Advertisement

ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಕಾಪುವಿನಲ್ಲಿ  ಪ್ರತಿಭಟನೆ

02:35 AM Jul 12, 2017 | Harsha Rao |

ಕಾಪು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಪ್ರತಿಯೊಬ್ಬರೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಿರಿ, ನಿಮ್ಮ ಖಾತೆಗೆ ಐದು ಸಾವಿರ ರೂಪಾಯಿ ಹಣವನ್ನು ವರ್ಗಾಯಿಸುತ್ತೇವೆ ಎಂದು ನಂಬಿಸಿ ದೇಶದಾದ್ಯಂತ ಜನರು 28 ಸಾವಿರ ಕೋ. ರೂ. ಹಣವನ್ನು ಬ್ಯಾಂಕ್‌ನಲ್ಲಿರಿಸುವಂತೆ ಮಾಡಿದೆ. ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಆ ಹಣದ ಲೆಕ್ಕವನ್ನೇ ನೀಡದೇ, ಅದಕ್ಕೆ ಪ್ರತಿಫಲವನ್ನೂ ನೀಡದೇ ದೇಶದ ಜನರಿಗೆ ಮೋಸ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಆರೋಪಿಸಿದರು.

Advertisement

ಕೇಂದ್ರ ಸರಕಾರದ ಜನವಿರೋಧಿ ನೀತಿ ಮತ್ತು ರೈತರು ಮತ್ತು ರಾಷ್ಟ್ರಪಿತ ಗಾಂಧೀಜಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಕೇಂದ್ರ ಸಚಿವರ ವಿರುದ್ಧ ಕಾಪು ಬ್ಲಾಕ್‌ ಕಾಂಗ್ರೆಸ್‌ ಸಮಿತಿ (ದ) ಮತ್ತು ಕಾಪು ಬ್ಲಾಕ್‌ ಯುವ ಕಾಂಗ್ರೆಸ್‌ ಸಮಿತಿಯ ನೇತೃತ್ವದಲ್ಲಿ ಜು. 10ರಂದು ಕಾಪು ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್‌ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎಲ್ಲಿದೆ ಸಬ್‌ ಕಾ ವಿಕಾಸ್‌ 
ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಸಬ್‌ ಕಾ ವಿಕಾಸ್‌ …, ಚಾಯ್‌ಪೇ ಚರ್ಚಾ, ಮನ್‌ ಕೀ ಬಾತ್‌, ಕೃಷಿ ಮಂಚ್‌ ಇತ್ಯಾದಿಗಳ ಹೆಸರಿನಲ್ಲಿ ಜನರಿಗೆ ಆಮಿಷ ತೋರಿಸಿ, ಜನರನ್ನು ಮರುಳು ಮಾಡುತ್ತಿದೆ. ಬಳಿಕ ಬೆಂಬಲಿಸಿದ ಜನರನ್ನೇ ಲೂಟಿ ಮಾಡಲು ಹೊರಟಿದೆ. ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಭರವಸೆಗಳನ್ನು ಬದಿಗಿರಿಸಿ, ಅಧಿಕಾರಕ್ಕೆ ಬಂದ ಅನಂತರವೂ ವಿವಿಧ ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಜನರೇ ದಂಗೆಯೇಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ಸಾಧನೆಯೇನು ? 
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ 8,162 ಕೋ. ರೂ. ರೈತರ ಸಾಲ ಮನ್ನಾ ಮಾಡಿದೆ. ರಾಜ್ಯ ಸರಕಾರ ವಿವಿಧ ಯೋಜನೆಗಳ ಮೂಲಕ ಗ್ರಾಮೀಣ ಜನರ ಪಾಲಿಗೆ ಆಶಾಕಿರಣವಾಗಿ ಕೆಲಸ ಮಾಡುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಶೇ. 100ರಷ್ಟು ಈಡೇರಿಸಿದೆ. ಆದರೆ ಮೂರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರ ಗುರುತಿಸುವ ಯಾವುದಾದರೂ ಯೋಜನೆಯನ್ನು ರಾಜ್ಯಕ್ಕೆ ನೀಡಿದೆಯೇ ?, ರಾಜ್ಯದಲ್ಲಿ ಸಿದ್ಧರಾಮಯ್ಯನವರ ಸಾಧನೆ ಏನು ?, ಕೇಂದ್ರದಲ್ಲಿ ಮೋದಿಯವರ ಸಾಧನೆಯೇನು ?, ಎನ್ನುವುದರ ಬಗ್ಗೆ ಬಿಜೆಪಿ ಉತ್ತರ ನೀಡಬೇಕಿದೆ ಎಂದರು.

ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಯು. ಆರ್‌. ಸಭಾಪತಿ, ಕೆಪಿಸಿಸಿ ಕಾರ್ಯದರ್ಶಿ ಎಂ. ಎ. ಗಫೂರ್‌, ಜಿಲ್ಲಾ ಮುಖಂಡ ಅಮೃತ್‌ ಶೆಣೈ ಸಂದಭೋìಚಿತವಾಗಿ ಮಾತನಾಡಿದರು.

Advertisement

ಕಾಪು ಪುರಸಭಾಧ್ಯಕ್ಷೆ ಕು| ಸೌಮ್ಯಾ ಎಸ್‌., ಜಿ. ಪಂ. ಸದಸ್ಯ ವಿಲ್ಸನ್‌ ರೋಡ್ರಿಗಸ್‌, ಜಿಲ್ಲಾ ಮುಖಂಡರಾದ ಸರಸು ಡಿ. ಬಂಗೇರ, ಡಾ| ದೇವಿಪ್ರಸಾದ್‌ ಶೆಟ್ಟಿ, ಅಶೋಕ್‌ ಕೊಡವೂರು, ಎಂ. ಪಿ. ಮೊಯ್ದಿನಬ್ಬ, ಶಶಿಧರ್‌ ಶೆಟ್ಟಿ, ಜಿಲ್ಲಾಧ್ಯಕ್ಷ ವಿಶ್ವಾಸ್‌ ಅಮೀನ್‌, ಮಾಜಿ ಮಂಡಲ ಪ್ರಧಾನ ಶೀÅಕರ ಸುವರ್ಣ, ಮೀನುಗಾರಿಕಾ ನಿಗಮದ ನಿರ್ದೇಶಕ ದೀಪಕ್‌ ಕುಮಾರ್‌ ಎರ್ಮಾಳ್‌, ಕ್ರಿಶ್ಚಿಯನ್‌ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್‌ ಜತ್ತನ್ನ, ಎಪಿಎಂಸಿ ಸದಸ್ಯ ನವೀನ್‌ಚಂದ್ರ ಸುವರ್ಣ,ಪಕ್ಷದ ಕಾಪು ಬ್ಲಾಕ್‌ ಮುಖಂಡರಾದ ವಿನಯ ಬಲ್ಲಾಳ್‌, ರಾಜೇಶ್‌ ರಾವ್‌ ಪಾಂಗಾಳ, ವೈ. ಸುಕುಮಾರ್‌, ಮೆಲ್ವಿನ್‌ ಡಿ’ಸೋಜಾ, ಎಚ್‌. ಅಬ್ದುಲ್ಲಾ, ಗುಲಾಂ ಮಹಮ್ಮದ್‌, ಕಾಂಗ್ರೆಸ್‌ ಪಕ್ಷದ ಬೆಂಬಲಿತ ವಿವಿಧ ಗ್ರಾ. ಪಂ. ಅಧ್ಯಕ್ಷ – ಉಪಾಧ್ಯಕ್ಷರು, ತಾಲೂಕು ಪಂಚಾಯತ್‌, ಪುರಸಭೆ ಮತ್ತುಗ್ರಾ.ಪಂ. ಸದಸ್ಯರು, ಮಾಜಿ ಸದಸ್ಯರು, ವಿವಿಧ ಸ್ಥಾನೀಯ ಸಮಿತಿಯ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಯುವ ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ ಅಬ್ದುಲ್‌ ಅಜೀಜ್‌ ವಂದಿಸಿದರು. ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next