Advertisement

ತಡೆಗೋಡೆ ನಿರ್ಮಿಸಿ ಅಂಗನವಾಡಿ ಕೇಂದ್ರದ ರಕ್ಷಣೆ

11:27 AM Aug 22, 2022 | Team Udayavani |

ಕಾರ್ಕಳ: ಕಾರ್ಕಳ- ಉಡುಪಿ ಹೆದ್ದಾರಿಯ ನೀರೆ ಬಳಿ ಅಂಗನವಾಡಿ ಕೇಂದ್ರದ ಕಾಂಪೌಂಡ್‌ ಬಳಿ ಜು. 13ರಂದು ಸುರಿದ ಮಳೆಗೆ ಅಂಗನವಾಡಿ ಕೇಂದ್ರದ ಕಾಂಪೌಂಡ್‌ ಕುಸಿದಿತ್ತು. ಅಲ್ಲದೆ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇತ್ತು. ಇದೀಗ ಈ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಿ ಭೂಕುಸಿತ ತಡೆಯುವ ಪ್ರಯತ್ನ ನಡೆಸಲಾಗಿದೆ.

Advertisement

ಹೆದ್ದಾರಿ ಪಕ್ಕದಲ್ಲೇ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ನೀರೆ ಅಂಗನವಾಡಿ ಕೇಂದ್ರವಿದೆ. ಇಲ್ಲಿ 10 ಮಂದಿ ಪುಟಾಣಿಗಳು ಇದ್ದಾರೆ. ಅಂಗನವಾಡಿ ಕೇಂದ್ರ ಹೆದ್ದಾರಿ ಬದಿಯಲ್ಲೇ ಇದ್ದು ಕೇಂದ್ರದ ಮುಂಭಾಗದ ಕಾಂಪೌಂಡ್‌ ಇರುವಲ್ಲಿ ಮಳೆಯಿಂದ ಭೂಕುಸಿತ ನಡೆದು ಅಪಾಯ ತಂದೊಡ್ಡುವ ರೀತಿಯಲ್ಲಿತ್ತು. ಅಂದು ಕುಸಿತ ನಡೆದ ಸಂದರ್ಭ ಸ್ಥಳಕ್ಕೆ ನೀರೆ ಗ್ರಾ.ಪಂ. ಪಿಡಿಒ ಅಂಕಿತ ಹಾಗೂ ಇತರ ಅಧಿಕಾರಿಗಳು ತೆರಳಿ ಪರಿಶೀಲಿಸಿ, ಕುಸಿತಗೊಂಡ ಜಾಗದ ಮಣ್ಣು ಅನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ನೀರು ಹರಿದು ಹೋಗುವಂತೆ ಮಾಡಿ ಕುಸಿತ ಹೆಚ್ಚಾಗದಂತೆ ತಡೆಯುವ ತಾತ್ಕಾಲಿಕ ಕೆಲಸವನ್ನು ಗ್ರಾ.ಪಂ. ವತಿಯಿಂದ ಮಾಡಲಾಗಿತ್ತು. ಇದರಿಂದ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದರೂ ಭೀತಿ ಹಾಗೆ ಮುಂದುವರಿದಿತ್ತು.

ಸಂಭವನೀಯ ಅಪಾಯದ ಮುನ್ಸೂಚನೆ ಅರಿತು ಇದೀಗ ಅಂಗನವಾಡಿ ಕಾಂಪೌಂಡ್‌ ಇರುವ ಸ್ಥಳದಲ್ಲಿ ವಿಪತ್ತು ನಿರ್ವಹಣೆ ಅನುದಾನ ಬಳಸಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ.

ಈ ಹಿಂದೆ ಉಡುಪಿ-ಕಾರ್ಕಳ ಜಿಲ್ಲಾ ಮುಖ್ಯ ರಸ್ತೆ ಆಗಿತ್ತು. ಬಳಿಕ ಈ ರಸ್ತೆಯನ್ನು ಪೇತ್ರಿ-ಹಿರಿಯಡಕ-ಕಾರ್ಕಳ ರಾಜ್ಯ ಹೆದ್ದಾರಿ ಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಹೆದ್ದಾರಿ ಬದಿಯಲ್ಲಿ ಇದ್ದ ಅಂಗನವಾಡಿ ಕಟ್ಟಡದ ಕೆಳಭಾಗ ಕುಸಿಯುತ್ತ ಮುಂದುವರಿದಲ್ಲಿ ಅಂಗನವಾಡಿಗೆ ಹಾನಿಯಾಗುವ ಸಂಭವವಿದೆ. ಪುಟಾಣಿ ಮಕ್ಕಳಿಗೆ ಸುರಕ್ಷತೆಯ ಭಯ ಕೂಡ ಎದುರಾಗುವ ಬಗ್ಗೆ ಹಾಗೂ ಹೆದ್ದಾರಿಗೂ ಮಣ್ಣು ಕುಸಿಯುವ ಭೀತಿಯಿದ್ದು, ಸಂಚಾರಕ್ಕೂ ತೊಡಕಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಅಂಗನವಾಡಿ ಕೇಂದ್ರದ ಮೇಲಕ್ಕೆ ಸರಕಾರಿ ಪ್ರಾಥಮಿಕ ಶಾಲೆಯೂ ಇದೆ. ಸುರಕ್ಷಿತ ಕ್ರಮವಾಗಿ ಗುಡ್ಡ ಕುಸಿತ ಮುಂದುವರಿಯದಂತೆ ಗಟ್ಟಿ ತಡೆಗೋಡೆ ನಿರ್ಮಿಸುವ ಆವಶ್ಯಕತೆಯಿದೆ. ಎನ್ನುವ ಕುರಿತು ಅಂದು ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಲಾಗಿತ್ತು. ಇದೆಲ್ಲದರ ಫ‌ಲವೆಂಬಂತೆ ಅಂಗನವಾಡಿ, ಕಾಂಪೌಂಡ್‌ ಇರುವಲ್ಲಿ ತಡೆಗೋಡೆ ನಿರ್ಮಾಣವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next