Advertisement

ಭಡ್ತಿ ಮೀಸಲಾತಿ: ಸಾಮಾಜಿಕ ನ್ಯಾಯವೂ, ಸ್ವಾಭಾವಿಕ ನ್ಯಾಯವೂ

10:09 AM Nov 29, 2017 | Team Udayavani |

ಭಡ್ತಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಖುದ್ದು ಕೇಂದ್ರ ಸರಕಾರವೇ ಒಪ್ಪಿಕೊಳ್ಳಲು ಸಿದ್ಧವಿಲ್ಲ! 1992ರಷ್ಟು ಹಿಂದೆಯೇ ಸರ್ವೋಚ್ಚ ನ್ಯಾಯಾಲಯ ಭಡ್ತಿ ಮೀಸಲಾತಿ ಕ್ರಮ ಸಂವಿಧಾನ ಬಾಹಿರವೆಂದು ಇಂದ್ರಾ ಸಾಹಿ° ಮತ್ತು ಭಾರತ ಸರಕಾರದ ನಡುವಿನ ಪ್ರಕರಣದಲ್ಲಿ ಅಭಿಪ್ರಾಯಪಟ್ಟಿತ್ತು. ಆದರೆ 2001ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ, ಸಂವಿಧಾನದಲ್ಲಿ 16 (4ಎ) ವಿಧಿಯನ್ನು ಸೇರ್ಪಡೆಗೊಳಿಸಿ 1995ರಿಂದ ಅನ್ವಯವಾಗುವಂತೆ ಭಡ್ತಿ ಮೀಸಲಾತಿಗೆ ಅವಕಾಶ ಕಲ್ಪಿಸಿತ್ತು. 

Advertisement

“”ಸಂವಿಧಾನವನ್ನು ಎತ್ತಿ ಹಿಡಿಯುವೆನೆಂಬ ನನ್ನ ಪ್ರಮಾಣ ವಚನವನ್ನು ಇಂದು ಮತ್ತೆ ನವೀಕರಿಸುತ್ತಿದ್ದೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರವಿವಾರ, ರಾಷ್ಟ್ರೀಯ ಕಾನೂನು ದಿನಾಚರಣೆಯ ಸಂದರ್ಭದ ಸಂದೇಶದಲ್ಲಿ ಒತ್ತಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಹೊಸದಿಲ್ಲಿಯಲ್ಲಿ ಏರ್ಪಡಿಸ ಲಾದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳೆಂಬ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಸಂವಿಧಾನದ ಬೆನ್ನೆಲುಬಾ ಗಿದ್ದು, ಇವು ಮೂರೂ ತಮ್ಮ ಅಧಿಕಾರದ ಸಮನ್ವಯ ಸಮ ತೋಲನದೊಂದಿಗೆ ಕಾರ್ಯಾಚರಿಸಬೇಕೆಂದು ಕರೆ ನೀಡಿದ್ದಾರೆ.

