Advertisement
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಅಧಿಕ. ಅದರಲ್ಲಿ ಗುಣಮಟ್ಟದ ವಿದ್ಯುತ್ ಎಂಬುದು ಅಪರೂಪ. ವೋಲೈಜ್ನಲ್ಲಿ ಏರುಪೇರಾದರೆ ಪಂಪ್ಸೆಟ್ ಮೋಟಾರ್ ಸುಟ್ಟು ಹೋಗುವ ಅಪಾಯ ಅಧಿಕವಾಗಿರುತ್ತದೆ. ಒಮ್ಮೆ ಮೋಟರ್ ಸುಟ್ಟರೆ ಅದನ್ನು ಪಟ್ಟಣಕ್ಕೆ ತಂದು ರಿಪೇರಿ ಮಾಡಿಸಿಕೊಳ್ಳಬೇಕು. ಮೋಟಾರ್ ಬರುವವರೆಗೂ ಬೆಳೆಗಳಿಗೆ ನೀರಿಲ್ಲದ ಸ್ಥಿತಿ ಇರುತ್ತದೆ. ಇಂತಹ ಸ್ಥಿತಿಯನ್ನು ತಪ್ಪಿಸಿ ರೈತರಿಗೆ ನೆರವಾಗಲು ಬೆಳಗಾವಿ ಜಿಲ್ಲೆಯ ವಿಕಾಸ ಆನಂದ ಜಮಖಂಡಿ ಕೃಷಿ ಪಂಪ್ ಸೆಟ್ಗಳ ಸಂರಕ್ಷಣೆ ಸೇರಿದಂತೆ ವಿವಿಧ ಸೌಲಭ್ಯಗಳ ಸಲಕರಣೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರನಾಗಿದ್ದು, ಓದಿನ ಜ್ಞಾನ ಬಳಸಿಕೊಂಡು ಇದನ್ನು ರೂಪಿಸಿದ್ದಾರೆ.
Related Articles
Advertisement
ಆಟೋಮಿಷನ್ ಮೂಲಕ ರೈತರು ಮನೆಯಲ್ಲಿ ಇದ್ದರೂ ಪಂಪ್ಸೆಟ್ನ್ನು ನಿರ್ವಹಿಸುವ ಸೌಲಭ್ಯದ ಸಲಕರಣೆ ರೂಪಿಸಿದ್ದು, ಶೀಘ್ರದಲ್ಲಿಯೇ ಅದನ್ನು ಮಾರುಕಟ್ಟೆಗೆ ಪರಿಚಯಿಸುವ ಚಿಂತನೆಯಲ್ಲಿದ್ದಾರೆ. ಈ ಸಲಕರಣೆಯಲ್ಲಿ ಟೈಮಿಂಗ್ ಸೆಟ್ ಮಾಡಿದರೆ ಸಾಕು ನೀವು ನಿಗದಿಪಡಿಸಿದ ಸಮಯಕ್ಕೆ ಪಂಪ್ಸೆಟ್ ತನ್ನಿಂದ ತಾನೇ ಚಾಲನೆ ಪಡೆದುಕೊಳ್ಳುತ್ತದೆ. ನೀವು ನಿಗದಿಪಡಿಸಿದ ಸಮಯಕ್ಕೆ ಸ್ವಯಂ ಸ್ಥಗಿತಗೊಳ್ಳುತ್ತದೆ. ಒಂದು ವೇಳೆ ವಿದ್ಯುತ್ ಪೂರೈಕೆ ಕಡಿತವಾಗಿ ಕೆಲ ಸಮಯದ ನಂತರ ಬಂದರೆ ಸ್ವಯಂ ಚಾಲನೆ ಪಡೆದುಕೊಳ್ಳಲಿದೆ.
