Advertisement

PUC Result ರಾಜ್ಯಕ್ಕೆ 2ನೇ ರ‍್ಯಾಂಕ್‌ ಬಂದವ ಗುಳೆಹೋಗಿದ್ದ…!

03:48 PM Apr 21, 2023 | Team Udayavani |

ವಿಜಯಪುರ : ಪಿಯುಸಿ ದ್ವಿತಿಯ ವರ್ಷದ ಫಲಿತಾಂಶದಲ್ಲಿ ತನಗೆ ರಾಜ್ಯಕ್ಕೆ 2ನೇ ರ‍್ಯಾಂಕ್‌ ಬಂದ ಸುದ್ದಿಯನ್ನು ಶಿಕ್ಷಕರು ಮೊಬೈಲ್ ಮೂಲಕ ಸಂತಸದ ಸುದ್ದಿ ತಿಳಿಸಿದಾಗ ಆತ ಗುಳೆಹೋಗಿದ್ದ. ನೆರೆ ರಾಜ್ಯ ಮಹಾರಾಷ್ಟ್ರದ ನೆಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಸುದ್ದಿ ತಿಳಿದ ಕೂಲಿ ಗ್ಯಾಂಗಿನ ಜನರು ಕನ್ನಡದ ಕುವರನ ಸಾಧನೆಗೆ ಮಹಾರಾಷ್ಟ್ರ ನೆಲದಲ್ಲಿ ಸಿಹಿ ತಿನ್ನಿಸಿ ಸಂಭ್ರಮ ಮೆರೆದಿದ್ದಾರೆ.

Advertisement

ಇದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್‌ ಬಂದಿರುವ ರಾಹುಲ್ ಮೋತಿಲಾಲ್ ರಾಠೋಡ ಎಂಬ ಪ್ರತಿಭಾವಂತ ವಿದ್ಯಾರ್ಥಿ ಅನುಭವಿಸಿದ ಅದ್ಭುತ ಕ್ಷಣ. ಯಾದಗಿರಿ ಜಿಲ್ಲೆಯ ಹುಣಡಸಗಿ ತಾಲೂಕಿನ ಮನ್ನಾನಾಯಕ ತಾಂಡಾದ ಈ ವಿದ್ಯಾರ್ಥಿಯ ತಂದೆ ಮೋತಿಲಾಲ್-ತಾಯಿ ಸವಿತಾ ಒಂದೂವರೆ ದಶಕದ ಹಿಂದೆಯೇ ಮಹಾರಾಷ್ಟ್ರದ ರತ್ನಗಿರಿಗೆ ಗುಳೆ ಹೋಗಿದ್ದಾರೆ.

ಬಡತನದಿಂದ ತಾವು ಅನುಭವಿಸುತ್ತಿರುವ ಸಂಕಷ್ಟದ ಜೀವನ ತಮ್ಮ ಮಕ್ಕಳಿಗೆ ಬಾರದಿರಲೆಂದು ಮಕ್ಕಳನ್ನು ಅವರವರ ಶಿಕ್ಷಣಕ್ಕೆ ತಕ್ಕಂತೆ ಬೇರೆ ಬೇರೆ ಸ್ಥಳಗಳಲ್ಲಿ ಶಾಲೆಗೆ ಸೇರಿಸಿದ್ದಾರೆ. ಮಗ ರಾಹುಲ್ ತಾಳಿಕೋಟೆಯ ಎಸ್.ಕೆ.ಪಿಯು ಕಾಲೇಜಿನಲ್ಲಿ ಓದುತ್ತಿದ್ದಾನೆ. ಹೆಣ್ಣು ಮಕ್ಕಳಾದ ರಂಜಿತಾಳನ್ನು ಮುರಾರ್ಜಿ ಶಾಲೆಗೂ, ದೀಪಾಳನ್ನು ಕೆಂಭಾವಿ ಖಾಸಗಿ ಶಾಲೆಗೂ ದಾಖಲು ಮಾಡಿದ್ದಾರೆ.

