Advertisement

ತೇಪೆ ಕಾರ್ಯದ ಜತೆಗೆ ರಸ್ತೆ ಮೇಲ್ದರ್ಜೆಗೆ ಸ್ಥಳೀಯರ ಆಗ್ರಹ

02:55 AM Nov 27, 2018 | Team Udayavani |

ಬೆಳ್ತಂಗಡಿ: ಅತ್ಯಂತ ಹೆಚ್ಚು ವಾಹನ ಸಂಚಾರದ ಹಾಗೂ ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಜನತೆಗೆ ಉಡುಪಿ ಜಿಲ್ಲೆಯ ಬಹುತೇಕ ಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿ ಗುರುತಿಸಲ್ಪಟ್ಟಿರುವ ಗುರುವಾಯನಕೆರೆ- ನಾರಾವಿ-ಕಾರ್ಕಳ ರಸ್ತೆಯ ಹೊಂಡಗಳಿಗೆ ಮುಕ್ತಿ ನೀಡುವ ಜತೆಗೆ ಮೇಲ್ದರ್ಜೆಗೇರಿಸುವ ಕೂಗು ಜೋರಾಗಿಯೇ ಕೇಳಿಬರುತ್ತಿದೆ.

Advertisement

ಈ ರಸ್ತೆಯು ಬೆಳ್ತಂಗಡಿ-ಕಾರ್ಕಳ ತಾಲೂಕನ್ನು ಸಂಧಿಸುವ ಜತೆಗೆ ದ.ಕ.- ಉಡುಪಿ ಜಿಲ್ಲೆಗಳನ್ನು ಸಂಧಿಸುವ ರಸ್ತೆಯೂ ಆಗಿದೆ. ಜತೆಗೆ ಉಭಯ ಜಿಲ್ಲೆಗಳ ಪ್ರಮುಖ ಧಾರ್ಮಿಕ ತಾಣಗಳಾದ ಉಡುಪಿ ಶ್ರೀ ಕೃಷ್ಣ ಮಠ, ಧರ್ಮಸ್ಥಳ, ಕೊಲ್ಲೂರು, ಸುಬ್ರಹ್ಮಣ್ಯ, ಸೌತಡ್ಕ ಹೀಗೆ ಪ್ರಮುಖ ಕ್ಷೇತ್ರಗಳನ್ನು ಸಂಪರ್ಕಿಸುತ್ತದೆ. ಜತೆಗೆ ಹಲವು ಪ್ರವಾಸಿ ತಾಣಗಳನ್ನೂ ಸಂಪರ್ಕಿಸುವುದರಿಂದ ಹೆಚ್ಚಿನ ವಾಹನಗಳು ಈ ರಸ್ತೆಯ ಮೂಲಕ ಸಾಗುತ್ತವೆ. ರಜಾ ಸಮಯಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಅಪಾಯದ ಸಾಧ್ಯತೆಗಳನ್ನೂ ಅರಿತುಕೊಂಡು ರಸ್ತೆಯ ಅಭಿವೃದ್ಧಿಗೆ ಸಂಬಂಧಪಟ್ಟವರು ಗಮನಹರಿಸಬೇಕಿದೆ.

ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಕೆದ್ದು, ನಾರಾವಿ, ಸುಲ್ಕೇರಿ, ತೆಂಕಕಾರಂದೂರು ಮೊದಲಾದ ಪ್ರದೇಶದಲ್ಲಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ತೇಪೆ ಕಾರ್ಯದ ಜತೆಗೆ ರಸ್ತೆಯ ಪೂರ್ಣ ಪ್ರಮಾಣದ ಡಾಮರೀಕರಣ ಕಾರ್ಯವೂ ನಡೆಯಬೇಕಿದೆ. ರಸ್ತೆಯು ದ್ವಿಪಥ ರಸ್ತೆಯಾಗಿದ್ದರೂ, ಅದನ್ನು ಇನ್ನಷ್ಟು ಅಗಲಗೊಳಿಸುವ ಕಾರ್ಯವೂ ನಡೆಯಬೇಕಿದೆ ಎಂದು ಸ್ಥಳೀಯರು ಅಭಿಪ್ರಾಯಿಸುತ್ತಿದ್ದಾರೆ.

