Advertisement
“ಫೋನಿ’ ಚಂಡಮಾರುತ ಕಾರಣ ಪೋರ್ಟ್ಬ್ಲೇರ್ನ ಸಾವರ್ಕರ್ ವಿಮಾನ ನಿಲ್ದಾಣದಿಂದ ಕೊಲ್ಕತ್ತಾಗೆ ತೆರಳುವ ವಿಮಾನಗಳು ಒಂದು ದಿನದ ಮಟ್ಟಿಗೆ ರದ್ದಾಗಿವೆ. ಮೇ 5ರಿಂದ ಎಂದಿನಂತೆ ವಿಮಾನ ಹಾರಾಟವಿದ್ದರೂ, ಆ ದಿನ ಬುಕ್ಕಿಂಗ್ ಮಾಡಿದ್ದ ಪ್ರಯಾಣಿಕರಿಗೆ ಪರ್ಯಾಯವಾಗಿ ಯಾವುದೇ ಬುಕ್ಕಿಂಗ್ ಮಾಡಿಕೊಡದೆ ಮುಂದಿನ ಗುರುವಾರದವರೆಗೂ ಕಾಯಬೇಕು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಈ ಕುರಿತು ಪ್ರವಾಸಿಗರ ತಂಡದಲ್ಲಿದ್ದ ಮೂಡಿಗೆರೆ ಸಿವಿಲ್ ನ್ಯಾಯಾಧೀಶರಾದ ಶಶಿಕಲಾ ಅವರು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು, ರಾಜ್ಯ ಮುಖ್ಯಕಾರ್ಯದರ್ಶಿಗಳು ವಿಶೇಷ ವಿಮಾನದ ವ್ಯವಸ್ಥೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಶಶಿಕಲಾ, ಪೋರ್ಟ್ಬ್ಲೇರ್ನಲ್ಲಿ ಮಳೆಯೂ ಹೆಚ್ಚಿದ್ದು, ಸದ್ಯ ಹೋಟೆಲ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇವೆ.
ರದ್ದಾಗಿದ್ದ ವಿಮಾನಕ್ಕೆ ಪರ್ಯಾಯ ಬುಕ್ಕಿಂಗ್ ನೀಡುವ ಬದಲು ಹೆಚ್ಚು ಹಣ ಕೇಳಿ ದೌರ್ಜನ್ಯ ನಡೆಸುತ್ತಿದ್ದಾರೆ. ಪ್ರವಾಸಿಗರಿಗೆ ಆರ್ಥಿಕ ಸಮಸ್ಯೆ ಇದ್ದು, ಎಲ್ಲರಿಗೂ ದುಪ್ಟಟ್ಟು ಹಣ ನೀಡಲು ಸಾಧ್ಯವಿಲ್ಲ. ಇನ್ನು ಸ್ಪೈಸ್ಜೆಟ್ ಕಂಪನಿ ಗುರುವಾರ ಬುಕ್ಕಿಂಗ್ ನೀಡಿದರೆ ಅಲ್ಲಿಯವರೆಗೂ ನಮ್ಮ ತಂಡ ಎಲ್ಲಿ ಉಳಿಯಬೇಕು. ಇಲ್ಲಿನ ಹೋಟೆಲ್ಗಳಲ್ಲಿ ಒಂದು ದಿನ ತಂಗಲು ಕನಿಷ್ಠ 2000 ರೂ.ಇದೆ. ಒಂದು ಹೊತ್ತಿನ ಊಟಕ್ಕೆ 300 ರೂ.ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅನುಕೂಲ ಕಲ್ಪಿಸಿದ ಸಿಎಂ: ಈ ಮಧ್ಯೆ, ಪ್ರವಾಸದಲ್ಲಿದ್ದ ಮೂಡಿಗೆರೆಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಶಿಕಲಾ ಅವರು ತಮ್ಮ ಸಮಸ್ಯೆಯನ್ನು ದೂರವಾಣಿ ಮೂಲಕ ಮುಖ್ಯಮಂತ್ರಿ ಕಚೇರಿಯ ಗಮನಕ್ಕೆ ತಂದಿದ್ದರು.
ಕೂಡಲೇ ಮುಖ್ಯಮಂತ್ರಿಯವರು ಮುಖ್ಯ ಕಾರ್ಯದರ್ಶಿ ಹಾಗೂ ದೆಹಲಿಯಲ್ಲಿರುವ ನಿವಾಸಿ ಆಯುಕ್ತರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿದ ದೆಹಲಿಯ ನಿವಾಸಿ ಆಯುಕ್ತರು ಸಮಸ್ಯೆ ಬಗೆಹರಿಸಿದ್ದಾರೆ. ಭಾನುವಾರ ಬೆಳಗ್ಗೆ ವಿಮಾನದಲ್ಲಿ ಬೆಂಗಳೂರಿಗೆ ಹಿಂತಿರುಗಲು ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.