Advertisement

ಸಿಎಎ-ಎನ್‌ಆರ್‌ಸಿ ವಿರುದ್ಧ ಗುಟುರು

10:33 AM Dec 25, 2019 | Team Udayavani |

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ವಿರೋಧಿಸಿ ಅಂಜುಮನ್‌ ಇಸ್ಲಾಂ ಸಂಸ್ಥೆಯಿಂದ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಮಾವೇಶ ಮಂಗಳವಾರ ನಡೆಯಿತು.

Advertisement

ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮುಂಭಾಗದಿಂದ ನೆಹರು ಮೈದಾನದವರೆಗೆ ನಡೆಯಿತು. ಇದಕ್ಕೂ ಮೊದಲು ಡಾ| ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ 135 ಮೊಹಲ್ಲಾಗಳಿಂದ ಪ್ರತ್ಯೇಕ ಮೆರವಣಿಗೆಗಳಲ್ಲಿ ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿ ಪ್ರತಿಭಟನಾಕಾರರು ಅಲ್ಲಿಂದ ನೆಹರು ಮೈದಾನಕ್ಕೆ ಆಗಮಿಸಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಅಮಿತ್‌ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಮುಸ್ಲಿಂ ಜನಾಂಗವನ್ನು ಗುರಿಯಾಗಿಸಿಕೊಂಡು ಕಾಯ್ದೆ ಜಾರಿ ಮಾಡಿದೆ. ಕೂಡಲೇ ಸಿಎಎ ಹಾಗೂ ಎನ್‌ಆರ್‌ಸಿ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು. ನೆಹರು ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಧರ್ಮಗುರು ತಾಜುದ್ದಿನ್‌ ಖಾದ್ರಿ ಮಾತನಾಡಿ, ನಮ್ಮ ಅಸ್ತಿತ್ವಕ್ಕಾಗಿ ಹಾಗೂ ಮುಂದಿನ ಜನಾಂಗದ ಭವಿಷ್ಯಕ್ಕಾಗಿ ಈ ಹೋರಾಟ ಮಾಡಬೇಕಾಗಿದೆ.

ಇಂತಹ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಕಾಂಗ್ರೆಸ್‌, ಜೆಡಿಎಸ್‌, ದಲಿತ ಸಂಘಟನೆಗಳು, ಸಿಐಟಿಯು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದವು. ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಸಂಸದ ಪ್ರೊ| ಐ.ಜಿ. ಸನದಿ, ಅಬ್ದುಲ್‌ ಹಮೀದ್‌ ಖೈರಾತಿ, ಅಲ್ತಾಫ್‌ ಹಳ್ಳೂರು, ಸದಾನಂದ ಡಂಗನವರ, ಅಲ್ತಾಫ್ ಕಿತ್ತೂರ, ಅನೀಲಕುಮಾರ ಪಾಟೀಲ, ಪಿತಾಂಬ್ರಪ್ಪ ಬಿಳಾರ, ಗುರುನಾಥ ಉಳ್ಳಿಕಾಶಿ, ಅನ್ವರ್‌ ಮುಧೋಳ, ಬಾಬಾಜಾನ ಮುಧೋಳ, ಅಸ್ಪಾಕ್‌ ಕುಮಟಾಕರ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ನಂತರ ವೇದಿಕೆಗೆ ಆಗಮಿಸಿದ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next