Advertisement

ಪುದುಚೇರಿ ಪ್ರದೇಶ ಸಣ್ಣದು; ಲೆಕ್ಕಾಚಾರ ದೊಡ್ಡದು

02:55 PM Mar 20, 2021 | Team Udayavani |

ಭಾರತೀಯ ಜನತಾ ಪಾರ್ಟಿಗೆ ದೊಡ್ಡ ಊರು, ಸಣ್ಣ ಊರೆಂಬ ಲೆಕ್ಕವಿಲ್ಲ. ಅದಕ್ಕೀಗ ಎಲ್ಲೆಲ್ಲೂ ಪಕ್ಷದ ಬಾವುಟ ಹಾರಿಸುವ ಉಮೇದು. ಅದ‌ಕ್ಕಾಗಿ ಕಾಂಗ್ರೆಸ್‌ ಮುಕ್ತ ಭಾರತ ಎನ್ನುತ್ತಾ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಹೊಸ ತಂತ್ರಗಳಿಂದ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದೆ.

Advertisement

ಪುದುಚೇರಿ ಒಂದು ಕೇಂದ್ರಾಡಳಿತ ಪ್ರದೇಶ. ಚುನಾಯಿತ ಮುಖ್ಯಮಂತ್ರಿ ಮತ್ತು ಜನಪ್ರತಿನಿಧಿಗಳ ವ್ಯವಸ್ಥೆ ಜಾರಿಯಲ್ಲಿದೆ. ಫ್ರೆಂಚ್‌ ವಸಾಹತು ಶೈಲಿಯ ಪ್ರಭಾವ ಇನ್ನೂ ಅಲ್ಲಿ ಸ್ವಲ್ಪ ಇದೆ. ಯೋಗಿ ಶ್ರೀ ಅರವಿಂದರು ನೆಲೆಗೊಂಡ ಸ್ಥಳ. ಕಡಲ ಕಿನಾರೆಗೆ ಅಂಟಿಕೊಂಡ ಈ ಪುಟ್ಟ ಪ್ರದೇಶದಲ್ಲಿ ಚುನಾವಣೆಯ ಕಾವು ಜೋರಾಗತೊಡಗಿದೆ.

ಎಐಎಡಿಎಂಕೆ, ಡಿಎಂಕೆ ಸಹಿತ ಇನ್ನಿತರ ಪಕ್ಷಗಳು ಹಳೆ ಹುಲಿಗಳು. ಆದರೆ ಕಾಂಗ್ರೆಸ್‌ ಹಳೆಯ ರಾಷ್ಟ್ರೀಯ ಹುಲಿ (ರಾಷ್ಟ್ರೀಯ ಪಕ್ಷ ). ಇಲ್ಲಿನ ಮತದಾರರಿಗೆ ಕಾಂಗ್ರೆಸ್‌ ಮೇಲೆ ಒಂದು ಬಗೆಯ ಮಮಕಾರವಿದೆ. ಈ ಬಾರಿ ಯಾರಿಗೆ ಲಾಭವಾಗು ತ್ತದೋ ಗೊತ್ತಿಲ್ಲ, ನಮಗೆ ನಷ್ಟವಾಗ ಬಾರದೆಂಬುದು ಕಾಂಗ್ರೆಸ್‌ನ ಲೆಕ್ಕಾ ಚಾರ. ಆದರೆ ಬಿಜೆಪಿಯದ್ದು ಯಾರು ಗೆಲ್ಲದಿದ್ದರೂ ಪರವಾಗಿಲ್ಲ,

ಕಾಂಗ್ರೆಸ್‌ ಸೋಲಬೇಕೆಂಬ ಲೆಕ್ಕಾಚಾರ. ಕಾಂಗ್ರೆಸ್‌ನ ಪಾಳಯದಲ್ಲಿ ಡಿಎಂಕೆ ಮತ್ತಿತರ ಪಕ್ಷಗಳಿದ್ದರೆ, ಎಐಎನ್‌ಆರ್‌ಸಿ, ಎಐಎಡಿಎಂಕೆ, ಬಿಜೆಪಿ ಮತ್ತೂಂದು ತುದಿಯಲ್ಲಿವೆ.

1974ರಿಂದ ಇಲ್ಲಿಯವರೆಗೆ ಲೆಕ್ಕ ಹಾಕಿದರೆ, ಒಮ್ಮೆ ಮಾತ್ರ (1977) ಕಾಂಗ್ರೆಸ್‌ ಗೆ ಕೇವಲ ಎರಡು ಸ್ಥಾನಗಳು ಸಿಕ್ಕಿವೆ. ಬಹುತೇಕ ಬಾರಿ ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿ ಬಂದು ಸ್ವತಂತ್ರವಾಗಿ ಹಾಗೂ ಮಿತ್ರ ಪಕ್ಷಗಳೊಡಗೂಡಿ ಅಧಿಕಾರ ಹಿಡಿದಿದೆ. ಒಟ್ಟು 33 ವಿಧಾನಸಭಾ ಕ್ಷೇತ್ರಗಳುಳ್ಳ ಕೇಂದ್ರಾಡಳಿತ ಪ್ರದೇಶ. ಈ ಪೈಕಿ 3 ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಲಾಗುತ್ತದೆ. ಉಳಿದ 30 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ.

