ಚಾಮರಾಜನಗರ: ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ರೈತ ವಿರೋಧಿ ನೀತಿಯನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೊಳ್ಳೇಗಾಲದಿಂದ ಬೈಕ್ ರ್ಯಾಲಿ ಮೂಲಕ ಆಗಮಿಸಿದ ರೈತರು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಧರಣಿ ಪ್ರತಿಭಟನೆ ನಡೆಸಿದರು.
ಬೈಕ್ ರ್ಯಾಲಿಯು ಕೊಳ್ಳೇಗಾಲ ಪಟ್ಟಣದಿಂದ ಹೊರಟು ಮುಡಿಗುಂಡ, ಉತ್ತಂಬಳ್ಳಿ, ಮಾಂಬಳ್ಳಿ, ಅಗರ, ಮದ್ದೂರು, ಯಳಂದೂರು, ಸಂತೇಮರಳ್ಳಿ ಮೂಲಕ ಚಾಮರಾಜನಗರಕ್ಕೆ ಆಗಮಿಸಿತು.
ಬಾಕಿ ಹಣ ಕೊಡಲು ಆಗ್ರಹ: ರೈತರ ಶ್ರಮಕ್ಕೆ ಬೆಲೆ ಕೊಡದ ಬಣ್ಣಾರಿ ಅಮ್ಮನ್ ಆಡಳಿತ ಮಂಡಳಿಯ ಶರವಣ ಮತ್ತು ಮಹಾದೇವಪ್ಪ ಅವರನ್ನು ಕಾರ್ಖಾನೆಯಿಂದ ವರ್ಗಾವಣೆ ಮಾಡಬೇಕು. ಕಟಾವಾಗಿ ರೈತರ ಜಮೀನಿನಲ್ಲಿ ಬಿದ್ದು ಒಣಗುತ್ತಿ ರುವ ಕಬ್ಬಿಗೆ ವೈಜ್ಞಾನಿಕವಾಗಿ ನಷ್ಟ ತುಂಬಿಕೊಡಬೇಕು. ಸರ್ಕಾರವು ನಿಗಧಿಪಡಿಸಿರುವ ಟನ್ಗೆ 150 ರೂ.ನಂತೆ ನೀಡಬೇಕಾಗಿರುವ ಬಾಕಿ ಹಣವನ್ನು ಕೊಡಬೇಕು. ಕಾರ್ಖಾನೆಯವರು ಸರ್ಕಾರಕ್ಕೆ ನೀಡುತ್ತಿರುವ ಸಕ್ಕರೆ ಇಳುವರಿ ವರದಿಯಲ್ಲಿ ರೈತರಿಗೆ ಮಾಡುತ್ತಿರುವ ಮೋಸವನ್ನು ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Related Articles
ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸಿ: ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ರೈತರಿಂದ ಮನವಿ ಆಲಿಸಿ ಮಾತನಾಡಿ, ಈ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರೈತ ಮುಖಂಡರೊಂದಿಗೆ ಸಭೆ ಕರೆಯಲಾಗಿದೆ. ಮಂಗಳವಾರದ ಸಭೆಗೆ ನೀವು ಆಗಮಿಸಿ ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡುವಂತೆ ಸಲಹೆ ನೀಡಿದರು.
ಬಳಿಕ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನಂಜುಂಡಸ್ವಾಮಿ, ಲೋಕೇಶ್, ಮಹದೇವಸ್ವಾಮಿ, ಶಿವಸ್ವಾಮಿ, ಶಶಿಕಾಂತೇಗೌಡ, ನಾಗರಾಜು, ಬಾಬು, ಪಾಷಾ, ತೇಜಸ್, ಜವರನಾಯಕ, ಸುಬ್ಬಣ್ಣ, ಮಹದೇವಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು