Advertisement

ಸಮರ್ಪಕ ಬಿತ್ತನೆ ಬೀಜ-ಗೊಬ್ಬರ ಪೂರೈಸಿ

05:58 PM Jun 20, 2022 | Team Udayavani |

ಗದಗ: ಅನಧಿಕೃತ ಬೀಜ, ಗೊಬ್ಬರ ದಾಸ್ತಾನಿಗೆ ಅವಕಾಶವಿಲ್ಲ. ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕ ವಾಗಿ ಬಿತ್ತನೆ ಬೀಜ, ಗೊಬ್ಬರ ಸರಬರಾಜಾಗುವಂತೆ ಅಧಿಕಾರಿಗಳು ನಿಗಾ ವಹಿಸಬೇಕೆಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲ ಆರಂಭ ವಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಅವರಿಗೆ ಅವಶ್ಯಕತೆ ಇರುವ ಬಿತ್ತನೆ ಬೀಜ ರಸಗೊಬ್ಬರ ಸರಿಯಾಗಿ ಲಭ್ಯವಾಗುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದರು.

ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಪ್ರತಿಕ್ರಿಯಿಸಿ, ಪ್ರತಿ ತಾಲೂಕಿನಲ್ಲೂ ತಹಶೀಲ್ದಾರ್‌ ಹಾಗೂ ಕೃಷಿ ಅಧಿಕಾರಿಗಳು ನಿಯಮಿತವಾಗಿ ಅಂಗಡಿ ಗಳಿಗೆ ಭೇಟಿ ನೀಡಿ, ಬೀಜ, ಗೊಬ್ಬರ ದಾಸ್ತಾನು ಪರಿಶೀಲಿಸಬೇಕು ಹಾಗೂ ಜಾಗೃತ ದಳ ತಂಡ ನಿರಂತರ ಪರಿಶೀಲನೆ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು ಅಲ್ಲದೇ, ಅತಿವೃಷ್ಟಿ ನಿರ್ವಹಣೆ ಮಾಡಲು ತಾಪಂ ಆಡಳಿತಾಧಿಕಾರಿ ಗಳನ್ನೇ ನೋಡಲ್‌ ಅಧಿಕಾರಿಯಾಗಿ ನಿಯೋಜಿಸಿದೆ. ಜಿಲ್ಲೆಯಲ್ಲಿ ಗುರುತಿಸಲಾದ ಪ್ರತಿ ಕಾಳಜಿ ಕೇಂದ್ರಕ್ಕೆ ಪ್ರತ್ಯೇಕವಾಗಿ ನೋಡಲ್‌ ಅಧಿಕಾರಿ ಗಳನ್ನು ನೇಮಕ ಮಾಡಿ ಸಮರ್ಪಕ ನಿರ್ವಹಣೆ ಮಾಡಲು ಸೂಚಿಸಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ರೈತರಿಗೆ ಸೋಯಾಬಿನ್‌ ಬಿತ್ತಲು ಹೆಚ್ಚು ಪ್ರೋತ್ಸಾಹ ನೀಡಬೇಕು. ಸೋಯಾಬಿನ್‌ ಬೆಲೆ ಉತ್ತಮ ಫಸಲಿನೊಂದಿಗೆ ಲಾಭದಾಯಕ ಬೆಳೆಯಾಗಿದೆ. ರೈತರನ್ನು ಈ ಕುರಿತು ಜಾಗೃತಿ ಮೂಡಿಸಬೇಕು. ಬಿತ್ತನೆ ಬೀಜ ಗೊಬ್ಬರ ಅಂಗಡಿಯಲ್ಲಿ ಎಂಆರ್‌ಪಿ ಬೆಲೆ ಪ್ರಕಟಿಸಬೇಕು. ಜೊತೆಗೆ ಗೊಬ್ಬರಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿ ಮೊತ್ತ ಸಹ ರೈತರಿಗೆ ತಿಳಿಯುವಂತೆ ಕ್ರಮ ವಹಿಸಬೇಕು. ಅಕ್ರಮವಾಗಿ ಬೀಜ, ಗೊಬ್ಬರ ದಾಸ್ತಾನು ಮಾಡಿದಲ್ಲಿ ಶಿಸ್ತುಕ್ರಮ ಜರುಗಿಸಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿ, ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯನ್ನು 8, 9, 10ನೇ ತರಗತಿ ಮಕ್ಕಳಿಗೂ ವಿಸ್ತರಿಸಲಾಗಿದ್ದು, ಜಿಲ್ಲೆಯ ಎಲ್ಲ ಅರ್ಹ ಮಕ್ಕಳಿಗೂ ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಹೇಳಿದರು.

Advertisement

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಮಾತನಾಡಿ, ಏಪ್ರಿಲ್‌ 1ರಿಂದ ಈವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 164 ಮಿ.ಮೀ ಇದ್ದು, 290 ಮಿ.ಮೀ. ಮಳೆಯಾಗಿ ಶೇ. 77ರಷ್ಟು ಹೆಚ್ಚಾಗಿದೆ. 7 ಮಾನವ ಜೀವಹಾನಿಯಾಗಿದ್ದು, ತಲಾ ಕುಟುಂಬಗಳಿಗೆ 5 ಲಕ್ಷ ರೂ. ನಂತೆ 35 ಲಕ್ಷ ರೂ. ಪರಿಹಾರ ವಿತರಿಸಿದೆ. ಮಳೆಯಿಂದಾಗಿ ಜಿಲ್ಲೆಯ 928 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ನಿಯಮಾನುಸಾರ 928 ಮನೆಗಳಿಗೆ 29.69 ಲಕ್ಷ ರೂ. ಪರಿಹಾರ ನೀಡಿದೆ. 49 ಜಾನುವಾರುಗಳ ಜೀವಹಾನಿ ಸಂಭವಿಸಿದ್ದು 3.21 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. 171 ಹೆಕ್ಟೇರ್‌ ತೋಟಗಾರಿಕೆ ಹಾಗೂ 240 ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗುದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ ಮಾತನಾಡಿ, ಜಿಲ್ಲೆಯಲ್ಲಿ ಯೂರಿಯಾ 2024ಟನ್‌, ಡಿಎಪಿ 359ಟನ್‌, ಎಂಓಪಿ 185, ಎನ್‌.ಪಿ.ಕೆ. ಎಸ್‌ 2709 ಹಾಗೂ ಎಸ್‌ಎಸ್‌ಪಿ 84 ಟನ್‌ ಸೇರಿ ಒಟ್ಟು 5361 ಟನ್‌ ಗೊಬ್ಬರ ದಾಸ್ತಾನಿದೆ ಎಂದರು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರು ರೈತರಿಗಾಗಿ ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ ಕುರಿತ ಕರಪತ್ರಗಳನ್ನು ಬಿಡುಗಡೆ ಮಾಡಿದರು. ರಾಜ್ಯ ದ್ರಾಕ್ಷಿ ಮಂಡಳಿ ಅಧ್ಯಕ್ಷ ಕಾಂತಿಲಾಲ್‌ ಬನ್ಸಾಲಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next