Advertisement

ಸಿಹಿಯಾಗಿದೆ ‘ಶುಗರ್‌ ಲೆಸ್‌’ಟ್ರೇಲರ್‌: ಜುಲೈ 8ಕ್ಕೆ ಪೃಥ್ವಿ ಅಂಬರ್ ಚಿತ್ರ ರಿಲೀಸ್‌

02:58 PM Jun 27, 2022 | Team Udayavani |

ಸುಂದರ ಕನಸುಗಳನ್ನು ಕಟ್ಟಿಕೊಂಡಿರುವ ಯುವಕನಿಗೆ ಡಯಾಬಿಟಿಕ್‌ ಇದ್ದರೆ ಹೇಗಾಗಬಹುದು… ಆತ ಪಡುವ ಪಾಡೇನು, ಪ್ರೀತಿ, ಪ್ರೇಮ, ಜೀವನದ ಮೇಲೆ ಅದು ಯಾವ ರೀತಿ ಪರಿಣಾಮ ಬೀರಬಹುದು.. ಇಂತಹ ಅಂಶಗಳನ್ನು ಇಟ್ಟುಕೊಂಡು ಕಟ್ಟಿಕೊಟ್ಟಿರುವ ಸಿನಿಮಾ “ಶುಗರ್‌ಲೆಸ್‌’. ಜುಲೈ 8ಕ್ಕೆ ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಟ್ರೇಲರ್‌ ಭಾನುವಾರ ಬಿಡುಗಡೆಯಾಗಿದೆ.

Advertisement

ಟ್ರೇಲರ್‌ ಮೊದಲ ನೋಟದಲ್ಲೇ ಭರವಸೆ ಮೂಡಿಸುತ್ತಿದ್ದು, ಒಂದಷ್ಟು ಗಂಭೀರ ಅಂಶಗಳನ್ನು ಫ‌ನ್‌ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಜೊತೆಗೊಂದು ಸಂದೇಶವೂ ಇರುವುದು ಟ್ರೇಲರ್‌ನಲ್ಲಿ ಎದ್ದು ಕಾಣುತ್ತದೆ. ಆ ಮೂಲಕ ಹೊಸ ಜಾನರ್‌ನ ಸಿನಿಮಾವಾಗಿ “ಶುಗರ್‌ಲೆಸ್‌’ ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನ ಪ್ರಯೋಗವಾಗುವ ನಿರೀಕ್ಷೆ ಇದೆ.

ಚಿತ್ರದ ಟ್ರೇಲರ್‌ ಅನ್ನು ಭಾನುವಾರ ನಟರಾದ ಶ್ರೀನಗರ ಕಿಟ್ಟಿ, ದೀಪಕ್‌ ಬಿಡುಗಡೆ ಮಾಡಿ ಶುಭ ಹಾರೈಸಿದರು. “ಶುಗರ್‌ಲೆಸ್‌’ ಚಿತ್ರಕ್ಕೆ ಶಶಿಧರ್‌ ಕೆ.ಎಂ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.

ಈ ಹಿಂದೆ “ಡಾಟರ್‌ ಆಫ್ ಪಾರ್ವತಮ್ಮ’, “ವೀರಂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಿರ್ಮಾಪಕನಾಗಿದ್ದ ಶಶಿಧರ್‌ ಕೆ.ಎಂ, ಮೊದಲ ಬಾರಿಗೆ “ಶುಗರ್‌ ಲೆಸ್‌’ ಚಿತ್ರದ ಮೂಲಕ ನಿರ್ದೇಶಕನಾಗಿಯೂ ಗಾಂಧಿನಗರಕ್ಕೆ ಪರಿಚಯವಾಗುತ್ತಿದ್ದು, ಮೊದಲ ನಿರ್ದೇಶನದಲ್ಲೇ ಗಮನ ಸೆಳೆದಿದ್ದಾರೆ. ಈಗಾಗಲೇ ಚಿತ್ರದ ಸ್ಯಾಟ್‌ಲೈಟ್‌ ಹಕ್ಕು ಹಾಗೂ ಹಿಂದಿಗೆ ರೀಮೇಕ್‌ ರೈಟ್ಸ್‌ ಮಾರಾಟವಾಗುವ ಮೂಲಕ ಶಶಿಧರ್‌ ಖುಷಿಯಾಗಿದ್ದಾರೆ. ಜೊತೆಗೆ ಹಿಂದಿ ರೀಮೇಕ್‌ಗೂ ಶಶಿಧರ್‌ ಅವರದ್ದೇ ನಿರ್ದೇಶನವಿದೆ.

