Advertisement

ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

12:51 PM Dec 25, 2019 | Team Udayavani |

ರೋಣ: ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆಯನ್ನು ಶೀಘ್ರ ಸರ್ಕಾರ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕನ್ನಡ ರಕ್ಷಣಾ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಮಂಗಳವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಕಳಸ ಬಂಡೂರಿ ಯೋಜನೆ ಹೋರಾಟ ಸಮಿತಿ ರೈತ ಮುಖಂಡ ವಿಜಯ ಕುಲಕರ್ಣಿ ಮಾತನಾಡಿ, ಉತ್ತರ ಕರ್ನಾಟಕದ ರೈತರು ಕಳೆದ ಹಲವು ವರ್ಷಗಳಿಂದ ಸತತ ಬರಗಾಲ ಎದುರಿಸುತ್ತಾ ಬಂದಿದ್ದಾರೆ. ಈ ಬಾರಿ ಅತಿಯಾದ ಮಳೆಯಾಗಿ ರೈತರಿಗೆ ಸಮರ್ಪಕವಾದ ಬೆಳೆಗಳು ದೊರೆಯುತ್ತಿಲ್ಲ. ಕಳಸಾ ಬಂಡೂರಿ ಮಹದಾಯಿ ಯೋಜನೆಯು ಈ ಭಾಗದ ಮಹತ್ತರವಾದ ಯೋಜನೆಯಾಗಿದ್ದು, ಈ ಯೋಜನೆಯು ಜಾರಿಯಾದರೆ ರೈತರಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಈ ಹಿಂದೆ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಮ್ಮತಿ ಸೂಚಿಸಿತ್ತು. ಆದರೇ ಕೇಂದ್ರ ಸರ್ಕಾರವು ಗೋವಾ ಮುಖ್ಯಮಂತ್ರಿ ಹಾಗೂ ಇಬ್ಬರು ಸಂಸದರ ಮಾತಿಗೆ ಮಣೆಹಾಕಿ ಯೋಜನೆಗೆ ತಡೆಯೊಡ್ಡಿದೆ. ಕೇಂದ್ರ ಸರ್ಕಾರವು ಕರ್ನಾಟಕ್ಕೆ ಮಹದಾಯಿ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತ ಬಂದಿದೆ ಎಂದು ಆಕ್ರೋಶ ಹೊರಹಾಕಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಲೀಲಾ ಚಿತ್ರಗಾರ ಮಾತನಾಡಿ, ಸದ್ಯ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ್ಯೂ ಮಹದಾಯಿ ಯೋಜನೆಯನ್ನು ಪ್ರಾರಂಭಿಸುವಲ್ಲಿ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಕರ್ನಾಟಕದಿಂದ ಆಯ್ಕೆಗೊಂಡ ಸಂಸದರು ಮಹದಾಯಿ ಯೋಜನೆ ಬಗ್ಗೆ ಮಾತನಾಡಲು ಮುಂದಾಗುತ್ತಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಮಹತ್ತರವಾದ ಯೋಜನೆಯು ನೆನೆಗುದಿಗೆ ಬಿದ್ದಿದೆ. ರೈತರಿಗೆ ನೀರು ಇಲ್ಲದೆ ಬೆಳೆಗಳನ್ನು ಹೇಗೆ ಬೆಳೆಯಲು ಸಾಧ್ಯ. ರೈತರಿಗೆ ಸಮರ್ಪಕ ನೀರು ಒದಗಿಸುವಲ್ಲಿ ಸರ್ಕಾರ ಮುಂದಾಗಬೇಕು. ಇಲ್ಲವಾದರೆ ಬ್ಯಾಂಕ್‌ನಲ್ಲಿ ಪಡೆದ ಬೆಳೆಸಾಲವನ್ನು ರೈತರು ತೀರಿಸಬಾರದು. ಸರ್ಕಾರವೇ ಬೆಳೆಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎಫ್‌. ವೈ. ಕುರಿ, ಕನ್ನಡ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಎಸ್‌.ಎಂ. ಮರಿಗೌಡ್ರ, ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ನಿಂಗಪ್ಪ ಹೊನ್ನಾಪುರ, ಉಮೇಶ ಮೇಟಿ, ಸಿರಾಜ್‌ಹೊಸಮನಿ ನಾಗವ್ವ ಕುರಿ, ಶಾಂತಾ ಮೇಟಿ, ಶಂಕ್ರವ್ವ ಹೂಗಾರ, ವಿಜಯಲಕ್ಷ್ಮೀ ಹಿರೇಲಿಂಗನಗೌಡ್ರ, ವಿ.ಎಂ. ವಿರಕ್ತಮಠ, ಸುಮಿತ್ರಾ ಕುರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next