ಇಂಥ ಹೇಳಿಕೆಗಳು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸು ವಂಥವು. “”ಈಗ ಶಾಸಕಾಂಗ ಹಾಗೂ ಕಾರ್ಯಾಂಗಗಳು ನ್ಯಾಯಾಂಗಕ್ಕೆ ಗೌರವ ಕೊಡುತ್ತಿಲ್ಲವೆ?” ಎಂಬ ಗೊಂದಲದ ಪ್ರಶ್ನೆ ಅವರಲ್ಲಿ ಮೂಡುವಂತಾಗಿದೆ. ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ನ್ಯಾಶನಲ್‌ ಜ್ಯುಡಿಶಿಯಲ್‌ ಅಪಾಯಿಂಟ್‌ಮೆಂಟ್ಸ್‌ ಕಮಿಶನ್‌-ಎನ್‌ಜೆಎಸಿ ಕಾಯ್ದೆಯನ್ನು ರದ್ದುಪಡಿಸಿದಂದಿನಿಂದ ಮೋದಿ ಸರಕಾರ  ಸರ್ವೋಚ್ಚ ನ್ಯಾಯಾಲಯದೊಂದಿಗೆ ವಿರಸ ಭಾವ ಹೊಂದಿದೆ. ಇನ್ನೊಂದೆಡೆ, ಸಿದ್ದರಾಮಯ್ಯ ಸರಕಾರ  “ಕರ್ನಾಟಕದ ಸರಕಾರಿಹುದ್ದೆ ಮೀಸಲಾತಿ ಆಧಾರದಲ್ಲಿ ಭಡ್ತಿ ಪಡೆದ ಉದ್ಯೋಗಿಗಳ ಅನುಷಂಗಿಕ ಸೇವಾ ಹಿರಿತನ ಪರಿಗಣನೆ ವಿಸ್ತರಣೆ ಮಸೂದೆ’ (ಎಸ್‌ಸಿ-ಎಸ್‌ಟಿ ಮೀಸಲಾತಿ ಮಸೂದೆ)ಗೆ ರಾಜ್ಯ ವಿಧಾನ ಮಂಡಲದಲ್ಲಿ ಅಂಗೀ ಕಾರ ಮುದ್ರೆ ದೊರಕಿಸಿಕೊಂಡಿದೆ. ಮತ್ತೂಂದೆಡೆ ಸರ್ವೋಚ್ಚ ನ್ಯಾಯಾಲಯ ಇದೇ ವಿಷಯದ ಪರಿಶೀಲನಾ ಪ್ರಕ್ರಿಯೆಯಲ್ಲಿ ವ್ಯಸ್ತವಾಗಿದೆ. ಹೆಚ್ಚೇನು, ನಮ್ಮ ರಾಜ್ಯ ಸರಕಾರ  ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಒಪ್ಪದೆ, ಇದನ್ನು ಮರು ಪರಿಶೀಲಿಸುವಂತೆ ಕೋರಿ ಅದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ವಿಷಯ ನ್ಯಾಯಾಲಯದ ಮುಂದಿರುವುದರಿಂದ ಈ ವಿಷಯವನ್ನು ಸದ್ಯ ಪರಿಶೀಲಿಸತಕ್ಕದ್ದಲ್ಲವೆಂಬ ನಿಲುವನ್ನು ಸರಕಾರ  ಹಾಗೂ ವಿಧಾನ ಮಂಡಲಗಳು ತಳೆಯಬೇಕಾಗಿತ್ತು. 

ಹಾಗೆ ನೋಡಿದರೆ ನಮ್ಮ ಸಂವಿಧಾನದ ಇತಿಹಾಸದುದ್ದಕ್ಕೂ ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ನಮ್ಮ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಬುಡಮೇಲು ಮಾಡಿರುವ ಅಸಂಖ್ಯ ಉದಾಹರಣೆಗಳು ಸಿಗುತ್ತವೆ. 1951ರಲ್ಲಿ ಅಂದಿನ ಮಧ್ಯಂತರ ಸಂಸತ್ತು ಸಂವಿಧಾನಕ್ಕೆ ಮಾಡಿದ್ದ ಪ್ರಪ್ರಥಮ ತಿದ್ದುಪಡಿ, ಈ ಮಾತಿಗೆ ಅತ್ಯುತ್ತಮ ಉದಾಹರಣೆ! 

ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರು ವುದು, ಇದೇ ವಿಷಯದಲ್ಲಿ (ಭಡ್ತಿ ಮೀಸಲಾತಿ) ಅದು ನೀಡಿದ್ದ ತೀರ್ಪು. ಎಂ. ನಾಗರಾಜ್‌-ಭಾರತ ಸರಕಾರದ ನಡುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಲ್ಲಿ ನೀಡಲಾಗಿದ್ದ ತೀರ್ಪು ಇದು. ರಾಜ್ಯಸರಕಾರದ ಇಂಜಿನಿಯರ್‌ ಕೂಡ ಆಗಿದ್ದ ನಾಗರಾಜ್‌, ಕರ್ನಾಟಕ ಇಂಜಿನಿಯರಿಂಗ್‌ ಸೇವಾ ಸಂಘದ ಅಧ್ಯಕ್ಷರಾಗಿದ್ದ ವರು. ಈ ತೀರ್ಪನ್ನು ರಾಜ್ಯ  ಸರಕಾರ ಕಾರ್ಯರೂಪಕ್ಕೆ ತರಲಿಲ್ಲ ವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದುರದೃಷ್ಟವಶಾತ್‌ ಖುದ್ದು ಸರ್ವೋಚ್ಚ ನ್ಯಾಯಾಲಯವೇ ಈ ವಿಷಯದಲ್ಲಿ ಅಂತಿಮ ಮಾತನ್ನು ಹೇಳಿಲ್ಲ; ಅಂದಿನಿಂದ ಇಂದಿನವರೆಗೆ ಕರ್ನಾಟಕ ಹಾಗೂ ಇತರ ರಾಜ್ಯಗಳಿಂದ ಬಂದಿರುವ ಖಟ್ಲೆಗಳಿಗೆ “ಆಸ್ಪದ’ ನೀಡುತ್ತಲೇ ಬಂದಿದೆ. ಪರಿಶಿಷ್ಟ ಜಾತಿ – ವರ್ಗಗಳಿಗೂ “ಕೆನೆಪದರ’ ಸಿದ್ಧಾಂತ ವನ್ನು ಅನ್ವಯಿಸಬೇಕೇ; ಈ ಜಾತಿ/ವರ್ಗಗಳ ಅನುಕೂಲಸ್ಥ ಉದ್ಯೋಗಿಗಳನ್ನು ಮೀಸಲಾತಿಯಿಂದ ಹೊರಗಿಡಬೇಕೇ ಎಂಬುದು ಸರ್ವೋಚ್ಚ ನ್ಯಾಯಾಲಯದೆದುರು ಚರ್ಚಿತ ವಾಗುತ್ತಿರುವ ವಿವಾದಗಳಲ್ಲೊಂದು. ಕುತೂಹಲಕಾರಿ ಅಂಶವೆಂದರೆ, ನಾಗರಾಜ್‌ ಅವರ ಪ್ರಕರಣದಲ್ಲಿ, ಸರಕಾರಿ ಹುದ್ದೆಗಳ ನೇಮಕಾತಿ ಹಾಗೂ ಭಡ್ತಿ ಮೀಸಲಾತಿಯ ವ್ಯಾಪ್ತಿಯಿಂದ ಎಸ್‌ಸಿ-ಎಸ್‌ಟಿ ಉದ್ಯೋಗಿಗಳ ಪೈಕಿ “ಕೆನೆಪದರ’ವೆನಿಸಿ ಕೊಂಡವರನ್ನು ಹೊರಗಿಡಬೇಕೆಂದು ಕರೆಯಿತ್ತವರು (ಮುಂದೆ ಭಾರತದ ಶ್ರೇಷ್ಠ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ) ನ್ಯಾ| ಎಸ್‌.ಎಚ್‌. ಕಪಾಡಿಯಾ ಅವರು.

Advertisement

ಇಲ್ಲಿ ಗಮನಿಸಲೇಬೇಕಾದ ಇನ್ನೊಂದು ಸಂಗತಿಯಿದೆ. ರಾಜ್ಯ ಸರಕಾರ ಭಡ್ತಿ ಮೀಸಲಾತಿ ಕುರಿತ ಸರ್ವೋಚ್ಚ ನ್ಯಾಯಾಲ
ಯದ ತೀರ್ಪುಗಳನ್ನು (ಪವಿತ್ರಾ ಪ್ರಕರಣದಲ್ಲಿ) ಅಧ್ಯಾದೇಶ ವೊಂದರ ಮೂಲಕ ನಿರರ್ಥಕಗೊಳಿಸಲು ಯತ್ನಿಸಿದ್ದೂ ಇದೆ. ಆದರೆ ರಾಜ್ಯಪಾಲ ವಜೂಭಾಯ್‌ ವಾಲಾ ಅವರು ಈ ಅಧ್ಯಾದೇಶಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿದರು. ಈಗ ಸರಕಾರದ ಅಂಗೀಕೃತ ಮಸೂದೆಗೆ ಸಂಬಂಧಿಸಿದಂತೆ ಅವರೇನು ಮಾಡುತ್ತಾರೋ, ನೋಡಬೇಕಾಗಿದೆ. 

