Advertisement

ಪುಲ್ವಾಮಾ ಘಟನೆ ಚಾರ್ಜ್‌ಶೀಟ್‌: ಪಾಕ್‌ಗೆ ಪಾಠ ಕಲಿಸಿ

01:36 AM Aug 28, 2020 | Hari Prasad |

ಕಳೆದ ವರ್ಷ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ಕೃತ್ಯದಲ್ಲಿ ನಮ್ಮ ಅನೇಕ ಸೈನಿಕರು ಜೀವ ಕಳೆದುಕೊಂಡರು.

Advertisement

ಈ ಘಟನೆ ನಡೆದ ಒಂದೂವರೆ ವರ್ಷಗಳ ನಂತರವೀಗ NIA, ಅಂದರೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಚಾರ್ಜ್‌ಶೀಟ್‌ ಸಿದ್ಧಪಡಿಸಿದ್ದು  ಪುಲ್ವಾಮಾ ದಾಳಿಯಲ್ಲಿ ಪಾಕ್‌ನ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಹಾಗೂ ಮುಖ್ಯವಾಗಿ ಐಎಸ್‌ಐನ ಪಾತ್ರದ ಬಗ್ಗೆ ಸ್ಪಷ್ಟ ವಿವರಗಳನ್ನು ನೀಡಿದೆ.

ಒಂದೆಡೆ ಹೇಗೆ ಐಎಸ್‌ಐ ಆತಂಕವಾದಿಗಳನ್ನು ಭಾರತದೊಳಕ್ಕೆ ನುಸುಳಿಸಲು ಸಹಕರಿಸಿತು ಎನ್ನುವುದರಿಂದ ಹಿಡಿದು, ಜೈಶ್‌ ಮುಖ್ಯಸ್ಥ ಮಸೂದ್‌ ಅಜರ್‌ ತನ್ನ ಸೋದರಳಿಯನನ್ನು ಈ ದುಷ್ಕೃತ್ಯದ ರೂಪುರೇಷೆ ರಚಿಸಲು ಭಾರತಕ್ಕೆ ಕಳುಹಿಸಿದ್ದ ಎನ್ನುವುದನ್ನು ಪುರಾವೆ ಸಮೇತ ಎದುರಿಡುತ್ತಿದೆ NIA.

ಈಗ 19 ಉಗ್ರರು ಆರೋಪಿಗಳಾಗಿದ್ದು, ಇವರಲ್ಲಿ 7 ಮಂದಿ ಬಂಧನದಲ್ಲಿದ್ದಾರೆ, ಉಳಿದ ಆರು ಜನರು ತಲೆಮರೆಸಿಕೊಂಡಿದ್ದರೆ, 6 ಉಗ್ರರು ಈಗಾಗಲೇ ಹತರಾಗಿದ್ದಾರೆ. ಒಟ್ಟಾರೆಯಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಚಾರ್ಜ್‌ಶೀಟ್‌ ಪುಲ್ವಾಮಾ ಘಟನೆಯ ಹಿಂದಿನ ಮಾಸ್ಟರ್‌ ಮೈಂಡ್‌ ಪಾಕಿಸ್ಥಾನವೇ ಎನ್ನುವುದನ್ನು ಸ್ಪಷ್ಟವಾಗಿ ಸಾರುತ್ತಿದೆ.

ಘಟನೆಯ ಹಿಂದೆ ಜೈಶ್‌ನ ಕೈವಾಡವಿದೆ ಎನ್ನುವುದು ಘಟನೆ ನಡೆದ ಕೆಲವೇ ದಿನಗಳಲ್ಲಿ ಪತ್ತೆಯಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಪಾಕಿಸ್ಥಾನ ಈಗಲೂ ಈ ಆರೋಪಗಳನ್ನೆಲ್ಲ ಅಲ್ಲಗಳೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಆ ರಾಷ್ಟ್ರದ ವಿರುದ್ಧ ಅಂತಾರಾಷ್ಟ್ರೀಯ ಸ್ತರದಲ್ಲಿ ಮತ್ತಷ್ಟು ಒತ್ತಡ ತರುವುದಕ್ಕೆ, ಅದರ ದುರುದ್ದೇಶಗಳಿಗೆ ಪೆಟ್ಟು ನೀಡುವುದಕ್ಕೆ ಸಾಧ್ಯವಾಗಲಿದೆ.