ಬಡತನ ಬೇಗೆಯಲ್ಲೂ ತಂದೆಯ ಬೆವರ ಹನಿಯನ್ನು ಅರಿತಿರುವ ಮಕ್ಕಳು ಎಲ್ಲರೂ ಪ್ರತಿಭಾವಂತಿಕೆ ಮೆರೆಯುತ್ತಿದ್ದಾರೆ. ಇದೀಗ ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್‌ ಸಾಧನೆಯಿಂದಲೇ ರಾಹುಲ್ ಹೆತ್ತವರಿಗೆ ಮಾತ್ರವಲ್ಲದೇ ಹುಟ್ಟಿದ ಊರಿಗೆ, ಶಿಕ್ಷಣ ಕೊಟ್ಟ ಕಾಲೇಜಿಗೆ, ವಿದ್ಯೆ ಕಲಿಸಿದ ಗುರುಗಳಿಗೆ ಕೀರ್ತಿ ತಂದಿದ್ದಾನೆ.

ರಾಹುಲ್ ರ‍್ಯಾಂಕ್‌ ಪಡೆದ ಸುದ್ದಿ ತಿಳಿಯುತ್ತಲೇ ರಸ್ತೆ ಕಾಮಗಾರಿ ಕೆಲಸದಲ್ಲಿದ್ದ ತಂದೆ ಹಾಗೂ ಕಾರ್ಮಿಕ ಸ್ನೇಹಿತರ ಬಳಗ ಕೆಲಸದ ಸ್ಥಳದಲ್ಲೇ ರಾಹುಲ್‍ಗೆ ಸಿಹಿ ತಿನ್ನಿಸಿ ಸಂಭ್ರಮ ಆಚರಿಸಿದೆ. ಸಂತಸದ ಸುದ್ದಿಹೊರುತ್ತು ತಂದೆ-ಮಗ ಮನೆಗೆ ಬರುತ್ತಲೇ ತಾವಿ ಹಾಗೂ ಕುಟುಂಬದ ಇತರೆ ಸದಸ್ಯರು ಸಿಹಿ ಹಂಚುವ ಜೊತೆಗೆ ಕಾರ್ಮಿಕರ ಬಳಕ್ಕೆ ತಂಪು ಪಾನೀಯದ ಪಾರ್ಟಿ ಕೊಡಿಸಿ ಸಂತಸ ಸೂರೆಗೊಳಿಸಿದ್ದಾರೆ.

Advertisement

ಸಮಾಶಾಸ್ತ್ರ, ಶಿಕ್ಷಣ ವಿಷಯದಲ್ಲಿ ನೂರಕ್ಕೆ 100 ಅಂಕ ಪಡೆದಿರುವ ರಾಹುಲ್, ಸಂಸ್ಕøತದಲ್ಲಿ 99, ಕನ್ನಡ ಹಾಗೂ ಇತಿಹಾಸ ವಿಭಾಗದಲ್ಲಿ 98 ಅಂಕ ಪಡೆದಿದ್ದಾನೆ. ಆರ್ಥಶಾಸ್ತ್ರದಲ್ಲಿ ಪಡೆದಿರುವ ಅಂಕ 97.

ನಮ್ಮ ಪರಿಶ್ರಮಕ್ಕೆ ತಕ್ಕಂತೆ ನಮ್ಮ ಮಗ ಶೈಕ್ಷಣಿಕ ಸಾಧನೆ ಮೂಲಕ ಕೀರ್ತಿ ತಂದಿರುವುದು ಸಂತಸವಾಗಿದೆ. ಆತನ ಸಾದನೆಗೆ ನಮ್ಮಲ್ಲಿ ವರ್ಣಿಸಲು ಪದಗಳಿಲ್ಲ. ನಾವು ದುಡಿಯುವ ಕಷ್ಟದ ಅರಿವು ನಮ್ಮ ಮಕ್ಕಳಿಗೆ ಇರುವ ಕಾರಣವೇ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾನೆ ರಾಹುಲ್ ತಂದೆ ಮೋತಿಲಾಲ್ ರಾಠೋಡ.

