Advertisement

ಮನುಕುಲದ ಒಳಿತಿಗೆ ಅರಣ್ಯ ಸಂರಕ್ಷಿಸಿ

04:56 PM Oct 26, 2018 | |

ದಾವಣಗೆರೆ: ಪ್ರಸ್ತುತ ನಾಗರಿಕತೆ-ಅಭಿವೃದ್ಧಿ ಸೋಗಲ್ಲಿ ಅರಣ್ಯ ಹಾಗೂ ಘಟ್ಟಪ್ರದೇಶಗಳನ್ನು ನಾಶ ಮಾಡುತ್ತಿದ್ದು, ಮನುಕುಲದ ಒಳಿತಿಗಾಗಿ ಅವುಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

Advertisement

ಗುರುವಾರ, ನಗರದ ಹದಡಿ ರಸ್ತೆಯಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಪಾರಂಪರಿಕ ವೈದ್ಯ ಪರಿಷತ್‌, ನವದೆಹಲಿಯ ರಾಷ್ಟ್ರೀಯ ಔಷಧಿ ಸಸ್ಯಗಳ ಪ್ರಾಧಿಕಾರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ಮತ್ತು ಮೂಲಿಕಾ ಉತ್ಸವ-2018ರ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಕೈಗಾರಿಕೆ, ನಾಗರಿಕತೆ, ಅಭಿವೃದ್ಧಿ ಹೆಸರಲ್ಲಿ ಇಂದು ಅರಣ್ಯ ಮತ್ತು ಅಪರೂಪದ ಔಷಧಿ ಸಸ್ಯ ಬೆಳೆಯುವ ಪ್ರರ್ವತ ಶ್ರೇಣಿಗಳ ನಾಶ ಮಾಡಲಾಗುತ್ತಿದ್ದು, ಇದು ಆತಂಕಕಾರಿ ಸಂಗತಿ ಎಂದರು.

ತುಂಬಾ ಗಂಭೀರವಾದ ಆರೋಗ್ಯ ಸಮಸ್ಯೆಯನ್ನೂ ಸಹ ಭಾರತೀಯ ಪ್ರಾಚೀನ ವೈದ್ಯಪದ್ಧತಿಯಿಂದ ಗುಣಪಡಿಸಲಾಗಿದೆ. ಈ ವೈದ್ಯಪದ್ಧತಿಗೆ ಬಳಸುವ ಗಿಡಮೂಲಿಕೆ, ಔಷಧಿ ಸಸ್ಯಗಳು ದೊರೆಯುವುದು ಅರಣ್ಯ ಹಾಗೂ ಪಶ್ಚಿಮಘಟ್ಟ, ಇತರೆ ಪರ್ವತ ಶ್ರೇಣಿಗಳಲ್ಲಿ. ಆದರೆ, ನಾವು ಅಭಿವೃದ್ಧಿ ಸೋಗಲ್ಲಿ ಇವುಗಳನ್ನು ನಾಶಮಾಡುತ್ತಿದ್ದೇವೆ. ಅದಕ್ಕೆ ಡಾ| ಕಸ್ತೂರಿರಂಗನ್‌ ವರದಿ ಜಾರಿಗೆ ತರುವ ಮೂಲಕ ಪಶ್ಚಿಮಘಟ್ಟ ಉಳಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದರು.

ಹಳ್ಳಿಗಳಲ್ಲಿ ಈ ಹಿಂದೆ ಯಾವುದೇ ಪ್ರತಿಫಲ ಆಪೇಕ್ಷಿಸದೇ ನಾಟಿವೈದ್ಯರು ಔಷಧಿ ನೀಡುತ್ತಿದ್ದರು. ಸಣ್ಣ-ಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಜನರು ಆಸ್ಪತ್ರೆಗೆ ಬರುತ್ತಿರಲಿಲ್ಲ. ಕಾಲಕ್ರಮೇಣ ಆ ವೈದ್ಯರ ಸಂಖ್ಯೆ ಕಡಿಮೆಯಾಗಿರುವುದು ಸಹ ಆತಂಕದ ವಿಷಯ ಎಂದ ಅವರು, ಪ್ರಸ್ತುತ ಭಾರತೀಯರು ವಿದೇಶಿ ಚಿಕಿತ್ಸಾ ಪದ್ಧತಿಗೆ ಮಾರುಹೋಗಿದ್ದಾರೆ. ಆದರೆ, ವಿದೇಶಿಯರು ಭಾರತೀಯ ಪ್ರಾಚೀನ ವೈದ್ಯಪದ್ಧತಿ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಪ್ರಾಚೀನ ವೈದ್ಯಪದ್ಧತಿ ಉಳಿಸಿ, ಬೆಳೆಸಲು ಸರ್ಕಾರದ ಜತೆಗೆ ಸಮುದಾಯದ ಪ್ರೋತ್ಸಾಹವೂ ಬೇಕಿದೆ ಎಂದು ತಿಳಿಸಿದರು. 

