Advertisement

ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

04:58 PM Dec 04, 2019 | Team Udayavani |

ಬೆಳಗಾವಿ: ತಾಲೂಕಿನ ಅರಳಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಲಿಕಟ್ಟಿ ಜನತಾ ಕಾಲೋನಿಗೆ ಮೂಲ ಸೌಲಭ್ಯ ಕಲ್ಪಿಸಬೇಕುಎಂದು ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

ಗ್ರಾಮದ ಬಡವರಿಗೆ ಸರ್ಕಾರ ಮಂಜೂರು ಮಾಡಿದ ಆಶ್ರಯ ಮನೆಗಳಲ್ಲಿ ಸುಮಾರು 25ವರ್ಷಗಳಿಂದ 40 ಕುಟುಂಬಗಳು ಬದುಕು ಸಾಗಿಸುತ್ತಿವೆ. ಗ್ರಾಮದಿಂದ ಜನತಾ ಕಾಲೋನಿ 3 ಕಿಮೀ ಅಂತರದಲ್ಲಿದೆ. ಈ ಕುಟುಂಬಗಳು ಕುಡಿಯುವ ನೀರು, ರಸ್ತೆ, ವಿದ್ಯುತ್‌ ಇಲ್ಲದೇ ನಿತ್ಯ ಸಮಸ್ಯೆ ಅನುಭವಿಸುತ್ತಿವೆ ಎಂದು ದೂರಿದರು.

ಜನತಾ ಕಾಲೋನಿ ಭಾಗದಲ್ಲಿ ನಿರಂತರ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲುಗಳನ್ನು ಬ್ಲಾಸ್ಟ್‌ ಮಾಡುವುದರಿಂ ಮನೆ ಗೋಡೆಗಳು ಬಿರುಕು ಬಿಡುತ್ತಿವೆ.ಕೆಲ ಮನೆಗಳಂತೂ ಬೀಳುವ ಸ್ಥಿತಿಯಲ್ಲಿವೆ.

ಹೀಗಾಗಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಲ್ಲು ಗಣಿಗಾರಿಕೆ ಬಂದ್‌ ಮಾಡಿ ಗಣಿಗಾರಿಕೆ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಜತನಾ ಕಾಲೋನಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಾಂಬರೀಕರಣ ಮಾಡುವಂತೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರ ಗಮನಕ್ಕೆ ತರಲಾಗಿತ್ತು. ಆದರೆ ಇದು ಇನ್ನೂವರೆಗೆ ಸಮಸ್ಯೆಯಾಗಿಯೇ ಉಳಿದಿದೆ. ಇನ್ನೂವರೆಗೆ ರಸ್ತೆ ದುರಸ್ತಿ ಮಾಡಿಲ್ಲ. ಸರ್ಕಾರದಿಂದ ಬಂದ ಹಣ ಎಲ್ಲಿಗೆ ಹೋಯಿತು ಎಂದು ಗ್ರಾಮಸ್ಥರು ಪ್ರಶ್ನಿಸಿದರು.

Advertisement

ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೇಲ್ಛಾವಣಿ ಬಿರುಕು ಬಿಟ್ಟಿದೆ. ಇಲ್ಲಿಯ ಮಕ್ಕಳು ಜೀವ ಕೈಯಲ್ಲಿ ಹಿಡಿದು ಕಲಿಯುತ್ತಿದ್ದಾರೆ. ಯಾವ ಸಂದರ್ಭದಲ್ಲಾದರೂ ಕಟ್ಟಡ ಕುಸಿದು ಬೀಳುವ ಸ್ಥಿತಿಯಲ್ಲಿದ್ದರಿಂದ ಶಾಲೆಯನ್ನು ಮುಚ್ಚಲಾಗಿದೆ. ಕೂಡಲೇ ಶಾಲೆ ದುರಸ್ತಿಗೊಳಿಸಿ ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರಾದ ಸವರಾಜ ಸುಲಕುಂಪಿ, ಮಂಜುನಾಥ ಸಂಕಣ್ಣವರ, ಬಸವರಾಜ ರೊಟ್ಟಿ, ಬಾಳೇಶ ಮಂಗಣ್ಣವರ, ನಿಲವ್ವ ದೊಡ್ಡಗೌಡ್ರ, ರತ್ನವ್ವ ಬೇಟಗೇರಿ, ರುದ್ರಪ್ಪ ಹುಬ್ಬಳ್ಳಿ, ಗಂಗವ್ವ ಅವರೊಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next