Advertisement

ತಾಪಂ ಅಧಿಕಾರಿಗಳ ಕ್ರಮ ಖಂಡಿಸಿ ಪ್ರತಿಭಟನೆ

02:55 PM Apr 07, 2022 | Niyatha Bhat |

ಸಾಗರ: ತ್ಯಾಗರ್ತಿ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಬೇರೆ ಕಡೆ ವರ್ಗಾಯಿಸುತ್ತೇವೆ ಎಂದು ಭರವಸೆ ನೀಡಿ, ಮಾತು ತಪ್ಪಿದ ತಾಪಂ ಅಧಿಕಾರಿಗಳ ಕ್ರಮ ಖಂಡಿಸಿ ಬುಧವಾರ ರೈತಸಂಘದ ಡಾ| ಎಚ್‌.ಗಣಪತಿಯಪ್ಪ ಬಣದ ವತಿಯಿಂದ ತಾಲೂಕು ಕಚೇರಿ ಎದುರು ತಮಟೆ ಬಡಿದು, ಅಡುಗೆ ಮಾಡಿ ಊಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತಸಂಘದ ತಾಲೂಕು ಅಧ್ಯಕ್ಷ ದಿನೇಶ್‌ ಶಿರವಾಳ, ತ್ಯಾಗರ್ತಿ ಗ್ರಾಪಂ ಪಿಡಿಒ ಅವರ ಸ್ವಜನ ಪಕ್ಷಪಾತ, ಸಾಕ್ಷಿನಾಶ, ಹಲ್ಲೆ ಇನ್ನಿತರ ಕೃತ್ಯ ಖಂಡಿಸಿ ದಾಖಲೆ ಸಹಿತವಾಗಿ ಕಳೆದ ಮಾ. 24ರಂದು ತಾಪಂ ಎದುರು ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಜಿಪಂ ಸಿಇಒ, ತಾಪಂ ಇಒ ಪುಷ್ಪಾ ಎಂ. ಕಮ್ಮಾರ್‌ ಏ. 1ರಂದು ಪಿಡಿಒ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡುವ ಭರವಸೆ ನೀಡಿದ್ದರು. ಭರವಸೆ ಹಿನ್ನೆಲೆಯಲ್ಲಿ ರೈತಸಂಘ ಅಹೋರಾತ್ರಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿತ್ತು. ಆದರೆ ಈತನಕ ಪಿಡಿಒ ಅವರನ್ನು ವರ್ಗಾವಣೆ ಮಾಡುವತ್ತ ಅಧಿಕಾರಿಗಳು ಗಮನ ಹರಿಸದೆ ವಚನಭ್ರಷ್ಟರಾಗಿದ್ದಾರೆ. ರೈತಸಂಘ ಮತ್ತು ಸಾರ್ವಜನಿಕರನ್ನು ಅಧಿಕಾರಿಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ತಾಪಂ ಇಒ ಪ್ರತಿ ಪಿಡಿಒನಿಂದ ಪ್ರತಿ ತಿಂಗಳು 15 ಸಾವಿರ ರೂ. ಮಾಮೂಲಿ ಪಡೆಯುತ್ತಿದ್ದಾರೆ. ತ್ಯಾಗರ್ತಿ ವ್ಯಾಪ್ತಿಯಲ್ಲಿ ಬೃಹತ್‌ ಲೇಔಟ್‌ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಅಧಿಕಾರಿಗಳಿಗೆ ಪಿಡಿಒ ಅವರನ್ನು ವರ್ಗಾವಣೆ ಮಾಡಲು ಮನಸ್ಸಿದ್ದಂತೆ ಕಾಣುತ್ತಿಲ್ಲ. ತಾಲೂಕಿನ ಅಧಿಕಾರಿಗಳ ಭ್ರಷ್ಟಾಚಾರ ಮಿತಿಮೀರಿದೆ. ಪಂಚಾಯತ್‌ ರಾಜ್‌ ಸಚಿವ ಈಶ್ವರಪ್ಪ ಸಹ ಕಮಿಷನ್‌ ಪಡೆಯುತ್ತಾರೆ ಎನ್ನುವ ದೂರುಗಳಿವೆ. ಶಾಸಕರು ಅಧಿಕಾರಿಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ವಿಫಲವಾಗಿದ್ದು, ವಿಪಕ್ಷ ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ರೈತರ ಸಮಸ್ಯೆ ಸಂಬಂಧ ಪ್ರತಿಭಟನೆ ಮಾಡುತ್ತಿಲ್ಲ. ರೈತಸಂಘ ಪಿಡಿಒ ಅವರನ್ನು ವರ್ಗಾವಣೆ ಮಾಡುವ ತನಕ ತನ್ನ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಹೊಯ್ಸಳ ಗಣಪತಿಯಪ್ಪ, ದೇವರಾಜ್‌, ರವಿ ಬೆಳಂದೂರು, ಭದ್ರೇಶ್‌ ಬಾಳಗೋಡು, ನಿತ್ಯಾನಂದ, ಕನ್ನಪ್ಪ, ಚಂದ್ರು, ಮಹೇಂದ್ರ, ಕಿರಣ್‌, ಟಿ.ವಿ. ಮಲ್ಲೇಶಪ್ಪ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next