ಭಾರತೀಯ ಯೋಗ ಪದ್ಧತಿ ಈಗ ವಿಶ್ವಮಾನ್ಯತೆ ಪಡೆದಿದ್ದು, ಮುಂದೆ ಪಾರಂಪರಿಕ ವೈದ್ಯಪದ್ಧತಿ ಸಹ ವಿಶ್ವಮಾನ್ಯತೆ ಪಡೆಯಲಿದೆ. ಕರ್ನಾಟಕದ ಮಧ್ಯದಲ್ಲಿರುವ ದಾವಣಗೆರೆಯಲ್ಲಿ ಪರಂಪರಿಕ ವೈದ್ಯಪದ್ಧತಿ ಕೇಂದ್ರ ಸ್ಥಾಪಿಸಿದಲ್ಲಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಆಶಿಸಿದರು.

Advertisement

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ.ರವೀಂದ್ರನಾಥ್‌ ಮಾತನಾಡಿ, ಈಗಿನ ಪರಿಸ್ಥಿತಿಯಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೂ ದೊಡ್ಡ ಆಸ್ಪತ್ರೆಗೆ ಹೋಗಬೇಕಿದೆ. ಇನ್ನು ಗಂಭೀರ ಕಾಯಿಲೆಯ ಚಿಕಿತ್ಸೆಗೆ 10-15 ಲಕ್ಷ ರೂ. ವೆಚ್ಚವಾಗಲಿದೆ. ಬಡವರಿಗೆ ಇಷ್ಟೊಂದು ಹಣ ಕೊಡಲು ಆಗುವುದಿಲ್ಲ. ಹಿಂದೆಲ್ಲಾ ಹಾವು-ಚೇಳು ಕಡಿತಕ್ಕೆ ಹಳ್ಳಿಗಳಲ್ಲೇ ಔಷಧಿ ಕೊಡುತ್ತಿದ್ದರು. ಬಲು ದುಬಾರಿಯಾದ ಈ ಕಾಲದಲ್ಲಿ ಸಾಮಾನ್ಯ ಜನರಿಗೂ ಚಿಕಿತ್ಸೆ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಪಾರಂಪರಿಕ ವೈದ್ಯರು ಚಿಂತಿಸಬೇಕು ಎಂದರು.

ಪಾರಂಪರಿಕ ವೈದ್ಯಪದ್ಧತಿ ಉಳಿಸಿ, ಬೆಳಸಲು ಮಧ್ಯ ಕರ್ನಾಟಕದ ದಾವಣಗೆರೆ ಬಳಿ 10 ಎಕರೆ ಜಾಗದ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಾವಣಗೆರೆ ನಗರದ ಅಕ್ಕ ಪಕ್ಕ ಒಂದು ಎಕರೆ ಸಿಗುವುದು ಸಹ ಕಷ್ಟ. ಜಾಗದ ಬೆಲೆ ಅಷ್ಟೊಂದು ಏರಿದೆ. ನಿಮಗೆ ಸಹಾಯ ಮಾಡಲು ನನ್ನಿಂದ ಆಗುತ್ತೂ ಇಲ್ಲವೋ ಗೊತ್ತಿಲ್ಲ. ಆದರೂ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ಆದಿಚುಂಚನಗರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಹೆಬ್ಟಾಳು ವಿರಕ್ತಮಠದ ಶ್ರೀಮಹಾಂತ ರುದ್ರೇಶ್ವರ ಸ್ವಾಮೀಜಿ, ಪಾರಿಂಪರಿಕ ವೈದ್ಯ ಪರಿಷತ್‌ ಸಂಸ್ಥಾಪಕ ಪ್ರೊ. ಹರಿರಾಮಮೂರ್ತಿ, ಡಾ.ಸತ್ಯನಾರಾಯಣಭಟ್‌, ಟ್ರಾನ್ಸ್‌ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಪ್ರದ್ಮಶ್ರೀ ಡಾ| ದರ್ಶನ್‌ ಶಂಕರ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಕೆ.ಆರ್‌.ಜಯಶೀಲ, ಜಾರ್ಖಂಡ್‌ನ‌ ಪ್ರಪುಲ್ಲಕುಮಾರ್‌ ಇತರರು ವೇದಿಕೆಯಲ್ಲಿದ್ದರು.

