Advertisement

ಮನೋಜ್ಞ ಭಾವಸ್ಫುರಣ ಭರತನಾಟ್ಯ ರಸಗ್ರಹಣ

12:16 PM Oct 26, 2018 | |

ಕರಾವಳಿಯಲ್ಲಿ ಭರತನಾಟ್ಯವನ್ನು ಪ್ರದರ್ಶನ ಮಾತ್ರವಲ್ಲದೆ ಗಂಭೀರವಾಗಿ ಅಭ್ಯಸಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವ ಉದ್ದೇಶದಿಂದ ಕಲಾವಿದೆ ರಾಧಿಕಾ ಅವರು ಐದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಹುಟ್ಟುಹಾಕಿರುವ ಸಂಸ್ಥೆ ನೃತ್ಯಾಂಗನ್‌ ಇತ್ತೀಚೆಗೆ ನಗರದಲ್ಲಿ “ಮಂಥನ –
2018 ‘ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿಭಾವಂತ ಯುವ ನೃತ್ಯ ಕಲಾವಿದೆಯರ ಪ್ರದರ್ಶನಗಳ ಜೊತೆಗೆ ಅಭಿನಯವನ್ನು ವಿಶೇಷವಾಗಿ ಕಲಿಯುವ ದೃಷ್ಟಿಯಿಂದ ಹಿರಿಯ ನೃತ್ಯಪಟು ಭೃಗಾ ಬೆಸೆಲ್‌ ಅವರ ನೇತೃತ್ವದಲ್ಲಿ ಅಭಿನಯ ಕಮ್ಮಟವೊಂದನ್ನು ಏರ್ಪಡಿಸಿತು. ಎರಡು ದಿನ ನಡೆಸಿಕೊಟ್ಟ ಅಭಿನಯ ಶಿಬಿರ ಒಂದು ಸ್ಮರಣೀಯ ಅನುಭವವಾಯಿತು.

Advertisement

ಕಿರಿಯರ ವಿಭಾಗ ಮತ್ತು ಹಿರಿಯರ ವಿಭಾಗ ಎಂದು ಎರಡು ವಿಭಾಗಗಳಲ್ಲಿ ಅವರು ಶಿಬಿರ ನಡೆಸಿದರು. ಹಿರಿಯ ವಿದ್ಯಾರ್ಥಿಗಳಿಗೆ ಕವಿ ಜಯದೇವನ ಆರನೇ ಅಷ್ಟಪದಿಯಾದ ‘ಸಖೀ, ಹೇ! ಕೇಶೀಮದನ ಉದ್ಧಾರಮಂ’ ಇದನ್ನು ಶುದ್ಧ ಸಾರಂಗ್‌ ರಾಗದಲ್ಲೂ, ಕಿರಿಯ ವಿದ್ಯಾರ್ಥಿಗಳಿಗೆ ಕವಿ ಅಮರರ್‌ ಕಲ್ಕಿ ಅವರ ರಚನೆ ತಮಿಳ್‌ ಪದಮ್‌ ಅನ್ನೂ ಅಭಿನಯಕೇಂದ್ರಿತವಾಗಿ ಕಲಿಸಿಕೊಟ್ಟರು. ಸಮಷ್ಟಿ ಚರಣಗಳನ್ನು ಒಳಗೊಂಡ “ಪದಮ…’ ರಾಗಮಾಲಿಕೆಯಲ್ಲಿದ್ದು, ತಿಶ್ರಗತಿ ಆದಿತಾಳಕ್ಕೆ ನಿಬದ್ಧವಾಗಿತ್ತು.

ಅಭಿನಯದಲ್ಲಿ ಇರಲೇಬೇಕಾದ ಸೌಂದರ್ಯ, ಘನತೆ, ಆಕರ್ಷಕತೆ, ಪಾತ್ರೌಚಿತ್ಯ ಮತ್ತು ಭಾವನಾತ್ಮಕತೆಗಳನ್ನು ಅವರು ಮನೋಜ್ಞವಾಗಿ ತಿಳಿಸಿಕೊಟ್ಟರು. ಅಲ್ಲದೆ ನಿರಂತರತೆ ಮತ್ತು ಸೂಕ್ಷ್ಮ ಭಾವಾಭಿನಯಗಳು ಹೇಗೆ ಉತ್ತಮ ಕಲಾವಿದರ ಲಕ್ಷಣ ಎಂಬುದನ್ನು ಸೋದಾಹರಣವಾಗಿ
ಕಲಿಸಿದರು. ಅಭಿನಯ ಎಂದಾಕ್ಷಣ ಅಂಗಶುದ್ಧಿ ಸಡಿಲವಾಗಬಹುದು ಎಂದಲ್ಲ ಅಥವಾ ಅದನ್ನು ನಿರ್ಲಕ್ಷ್ಯ ಮಾಡಬಹುದು ಎಂದೂ ಅಲ್ಲ, ಭರತನಾಟ್ಯದಲ್ಲಿ ಅಂಗಶುದ್ಧಿ ಕೂಡ ಬಹುಮುಖ್ಯವಾದ ಭಾಗವೇ. ಅಂಗಶುದ್ಧಿ ಇದ್ದಷ್ಟು ಅಭಿನಯವು ಪ್ರೇಕ್ಷಕರಿಗೆ ಹೆಚ್ಚು ಮನದಟ್ಟಾಗಿ ರಸಗ್ರಹಣವು ಉತ್ತಮವಾಗುತ್ತದೆ ಎಂದು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿ ಕಲಿಸಿದರು.