ಇತ್ತೀಚಿನ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲ್ಪಟ್ಟಿದ್ದ ಈ ಮಸೂದೆಯ ಉದ್ದೇಶ, 2017ರ ಫೆಬ್ರವರಿಯಲ್ಲಿ, ಬಿ. ಕೆ. ಪವಿತ್ರಾ ಮತ್ತು ಕರ್ನಾಟಕ ಸರಕಾರದ ನಡುವಿನ ಖಟ್ಲೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿದ ಪ್ರತಿಕೂಲ ತೀರ್ಪನ್ನು ಉಲ್ಲಂ ಸುವುದೇ ಆಗಿತ್ತು. ಭಡ್ತಿ ಮೀಸಲಾತಿ ಕ್ರಮದಿಂದ ಈಗಾಗಲೇ ಪ್ರಯೋಜನ ಪಡೆದಿರುವ ಎಸ್‌ಸಿ – ಎಸ್‌ಟಿ ಉದ್ಯೋಗಿಗಳಿಗೆ ಅನುಷಂಗಿಕ/ಅನುಗತ ಮೀಸಲಾತಿ ಕಲ್ಪಿಸುವ ಕ್ರಮವನ್ನು ಈ ಪ್ರಕರಣದಲ್ಲಿ ಪ್ರಶ್ನಿಸಲಾಗಿತ್ತು. ತನಗೆ ಲಭಿಸ ಬೇಕಾಗಿದ್ದ ಮೀಸಲಾತಿ ಅವಕಾಶವನ್ನು ನಿರಾಕರಿಸಲಾದ ಕ್ರಮವನ್ನು ಪ್ರಶ್ನಿಸಿ (ರಾಜ್ಯ ಸರಕಾರದ ಸೂಪರಿಂಟೆಂಡಿಂಗ್‌ ಇಂಜಿ ನಿಯರ್‌ ಆಗಿರುವ) ಬಿ.ಕೆ. ಪವಿತ್ರಾ ಅವರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ್ದರು.