Advertisement

ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತವು, ವಿಶ್ವಸಂಸ್ಥೆಯು ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಮಾಡಿತು. ವಿಶ್ವಸಂಸ್ಥೆಯು ಅಜರ್‌ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕ್‌ಗೆ ಎಚ್ಚರಿಸಿದೆ. ಪಾಕ್‌ ಕೂಡ ತಾನು ವಿಶ್ವಸಂಸ್ಥೆಯ ಆದೇಶವನ್ನು ಪಾಲಿಸುವ ನಾಟಕವಾಡುತ್ತಿದೆ. ಆದರೆ, ಈ ಉಗ್ರ ಪಾಕಿಸ್ಥಾನದ  ಆಡಳಿತ, ಸೇನೆಯ ಸಂರಕ್ಷಣೆಯಲ್ಲಿ, ಅವುಗಳ ಜತೆಗೂಡಿ ಉಗ್ರ ಸಂಚುಗಳಲ್ಲಿ ಭಾಗಿಯಾಗುತ್ತಲೇ ಇದ್ದಾನೆ.

ಇದೇನೇ ಇದ್ದರೂ ಉಗ್ರರಿಗೆ ಹಣಕಾಸು ನೆರವಿನ ಜಾಲವನ್ನು ತಡೆಯುವ, ಹದ್ದಿನ ಕಣ್ಣಿಡುವ ಎಫ್.ಎಟಿ.ಎಫ್.ನ ಸಭೆ ಇದೇ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಈಗಿನ ಚಾರ್ಜ್‌ಶೀಟ್‌ನ ಆಧಾರದಲ್ಲಿ ಭಾರತವು ಪಾಕ್‌ನ ಹೆಡೆಮುರಿಕಟ್ಟುವ ಪ್ರಯತ್ನಕ್ಕೆ ಮುಂದಾಗಬೇಕು.

ಹಾಗೆಂದು, ಎಫ್.ಎಟಿ.ಎಫ್.ನ ಸಭೆಯಲ್ಲಿ ಪಾಕಿಸ್ಥಾನ ಕಪ್ಪುಪಟ್ಟಿಗೆ ಸೇರಿಬಿಡುತ್ತದೆ ಎಂದೇನೂ ಅಲ್ಲ. ಒಂದು ವೇಳೆ ಕಪ್ಪುಪಟ್ಟಿಗೆ ಸಿಲುಕಿಬಿಟ್ಟರೆ ಪಾಕಿಸ್ಥಾನ ಹಲವಾರು ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸಲೇಬೇಕಾಗುತ್ತದೆ.

ಆದರೆ ಎಲ್ಲಿಯವರೆಗೂ ಅದಕ್ಕೆ ಚೀನ, ಟರ್ಕಿ ಹಾಗೂ ಮಲೇಷ್ಯಾದ ನೆರವಿರುತ್ತದೋ ಅಲ್ಲಿಯವರೆಗೂ ಅದು ಕಪ್ಪುಪಟ್ಟಿಯಿಂದ ತಪ್ಪಿಸಿಕೊಳ್ಳುತ್ತಲೇ ಇರುತ್ತದೆ. ಆದರೆ ಈಗ ಇರುವ ಬೂದುಪಟ್ಟಿಯಿಂದ ಅದು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವುದೂ ಬಹಳ ಮುಖ್ಯ.

ವಿಶ್ವದ ಶಾಂತಿಗೆ ಅಡ್ಡಿಯಾಗಿರುವ ಪಾಕಿಸ್ಥಾನ ಬೂದುಪಟ್ಟಿಯಲ್ಲಿದ್ದಷ್ಟೂ ದಿನ ಅದಕ್ಕೆ ಹಲವು ಸಮಸ್ಯೆಗಳು, ಅಡ್ಡಿ-ಆತಂಕಗಳು ಇದ್ದೇ ಇರುತ್ತವೆ. ಪಾಕ್‌ಗೆ ಪಾಠ ಕಲಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬಾರದು. ಈ ನಿಟ್ಟಿನಲ್ಲಿ ಪುಲ್ವಾಮಾ ಚಾರ್ಜ್‌ಶೀಟ್‌ ಅನ್ನು ಆಧಾರವಾಗಿಟ್ಟುಕೊಂಡು ಭಾರತ ಎಫ್ಎಟಿಎಫ್ನಲ್ಲಿ ಪಾಕ್‌ ವಿರುದ್ಧ ಬಲವಾದ ವಾದ ಮಂಡಿಸಲಿ.

Advertisement

Udayavani is now on Telegram. Click here to join our channel and stay updated with the latest news.

Next