Advertisement

ಸರಕಾರಿ ಕೇಂದ್ರಗಳ ಮುಂದೆ ಸಾರ್ವಜನಿಕರ ಪರದಾಟ

05:25 AM Jul 20, 2017 | Team Udayavani |

ಆಧಾರ್‌ ನೋಂದಣಿ ಖಾಸಗಿ ಕೇಂದ್ರಗಳ ಕಾರ್ಯ ಸ್ಥಗಿತ
ಮಹಾನಗರ:  
ಕೇಂದ್ರ ಸರಕಾರದ ಆದೇಶದಂತೆ ಆಧಾರ್‌ ನೋಂದ‌ಣಿ ಮಾಡುವ ಖಾಸಗಿ ಕೇಂದ್ರ ಗಳು ಮುಚ್ಚಿರುವುದರಿಂದ, ಈಗ ನಗರದಾದ್ಯಂತ ಹೊಸದಾಗಿ ಆಧಾರ್‌ ನೋಂದಣಿ ಮಾಡಿಸಿಕೊಳ್ಳುವುದಕ್ಕೆ  ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಇನ್ನೊಂದೆಡೆ, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ನಗರದಲ್ಲಿ ಹೊಸದಾಗಿ ಮೂರು ಆಧಾರ್‌ ನೋಂದಣಿ ಕೇಂದ್ರ ಗಳನ್ನು ಪ್ರಾರಂಭಿಸಲು ತೀರ್ಮಾನಿಸಿದೆ.
 
ಈ ನಡುವೆ, ಈಗಾಗಲೇ ಮುಚ್ಚಿರುವ ಆಧಾರ್‌ ನೋಂದಣಿ ಖಾಸಗಿ ಕೇಂದ್ರಗಳನ್ನು ಪುನರಾರಂಭಿಸುವಂತೆ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದು, ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮಾತ್ರ ನಗರದಲ್ಲಿ ಆಧಾರ್‌ ಕಾರ್ಡ್‌ಗೆ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವವರು ಹರಸಾಹಸಪಡುತ್ತಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ  ಇನ್ನು ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಆಧಾರ್‌ ಕಾರ್ಡ್‌ ವಿತರಣೆ ಬಾಕಿಯಿದೆ. ಜಿಲ್ಲೆಯಲ್ಲಿ ಸದ್ಯ 17 ನಾಡಕಚೇರಿ, ಜಿಲ್ಲಾಧಿಕಾರಿ ಕಚೇರಿಯ ಸ್ಪಂದನ ಹಾಗೂ ನಾಲ್ಕು  ಮಂಗಳೂರು ಒನ್‌ ಸೆಂಟರ್‌ಗಳಲ್ಲಿ ಆಧಾರ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಈ ಮೊದಲು ಜಿಲ್ಲೆಯಲ್ಲಿ 28 ಖಾಸಗಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದ ಕಾರಣ ಆಧಾರ್‌ ನೋಂದಣಿ ಪ್ರಕ್ರಿಯೆಯು ಸರಾಗವಾಗಿ ನಡೆಯುತ್ತಿತ್ತು. 

ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ಆಧಾರ್‌ ನೋಂದಣಿ ಖಾಸಗಿ ಕೇಂದ್ರಗಳನ್ನು ತೆರೆಯಲಾಗಿತ್ತು. ಆಗ, ಜನರಿಗೂ ಇದರ ಮುಂದೆ ಕ್ಯೂ ನಿಂತುಕೊಳ್ಳುವ ಅಗತ್ಯವಿರಲಿಲ್ಲ. ಈಗ ಮಂಗಳೂರು ಒನ್‌ ಕೇಂದ್ರ ಹಾಗೂ ಜಿಲ್ಲಾಧಿಕಾರಿ ಕಚೇರಿ ಕೇಂದ್ರದಲ್ಲಿ ಮಾತ್ರ ನೋಂದಣಿ ಕಾರ್ಯ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಯಾಗಿದೆ. ಜನರು ಕೂಡ ಏಕಾಏಕಿ ಆಧಾರ್‌ ನೋಂದಣಿ ಕೇಂದ್ರಗಳ ಮುಂದೆ ಸೇರುತ್ತಿದ್ದು, ಅಲ್ಲಿ ಸಾಕಷ್ಟು ಗೊಂದಲ, ನೂಕು- ನುಗ್ಗಾಟ ಉಂಟಾಗುತ್ತಿದೆ ಎಂದು ಇದರಿಂದ ನೊಂದ ನಾಗರಿಕರೊಬ್ಬರು ಆರೋಪಿಸಿದ್ದಾರೆ.

