Advertisement

ಪುಣೆ ಬಂಟರ ಸಂಘದ ಬಿಸು ಪರ್ಬ, ಬಂಟರ ದಿನಾಚರಣೆ

04:17 PM Apr 18, 2017 | Team Udayavani |

ಪುಣೆ: ಪುಣೆ ಬಂಟರ ಸಂಘದ ವತಿಯಿಂದ ಕಳೆದ ನಾಲ್ಕು  ವರ್ಷಗಳಿಂದ ಬಿಸು ಪರ್ಬ ಹಾಗೂ ಬಂಟರ ದಿನಾಚರಣೆ ಆಚರಿಸಿಕೊಂಡು ಬಂದಿರುತ್ತೇವೆ. ನಾವು ನಮ್ಮ ತಾಯ್ನಾ ಡನ್ನು ತೊರೆದು ಈ ಕರ್ಮ ಭೂಮಿಯಲ್ಲಿ ನೆಲೆಸಿ ದ್ದರೂ ಕೂಡಾ ನಮ್ಮ ತುಳುನಾಡಿನ ಮೂಲ ಸಂಸ್ಕೃ ತಿಗೆ ಬದ್ಧರಾಗಿದ್ದುಕೊಂಡು, ನಮ್ಮ ಸಾಂಸ್ಕೃತಿಕ ಪರಂಪರೆ  ಮರೆಯದೆ  ಆಚರಣೆಗಳ ಮೂಲಕ ನಮ್ಮ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶ ದೊಂದಿಗೆ ಬಿಸು ಪರ್ಬದ ಆಚರಣೆ ಮಾಡುತ್ತಿದ್ದೇವೆ. ಹೊಸ ವರ್ಷದ ಈ ಶುಭ ಪರ್ವದಲ್ಲಿ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಿ, ನಮ್ಮ ಗುರು ಹಿರಿಯರ ಆಶೀರ್ವಾದಗಳನ್ನು ಪಡೆದುಕೊಂಡು  ಸಂಘದ ಭವಿಷ್ಯದ ಯೋಜನೆಗಳಿಗೆ ಸಂಕಲ್ಪಿಸುವ ಧ್ಯೇಯ  ನಮ್ಮದಾಗಿದ್ದು,  ಇದರೊಂದಿಗೆ ನಮ್ಮ ಸಾಂಸ್ಕೃತಿಕ ಭವ್ಯತೆಯನ್ನು ಉಳಿಸುವ ಕರ್ತವ್ಯವೂ ನಮ್ಮದಾಗಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಹೇಳಿದರು.

Advertisement

ಎ. 14ರಂದು ಬಾಣೇರ್‌ನ ಸಂಘದ ನಿರ್ಮಾಣ ಹಂತದ ಸಾಂಸ್ಕೃತಿಕ ಭವನದ ಆವರಣದಲ್ಲಿ  ಬಿಸುಪರ್ಬ ಹಾಗೂ ಬಂಟರ ದಿನಾಚರಣೆಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಇಂದು ಮಹಿಳೆಯರ ಬಳಗದಿಂದ ಸುಶ್ರಾವ್ಯ ಭಜನಾ ಕಾರ್ಯಕ್ರಮದ  ಮೂಲಕ  ವಾತಾವರಣವನ್ನು ಧನಾತ್ಮಕವಾಗಿ ಪರಿವರ್ತಿಸಿ ಆಧ್ಯಾತ್ಮಿಕ ಭಾವನೆ ಜಾಗೃತಿಗೊಳಿಸಿ ನಮ್ಮ ಅಳಿವಿ ನಂಚಿನಲ್ಲಿರುವ ಆಧ್ಯಾತ್ಮಿಕ  ವಿಚಾರಗಳನ್ನು ಪುನರು ಜ್ಜೀವನಗೊಳಿಸುವ ಕಾರ್ಯ ಆಗುತ್ತಿರುವುದು ಅಭಿನಂದಾರ್ಹವಾಗಿದೆ. ಈ ದಿನವನ್ನು ನಾವು ಹೆಮ್ಮೆಯಿಂದ ಬಂಟರ ದಿನಾಚರಣೆಯನ್ನೂ ಆಚರಿಸಿ