ನಮ್ಮ ವಿದ್ಯಾರ್ಥಿ ರಾಹುಲ್ ಶಿಸ್ತು ಮಾತ್ರವಲ್ಲ ಪ್ರತಿಭಾವಂತನೂ ಹೌದು. ಶಾಂತ ಸ್ವಭಾವದವದ ಆತ ಶಾಲೆಯಲ್ಲಿ ಹೇಳುತ್ತಿದ್ದ ಪಾಠವನ್ನು ತದೇಕಚಿತ್ತದಿಂದ ಕೇಳುತ್ತಿದ್ದ. ತಿಳಿಯದ ವಿಷಯದ ಕುರಿತು ನಮ್ಮೊಂದಿಗೆ ಚರ್ಚಿಸಿ, ಲೋಪಗಳನ್ನು ತಿದ್ದಿಕೊಳ್ಳುತ್ತಿದ್ದ. ಆತನ ಪರಿಶ್ರಮ ಇದೀಗ ನಮ್ಮ ಕಣ್ಮುಂದೆ ಫಲಿತಾಂಶ ತಂದಿಟ್ಟಿದೆ ಎಂದು ಕಾಲೇಜಿನ ಉಪನ್ಯಾಸಕ ಬಳಕ ಸಂಭ್ರಮಿಸುತ್ತಿದೆ.

ಕೆಎಎಸ್-ಐಎಎಸ್ ಅಧಿಕಾರಿಯಾಗುವ ಗುರಿ ಇದೆ. ಕುಟುಂಬದ ಬಡತ ನೀಗಲು ನಾನು ಧಾರವಾಡಕ್ಕೆ ಹೋಗಿ ಬಿಎ ಪದವಿ ಪಡೆದು, ಗುರಿ ಸಾಧನೆಗೆ ಪರಿಶ್ರಮದೊಂದಿಗೆ ಹೆತ್ತವರ ಸಂಕಷ್ಟ ನಿವಾರಿಸುವ ಮಹದಾಸೆ ಕಣ್ಮುಂದಿದೆ ಎಂದು ರಾಹುಲ್ ರಾಠೋಡ ಹೇಳಿಕೊಂಡಿದ್ದಾನೆ.

ಮಾಸಿಕ, ತ್ರೈಮಾಸಿಕ ಸೇರಿದಂತೆ ಇತರೆ ಪರೀಕ್ಷೆಗಳಲ್ಲಿ ತನಗೆ ಕಡಿಮೆ ಅಂಕ ಬಂದಲ್ಲಿ ತಕ್ಷಣ ಕಡಿತವಾದ ಅಂಕಗಳ ಕುರಿತು ರಾಹುಲ್ ಉಪನ್ಯಾಸಕರೊಂದಿಗೆ ಚರ್ಚಿಸಿ, ಸುಧಾರಿಸಿಕೊಳ್ಳುತ್ತಿದ್ದ. ಓರ್ವ ಶಿಕ್ಷಕರಿಗೆ ಇದಕ್ಕಿಂತ ಇನ್ನೇನು ಗುರುಕಾಣಿಕೆ ಬೇಕಿಲ್ಲ ಎಂದು ಎಸ್.ಕೆ. ಪ.ಪೂ. ತಾಳಿಕೋಟೆ ಕಾಲೇಜು ಉಪನ್ಯಾಸಕಿ ಬಸಮ್ಮ ನಾಟೀಕರ ಅಭಿನಂದಿಸಿದ್ದಾರೆ.

ನಮ್ಮ ಪರಿಶ್ರಮ ಆತನನ್ನು ಸಾಧನೆ ಆಸನದಲ್ಲಿ ಕೂಡಿಸಿದೆ ಎನ್ನುವ ಮಗನ ಕೃತಜ್ಞತೆ ನಮ್ಮ ಕಣ್ಣಂಚಲ್ಲೂ ನೀರು ತರಿಸಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಿಂತ ನಮಗೆ ಇನ್ನೇನು ಬೇಕಿದೆ ಹೇಳಿ. ಇನ್ನೂ ಉನ್ನತ ಸ್ಥಾನ, ಕೀರ್ತಿ ಸಂಪಾದಿಸಲಿ ಎಂದು ರಾಹುಲ್ ಹೆತ್ತವರಾದ ಮೋತಿಲಾಲ್-ಸವಿತಾ ರಾಠೋಡ ಸಂಭ್ರಮ ವ್ಯಕ್ತ ಪಡಿಸಿದ್ದಾರೆ.

ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next