ಪಾರಿಂಪರಿಕ ವೈದ್ಯ ಪರಿಷತ್‌ನ ರಾಜ್ಯಾಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ ಸ್ವಾಗತಿಸಿ, ಪಾರಿಂಪರಿಕ ವೈದ್ಯ ಪರಿಷತ್‌ ಬೆಳೆದು ಬಂದ ಬಗೆ ಕುರಿತು ಮಾಹಿತಿ ನೀಡಿದರು. ಸುದೀರ್ಘ‌ ಕಾಲ ಪಾರಂಪರಿಕ ವೈದ್ಯ ಪದ್ಧತಿಯಿಂದ ಜನಸೇವೆಗೈದ ಗದಗ ಜಿಲ್ಲೆ ಬಸವರಾಜಪ್ಪ ಎಂ ಕೊಂಚಿಗೇರಿ, ಹಾಸನದ ಸತ್ಯನಾರಾಯಣ ಶೆಟ್ಟಿ ಹಾಗೂ ಶಿವಮೊಗ್ಗ ಜಿಲ್ಲೆ ಗೌತಮಪುರದ ಕೆ.ಟಿ.ದೇವಪ್ಪ ಇವರಿಗೆ ಪಾರಂಪರಿಕ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಇಡೀ ಜಗತ್ತೇ ತಿರುಗಿ ನೋಡಂಗೆ ಮಾಡ್ತೀವಿ ಶ್ರೀಮಂತ ಆರೋಗ್ಯ ಪರಂಪರೆ ಬೆಳೆಸಲು ಪಾರಂಪರಿಕ ವೈದ್ಯಪದ್ಧತಿ ಸಹಕಾರಿ. ಆಲೋಪಥಿ ವೈದ್ಯ ಪದ್ಧತಿಯಿಂದ ಶೀಘ್ರ ಗುಣಪಡಿಸಲಾಗದ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ಪಾರಂಪರಿಕ ವೈದ್ಯ ಪದ್ಧತಿಯಿಂದ ಗುಣಪಡಿಸಲಾಗಿದೆ. ದಾವಣಗೆರೆ ಸಮೀಪದಲ್ಲೇ ಸರ್ಕಾರ ಪಾರಂಪರಿಕ ವೈದ್ಯ ಪರಿಷತ್‌ಗೆ 10 ಎಕರೆ ಜಾಗ ಕೊಟ್ಟಲ್ಲಿ ಇಡೀ ಜಗತ್ತೇ ಈ ನಗರದತ್ತ ತಿರುಗಿ ನೋಡುವಂತೆ ಪಾರಂಪರಿಕ ವೈದ್ಯಪದ್ಧತಿ ಅಭಿವೃದ್ಧಿ ಪಡಿಸುತ್ತೇವೆ. 

ಗಿಡಮೂಲಿಕೆ-ಔಷಧೀಯ ಸಸ್ಯ ಬೆಳೆಸಲು ಸರ್ಕಾರ ಜಾಗ ಮಂಜೂರು ಮಾಡಬೇಕಿದೆ. ಈ ಪ್ರದೇಶದಲ್ಲಿ ಪಾರಂಪರಿಕ ವೈದ್ಯಪದ್ಧತಿ ಇನ್ನಷ್ಟು ಬೆಳೆದರೆ ಬಡಜನರಿಗೂ ಅನುಕೂಲವಾಗಲಿದೆ.  ನೇರ್ಲಿಗೆ ಗುರುಸಿದ್ದಪ್ಪ, ಪಾರಂಪರಿಕ ವೈದ್ಯ ಪರಿಷತ್‌ ರಾಜ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next