Advertisement

ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಭದ್ರತೆ ಒದಗಿಸಿ

10:56 AM Jul 03, 2019 | Team Udayavani |

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದ್ದು, ಪೊಲೀಸ್‌ ವ್ಯವಸ್ಥೆ ಬಲಪಡಿಸಬೇಕಿದೆ. ಉದ್ಯೋಗ ಅರಸಿ ಬರುವ ಯುವಕರಿಗೆ ಕೌಶಲ್ಯದ ಕೊರತೆಯಿದ್ದು, ಕೌಶಲ್ಯ ತರಬೇತಿಗೆ ಸ್ಥಳಾವಕಾಶ ಮಾಡಬೇಕಿದೆ. ಕಾರ್ಖಾನೆಗಳಿಗೆ ನೀರಿನ ಸಮಸ್ಯೆ ಹಾಗೂ ಅಗತ್ಯ ಮೂಲ ಸೌಕರ್ಯ ಒದಗಿಸಬೇಕೆಂದು ದೊಡ್ಡಬಳ್ಳಾಪುರ ಇಂಡಸ್ಟ್ರಿಯಲ್ ಅಸೋಷಿಯೇಷನ್‌ ಸಿಇಒ ಆಂಜನೇಯಲು ಒತ್ತಾಯಿಸಿದರು.

Advertisement

ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಕ್ಕೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್‌ ಭೇಟಿ ನೀಡಿ ಪರಿಶೀಲಿಸಿ, ನಂತರ ಕೈಗಾರಿಕಾ ಸಂಘದ ಪದಾಧಿಕಾರಿಗಳೊಡನೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

ಪೊಲೀಸ್‌ ಸಿಬ್ಬಂದಿ ಕೊರತೆ: ಕೈಗಾರಿಕಾ ಪ್ರದೇಶದಲ್ಲಿ ಸುಮಾರು 16 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸಂಜೆ ಹಾಗೂ ರಾತ್ರಿ ಪಾಳಿಯಲ್ಲಿ ಮನೆಗೆ ಹಿಂತಿರುಗುವ ಕಾರ್ಮಿಕರ ಮೇಲೆ ದರೋಡೆ ಹಲ್ಲೆಗಳಾಗಿವೆ. ಮಹಿಳಾ ಕಾರ್ಮಿಕರಿಗೆ ಭದ್ರತೆ ಇಲ್ಲ. ಕೈಗಾರಿಕಾ ಪ್ರದೇಶದಲ್ಲಿ ಪೊಲೀಸ್‌ ಹೊರಠಾಣೆ ಇದ್ದರೂ ಸೂಕ್ತ ಸಿಬ್ಬಂದಿ ಕೊರತೆಯಿದೆ ಎಂದರು.

ಸಚಿವರಿಗೆ ಮನವಿ: ಉದ್ಯೋಗಿಗಳಿಗೆ ಸೂಕ್ತ ಕೌಶಲ್ಯ ನೀಡಲು ತರಬೇತಿ ಕೇಂದ್ರ ಆರಂಭಿಸಲು ಕಟ್ಟಡದ ಅಗತ್ಯವಿದೆ. ಕೈಗಾರಿಕಾ ಪ್ರದೇಶಕ್ಕೆ ಸಮೀಪದಲ್ಲಿ ವಸತಿ ಬಡಾವಣೆ ನಿರ್ಮಾಣವಾಗುತ್ತಿದ್ದು, ನಿತ್ಯ ಸಂಘರ್ಷವೇರ್ಪಡುತ್ತಿದೆ. ಇದನ್ನು ತಡೆಯಬೇಕು ಹಾಗೂ ಅಪೇರೆಲ್ ಪಾರ್ಕ್‌ ಉನ್ನತೀಕರಿಸಿ ದೊಡ್ಡಬಳ್ಳಾಪುರ ಇಂಡಸ್ಟ್ರೀಯಲ್ ಅಸೋಷಿಯೇಷನ್‌ ವ್ಯಾಪ್ತಿಗೆ ನೀಡುವಂತೆ ಮನವಿ ಮಾಡಿದರು.