Advertisement

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 15 ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿಯಿತು. ಜತೆಗೆ ಮೈತ್ರಿ ಪಕ್ಷಗಳೂ ಇದ್ದವು. ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ಕಳೆದುಕೊಳ್ಳುವ ದುಃಸ್ವಪ್ನ ಈಗಲೇ ಕಾಡತೊಡಗಿದೆ. ಒಂದು ತಿಂಗಳ ಹಿಂದೆ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್‌ ಸರಕಾರ ಇಕ್ಕಟ್ಟಿಗೆ ಸಿಲುಕಿತು. ಆಡಳಿತ ಪಕ್ಷ ಕಾಂಗ್ರೆಸ್‌ನ ಹಲವಾರು ಶಾಸಕರು ರಾಜೀನಾಮೆ ಕೊಟ್ಟರು. ಇದರಿಂದ ಪಕ್ಷ ಸಂಖ್ಯಾ ಬಲಾಬಲ ಏರುಪೇರಾಯಿತು. ಕೊನೆಗೂ ಅಸಹಾಯಕರಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಿದರು. ಕಾಂಗ್ರೆಸ್‌ ದೂರುವಂತೆ ಬಿಜೆಪಿ ಈ ಶಾಸಕರನ್ನೆಲ್ಲ ತನ್ನತ್ತ ಸೆಳೆದುಕೊಂಡಿದೆ.

ಕೇಂದ್ರದಿಂದ ಎಚ್ಚರಿಕೆಯ ನಡೆ
ಕೇಂದ್ರ ಸರಕಾರವೂ ಕೊಂಚ ಎಚ್ಚ ರದ ನಡೆಯನ್ನು ಇಟ್ಟಿತು. ಸರಕಾರ ಉರುಳುವ ಮುನ್ನ (ರಾಜೀನಾಮೆ ನೀಡುವ) ಗವರ್ನರ್‌ ಕಿರಣ್‌ ಬೇಡಿ ಯವರನ್ನು ಸ್ಥಾನದಿಂದ ತೆಗೆಯಿತು. ಇದಕ್ಕೆ ಕಾರಣ, ಕಾಂಗ್ರೆಸ್‌ ನೇತೃತ್ವದ ಸರಕಾರಕ್ಕೂ ರಾಜ್ಯಪಾಲರಿಗೂ ಬಹಳ ದಿನಗಳಿಂದ ಸಂಬಂಧ ಹಳಸಿತ್ತು. ಚುನಾವಣೆ ಹತ್ತಿರ ಬಂದಾಗ ಇಂಥ ಗೊಂದಲಗಳು ಮುಂದುವರಿದರೆ ಕಷ್ಟ ಎಂದುಕೊಂಡು ಮೊದಲು ತೆಗೆ ದದ್ದು ರಾಜ್ಯಪಾಲರನ್ನು. ಯಾವುದೇ ಕಾರಣಕ್ಕೂ ತಮಗೆ ಅಭಿವೃದ್ಧಿ ಕಾರ್ಯ ನಡೆಸಲು ಗವರ್ನರ್‌ ಬಿಡಲಿಲ್ಲ ಎಂದು ಕಾಂಗ್ರೆಸ್‌ ಚುನಾವಣ ವೇದಿಕೆಗಳಲ್ಲಿ ಹೇಳಬಾರದು. ಆ ಮೂಲಕ ಅನುಕಂಪದ ಮತ ಅತ್ತ ತಿರುಗಬಾರದೆಂಬುದು ಬಿಜೆಪಿ ತಂತ್ರ. 2011ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ರಂಗಸ್ವಾಮಿ ಕಟ್ಟಿಕೊಂಡಿದ್ದು ಎಐಎನ್‌ಅರ್‌ಸಿ. ಆ ಚುನಾವಣೆಯಲ್ಲೇ 15 ಸ್ಥಾನಗಳನ್ನು ಗಳಿಸಿ ಅಧಿಕಾರ ಗಳಿಸಿತು. ಅವರು ಸೆಳೆದುಕೊಂಡಿದ್ದು ಕಾಂಗ್ರೆಸ್‌ನ ಮತಗಳನ್ನೇ. ಅದೇ ರಂಗಸ್ವಾಮಿ ಈಗ ಎನ್‌ಡಿಎ ನೇತೃತ್ವ ವಹಿಸಿದ್ದಾರೆ ಪುದುಚೇರಿಯಲ್ಲಿ. 16 ಸೀಟುಗಳಲ್ಲಿ ಎಐಎನ್‌ಆರ್‌ಸಿ ಸ್ಪರ್ಧಿಸಿದರೆ, 14 ಸ್ಥಾನಗಳಲ್ಲಿ ಬಿಜೆಪಿ, ಎಐಎಡಿಎಂಕೆ ಸ್ಫರ್ಧಿಸುತ್ತಿದೆ.

ಈಗಿರುವ ರಣರಂಗದಲ್ಲಿ ಇತ್ತೀಚಿನ ಸಮೀಕ್ಷೆ ಪ್ರಕಾರ ಎನ್‌ಡಿಎ 23-27 ಸ್ಥಾನಗಳನ್ನು ಗೆಲ್ಲುವ ಲೆಕ್ಕ ಇದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಕೂಟಕ್ಕೆ 3-7 ಸ್ಥಾನಗಳ ನಿರೀಕ್ಷೆಯಿದೆ. ಕಾದು ನೋಡಬೇಕು.

– ಅಶ್ವಘೋಷ

Advertisement

Udayavani is now on Telegram. Click here to join our channel and stay updated with the latest news.

Next