ಈ ಹಿಂದೆ, ಸರಕಾರಿ ಆಧಾರ್‌ ನೋಂದ‌ಣಿ ಕೇಂದ್ರಗಳಲ್ಲಿ ಮಾತ್ರವೇ ಆಧಾರ್‌ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದ ಕಾರಣ ಆಧಾರ್‌ ಪಡೆಯಲು ದಿನವೀಡಿ ಸಾಲಿನಲ್ಲಿ ನಿಲ್ಲಬೇಕಿತ್ತು. ಜತೆಗೆ ನೋಂದಣಿ ಕಾರ್ಯ ಕೂಡ ಸಾಕಷ್ಟು ನಿಧಾನವಾಗಿ ನಡೆಯುತ್ತಿತ್ತು. ಈ ಸಮಸ್ಯೆ ಮನಗಂಡು, ಖಾಸಗಿಯಾಗಿ ಆಧಾರ್‌ ನೋಂದಣಿ ಪ್ರಕ್ರಿಯೆ ಶುರುಮಾಡಲಾಯಿತು. 

Advertisement

ನೂಕು ನುಗ್ಗಲು 
ಈಗ ಆಧಾರ್‌ ಖಾಸಗಿ ಕೇಂದ್ರಗಳಲ್ಲಿ ವ್ಯಕ್ತಿಗಳ ಖಾಸಗಿ ಮಾಹಿತಿ ಸೋರಿಕೆ ಯಾಗುತ್ತಿವೆ ಎನ್ನುವ ಆರೋಪದ ಮೇಲೆ ಕೇಂದ್ರ ಸರಕಾರವು ಖಾಸಗಿಯಾಗಿ ನಡೆಯುತ್ತಿದ್ದ ಆಧಾರ್‌ ಕೇಂದ್ರಗಳನ್ನು ಬಂದ್‌ ಮಾಡಿಸುವಂತೆ ಸೂಚನೆ ನೀಡಿದೆ. ಇದರಿಂದ ಬಹುತೇಕ ಎಲ್ಲ ಕಡೆಯೂ ಖಾಸಗಿ ಕೇಂದ್ರಗಳು ತನ್ನ ಸೇವೆಯನ್ನು ನಿಲ್ಲಿಸಿವೆ. ಇದರ ಪರಿಣಾಮ, ಸರಕಾರಿ ವ್ಯವಸ್ಥೆಯಡಿಯಲ್ಲಿ ನಡೆಯುವ ಆಧಾರ್‌ ನೋಂದಣಿ ಕೇಂದ್ರದಲ್ಲಿ ಟೋಕನ್‌ ಪಡೆ ಯಲು ಜನರಿಂದ ಭಾರೀ ನೂಕು ನುಗ್ಗಲು ಉಂಟಾಗುತ್ತಿದೆ.

ಆಧಾರ್‌ ಸಂಖ್ಯೆ ಕಡ್ಡಾಯ
ಪ್ರಸ್ತುತ ಕೇಂದ್ರ ಸರಕಾರದ ಆದೇಶ ದಂತೆ ಬಹುತೇಕ ಎಲ್ಲ ಸರಕಾರಿ ಸೌಲಭ್ಯ ಗಳಿಗೂ ಆಧಾರ್‌ ಲಿಂಕ್‌ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ.  ಈ ನಿಟ್ಟಿನಲ್ಲಿ ಆಧಾರ್‌ ಮಾಡಿಸಿಕೊಳ್ಳುವುದು ಅನಿವಾರ್ಯವಾದ ಹಿನ್ನೆಲೆಯಲ್ಲಿ ಜನರು ಆಧಾರ್‌ ಮಾಡಿಸಿ ಕೊಳ್ಳಲು  ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅಲ್ಲದೆ ಹೆಚ್ಚಿನವರ ಆಧಾರ್‌ ಕಾರ್ಡ್‌ಗಳಲ್ಲಿ ಹೆಸರು, ಜನ್ಮದಿನಾಂಕ, ವಿಳಾಸಗಳಲ್ಲಿ ಉಂಟಾದ ತಪ್ಪುಗಳನ್ನು ಸರಿಪಡಿಸಲು ಬರುವುದರಿಂದ ಆಧಾರ್‌ ಕೇಂದ್ರಗಳಲ್ಲಿ ದಿನವೂ ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. 