ಎಸ್ಎಂಎಸ್ ಮೂಲಕ ಆಗುತ್ತೆ ಆನ್, ಆಫ್!ಇದಲ್ಲದೆ ರೈತರು ಮೊಬೈಲ್ ಎಸ್ ಎಂಎಸ್ ಮೂಲಕವೂ ಪಂಪ್ ಸೆಟ್ನ್ನು ಚಾಲನೆ ಇಲ್ಲವೇ ಬಂದ್ ಮಾಡಬಹುದಾಗಿದೆ. ಆರಂಭದಲ್ಲಿ ಕನ್ನಡ ಮತ್ತು ಮರಾಠಿಯಲ್ಲಿ ಎಸ್ ಎಂಎಸ್ ಕಳುಹಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ವಿಕಾಸ ಜಮಖಂಡಿ ರೂಪಿಸಿರುವ ಪಂಪ್ಸೆಟ್ ಸಂರಕ್ಷಣೆ ಸಲಕರಣೆಗಳು ಬೇಸಿಕ್ ಮಾಡೆಲ್ನಿಂದ ಹಿಡಿದು ಎಲ್ಲ ಮಾದರಿಗಳಿಗೆ 6 ತಿಂಗಳು ವಾರೆಂಟಿ ನೀಡಲಾಗುತ್ತದೆ. ಅದರಲ್ಲಿನ ಪ್ರಮುಖ ಭಾಗ ಮದರ್ ಬೋರ್ಡ್ಗೂ ಆರು ತಿಂಗಳು ವಾರೆಂಟಿ ನೀಡಲಾಗುತ್ತದೆ. ಈ ಎಲ್ಲ ಸಲಕರಣೆಗಳ ನಿರ್ವಹಣೆ ಸುಲಭವಾಗಿದ್ದು, ಇವೆಲ್ಲವೂ 500 ಗ್ರಾಂನಿಂದ 3 ಕೆಜಿಯಷ್ಟು ಮಾತ್ರ ತೂಕ ಹೊಂದಿವೆ. ಪಂಪ್ಸೆಟ್ ಸಂರಕ್ಷಣೆಯ ಬೇಸಿಕ್ ಮಾಡೆಲ್ ಸಲಕರಣೆ ಬಗ್ಗೆ ಹಲವು ರೈತರು ಮೆಚ್ಚುಗೆ ಹಾಗೂ ತೃಪ್ತಿ ವ್ಯಕ್ತಪಡಿಸಿದ್ದು, ಅನೇಕರಿಂದ ಬೇಡಿಕೆಯೂ ಬಂದಿದೆ. ರೈತರಿಗೆ ಪ್ರಯೋಜನಾಕಾರಿ ಪಂಪ್ಸೆಟ್ ಸಂರಕ್ಷಣೆ ಸಲಕರಣೆ ಅಭಿವೃದ್ಧಿಪಡಿಸಿರುವ ವಿಕಾಸ ಜಮಖಂಡಿ ನವೋದ್ಯಮಿಯಾಗಿ ಉದ್ಯಮ ರಂಗಕ್ಕೆ ಮುಂದಡಿ ಇರಿಸಲು, ದೇಶಪಾಂಡೆ ಪ್ರತಿಷ್ಠಾನದ ಸ್ಯಾಂಡ್ಬಾಕ್ಸ್ ಸ್ಟಾರ್ಟ್ ಅಪ್ಸ್ ಸಹಕಾರ ನೀಡಲು ಮುಂದಾಗಿದೆ. ನಾನು ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದರೂ ರೈತರ ಮಗನಾಗಿ ರೈತರ ಸಂಕಷ್ಟ ಏನೆಂದು ಅರಿತಿದ್ದೇನೆ. ವಿದ್ಯುತ್ ಸಮಸ್ಯೆಯಿಂದಾಗಿ ಪಂಪ್ಸೆಟ್ಗಳು ಹಾನಿಗೀಡಾಗುವುದು, ಪ್ರಮುಖ ಸಂದರ್ಭದಲ್ಲಿ ಬೆಳೆಗಳಿಗೆ ನೀರಿಲ್ಲದೆ ರೈತರು ಪರದಾಡುವುದನ್ನು ಕಂಡು ಇದಕ್ಕೇನಾದರೂ ಪರಿಹಾರ ಹುಡುಕಬೇಕೆಂಬ ಛಲವೇ ಈ ಸಲಕರಣೆಗಳಾಗಿವೆ. ವರ್ಷದೊಳಗೆ ರಾಜ್ಯದ ಎಲ್ಲೆಡೆ ಹಾಗೂ ಸದರನ್ ಮಹಾರಾಷ್ಟ್ರದಲ್ಲಿ, ಮುಂದಿನ ಐದು ವರ್ಷದಲ್ಲಿ ದೇಶಾದ್ಯಂತ ಈ ಸಲಕರಣೆಗಳು ದೊರೆಯುವಂತೆ ಮಾಡುವ ಯೋಜನೆ ಹೊಂದಿರುವೆ.
. ವಿಕಾಸ ಆನಂದ ಜಮಖಂಡಿ ಅಮರೇಗೌಡ ಗೋನವಾರ