Advertisement

ಮನಸಲಾಜಿಕಲ್‌ ಹಾರರ್‌

10:19 AM Jan 05, 2018 | Team Udayavani |

“ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು’ ಎಂಬ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಈ ಚಿತ್ರವಾದರೂ ತನ್ನ ಕೈ ಹಿಡಿಯುತ್ತದೆ, ಹಿಂದಿನ ಚಿತ್ರದ ಸೋಲನ್ನು ಮರೆಸುತ್ತದೆ ಎಂಬ ವಿಶ್ವಾಸ ಶಂಕರ್‌ ಅರುಣ್‌ ಅವರಿಗಿದೆ. 

Advertisement

ಹೌದು, ಅರುಣ್‌ ಅವರು ಈ ಹಿಂದೆ “ಸಪ್ನೊàಂಕಿ ರಾಣಿ’ ಎಂಬ ಸಿನಿಮಾ ನಿರ್ಮಿಸಿದ್ದರು. ಆದರೆ, ಆ ಚಿತ್ರ ಇವರಿಗೆ ಲಾಭ ತಂದುಕೊಂಡಲಿಲ್ಲ. ಮೊದಲ ಚಿತ್ರದಲ್ಲೇ ನಷ್ಟ ಅನುಭವಿಸಿದ ಅರುಣ್‌ ಅವರಿಗೆ ಅವರ ತಂದೆ-ತಾಯಿ, “ಸಾಕಪ್ಪ ಸಿನಿಮಾ ಸಹವಾಸ. ಬೇರೇನಾದರೂ ನೋಡಿಕೋ’ ಎಂದರಂತೆ. ಆದರೆ, ಅರುಣ್‌ಗೆ ತಾನು ಎಲ್ಲಿ  ಕಳೆದುಕೊಂಡಿದ್ದೇನೋ ಅಲ್ಲೇ ಪಡೆದಕೊಳ್ಳಬೇಕೆಂಬ ಹಠ. ಆ ಹಠದ ಪರಿಣಾಮ “ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು’ ಎಂಬ ಸಿನಿಮಾ ಮಾಡಿದ್ದಾರೆ. ನಿರ್ಮಾಣ ಮಾಡಲು ಹಿಂದೇಟು ಹಾಕಿದ್ದ ಅವರ ತಂದೆಯನ್ನು ಒಪ್ಪಿಸಿ, ಅವರ ಸಹಕಾರದೊಂದಿಗೆ ಈ ಸಿನಿಮಾ ಮಾಡಿದ್ದಾರೆ. 

