Advertisement

Kannada cinema; ಪೃಥ್ವಿ ಶಾಮನೂರು ಈಗ ‘ಉಡಾಳ’ ಹುಡುಗ

04:30 PM Feb 04, 2024 | Team Udayavani |

ಪದವಿ ಪೂರ್ವ’ ಸಿನಿಮಾದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದ ಯುವ ನಟ ಪೃಥ್ವಿ ಶಾಮನೂರು ಈ ಬಾರಿ ಉತ್ತರ ಕರ್ನಾಟಕದ “ಉಡಾಳ’ ಹುಡುಗನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

Advertisement

ಹೌದು, ಸುಮಾರು ಎರಡು ವರ್ಷಗಳ ನಂತರ ಪೃಥ್ವಿ ಶಾಮನೂರು ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಕ್ಕೆ “ಉಡಾಳ’ ಎಂದು ಹೆಸರಿಡಲಾಗಿದ್ದು, ಇದೀಗ ಈ ಸಿನಿಮಾದ ಟೈಟಲ್‌ ಅಧಿಕೃತವಾಗಿ ಅನೌನ್ಸ್‌ ಆಗಿದೆ. ಯೋಗರಾಜ್‌ ಭಟ್‌ ಹಾಗೂ ರವಿ ಶಾಮನೂರು ನಿರ್ಮಾಣದ “ಉಡಾಳ’ ಸಿನಿಮಾವನ್ನು ಅಮೋಲ್‌ ಪಾಟೀಲ್‌ ನಿರ್ದೇಶನ ಮಾಡುತ್ತಿದ್ದು, ಹೃತಿಕಾ ಶ್ರೀನಿವಾಸ್‌ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ಡಾಲಿ ಧನಂಜಯ “ಉಡಾಳ’ ಸಿನಿಮಾದ ಟೈಟಲ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ನಿರ್ದೇಶಕ ಅಮೋಲ್‌ ಪಾಟೀಲ್‌, “ಇದೊಂದು ಪಕ್ಕಾ ಉತ್ತರ ಕರ್ನಾಟಕದ ಶೈಲಿಯ ಸಿನಿಮಾ. ಈ ತಿಂಗಳ ಕೊನೆಗೆ ವಿಜಯಪುರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾದ ಹೆಚ್ಚಿನ ಚಿತ್ರೀಕರಣ ಉತ್ತರ ಕರ್ನಾಟಕ ಭಾಗದಲ್ಲೇ ನಡೆಯಲಿದೆ. ಲವ್‌, ಆ್ಯಕ್ಷನ್‌ ಎಲ್ಲ ಥರದ ಮನರಂಜನಾತ್ಮಕ ಅಂಶಗಳೂ “ಉಡಾಳ’ ಸಿನಿಮಾದಲ್ಲಿದೆ’ ಎಂದು ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು.

“ನಾನು ಈ ಸಿನಿಮಾದಲ್ಲಿ ಉತ್ತರ ಕರ್ನಾಟದ ಹುಡುಗನಾಗಿ ಪಕ್ಯ ಎಂಬ “ಉಡಾಳ’ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ವಿಜಯಪುರದಲ್ಲಿ ಟೂರಿಸ್ಟ್‌ ಗೈಡ್‌ ಆಗಿ ಕೆಲಸ ಮಾಡುತ್ತಿರುತ್ತೇನೆ. ಪಕ್ಯನ ಜೀವನ, ಅವನ ತರಲೆ, ತುಂಟಾಟಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ’ ಎಂದು ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು ನಾಯಕ ನಟ ಪೃಥ್ವಿ ಶಾಮನೂರು.

ವೇದಿಕೆಯಲ್ಲಿದ್ದ ನಟಿ ಹೃತಿಕಾ ಶ್ರೀನಿವಾಸ್‌ ತಮ್ಮ ಪಾತ್ರ ಪರಿಚಯ ಮಾಡಿ ಕೊಟ್ಟರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಿರ್ದೇಶಕ ಯೋಗರಾಜ್‌ ಭಟ್‌, ನಿರ್ಮಾಪಕ ರವಿ ಶಾಮನೂರು, ಸಂಗೀತ ನಿರ್ದೇಶಕ ಚೇತನ್‌ ಹಾಗೂ ಛಾಯಾಗ್ರಾಹಕ ಶಿವಶಂಕರ್‌ ಮತ್ತಿತ ರರು “ಉಡಾಳ’ ಸಿನಿಮಾದ ಬಗ್ಗೆ ಒಂದಷ್ಟು ನಿರೀಕ್ಷೆಯ ಮಾತುಗಳನ್ನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next