ರಾಯಚೂರು: ಕೆಪಿಟಿಸಿಎಲ್, ಜೆಸ್ಕಾಂ ಗುತ್ತಿಗೆ ಕಾರ್ಮಿಕರ ಬಾಕಿ ವೇತನ ಪಾವತಿ, ಭವಿಷ್ಯನಿಧಿ ಸೌಲಭ್ಯ ಸೇರಿ ಇತರೆ ಸೌಲಭ್ಯಕ್ಕಾಗಿ ಆಗ್ರಹಿಸಿ ಜೆಸ್ಕಾಂ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ
ನಡೆಸಿದರು. ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಡಿಸಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ಪರಿಷ್ಕೃತ ವೇತನವನ್ನು ನೌಕರರಿಗೆ ನೀಡದೆ ಗುತ್ತಿಗೆದಾರರು ಕಾರ್ಮಿಕರಿಗೆ ವಂಚನೆ ಮಾಡುತ್ತಿದ್ದಾರೆ.
ನೇರವಾಗಿ ನೌಕರರ ಖಾತೆಗೆ ವೇತನ ಪಾವತಿಸಬೇಕು. ಕಾರ್ಮಿಕರಿಗೆ ವೇತನ ಚೀಟಿ ನೀಡಬೇಕು. ಈವರೆಗೆ
ಹೆಚ್ಚುವರಿ ವೇತನ ನೀಡದೆ ಕಡಿಮೆ ನೀಡಿದ್ದು, ಈವರೆಗಿನ ಅರಿಯರ್ ಪಾವತಿಸಬೇಕು. ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರಿಗೆ ಭವಿಷ್ಯನಿಧಿ, ಇಎಸ್ಐ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರು ಕಾರ್ಯನಿರ್ವಹಿಸುವ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಬೇಕು. ಕುಡಿಯುವ ನೀರು, ವಿದ್ಯುತ್, ರಕ್ಷಣಾ ಸಾಧನ ಒದಗಿಸಬೇಕು. ತೆಲಂಗಾಣ ಮಾದರಿಯಲ್ಲಿ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.
ವೀರೇಶ ಎನ್.ಎಸ್, ಶಿವರಾಜ ಎಂ, ತಿರುಮಲರಾವ, ನಾಗೇಂದ್ರ, ಎಂಡಿ ಗೌಸ್, ವಿನೋದ, ಪರಶುರಾಮ ಇದ್ದರು.