ನಮ್ಮೊಳಗಿನ ಬಾಂಧವ್ಯ ಬಲಪಡಿಸುವ ಉದ್ದೇಶವೂ ನಮ್ಮದಾಗಿದೆ.  ಮಹಿಳಾ  ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿಯವರ ನೇತೃತ್ವದಲ್ಲಿ ಇಂದಿನ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು, ಮುಖ್ಯವಾಗಿ ಮಹಿಳೆಯರೇ ಮನೆಯಲ್ಲಿ ತಯಾರಿಸಿ ತಂದ ಶುಚಿ ರುಚಿಯ ಸಹ ಭೋಜನವನ್ನು ಸಮಾಜ ಬಾಂಧವರೆಲ್ಲರೂ ಸವಿಯುವಂತಾಗುವುದು ನಮ್ಮ ಪರಂಪರೆಯ ನಂಬಿಕೆಗಳಿಗೆ ಪೂರಕವಾಗಿದೆ. ಮುಂದಿನ ಅಕ್ಟೋಬರ್‌ನಲ್ಲಿ ನಮ್ಮ ಸಾಂಸ್ಕೃತಿಕ ಭವನ ಲೋಕಾರ್ಪಣೆಗೊಳ್ಳಲಿದ್ದು ಮುಂದಿನ ದಿನಗಳಲ್ಲಿ ನಮ್ಮ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗಳಿಗೆ ಇನ್ನಷ್ಟು ಆದ್ಯತೆ ನೀಡಲಾಗುವುದು.  ಎಪ್ರಿಲ… 1ರಿಂದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಹೊಂದಿದ ನಮ್ಮ ವರ ಹೊಟೇಲಿಗರಿಗೆ ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ತೊಂದರೆಯಾಗಿದ್ದು, ಆ ಬಗ್ಗೆ ಅತೀವ ವೇದನೆ ನಮಗೆಲ್ಲರಿಗಿದೆ. ನಮ್ಮ ಪುಣೆಯ ಹೊಟೇಲ್‌ ಅಸೋಸಿಯೇಶನ್‌  ಶ್ರಮಿಸುತ್ತಿದ್ದು ಆದಷ್ಟು ಬೇಗ ಹೊಟೇಲ್‌ಗ‌ಳು ಪುನರಾರಂಭಗೊಳ್ಳಲೆಂದು ನಾವೆಲ್ಲ  ಪ್ರಾರ್ಥಿಸೋಣ ಎಂದರು.

ಹೇಮಲಂಬಿ ಸಂವಸ್ಸರದ ಆರಂಭದ ದಿನಸಂಘದ ಮಾಜಿ ಅಧ್ಯಕ್ಷ, ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಅವರು ಮಾತನಾಡಿ, ಇಂದಿ ದಿನ ಹೇಮಲಂಬಿ ಸಂವತ್ಸರದ ಆರಂಭದ ದಿನವಾಗಿದ್ದು ಪರಂಪರಾಗತವಾಗಿ ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿರುವ ದಿನವಾಗಿದೆ.  ಸಂಘದ ಮೂಲಕ ನಾವೆಲ್ಲರೂ  ಒಗ್ಗಟ್ಟಾಗಿ ಸೇರಿ  ಪರಸ್ಪರ ಬಾಂಧವ್ಯ ಬೆಸೆಯುತ್ತಿರುವುದು ಅರ್ಥಪೂರ್ಣ ಎಂದರು.