ಸ್ಥಳೀಯರಿಗೆ ಉದ್ಯೋಗ ನೀಡಿ: ಸ್ಥಳೀಯರಾದ ರಾಮಾಂಜಿನಪ್ಪ ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಕಾರ್ಖಾನೆಗಳು ನಿಂತು ಹೋಗಿವೆ. ಸಂಜೆ ರಸ್ತೆಗಳಲ್ಲಿ ಕುಡುಕರ ಕಾಟ ಹೆಚ್ಚಾಗಿದೆ. ಕೈಗಾರಿಕೆಗಳಿಂದ ಮಾಲಿನ್ಯ ಸಮರ್ಪಕವಾಗಿ ವಿಲೇವಾರಿ ಆಗದೇ ಸಮೀಪದ ಚರಂಡಿಗಳಲ್ಲಿ ಹರಿಯುತ್ತಿದೆ ಎಂದು ದೂರಿದರು. ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದರು.

Advertisement

ಎಚ್.ಎನ್‌.ವ್ಯಾಲಿಯಿಂದ ನೀರು: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ಸಂಚಾರ ಠಾಣೆ ತೆರೆಯಲು ಹಿಂದೆ ಗೃಹಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಅವರಿಗೆ ಮನವಿ ಮಾಡಲಾಗಿ, ಆತರಿಕ ಸಮಸ್ಯೆಯಿಂದ ಆಗಿರಲಿಲ್ಲ. ಪೊಲೀಸ್‌ ಹೊರಠಾಣೆಗೆ ಸಿಬ್ಬಂದಿ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಕಾರ್ಖಾನೆಗಳ ಮುಂದೆ ಬೀಟ್ ಪುಸ್ತಕ ಇಡಲಾಗುವುದು. ಕೈಗಾರಿಕೋದ್ಯಮಿಗಳ ಯಾವುದೇ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಲಾಗುವುದು. ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಎಚ್.ಎನ್‌.ವ್ಯಾಲಿಯಿಂದ ನೀರು ತರಲು ಮನವಿ ಮಾಡಲಾಗಿದೆ ಎಂದರು.

ಕೆ.ಐ.ಎ.ಡಿ.ಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಶಂಕರ್‌ ಮಾತನಾಡಿ, ಬಾಗಲೂರ ಬಳಿ 3000 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ತ್ಯಾಜ್ಯ ಶುದ್ಧೀಕರಣ ಘಟಕದಿಂದ 40 ಎಂ.ಎಲ್.ಡಿ ನೀರು ಲಭ್ಯವಿದೆ. ಅರಳಿನ ಕುಂಟೆಯಿಂದ 15 ಎಂ.ಎಲ್.ಡಿ ನೀರು ಸರಬರಾಜು ಮಾಡಲು ಯೋಜನಾ ವರದಿ ಸಿದ್ದವಾಗಿದ್ದು, ಕಾಮಗಾರಿ ನಡೆಯುತ್ತಿದೆ. ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಕೈಗಾರಿಕೋದ್ಯಮಿಗಳ ಹಾಗು ಸ್ಥಳೀಯರ ಸಮಸ್ಯೆಗಳಿಗೆ ಉತ್ತರಿಸಿದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್‌, ಇಂದಿನ ಜಾಗತಿಕ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯವಾಗಿದ್ದು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳದ ಎಚ್ಎಂಟಿ ಅಂತಹ ಕಾರ್ಖಾನೆಗಳು ಮುಚ್ಚಿರುವುದು ನಮ್ಮ ಕಣ್ಣ ಮುಂದಿದೆ. ಅಪೇರೆಲ್ ಉದ್ಯಮ ಸಹ ವೇಗವಾಗಿ ಬೆಳೆಯುತ್ತಿದೆ. ಆದರೆ ನೋಟು ಅಮಾನ್ಯ, ಜಿಎಸ್‌ಟಿ ಯಿಂದ ಈ ಉದ್ಯಮ ರಪ್ತು ಸಮಸ್ಯೆಯಿಂದಾಗಿ ನಷ್ಟ ಅನುಭವಿಸುತ್ತಿದೆ. ಇದು 5ಜಿ ಯುಗ.ಇಂದಿನ ಬದಲಾವಣೆಗೆ ಹೊಂದಿಕೊಳ್ಳದಿದ್ದರೆ ಉದ್ಯಮ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು.

