರ ಶೈಕ್ಷಣಿಕ ಸೌಕರ್ಯಗಳನ್ನು ಈ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಇತ್ತೀಚೆಗೆ ವಿಶೇಷ ಆ್ಯಪ್‌ ಒಂದನ್ನು ಕೂಡ ಪುನೀತ್‌ ರಾಜಕುಮಾರ್‌ ಅವರ ಸಂಸ್ಥೆ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿತ್ತು.

ಅನ್ನ, ಅಕ್ಷರ, ಆರೋಗ್ಯ ಸೇರಿದಂತೆ ಜನರ ಮೂಲಭೂತ ಅಗತ್ಯಗಳಿಗೆ ತಮ್ಮಿಂದಾಗುವ ನೆರವು ನೀಡುವ ಸಲುವಾಗಿಯೇ ಹೆಚ್ಚು ಗಮನ ಹರಿಸುವಂತೆ ಪುನೀತ್‌ ತಮ್ಮ ಸಂಸ್ಥೆಯ ಕಾರ್ಯಗಳನ್ನು ರೂಪಿಸುತ್ತಿದ್ದರು. ಹೆಚ್ಚಿನ ಪ್ರಚಾರವಿಲ್ಲದೆ ತೆರೆಮರೆಯಲ್ಲಿಯೇ ಪುನೀತ್‌ ರಾಜಕುಮಾರ್‌ ಟ್ರಸ್ಟ್‌ ಕೆಲಸಗಳು ನಡೆಯುತ್ತಿದ್ದು, ಪುನೀತ್‌ ಎಂದಿಗೂ ಈ ಕೆಲಸಗಳ ಬಗ್ಗೆ ಹೆಚ್ಚು ಮಾತನಾಡುತ್ತಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next