ತಿಂಗಳೊಳಗೆ ಮೂರು ಹೊಸ ಮಂಗಳೂರು ಒನ್‌ ಸೆಂಟರ್‌ ನಗರದಲ್ಲಿ ಈಗಾಗಲೇ ಮೂರು ಮಂಗಳೂರು ಒನ್‌ ಸೆಂಟರ್‌ (ಪಾಲಿಕೆ ಕಟ್ಟಡ, ಬಾವುಟಗುಡ್ಡೆ, ಸುರತ್ಕಲ್‌ ಮುಡಾ ಮಾರುಕಟ್ಟೆಗಳು ಕಾರ್ಯನಿರ್ವಹಿ ಸುತ್ತಿದ್ದು, ಕದ್ರಿ ಮಂಗಳೂರು ಒನ್‌ ಸೆಂಟರ್‌ನಲ್ಲಿ ತಾಂತ್ರಿಕ ತೊಂದರೆ ಇರುವ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.  ತಿಂಗಳೊಳಗೆ ಅದು ಸೇರಿ ವಾಮಂಜೂರು, ಸ್ಟೇಟ್‌ ಬ್ಯಾಂಕ್‌, ಹೊಸಬೆಟ್ಟಿನಲ್ಲಿ ಹೊಸ ಮೂರು ಸೆಂಟರ್‌ಗಳು ಆರಂಭವಾಗಲಿವೆ. ಅಲ್ಲದೆ, ಇನ್ನೂ ಹೆಚ್ಚುವರಿ ಕೇಂದ್ರಗಳನ್ನು ತೆರೆಯಲು ಸ್ಥಳ ನೀಡುವಂತೆ ಮನಪಾ ಹಾಗೂ ಜಿಲ್ಲಾಡಳಿತವನ್ನು ಕೋರಲಾಗಿದೆ. 

ಒಂದುವೇಳೆ ಜಾಗ ಲಭಿಸಿದರೆ, ಮತ್ತಷ್ಟು ಕಡೆ ಆಧಾರ್‌ ಕೇಂದ್ರ ಸ್ಥಾಪಿಸಲು ಸಿದ್ಧರಿದ್ದೇವೆ. ಆಧಾರ್‌ ನೋಂದಣಿ ಖಾಸಗಿ ಕೇಂದ್ರಗಳನ್ನು ಸೆಪ್ಟಂಬರ್‌ವರೆಗೆ  ನಡೆಸಲು ಅವಕಾಶವಿತ್ತು. ಆದರೆ ಅವರು ಈಗಾಗಲೇ ಮುಚ್ಚಿದ್ದಾರೆ. ಇದರಿಂದ ಸರಕಾರಿ ಕೇಂದ್ರ ಗಳಲ್ಲಿ   ಜನಸಂದಣಿ ಹೆಚ್ಚಾಗುತ್ತಿದೆ. ಹೊಸ ಆಧಾರ್‌ ಕಾರ್ಡ್‌ ಮಾಡಿಸುವವರ ಸಂಖ್ಯೆಗಿಂತ ಹಳೆಯ ಕಾರ್ಡ್‌ನಲ್ಲಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿಸಲು ಬರುವವರ ಸಂಖ್ಯೆಯೇ ಅಧಿಕ‌ವಾಗಿದೆ. 100 ಮಂದಿಯಲ್ಲಿ 70 ಮಂದಿ ಕೂಡ ತಿದ್ದುಪಡಿಗಾಗಿ ಆಗಮಿಸುತ್ತಿದ್ದಾರೆ. ಇದರಿಂದ ಇದ್ದ ಕೇಂದ್ರಗಳಲ್ಲಿ ಇದನ್ನು ನಿಭಾಯಿಸುವುದು ಕಷ್ಟ ಎಂದು  ಮಂಗಳೂರು ಒನ್‌ ಕೇಂದ್ರದ ಮುಖ್ಯಸ್ಥ ನವೀನ್‌ ಉದಯವಾಣಿಗೆ ತಿಳಿಸಿದ್ದಾರೆ.

ಶೀಘ್ರದಲ್ಲೇ ಖಾಸಗಿ ಕೇಂದ್ರಗಳು 
ತೆರೆಯುವ ಭರವಸೆ 

ಆಧಾರ್‌ ಕಾರ್ಡ್‌  ನೋಂದಣಿ ಖಾಸಗಿ ಕೇಂದ್ರಗಳ ಸ್ಥಗಿತದಿಂದಾಗಿ ಈಗ ಜನರಿಗೆ ತೊಂದರೆಯಾಗಿರುವುದು ನಿಜ. ಈ ಕಾರಣಕ್ಕೆ ಖಾಸಗಿ ಕೇಂದ್ರಗಳನ್ನು  ಡಿಸೆಂಬರ್‌ವರೆಗಾದರೂ ವಿಸ್ತರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಆಧಾರ್‌ ನೋಂದಣಿ ಖಾಸಗಿ ಕೇಂದ್ರಗಳು ಪುನರಾರಂಭಗೊಳ್ಳುವ ವಿಶ್ವಾಸವಿದೆ.
– ಐವನ್‌ ಡಿ’ಸೋಜಾ,  ವಿಧಾನ ಪರಿಷತ್‌ ಮುಖ್ಯ ಸಚೇತಕ

– ಪ್ರಜ್ಞಾ  ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next