ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾವಿರಾರು ರೈತರು ಸ್ವಾತಂತ್ರ್ಯ ಉದ್ಯಾನವನದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಬೆಳಗ್ಗೆ 9 ಗಂಟೆ ಸುಮಾರಿಗೆ ಸಾವಿರಾರು ರೈತರು ರೈಲ್ವೆ ನಿಲ್ದಾಣ ಮುಂಭಾಗ ಜಮಾಯಿಸಿ ಸರ್ಕಾರ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಬಳಿಕ 10.30 ಸುಮಾರಿಗೆ ರೈಲ್ವೆ ನಿಲ್ದಾಣದಿಂದ ಆನಂದರಾವ್ ವೃತ್ತದ ಮೂಲಕ ಮೇಲುಸೇತುವೆ ಮಾರ್ಗವಾಗಿ ವಿಧಾನಸೌಧ ಕಡೆ ಪ್ರತಿಭಟನಾ ರ್ಯಾಲಿ ಆರಂಭಿಸಿದರು. ಪರಿಣಾಮ ಮೆಜೆಸ್ಟಿಕ್ ಸುತ್ತ-ಮುತ್ತ ಪ್ರದೇಶಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.
ಮೌರ್ಯ ವೃತ್ತ, ಆನಂದ್ರಾವ್ ವೃತ್ತ, ಕೆ.ಆರ್.ವೃತ್ತ, ಮೈಸೂರು ಬ್ಯಾಂಕ್ ಸರ್ಕಲ್, ಅವಿನ್ಯೂ ರಸ್ತೆ, ಗೂಡ್ಶೆಡ್ ರಸ್ತೆ, ಬಿನ್ನಿ ಮೀಲ್ ರಸ್ತೆ, ಶಿವಾನಂದ ಸರ್ಕಲ್, ಚಾಮರಾಜಪೇಟೆ, ಓಕಳೀಪುರಂ, ಚಾಲುಕ್ಯ ವೃತ್ತ, ನೃಪತುಂಗ ರಸ್ತೆ ಮಾರ್ಗಗಳಲ್ಲಿ ದಟ್ಟಣೆ ಹೆಚ್ಚಾಗಿತ್ತು. ಇದರಿಂದ ಈ ಭಾಗದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿ, ಕಾರುಗಳು, ದ್ವಿಚಕ್ರ ವಾಹನ, ಬಸ್ಗಳು ರಸ್ತೆ ಮಧ್ಯೆಯೇ ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅಲ್ಲದೆ, ಫ್ರೀಡಂ ಪಾರ್ಕ್ ಬಳಿಯೇ ರೈತರು ರಸ್ತೆ ತಡೆದು ಹೋರಾಟ ನಡೆಸಿದ್ದರಿಂದ ಪೊಲೀಸರು ಮೆಜೆಸ್ಟಿಕ್-ಸ್ವಾತಂತ್ಯ† ಉದ್ಯಾನವನ ಸಂಪರ್ಕಿಸುವ ಎಲ್ಲ ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಿದ್ದರು. ಹೀಗಾಗಿ ಕೆ.ಆರ್.ಮಾರುಕಟ್ಟೆ, ವಿಲ್ಸನ್ಗಾರ್ಡ್ನ್, ವಿಧಾನಸೌಧ ಕಡೆ ಹೋಗುವ ವಾಹನಗಳನ್ನು ರೇಸ್ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಯಿತು. ಮತ್ತೂಂದೆಡೆ ಮೈಸೂರು ವೃತ್ತದಿಂದ ಫ್ರೀಡಂ ಪಾರ್ಕ್ ಕಡೆ ಬರುವ ಎಲ್ಲ ವಾಹನಗಳನ್ನು ಮಹಾರಾಣಿ ಕಾಲೇಜು ಬಳಿಯೇ ತಡೆಯಲಾಯಿತು.
ಭಾರೀ ಭದ್ರತೆ: ಭಾರೀ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರಿಂದ ಪೊಲೀಸರು ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಆಡಳಿತ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ನೇತೃತ್ವದಲ್ಲಿ ನಾಲ್ವರು ಎಸಿಪಿಗಳು, 10 ಮಂದಿ ಇನ್ಸ್ಪೆಕ್ಟರ್, 15 ಮಂದಿ ಸಬ್ ಇನ್ಸ್ಪೆಕ್ಟರ್,
20ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಹಾಗೂ 6 ಕೆಎಸ್ಆರ್ಪಿ ತುಕಡಿ, ಒಂದು ಡಿ-ಸ್ವಾಟ್ ವಾಹನ, ಎರಡು ಆ್ಯಂಬುಲೆನ್ಸ್ ಸೇರಿದಂತೆ ಸುಮಾರು 500ಕ್ಕೂ ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ರೈಲ್ವೆ ನಿಲ್ದಾಣ, ಆನಂದ್ರಾವ್ ವೃತ್ತ, ಮಹಾರಾಣಿ ಕಾಲೇಜು, ಫ್ರೀಡಂಪಾರ್ಕ್ ನಿಯೋಜಿಸಲಾಗಿತ್ತು. ಎರಡು ಅಗ್ನಿಶಾಮಕ ದಳ ವಾಹನಗಳು ಸ್ಥಳದಲ್ಲಿ ಇದ್ದವು.