 “ಮಂಥನ-2018’ರ ಮೊದಲ ದಿನವನ್ನು ಯುವ ಪ್ರತಿಭಾವಂತ ಕಲಾವಿದರ ಪ್ರದರ್ಶನಕ್ಕೆ ಮೀಸಲಿಡಲಾಗಿತ್ತು. ಪ್ರದರ್ಶನ ನೀಡಿದವರು ಬೆಂಗಳೂರಿನ ಭರವಸೆಯ ಕಲಾವಿದೆ ಕುಮಾರಿ ಅನನ್ಯಾ. ಅನಂತರ ಪುಣೆಯ ಕುಮಾರಿ ಈಶಾ ಪಿಂಗಳೆ ಮತ್ತು ಸ್ವರದಾ ಭಾವೆ ಯುಗಳ ಪ್ರದರ್ಶನ
ನೀಡಿದರು. ಈ ಮೂವರು ಕಲಾವಿದರೂ ಚುರುಕಾದ, ಲಯಬದ್ಧ ಹಾಗೂ ಉತ್ತಮ ಸಂಯೋಜನೆಯಿಂದ ಕೂಡಿದ ಅಭಿನಯದಿಂದ ಸಭಿಕರ ಮನಗೆದ್ದರು.
 
ಕೊನೆಯ ಪ್ರಸ್ತುತಿಯಾಗಿ ಮೂಡಿ ಬಂದುದು ಮಂಗಳೂರಿನ ದಿವ್ಯಾ ಭಟ್‌ ಅವರ ಪ್ರದರ್ಶನ. ತನ್ನ ವೃತ್ತಿಯೊಂದಿಗೆ ಭರತನಾಟ್ಯವನ್ನು ಆಸಕ್ತಿಯ ಕ್ಷೇತ್ರವಾಗಿ ಉಳಿಸಿಕೊಂಡಿರುವ ಈಕೆ ತಮ್ಮ ಏಕವ್ಯಕ್ತಿ ಪ್ರದರ್ಶನ ನೀಡುವ ಚೈತನ್ಯವನ್ನು ಮೆಚ್ಚಿಕೊಳ್ಳ ಬೇಕಾಗಿದೆ. ಅವರು ಅದನ್ನು ಮುಂದುವರಿಸಿಕೊಂಡು ಬಂದಲ್ಲಿ ಕರಾವಳಿಯ ಓರ್ವ ಭರವಸೆಯ ಕಲಾವಿದೆಯಾಗಿ ಮೂಡಿ ಬರಬಲ್ಲರು.
 
ಭೃಗಾ ಬೆಸೆಲ್‌ ಇಳಿವಯಸ್ಸಿನಲ್ಲೂ ಯುವತಿಯರನ್ನು ನಾಚಿಸುವಂತೆ ಅಭಿನಯ ಮಾಡಬಲ್ಲರು. ಪದ್ಮಾ ಸುಬ್ರಹ್ಮಣ್ಯಂ, ಮಾಂಗುಡಿ ದುರೈರಾಜ್‌ ಅಯ್ಯರ್‌, ಪಿ.ಎಸ್‌.ಕುಂಚಿತಪಾದ ಪಿಳ್ಳೆ„, ಅಡ್ಯಾರ್‌ ಕೆ. ಲಕ್ಷ್ಮಣ ಹಾಗೂ ಕಲಾನಿಧಿ ನಾರಾಯಣನ್‌ ಅವರಂತಹ ಕಲಾವಿದೆಯರ
ಶಿಷ್ಯೆಯಾಗಿ ಭರತನಾಟ್ಯವನ್ನು ಸಾದ್ಯಂತ ಕರಗತ ಮಾಡಿಕೊಂಡವರು ಭೃಗಾ ಬೆಸೆಲ…. 

Advertisement

Udayavani is now on Telegram. Click here to join our channel and stay updated with the latest news.

Next