Advertisement

ಟಂಟಂಗಳಿಗೆ ಪ್ರತ್ಯೇಕ ನಿಲ್ದಾಣ ಒದಗಿಸಿ

03:05 PM Jul 18, 2017 | Team Udayavani |

ರಾಯಚೂರು: ನಗರಸಭೆ ಹಾಗೂ ತಾಪಂ ಕಚೇರಿ ಪಕ್ಕದಲ್ಲಿ ಟಂಟಂ ವಾಹನಗಳಿಗೆ ಪ್ರತ್ಯೇಕ ನಿಲ್ದಾಣ ವ್ಯವಸ್ಥೆ ಮಾಡುವಂತೆ
ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಸಂಘದ ಸದಸ್ಯರು ನಗರಸಭೆ ಅಧ್ಯಕ್ಷರಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

ನಗರಕ್ಕೆ ನಿತ್ಯ ಸುತ್ತಲಿನ ಗ್ರಾಮಗಳಿಂದ ನೂರಾರು ಜನ ಆಗಮಿಸುತ್ತಾರೆ. ಸುತ್ತಲಿನ 5-10 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಬಹುತೇಕ ಜನರು ಟಂಟಂ ವಾಹನಗಳನ್ನೇ ಅವಲಂಬಿಸಿದ್ದಾರೆ. ಸೂಕ್ತ ಸಾರಿಗೆ ಸೌಕರ್ಯ ಇಲ್ಲದ ಕಾರಣ ಟಂಟಂ ಆಟೋಗಳೇ ಅನಿವಾರ್ಯವಾಗಿವೆ. ಆದರೆ, ಇಲ್ಲಿ ವಾಹನ ನಿಲ್ಲಿಸಲು ಸೂಕ್ತ ನಿಲ್ದಾಣದ ವ್ಯವಸ್ಥೆ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.

ಇಲ್ಲಿ ವಾಹನ ನಿಲ್ಲಿಸಲು ನಗರಸಭೆಯಿಂದ ಅನುಮತಿ ಪಡೆಯಬೇಕು ಎಂದು ಪೊಲೀಸರು ತಾಕೀತು ಮಾಡುತ್ತಿದ್ದಾರೆ. ಟಂಟಂಗಳನ್ನು ಸಾಲ ಮಾಡಿ ಖರೀದಿಸಿ ಉಪಜೀವನ ನಡೆಸುತ್ತಿರುವ ಚಾಲಕರಿಗೆ ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ರಸ್ತೆ ಸುರಕ್ಷತಾ ಹಾಗೂ ನಗರಾಭಿವೃದ್ಧಿ ದೃಷ್ಟಿಯಿಂದ ಟಂಟಂ ಹಾಗೂ ಆಟೋ ರಿಕ್ಷಾಗಳಿಗೆ ಪ್ರತ್ಯೇಕ ನಿಲುಗಡೆಯ ವ್ಯವಸ್ಥೆ
ಮಾಡಲಾಗಿದೆ. ಆದರೆ, ಇಲ್ಲಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಗರದ ಸುತ್ತಮುತ್ತಲಿನ ಗ್ರಾಮಗಳಿಂದ ನಾನಾ ಕಾರ್ಯಗಳಿಗೆ ಬರುವ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಟಂಟಂ ಗಾಡಿಗಳಿಗೆ ಪ್ರತ್ಯೇಕ ನಿಲ್ದಾಣಕ್ಕೆ ನಗರಸಭೆ ಪಕ್ಕದಲ್ಲೇ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು. ವೇದಿಕೆ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಪ್ರಧಾನ ಕಾರ್ಯದರ್ಶಿ ಎನ್‌.ಕೆ.ನಾಗರಾಜ, ಸದಸ್ಯರಾದ ಚಂದ್ರಶೇಖರ ಯಕ್ಲಾಸಪುರ, ಭೀಮಣ್ಣ, ಆರ್‌.ಆಂಜನೇಯ, ರಾಜಶೇಖರ, ಆಟೋ ಚಾಲಕರಾದ ಮಹಾದೇವ, ತಿಮ್ಮಪ್ಪ, ಹುಸೇನಿ, ಚಿನ್ನಿ, ರಾಮಪ್ಪ, ಭೀಮಪ್ಪ, ವೀರೇಶ, ನಾಗರಾಜ, ನರಸಪ್ಪ, ಸುರೇಶ, ಮಹೇಶ, ಅಯ್ಯಪ್ಪ, ಜಂಬಯ್ಯ ಸೇರಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next