Advertisement

ಪುಣೆ ಕಾರ್ಖಾನೆ ಅಗ್ನಿ ದುರಂತ; ಸಾವಿನ ಸಂಖ್ಯೆ 17ಕ್ಕೆ ಏರಿಕೆ; ಪ್ರಧಾನಿ ಮೋದಿ ಸಂತಾಪ

11:59 AM Jun 08, 2021 | Team Udayavani |

ನವದೆಹಲಿ: ಪುಣೆಯ ರಾಸಾಯನಿಕ ಕಾರ್ಖಾನೆಯಲ್ಲಿ ಸೋಮವಾರ(ಜೂನ್ 07) ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

Advertisement

ವರದಿಯ ಪ್ರಕಾರ, ಪುಣೆ ನಗರದ ಹೊರವಲಯದ ಮುಲ್ಶಿ ತಹಸಿಲ್ ನ ಪಿರಾನ್ ಗುಟ್ ಪ್ರದೇಶದಲ್ಲಿರುವ ಕ್ಲೋರಿನ್ ಡೈಆಕ್ಸೈಡ್ ತಯಾರಿಸುವ ಎಸ್ ವಿಎಸ್ ಆಕ್ವಾ ಟೆಕ್ನಾಲಜೀಸ್ ಕಾರ್ಖಾನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿತ್ತು ಎಂದು ವರದಿ ತಿಳಿಸಿದೆ.

ಪುಣೆ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಅಗ್ನಿಶಾಮಕ ಅಧಿಕಾರಿ ದೇವೇಂದ್ರ ಪೋಟ್ ಫೋಡೆ ಅವರು ಎಎನ್ ಐಗೆ ತಿಳಿಸಿರುವ ಮಾಹಿತಿ ಪ್ರಕಾರ, ಈ ಕಾರ್ಖಾನೆಯಲ್ಲಿ ನೀರು ಶುದ್ಧೀಕರಣ ರಾಸಾಯನಿಕ, ಕ್ಲೋರಿನ್ ಡೈಆಕ್ಸೈಡ್ ಉತ್ಪಾದಿಸುತ್ತಿದ್ದು, ಇದರಿಂದ ಬೆಂಕಿ ಅನಾಹುತ ಸಂಭವಿಸಿಲ್ಲ. ಪ್ಯಾಕಿಂಗ್ ಕೆಲಸ ನಡೆಯುತ್ತಿದ್ದ ವೇಳೆ ಅತಿಯಾದ ಶಾಖದಿಂದಾಗಿ ಪ್ಲಾಸ್ಟಿಕ್ ಗೆ ಬೆಂಕಿ ಹೊತ್ತುಕೊಂಡಿರುವುದಾಗಿ ವಿವರಿಸಿದ್ದಾರೆ.

ಏಕಾಏಕಿ ಹೊತ್ತಿಕೊಂಡ ಬೆಂಕಿಯಿಂದಾಗಿ 15 ಮಹಿಳೆಯರು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 37 ಮಂದಿ ಕಾರ್ಮಿಕರಿದ್ದು, ಉಳಿದ ಇಪ್ಪತ್ತು ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದರು. ಅಗ್ನಿ ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಾವನ್ನಪ್ಪಿರುವ ಕುಟುಂಬದ ಸದಸ್ಯರಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next