Advertisement

ಗ್ರಾಮೀಣ ರೂಟ್‌ಗಳಲ್ಲಿ ಸರಕಾರಿ ಬಸ್‌ ಸಂಚರಿಸಲಿ

08:24 PM Aug 01, 2021 | Team Udayavani |

ಕೋವಿಡ್‌ ನಿರ್ಬಂಧಗಳಿಂದಾಗಿ ಎಲ್ಲ ಕ್ಷೇತ್ರಗಳಂತೆ ಸಾರಿಗೆ ಉದ್ಯಮ ಕೂಡ ದೊಡ್ಡ ಹೊಡೆತವನ್ನು ಅನುಭವಿಸಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ. ಸರಕಾರಿ ಹಾಗೂ ಖಾಸಗಿ ಬಸ್‌ಗಳೆರಡೂ ಓಡಾಟವನ್ನು ಆರಂಭಿಸಿದ್ದರೂ ಕೇವಲ ಸೀಮಿತ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸುತ್ತಿವೆ. ಗ್ರಾಮೀಣ ರೂಟ್‌ಗಳಲ್ಲಿ ಬಸ್‌ಗಳಿಲ್ಲದೆ ಜನರು ಸಂಚಾರಕ್ಕಾಗಿ ಅನಿವಾರ್ಯವಾಗಿ ಖಾಸಗಿ ವಾಹನ ಅವಲಂಬಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳ ಓಡಾಟ ಇನ್ನೂ ಪೂರ್ಣವಾಗಿ ಆರಂಭಗೊಂಡಿಲ್ಲ, ಹೀಗಾಗಿ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ತೆರಳುವವರು ಆಟೋ ರಿಕ್ಷಾ, ಜೀಪ್‌, ಮ್ಯಾಕ್ಸಿಕ್ಯಾಬ್‌ ಸಹಿತ ಇತರ ವಾಹನಗಳನ್ನು ಅವಲಂಬಿಸಿದ್ದಾರೆ. ಈ ವಾಹನಗಳು ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಸಂಚರಿಸುತ್ತಿರುವ ದೃಶ್ಯಗಳು ಈಗ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿವೆ.

ಆಟೋ ರಿಕ್ಷಾ, ಮ್ಯಾಕ್ಸಿಕ್ಯಾಬ್‌ ಸಹಿತ ಮತ್ತಿತರ ಖಾಸಗಿ ಟೂರಿಸ್ಟ್‌ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತುಂಬಿಸಿ ಅಪಘಾತಗಳು ಸಂಭವಿಸಿ ಜೀವಹಾನಿಯಾದ ಘಟನೆಗಳೂ ಹಿಂದೆ ಸಂಭವಿಸಿವೆ. ದುರಂತಗಳು ಸಂಭವಿಸಿದಾಗ ಪರ್ಯಾಯ ವ್ಯವಸ್ಥೆಗಳ ಬಗೆಗೆ ಚರ್ಚೆಗಳು ನಡೆಯುತ್ತವೆಯೇ ಹೊರತಾಗಿ ಬಳಿಕ ಇವೆಲ್ಲವೂ ಮೂಲೆಗೆ ಸರಿದು ಮಾಮೂಲಿನಂತೆ ಜನರು ಇದೇ ರೀತಿ ಟೂರಿಸ್ಟ್‌ ವಾಹನಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ.

ಹೀಗಾಗಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಬಸ್‌ಗಳೇ ಇಲ್ಲದ  ಗ್ರಾಮೀಣ ರೂಟ್‌ಗಳು ಹಾಗೂ ಅಗತ್ಯ ಸಮಯದಲ್ಲಿ ಬಸ್‌ಗಳಿಲ್ಲದ ರೂಟ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟದ ವ್ಯವಸ್ಥೆ ಮಾಡಬೇಕಿದೆ. ಸಾರಿಗೆ ಸೇವಾ ಕ್ಷೇತ್ರವಾಗಿದ್ದು ಎಲ್ಲ ಸಂದರ್ಭಗಳಲ್ಲಿಯೂ ಕೇವಲ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಸೀಮಿತವಾಗದೆ ಗ್ರಾಮೀಣ ಜನರ ಕಷ್ಟಕ್ಕೆ ಸರಕಾರಿ ಸಾರಿಗೆ ಸಂಸ್ಥೆಯಾದ ಕೆಎಸ್‌ಆರ್‌ಟಿಸಿ ಸ್ಪಂದಿಸಬೇಕಿದೆ.

ಪ್ರಯಾಣಿಕರು ಹೆಚ್ಚಿರುವ ರೂಟ್‌ಗಳಲ್ಲಿ ಸರಕಾರಿ ಹಾಗೂ ಖಾಸಗಿ ಹೀಗೆ  ಎರಡೂ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತವೆ. ಆದರೆ  ಪ್ರಯಾಣಿಕರು ವಿರಳವಾಗಿರುವ ಗ್ರಾಮೀಣ ರೂಟ್‌ಗಳು ಈ ಹಿಂದಿನಿಂದಲೂ ನಿರ್ಲಕ್ಷéಕ್ಕೆ ಒಳಗಾಗಿವೆ. ಈ ವಿಚಾರದಲ್ಲಿ ಖಾಸಗಿ ಬಸ್‌ಗಳ ಮಾಲಕರೂ ಒಂದಿಷ್ಟು ಜನಹಿತದತ್ತ ದೃಷ್ಟಿಹರಿಸಲೇಬೇಕು.

Advertisement

ನಗರ ಪ್ರದೇಶದಲ್ಲಿನ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು, ತಮ್ಮ ದೈನಂದಿನ ಕೆಲಸಕಾರ್ಯ, ವ್ಯವಹಾರ, ವೃತ್ತಿ ಮತ್ತಿತರ ಕಾರಣಗಳಿಂದಾಗಿ ಗ್ರಾಮೀಣ ಪ್ರದೇಶದ ಜನರು ನಗರಗಳನ್ನೇ ಅವಲಂಬಿಸಿದ್ದಾರೆ. ಸಹಜವಾಗಿ ಬೆಳಗ್ಗೆ ಮತ್ತು ಸಂಜೆಯ ವೇಳೆ ಗ್ರಾಮೀಣ ರೂಟ್‌ಗಳಲ್ಲಿ ಬಸ್‌ಗಳನ್ನು ಓಡಿಸಿದರೆ ಜನರಿಗೆ ಮತ್ತು ವಿದ್ಯಾರ್ಥಿಗಳಿಗೂ ಬಹಳಷ್ಟು ಅನುಕೂಲವಾಗಲಿದೆ. ಶಾಲಾ-ಕಾಲೇಜು ಆರಂಭದ ಬಳಿಕ ಎಲ್ಲ ಬಸ್‌ಗಳನ್ನು ಓಡಿಸುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭರವಸೆ ನೀಡುತ್ತಿರುವರಾದರೂ ಅಲ್ಲಿಯ ತನಕ ನಿಯಮಿತ ಸಂಖ್ಯೆಯ ಬಸ್‌ಗಳನ್ನಾದರೂ ಗ್ರಾಮೀಣ ರೂಟ್‌ಗಳಲ್ಲಿ ಓಡಿಸಿ ಜನರಿಗೆ ನೆರವಾಗಬೇಕಿದೆ.

  

-ಸಂ

Advertisement

Udayavani is now on Telegram. Click here to join our channel and stay updated with the latest news.

Next