ಬಂಟರಾಗಿ ಹುಟ್ಟಿರುವುದೇ ಸೌಭಾಗ್ಯ
ಸಂಘದ ಮಾಜಿ ಅಧ್ಯಕ್ಷರೂ ಹಾಗೂ ಪುಣೆ ರಾಯಲ್‌ ಕೊನೊಟ್‌ ಬೋಟ್‌ ಕ್ಲಬ್‌ನ  ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಮಾತನಾಡಿ, ನಮ್ಮ ಸಾಂಸ್ಕೃತಿಕ ಮಹತ್ವದ ಈ ದಿನ ಆಚರಿಸುತ್ತಿರುವುದಕ್ಕೆ ಅಭಿಮಾನವೆನಿಸುತ್ತಿದೆ. ನಮ್ಮ ಸಾಂಸ್ಕೃತಿಕ ಭವನವು ಸಂತೋಷ್‌ ಶೆಟ್ಟಿಯವರ ನೇತೃತ್ವದಲ್ಲಿ ಸುಂದರವಾಗಿ ರೂಪುಗೊಂಡಿದ್ದು ಮುಂದಿನ ದಿನಗಳಲ್ಲಿ ಸಂಘದ  ಮುಖಾಂತರ ಕಾರ್ಯಕ್ರಮಗಳನ್ನು ಆಯೋ ಜಿಸುವಲ್ಲಿ ಇದೊಂದು ಉತ್ತಮ ವ್ಯವಸ್ಥೆ. ನಾವು ಬಂಟರು ಯಾವುದೇ ಕ್ಷೇತ್ರದಲ್ಲಿದ್ದರೂ ವಿಶೇಷ ನಾಯಕತ್ವದ ಗುಣದೊಂದಿಗೆ ಗುರುತಿಸಿಕೊಂಡು ಯಶಸ್ಸನ್ನು ಸಾಧಿಸುತ್ತಿರುವುದು ನಮ್ಮ ಹೆಮ್ಮೆ ಯಾಗಿದೆ. ಬಂಟ ಸಮಾಜದಲ್ಲಿ ಹುಟ್ಟಿರುವುದೇ ನಮ್ಮ ಸೌಭಾಗ್ಯವಾಗಿದೆ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಾಧವ ಆರ್‌. ಶೆಟ್ಟಿ ಮತ್ತು ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿಶ್ವನಾಥ್‌ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು. 

Advertisement

ಧ್ವಜಾರೋಹಣ/ಬಂಟ ಗೀತೆ
ಮೊದಲಿಗೆ ಭವನದ ಎದುರುಗಡೆಯಲ್ಲಿ ಬಂಟ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,  ಬಂಟ ಗೀತೆಯನ್ನು ಮೊಳಗಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವೀಣಾ ಪಿ. ಶೆಟ್ಟಿ ಬಳಗದಿಂದ  ಭಜನಾ ಕಾರ್ಯಕ್ರಮ ನಡೆಯಿತು.

ಬಿಸುಪರ್ಬದ ನಿಮಿತ್ತ ದೇವರ ಆಕರ್ಷಕ ಅಲಂಕೃತ ಮಂಟಪ ರಚಿಸಿ ವಿವಿಧ ರೀತಿಯ ಬಗೆಬಗೆಯ ತರಕಾರಿಗಳನ್ನು ದೇವರೆದುರು ಇಟ್ಟು  ಪೂಜಿಸಿ ಮಹಿಳಾ ಸದಸ್ಯೆಯರು ಆರತಿ ಬೆಳಗಿದರು. ಕಾರ್ಯಕ್ರಮದ ಕೊನೆಗೆ ತುಳುನಾಡಿನ ಸಾಂಪ್ರದಾಯಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.   ಹಲವಾರು ರೀತಿಯ ತುಳುನಾಡ ಶೈಲಿಯ ವ್ಯಂಜನಗಳು ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು 

Advertisement

Udayavani is now on Telegram. Click here to join our channel and stay updated with the latest news.

Next