ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿಗದಿತ ಅವಧಿಯ ಉದ್ಯೋಗ ತಿದ್ದುಪಡಿ ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ನಗರದಲ್ಲಿ ಪ್ರತಿಭಟಿಸಿತು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿಗದಿತ ಅವಧಿಯ ಉದ್ಯೋಗ ತಿದ್ದುಪಡಿ ಅತ್ಯಂತ ಅಪಾಯಕಾರಿಯಾಗಿದೆ. ಫಿಕ್ಸೆಡ್ ಟೀಂ ಕಾರ್ಮಿಕರ ನೇಮಕಕ್ಕೆ ಮುಕ್ತ ಅವಕಾಶ ನೀಡುವಂತೆ ಒತ್ತಾಯಿಸಿ ಸಿಐಟಿಯೂ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಧಾನಿ ಮೋದಿ ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಕಾಯಂ ವೃತ್ತಿ ಇಲ್ಲದಂತೆ ಮಾಡಲು ಹೊರಟಿದ್ದಾರೆ. 1946 ಹಾಗೂ 1947ರ ಕಾರ್ಮಿಕರ ಕಾಯ್ದೆ ಪ್ರಕಾರ ಯಾವುದೇ ಉದ್ಯೋಗಿಗಳನ್ನು ಬೇಕಾಬಿಟ್ಟಿ ಕೆಲಸದಿಂದ ತೆಗೆಯುವಂತಿಲ್ಲ. ಇದಕ್ಕಾಗಿ ಕಾರ್ಮಿಕರ ಮೇಲೆ ಹಲವು ವಿಧಾನ ಹೇರಲಾಗುತ್ತಿದ್ದು,
ಹೊರಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಂಡು ಬೇಕಾಬಿಟ್ಟಿ ದುಡಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿಯಿಂದ ನಿಗದಿತ ಅವಧಿಗೆ ಕೆಲಸಕ್ಕೆ ತೆಗೆದುಕೊಂಡ ಕಾರ್ಮಿಕರನ್ನು ಯಾವುದೇ ಪರಿಹಾರವಿಲ್ಲದೆ ಅವರನ್ನು ಕೆಲಸದಿಂದಲೇ ಕಿತ್ತೂಗೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ದೂರಿದರು.
ಮುಕ್ತ ವ್ಯಾಪಾರ ಮಾಡುವ ಹಕ್ಕನ್ನು ಬಂಡವಾಳಗಾರರಿಗೆ ನೀಡುವ ದೃಷ್ಟಿಯಿಂದ ಮೋದಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಾರ್ಮಿಕರ ಬದುಕಿನ ಮೇಲೆ ನೇರದಾಳಿ ಮಾಡುವ ಈ ಆದೇಶ ಹೊರಡಿಸಿರುವ ಮೋದಿ ಸರ್ಕಾರದ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಎನ್.ಕೆ.ಬಾಲಾಜಿರಾವ್, ಕಾರ್ಯಾಧ್ಯಕ್ಷ ಎಚ್.ಎಸ್.ಜಗದೀಶ್, ಪ್ರಧಾನ ಕಾರ್ಯದರ್ಶಿ ಜಿ.ಜಯರಾಮು, ಕಾರ್ಯದರ್ಶಿ ಶಿಶಿಕುಮಾರ್, ಮುರುಳೀಧರ್, ಮಧು, ಬಸವರಾಜು, ಈಶ್ವರ್, ಮಹದೇವಸ್ವಾಮಿ, ಶಿವಮೂರ್ತಿ ಭಾಗವಹಿಸಿದ್ದರು.