ಕೌಶಲ್ಯ ತರಬೇತಿ ಕೇಂದ್ರಕ್ಕೆ ಸ್ಥಳಾವಕಾಶ: ದೊಡ್ಡಬಳ್ಳಾಪುರ ಕೈಗಾರಿಕೋದ್ಯಮಿಗಳ ಸಂಘದಿಂದ ಸ್ಥಳೀಯ ವಿದ್ಯಾವಂತ ಯುವಕರಿಗೆ ಕೌಶಲ್ಯ ತರಬೇತಿ ನೀಡಲು ಸ್ಥಳಾವಕಾಶ ಕಲ್ಪಿಸಲಾಗುವುದು ಹಾಗೂ ಕೌಶಲ್ಯ ತರಬೇತಿ ಇಲಾಖೆಯ ಎಲ್ಲಾ ಸೌಲಭ್ಯ ನೀಡಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್‌ ವ್ಯವಸ್ಥೆ, ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್‌ ಠಾಣೆ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಒತ್ತು ನೀಡುವುದರೊಂದಿಗೆ ಸ್ಥಳೀಯ ಸಂಸ್ಥೆಗಳಿಗೆ ನಿರ್ವಹಣಾ ಜವಾಬ್ದಾರಿ ನೀಡಬೇಕಿದೆ. ನೀರಿನ ಸಮಸ್ಯೆ ನೀಗಿಸಲು ಪ್ರತಿಯೊಂದು ಕೈಗಾರಿಕಾ ಕಟ್ಟಡಗಳಲ್ಲೂ ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ಮಳೆ ನೀರು ಸಂಗ್ರಹ ವ್ಯವಸ್ಥೆ ಕಲ್ಪಿಸಿಕೊಳ್ಳದ ಕೈಗಾರಿಕೆಗಳಿಗೆ ನೋಟಿಸ್‌ ನೀಡಲಾಗುವುದು. ಈ ಕುರಿತು ಕೈಗಾರಿಕಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್‌ ಕೃಷ್ಣ, ಜಿಲ್ಲಾಧಿಕಾರಿ ಕರೀಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಎಂ.ಜಗದೀಶ್‌, ಡಿ.ಐ.ಟಿ.ಪಿ ಸಂಘದ ಅಧ್ಯಕ್ಷ ಜಗನ್ನಾಥ್‌, ಪರಿಸರ ಇಲಾಖೆ, ಕೈಗಾರಿಕಾ ಇಲಾಖೆ, ಕೆ.ಐ.ಎ.ಡಿ.ಬಿ ಅಧಿಕಾರಿಗಳು ಕೈಗಾರಿಕೋದ್ಯಮಿಗಳು ಇದ್ದರು.

ಸರಕಾರ ಸುಭದ್ರವಾಗಿದೆ:

ರಾಜ್ಯ ಸರ್ಕಾರವನ್ನು ಐದು ವರ್ಷದವರೆಗೂ ಯಾರು ಏನು ಮಾಡಲು ಸಾಧ್ಯವಿಲ್ಲ ಪಕ್ಷದಲ್ಲಿನ ಶಾಸಕರು ರಾಜೀನಾಮೆ ನೀಡುವುದು ಅವರ ವೈಯಕ್ತಿಕ ವಿಚಾರವಾಗಿದೆ. ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಭೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

ತಾಲೂಕಿನ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ತ್ರಿವೇಣಿ ಎಂಜಿನಿಯರಿಂಗ್‌ ಲಿಮಿಟೆಡ್‌ ಕಂಪನಿಗೆ ಭೇಟಿ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹೈ ಕಮಾಂಡ್‌ ಆದೇಶದ ಮೇರೆಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ರಾಜ್ಯದ ಜನ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಮುಂದಿನ ಐದು ವರ್ಷದವರೆಗೂ ಎಚ್‌ಡಿಕೆ ಸಿಎಂ ಆಗಿರುತ್ತಾರೆ. ಬಿಜೆಯ ನಂಬರ್‌ ಗೇಮ್‌ ಕರ್ನಾಟಕದಲ್ಲಿ ವರ್ಕ್‌ಔಟ್ ಆಗಲ್ಲ, ಕಳೆದ ಒಂದು ವರ್ಷದಿಂದ ರಾಜೀನಾಮೆಯ ವದಂತಿಗಳು ನಡೆಯುತ್ತಿವೆ ಆದರೆ ಸರ್ಕಾರ ಸುಭದ್ರವಾಗಿದೆ ಎಂದರು.

