Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

11:40 AM Sep 17, 2019 | Suhan S |

ಬೆಳಗಾವಿ: ಬಸ್‌ ಸೌಲಭ್ಯ, ಸ್ಮಶಾನ ಭೂಮಿ ಮಂಜೂರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಪುನರ್ವಸತಿ ಕೇಂದ್ರ 2ರ ಗ್ರಾಮಸ್ಥರು ಸೋಮವಾರ ನಾವಲಗಟ್ಟಿ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ಸರ್ಕಾರದ ಯೋಜನೆಗಾಗಿ ಮನೆ, ಮಠ ಹಾಗೂ ಜಮೀನುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ತಿಗಡಿ ಹರಿನಾಲಾ ಹಿನ್ನೀರಿನಲ್ಲಿ ಮನೆ, ಜಮೀನುಗಳನ್ನು ಕಳೆದುಕೊಂಡ ಸಂತ್ರಸ್ತರಾದವರನ್ನು ಕಳೆದ 20 ವರ್ಷಗಳ ಹಿಂದೆ ಪುನರ್ವಸತಿ ಕೇಂದ್ರಗಳಲ್ಲಿ ನಿವೇಶನ ನೀಡಿ ಸ್ಥಳಾಂತರಿಸಲಾಗಿದೆ. ಆದರೆ ಪುನರ್ವತಿ ಕೇಂದ್ರದಲ್ಲಿ ಜನರು ಬಸ್‌ ಸೌಕರ್ಯ ಇಲ್ಲದೇ ಪರದಾಡಬೇಕಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕಪಡಿಸಿದರು.

ಬಸೌ ಸೌಲಭ್ಯವಿಲ್ಲದೇ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮೊದಲಾದವರು ಸುಮಾರು 4 ಕಿಮೀ ನಡೆದುಕೊಂಡು ನಾವಲಗಟ್ಟಿ ಗ್ರಾಮಕ್ಕೆ ಬರಬೇಕು. ಇದರಿಂದಾಗಿ ಎಷ್ಟೋ ಮಕ್ಕಳು ಅರ್ಧಕ್ಕೆ ಶಾಲೆಯನ್ನೇ ಬಿಟ್ಟಿವೆ. ಜಿಲ್ಲಾಡಳಿತ ಹಾಗೂ ಸರ್ಕಾರ ಪುನರ್ವಸತಿ ಕೇಂದ್ರದ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಜಗದೀಶ ನಾವಲಗಟ್ಟಿ, ತಿಗಡಿ ಹರಿನಾಲಾ ಡ್ಯಾಮ್‌ ಹಿನ್ನೀರಿನಲ್ಲಿ ಮನೆ ಹಾಗೂ ಜಮೀನುಗಳನ್ನು ಕಳೆದುಕೊಂಡ ಕುಟುಂಬಗಳು ತಮ್ಮ ಮನೆಯ ಸದಸ್ಯರು ನಿಧನ ಹೊಂದಿದ ಸಂದರ್ಭದಲ್ಲಿ ಸ್ಮಶಾನ ಭೂಮಿ ಇಲ್ಲದೇ ಅಂತ್ಯಸಂಸ್ಕಾರ ಮಾಡಲು ಪರದಾಡುತ್ತಿದ್ದಾರೆ. ಸ್ಮಶಾನ ಭೂಮಿ ಇರದ ಕಾರಣ ರಸ್ತೆ ಬದಿಯಲ್ಲಿ ಶವ ಸಂಸ್ಕಾರ ಮಾಡುತ್ತಿದ್ದಾರೆ. ಸರ್ಕಾರದ ಯೋಜನೆಗಾಗಿ ಮನೆ, ಮಠ ಕಳೆದುಕೊಂಡವರಿಗೆ ಅತ್ಯವಶ್ಯವಾದ ಸ್ಮಶಾನ ಭೂಮಿ ನೀಡುವಲ್ಲಿ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ನಾವಲಗಟ್ಟಿ ಪುನರ್ವಸತಿ ಕೇಂದ್ರ 2 ಕ್ಕೆ ತಕ್ಷಣ ಸ್ಮಶಾನ ಭೂಮಿ ಕಲ್ಪಿಸಲು ಕ್ರಮ ಕೈಗೊಂಡು ಹಲವು ವರ್ಷಗಳಿಂದ ಎದುರಾಗಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಹಲವು ಬಾರಿ ತಾಲೂಕಾ ಆಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

Advertisement

ಇದಲ್ಲದೇ ಪಡಿತರ ಧಾನ್ಯವನ್ನು ನಾಲ್ಕು ಕಿಮಿ ದೂರದಲ್ಲಿರುವ ನಾವಲಗಟ್ಟಿ ಗ್ರಾಮಕ್ಕೆ ಬಂದು ತೆಗೆದುಕೊಂಡು ಹೋಗಬೇಕಿದೆ. ಕಾರಣ ಪುನರ್ವಸತಿ ಕೇಂದ್ರ-2 ಕ್ಕೆ ಬಸ್‌ ಸೌಕರ್ಯ, ಸ್ಮಶಾನ ಭೂಮಿ ನೀಡುವುದು ಹಾಗೂ ಪಡಿತರ ಧಾನ್ಯವನ್ನು ಪುನರ್ವಸತಿ ಕೇಂದ್ರದಲ್ಲಿಯೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಸಮೀರ ಮುಲ್ಲಾ ಹಾಗೂ ನೀರಾವರಿ ಇಲಾಖೆ ಎಂಜಿನಿಯರ್‌ ಆರ್‌.ಜಿ.ಯಲಿಗಾರ

ಮಾತನಾಡಿ, ಮುಂಬರುವ 20 ದಿನಗಳಲ್ಲಿ ಸಂತ್ರಸ್ತರ ಕುಂಟುಂಬಗಳು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಿ ಕೊಡುವುದಾಗಿ ಹೇಳಿದರು.

ಅಡವಯ್ಯ ಚಿಕ್ಕಮಠ, ಬಸವರಾಜ ಪಾತ್ರೋಟ, ಸಂತೋಷ ಕಲ್ಲೂರ, ಸುರೇಶ ಕೇಂದ್ರಿ, ಮಲ್ಲಿಕಾರ್ಜುನ ಕಲ್ಲೂರ, ಬಸವರಾಜ ಹೊಸಮನಿ, ದುಂಡಪ್ಪ ಕಲ್ಲೂರ, ಈರಯ್ಯ ಚಿಕ್ಕಮಠ, ಯಲ್ಲಪ್ಪ ಉಪ್ಪಾರಟ್ಟಿ, ಬಸವರಾಜ ಉರಮನಟ್ಟಿ, ಪ್ರವೀಣ ಪಾತ್ರೋಟ, ಶಿವಪ್ಪ ಕಮ್ಮಾರ, ರವಿ ಮರೆದ, ಶೋಭಾ ಪಾತ್ರೋಟ, ಇಂದ್ರವ್ವ ಪಾತ್ರೋಟ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next