“ನಾನು ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲೇ ಪಡೆಯಬೇಕೆಂಬ ಛಲದಿಂದ ಈ ಸಿನಿಮಾ ಮಾಡಿದ್ದೇನೆ. ಇಲ್ಲಿ ಗೆಲ್ಲಬೇಕಾದರೆ ಹೊಸದೇನಾದರೂ ಮಾಡಬೇಕು. ಅದೇ ಕಾರಣದಿಂದ ಬೇರೆ ರೀತಿಯ ಕಥೆ ಮಾಡಿಕೊಂಡಿದ್ದೇನೆ. ಇದು ರೆಗ್ಯುಲರ್‌ ಪ್ಯಾಟರ್ನ್ ಸಿನಿಮಾವಲ್ಲ’ ಎಂದು ಚಿತ್ರದ ಬಗ್ಗೆ ವಿವರ ಕೊಟ್ಟರು. ಈ ಚಿತ್ರ ಮತ್ತೆ ನಾಗವಲ್ಲಿ ಸುತ್ತ ಸುತ್ತಲಿದೆಯಂತೆ. ವಿಷ್ಣುವರ್ಧನ್‌ ಹಾಗೂ ಸೌಂದರ್ಯ ಸಾವಿಗೆ ನಾಗವಲ್ಲಿ ಕಾರಣನಾ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಜೊತೆಗೆ ಚಿತ್ರತಂಡ ನಾಗವಲ್ಲಿಯನ್ನು ಹುಡುಕಿಕೊಂಡು ಆಕೆಯ ಅರಮನೆಗೆ ಹೋಗಿದೆ. ತಿರುವನಂತಪುರದ ನಾಗವಲ್ಲಿ ಪ್ಯಾಲೇಸ್‌ನಲ್ಲೂ ಚಿತ್ರೀಕರಣ ಮಾಡಿದೆ. ಕೇರಳ ಸರ್ಕಾರದ ಅನುಮತಿ ಪಡೆದು ಐದು ದಿನಗಳ ಕಾಲ ಅರಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಈ ಸಿನಿಮಾಕ್ಕಾಗಿ ಅರುಣ್‌ ಸಾಕಷ್ಟು ಅಧ್ಯಯನ ಕೂಡಾ ಮಾಡಿದ್ದಾರಂತೆ. “ಮನೋವೈದ್ಯರ ಮೇಲೆ ಆತ್ಮ ಬರುತ್ತಾ ಎಂಬ ಅಂಶವೂ ಈ ಚಿತ್ರದಲ್ಲಿದೆ. ಅದಕ್ಕಾಗಿ ಅಧ್ಯಯನ ಕೂಡಾ ಮಾಡಿದ್ದೇನೆ’ ಎನ್ನುತ್ತಾರೆ ಅರುಣ್‌. ಅರುಣ್‌ ಅವರು ಈ ಚಿತ್ರವನ್ನು ಮನಸಾಲಜಿಕಲ್‌ ಹಾರರ್‌ ಎಂದು ಕರೆಯಯತ್ತಾರೆ. ಇನ್ನು, ಈ ಚಿತ್ರಕ್ಕೆ ನಾಯಕಿ ವೈಷ್ಣವಿ ಹಾಗೂ ಅವರ ತಾಯಿ ನೀಡಿದ ಸಹಕಾರವನ್ನು ನೆನೆಯಲು ಮರೆಯಲಿಲ್ಲ ಅರುಣ್‌.

ಚಿತ್ರದಲ್ಲಿ ವಿಕ್ರಮ್‌ ಕಾರ್ತಿಕ್‌ ನಾಯಕರಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ಎರಡು ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದಾರಂತೆ. ರಾಜ ಹಾಗೂ ಪತ್ರಕರ್ತನಾಗಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡಿದ್ದಾಗಿ ಹೇಳಿಕೊಂಡರು ವಿಕ್ರಮ್‌ ಕಾರ್ತಿಕ್‌. ಚಿತ್ರದಲ್ಲಿ ವೈಷ್ಣವಿ ನಾಯಕಿಯಾಗಿ ನಟಿಸಿದ್ದಾರೆ. “ಆಪ್ತಮಿತ್ರ’ದಲ್ಲಿ ಸೌಂದರ್ಯ ಅವರು ಮಾಡಿದಂತಹ ಪಾತ್ರವೇ ಇಲ್ಲಿ ಸಿಕ್ಕಿದೆಯಂತೆ. ವೈಷ್ಣವಿ ದೇವರನ್ನು ನಂಬುತ್ತಿರಲಿಲ್ಲವಂತೆ. ಈ ಸಿನಿಮಾದ ನಂತರ ದೇವರನ್ನು ನಂಬಲು ಶುರು ಮಾಡಿದರಂತೆ. ಅದಕ್ಕೆ ಕಾರಣ ಈ ಸಿನಿಮಾದಲ್ಲಿ ಅವರಿಗಾದ ಕೆಲವು ಅನುಭವಗಳು. ಚಿತ್ರದ ಸಹ ನಿರ್ಮಾಪಕ ಪ್ರಬಿಕ್‌, ಸಂಗೀತ ನಿರ್ದೇಶಕ ಉತ್ತಮ್‌ ರಾಜ್‌ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು. ಮಗನ ಸಿನಿಮಾ ಪ್ರಯತ್ನ ಬಗ್ಗೆ ಅರುಣ್‌ ತಂದೆ ಗೋವಿಂದ ರಾಜು ಕೂಡಾ ಮಾತನಾಡಿದರು. ಚಿತ್ರ ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ತೆರೆಕಾಣಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next