ಅನೇಕ ಎಸ್‌ಸಿ-ಎಸ್‌ಟಿ ಇಂಜಿನಿಯರ್‌ಗಳಿಗೆ ಸಹಾಯಕ ಕಾರ್ಯನಿರ್ವಾಹಣ ಇಂಜಿನಿಯರ್‌ಗಳಾಗಿಯೋ, ಅದಕ್ಕಿಂತ ಮೇಲಿನ ಹುದ್ದೆಗಳಿಗೂ ಭಡ್ತಿ ನೀಡಲಾಗಿದೆ. ಆದರೆ ಇವರುಗಳಿಗಿಂತ 11 ವರ್ಷಗಳಷ್ಟು ಮುಂಚೆಯೇ ನೇಮಕಗೊಂಡಿದ್ದ ಸಾಮಾನ್ಯ ವರ್ಗದಡಿಯ ಅರ್ಹ ಇಂಜಿನಿಯರ್‌ಗಳ ಹೆಸರುಗಳನ್ನು ಕೇವಲ ಸಹಾಯಕ ಕಾರ್ಯನಿರ್ವಹಣ ಇಂಜಿನಿಯರ್‌ ಹುದ್ದೆಗಳಷ್ಟೇ ಪರಿಗಣಿಸ ಲಾಗುತ್ತಿದೆ ಎಂದಾಕೆ ನ್ಯಾಯಾಲಯದಲ್ಲಿ ವಾದಿಸಿದ್ದರು. ನ್ಯಾಯ ಮೂರ್ತಿಗಳಾದ ಆದರ್ಶ್‌ ಕುಮಾರ್‌ ಗೋಯಲ್‌ ಹಾಗೂ ಯು.ಯು. ಲಲಿತ್‌ ಇವರನ್ನೊಳಗೊಂಡ ನ್ಯಾಯಪೀಠ, 1978 ರಿಂದ ರಾಜ್ಯಸರಕಾರ ಎಸ್‌ಸಿ-ಎಸ್‌ಟಿ ಉದ್ಯೋಗಿಗಳಿಗೆ ನೀಡಿರುವ ಅನುಷಂಗಿಕ ಭಡ್ತಿಯನ್ನು ರದ್ದು ಮಾಡಿ ತೀರ್ಪು ನೀಡಿತ್ತು. ಸಂಬಂಧಪಟ್ಟ ಎಲ್ಲ ಎಸ್‌ಸಿ-ಎಸ್‌ಟಿ ಉದ್ಯೋಗಿಗಳಿಗೂ ಹಿಂಭಡ್ತಿ ನೀಡಬೇಕು. ತನ್ಮೂಲಕ ಸಾಮಾನ್ಯ ವರ್ಗ ಹಾಗೂ ಇತರ ಹಿಂದುಳಿದ ವರ್ಗ (ಓಬಿಸಿ)ದ ಉದ್ಯೋಗಿಗಳಿಗೆ ಸಿಗಬೇಕಾದ ಭಡ್ತಿ ಸಿಗುವಂತಾಗಬೇಕು ಎಂದು ಆದೇಶಿಸಿದ ನ್ಯಾಯಪೀಠ ಈ ಆದೇಶವನ್ನು ಮೂರು ತಿಂಗಳೊಳಗೆ ಅನುಷ್ಠಾನಗೊಳಿಸುವಂತೆ ಗಡುವು ವಿಧಿಸಿತ್ತು. ಪವಿತ್ರಾ ಅವರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಮರುಪರಿಶೀಲನೆ ಕೋರಿ ಸರಕಾರವೇ ಅರ್ಜಿ ಸಲ್ಲಿಸಿರುತ್ತದೆ.

ಈಗ ಈ ಅನುಷಂಗಿಕ ಭಡ್ತಿ ಮೀಸಲಾತಿ ಮಸೂದೆಯನ್ನು ಮಂಡಿಸಿರುವುದರ ಹಿಂದೆ ಯಾವ ತಾರ್ಕಿಕತೆ ಯಿದೆ ಎಂದು ವಿಧಾನ ಸಭೆಯಲ್ಲಿನ ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಹಾಗೂ ಇತರ ವಿಪಕ್ಷೀಯ ಸದಸ್ಯರು ಪ್ರಶ್ನಿಸಿದ್ದರು. ಗಮನಿಸಲೇಬೇಕಾದ ಅಂಶವೆಂದರೆ, ವಿಪಕ್ಷೀಯರು ರಾಜಕೀಯ ಕಾರಣಕ್ಕಾಗಿಯೇ ಈ ಮಸೂದೆ ಕುರಿತು ದ್ವಂದ್ವ ನಿಲುವನ್ನು ತಾಳಿದಂತಿದೆ. ಈ ಮಸೂದೆ ನ್ಯಾಯಾಲಯಗಳ “ಕೂಲಂಕಷ ಪರಿಶೀಲನೆ’ಯನ್ನು ತಾಳಿಕೊಳ್ಳುವುದೇ ಎಂಬ ಗುಮಾನಿಯನ್ನು ವ್ಯಕ್ತಪಡಿಸಿರುವ ವಿಪಕ್ಷೀಯ ನಾಯಕರು ಇದೇ ವೇಳೆ ದಲಿತರ ಹಿತಾಸಕ್ತಿಯನ್ನು ರಕ್ಷಿಸುವುದಕ್ಕೆ ತಾವು ಬದ್ಧರಾಗಿರುವುದರಿಂದ ತಾವು ಇದನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಈ ನಡುವೆ, ಸಿ.ಟಿ. ರವಿ ಅವರು ಮಾತ್ರ ವಿಪಕ್ಷಪಾತಿ ನಿಲುವನ್ನು ಪ್ರದರ್ಶಿಸಿದ್ದಾರೆ; ಎಸ್‌ಸಿ – ಎಸ್‌ಟಿಗಳ ವಿಷಯದಲ್ಲಿ ಸಾಮಾಜಿಕ ನ್ಯಾಯ ಹಾಗೂ ಈ ಗುಂಪುಗಳಿಗೆ ಸೇರದ ಉದ್ಯೋಗಿಗಳ ವಿಷಯದಲ್ಲಿ ಸ್ವಾಭಾವಿಕ ನ್ಯಾಯ ಒದಗುವ ರೀತಿಯಲ್ಲಿ ಸರಕಾರ ಸಮತೋಲಿತ ನಿಲುವನ್ನು ತಳೆಯಬೇಕು ಎಂದವರು ಸ್ಪಷ್ಟವಾಗಿ ಹೇಳಿದ್ದಾರೆ.