ಮಳೆನೀರು ಕೊಯ್ಲಿಗೆ ಆದ್ಯತೆ: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ ಇಸ್ರೇಲ್ ಮಾದರಿಯಲ್ಲಿ ಬಿದ್ದ ಮಳೆಯನ್ನು ಸಂಪೂರ್ಣವಾಗಿ ಹಿಡಿದಿಡುವ ಕೆಲಸವನ್ನು ಪ್ರತಿ ಕೈಗಾರಿಕೆಯವರು ಮಾಡಬೇಕು ತಮ್ಮ ಕಂಪನಿಯ ಸುತ್ತ ಮುತ್ತ ಬಿದ್ದ ಮಳೆನೀರನ್ನು ಸಂಗ್ರಹಿಸುವುದು ಕಡ್ಡಾಯವಾಗಬೇಕು ಎಂದರು, ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಕಂಡು ಬರುವ ಮೂಲಭೂತ ಸಮಸ್ಯೆಗಳಿಗೆ ತಕ್ಷಣದಲ್ಲಿಯೇ ಅಧಿಕಾರಿಗಳ ಚರ್ಚಿಸಿ ಪರಿಹಾರಿಸಲಾಗುತ್ತದೆ ಎಂದರು.

ವಿದ್ಯುತ್‌ ಸಮಸ್ಯೆ: ಕೈಗಾರಿಕ ಪ್ರದೇಶದಲ್ಲಿ 2 ಗಂಟೆಗೆ ಒಮ್ಮೆ ವಿದ್ಯುತ್‌ ಸಮಸ್ಯೆ ಎದುರಾಗುತ್ತದೆ. ಅಗತ್ಯವಿರುವ ವಿದ್ಯುತ್‌ ಪೂರೈಕೆ ಮಾಡಲು ಕೈಗಾರಿಕಾ ಪ್ರದೇಶದಲ್ಲಿಯೇ ಉಪ ಘಟಕವನ್ನು ತೆರೆಯಬೇಕು ಎಂದು ತ್ರಿವೇಣಿ ಕಂಪನಿ ಆಡಳಿತ ಮಂಡಳಿಯವರು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪತ್ರಿಕ್ರಿ ಯಿಸಿದ ಕೆಪಿಸಿಟಿಎಲ್ ಅಧಿಕಾರಿಗಳು ಮುಂದಿನ 2 ತಿಂಗಳಲ್ಲಿ ಅವರೇ ಹಳ್ಳಿ ಯಲ್ಲಿ ಹೊಸದೊಂದು ವಿದ್ಯುತ್‌ ಘಟಕ ಶುರು ವಾಗುತ್ತದೆ ತಕ್ಷಣಕ್ಕೆ ಅಲ್ಲಿಗೂ ದಾಬಸ್‌ಪೇಟೆ ಘಟಕದಿಂದ ವಿದ್ಯುತ್‌ ಪೂರೈಕೆಯಾಗುತ್ತಿದೆ ಈ ಸಮಸ್ಯೆ ಎದುರಾಗಿದೆ ಆಗಸ್ಟ್‌ನಲ್ಲಿ ವಿದ್ಯುತ್‌ ಸಮಸ್ಯೆ ಕಡಿಮೆಯಾಗುತ್ತದೆ ಎಂದರು.

ಕ್ಯಾಬ್‌ ವ್ಯವಸ್ಥೆ: ಕೈಗಾರಿಕೆಯಲ್ಲಿ ಕೆಲಸ ಮಾಡುವ ಪ್ರತಿ ಕಾರ್ಮಿಕರಿಗೂ ಕೆಲಸಕ್ಕೆ ಬರುವ ಸಮಯದಲ್ಲಿ ಮತ್ತು ಮನೆಗೆ ಮರಳುವ ಸಮಯದಲ್ಲಿ ಕಡ್ಡಾಯವಾಗಿ ಕ್ಯಾಬ್‌ ವ್ಯವಸ್ಥೆಯನ್ನು ಮಾಡಬೇಕು ಎಂದು ಕೈಗಾರಿಕೆಯ ಮಾಲೀಕರಿಗೆ ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next