ತಾಲೂಕಿನ ಪ್ರಮುಖ ರಸ್ತೆ
ಬೆಳ್ತಂಗಡಿ ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಇದೇ ಪ್ರಮುಖ ರಸ್ತೆಯಾಗಿದ್ದು, ಅಲ್ಲಿನ ಸಾರ್ವಜನಿಕರು ತಾಲೂಕು ಕೇಂದ್ರವನ್ನು ಸಂಪರ್ಕಿಸುವುದಕ್ಕೆ ಈ ರಸ್ತೆಯ ಮೂಲಕವೇ ಸಾಗಬೇಕಿದೆ. ಜತೆಗೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳುವುದಕ್ಕೆ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಹೀಗಾಗಿ ಪ್ರವಾಸಿಗರಿಗಿಂತಲೂ ನಿತ್ಯ ಸಂಚರಿಸುವ ನಮಗೆ ರಸ್ತೆಯ ಅಭಿವೃದ್ಧಿ ಅನಿವಾರ್ಯ. ಒಮ್ಮೆ ಪೂರ್ಣ ಪ್ರಮಾಣದಲ್ಲಿ ಡಾಮರೀ ಕರಣ ನಡೆಸಿದಲ್ಲಿ ಒಂದಷ್ಟು ವರ್ಷಗಳ ಕಾಲ ರಸ್ತೆಯ ನಿರ್ವಹಣೆಯೂ ತಪ್ಪಲಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಸ್ತಾವನೆ ಇದೆ
ಈ ರಸ್ತೆಯು ಸುಬ್ರಹ್ಮಣ್ಯ- ಉಡುಪಿ ರಸ್ತೆಯಾಗಿದ್ದು, ಈಗಾಗಲೇ ಅದರ ಅಭಿವೃದ್ಧಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಧರ್ಮಸ್ಥಳದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರ ಗಮನಕ್ಕೆ ತಂದಿದ್ದರು. ಸಚಿವರು ಸರಕಾರಕ್ಕೆ ಒತ್ತಡ ಹೇರಿ ಪ್ರಸ್ತಾವನೆಯ ಅನುದಾನವನ್ನು ಮಂಜೂರುಗೊಳಿಸಿದ್ದೇ ಆದಲ್ಲಿ ರಸ್ತೆಯ ಅಭಿವೃದ್ಧಿಯ ಕೂಗಿಗೆ ಮನ್ನಣೆ ದೊರಕಲಿದೆ.

Advertisement

ತೇಪೆ ಕಾರ್ಯ ಪ್ರಗತಿಯಲ್ಲಿ
ಪ್ರಸ್ತುತ ರಸ್ತೆಯ ಹೊಂಡಗಳಿಗೆ ತೇಪೆ ಕಾರ್ಯ ಆರಂಭವಾಗಿದೆ. ನಾರಾವಿ ಸೇತುವೆವರೆಗೆ ರಸ್ತೆ ನಮ್ಮ ಭಾಗಕ್ಕೆ ಬರುತ್ತಿದ್ದು, ಹಾಲಿ ತೇಪೆ ಕಾರ್ಯ ಆರಂಭಗೊಂಡಿದೆ. ಪ್ರಸ್ತುತ ಬದ್ಯಾರು ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿ ತೇಪೆ ಕಾರ್ಯ ಪೂರ್ಣಗೊಂಡು, ಸಂಚಾರ ಸುಗಮವಾಗಲಿದೆ. 
– ಶಿವಪ್ರಸಾದ್‌ ಅಜಿಲ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next