“ನಾನು ಚಿತ್ರರಂಗಕ್ಕೆ ಬಂದು 5 ವರ್ಷ ಆಯಿತು. ನನಗೆ ಚಿತ್ರರಂಗ ಎಲ್ಲವನ್ನು ಕೊಟ್ಟಿದೆ. ನಟನೆ, ನಿರ್ಮಾಣದ ಜೊತೆಗೆ ಈಗ ನಿರ್ದೇಶನ ಕೂಡಾ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಾಯಿಲೆಗಳ ಬಗ್ಗೆಯೇ ಸಿನಿಮಾ ಮಾಡುವ ಆಸೆ ಇದೆ’ ಎಂದರು ಶಶಿಧರ್‌.

Advertisement

ಇದನ್ನೂ ಓದಿ:ಹೊಸ ‘ಹೋಪ್’ ನಲ್ಲಿ ಶ್ವೇತಾ: ಚಿತ್ರಕ್ಕೆ ಸಚಿವ ಡಾ. ಅಶ್ವಥ್‌ ನಾರಾಯಣ್‌ ಸಾಥ್‌

“ಭಾರತದಲ್ಲಿ ಇಲ್ಲಿಯವರೆಗೆ ನೂರಾರು ವಿಷಯಗಳ ಮೇಲೆ ಸಾವಿರಾರು ಸಿನಿಮಾಗಳು ಬಂದಿವೆ. ಆದ್ರೆ ಡಯಾಬಿಟಿಕ್‌ (ಶುಗರ್‌) ಕುರಿತು ಯಾವುದೇ ಸಿನಿಮಾಗಳು ಬಂದಿಲ್ಲ. ನಮಗೆ ಗೊತ್ತಿರುವಂತೆ ಇಡೀ ಭಾರತದಲ್ಲೇ ಡಯಾಬಿಟಿಕ್‌ ಸಬ್ಜೆಕ್ಟ್ ಮೇಲೆ ಬರುತ್ತಿರುವ ಮೊದಲ ಸಿನಿಮಾ ನಮ್ಮದು. ಸಾಮಾನ್ಯವಾಗಿ ಡಯಾಬಿಟಿಕ್‌ ವಿಷಯ ಅಂದ್ರೆ, ಬಹುತೇಕರು ತುಂಬ ಸೀರಿಯಸ್‌ ಆಗುತ್ತಾರೆ. ಆದ್ರೆ ನಾವು ಸಿರಿಯಸ್‌ ವಿಷಯವಾದ್ರೂ ಅದನ್ನು ಹ್ಯೂಮರಸ್‌ ಆಗಿ, ನೋಡುಗರಿಗೆ ಮುಟ್ಟುವಂತೆ ತೆರೆಮೇಲೆ ತರುತ್ತಿದ್ದೇವೆ. ಇದರಲ್ಲಿ ಲವ್‌, ಸೆಂಟಿಮೆಂಟ್‌, ಎಮೋಶನ್ಸ್‌, ಕಾಮಿಡಿ ಜೊತೆಗೊಂದು ಮೆಸೇಜ್‌, ಹೀಗೆ ಎಂಟರ್‌ಟೈನ್ಮೆಂಟ್‌ಗೆ ಏನೇನು ಎಲಿಮೆಂಟ್ಸ್‌ ಇರಬೇಕೋ, ಅದೆಲ್ಲವೂ “ಶುಗರ್‌ಲೆಸ್‌’ನಲ್ಲಿದೆ’ ಎನ್ನುತ್ತಾರೆ ನಿರ್ಮಾಪಕ ಕಂ ನಿರ್ದೇಶಕ ಶಶಿಧರ್‌ ಕೆ.ಎಂ.

ಚಿತ್ರದಲ್ಲಿ ಪೃಥ್ವಿ ಅಂಬರ್‌ ಹಾಗೂ ಪ್ರಿಯಾಂಕಾ ತಿಮ್ಮೇಶ್‌ ನಾಯಕ-ನಾಯಕಿ. ಇಬ್ಬರೂ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಿರಿಯ ನಟ ದತ್ತಣ್ಣ ಅವರಿಗೆ ಸಿನಿಮಾ ಮೂಡಿಬಂದಿರುವ ರೀತಿ ಖುಷಿ ಕೊಟ್ಟಿದೆಯಂತೆ. ಉಳಿದಂತೆ ಚಿತ್ರದಲ್ಲಿ ನಟಿಸಿರುವ ಪದ್ಮಜಾ ರಾವ್‌, ರಘು ರಮಣಕೊಪ್ಪ, ವಿತರಕಿ ಮಾಲಿನಿ ಸೇರಿದಂತೆ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next