ಒಂದು ವಿಷಯವಂತೂ ಸ್ಪಷ್ಟ – ರಾಷ್ಟ್ರಮಟ್ಟದಲ್ಲೇ ಇರಲಿ, ರಾಜ್ಯಗಳ ಮಟ್ಟದಲ್ಲೇ ಇರಲಿ, ರಾಜಕಾರಣಿಗಳು ಸಾಮಾನ್ಯವಾಗಿ, ಸಾಮಾನ್ಯ ವರ್ಗದಡಿಯಲ್ಲಿ ಬರುವ ಅಥವಾ ಓಬಿಸಿ ವರ್ಗದಡಿಯ ಉದ್ಯೋಗಿಗಳಿಗೆ ಭಡ್ತಿ ನೀಡಿಕೆ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಸಿದ್ಧರಿಲ್ಲ. ಇತ್ತೀಚೆಗಷ್ಟೇ ಪರಿಶಿಷ್ಟ ಜಾತಿ-ವರ್ಗಗಳಿಗೆ ಸೇರದ ಉದ್ಯೋಗಿ ಗಳು ಭಡ್ತಿ ಮೀಸಲಾತಿ ನೀತಿಯಿಂದಾಗಿ ತಮಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ಬೆಂಗಳೂರಿನಲ್ಲಿ ಬೃಹತ್‌ ಸ್ವರೂಪದ ರ್ಯಾಲಿ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ನಡುವೆ ಪರಿಶಿಷ್ಟ ಉದ್ಯೋಗಿಗಳು ಸರಕಾರಿ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿಲ್ಲದಿದ್ದಲ್ಲಿ ಮಾತ್ರ ಭಡ್ತಿ ಮೀಸಲಾತಿ ಕ್ರಮವನ್ನು ಸಮರ್ಥಿಸಬಹುದು ಎಂಬ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪುಗಳಲ್ಲಿ ತಿಳಿಸುತ್ತಲೇ ಬಂದಿದೆ. ರಾಜ್ಯ ಸರಕಾರಗಳು ತಮ್ಮ ಉದ್ಯೋಗಿಗಳ ಆರ್ಥಿಕ ಹಿಂದುಳಿದಿರುವಿಕೆ ಹಾಗೂ ಒಟ್ಟಾರೆ ಕಾರ್ಯಸಾಮರ್ಥ್ಯದಂಥ ಅಂಶಗಳನ್ನು ಪರಿಗಣಿಸ ಬೇಕಾ ಗುತ್ತದೆಂದೂ ನ್ಯಾಯಾಲಯ ತಾಕೀತು ಮಾಡಿದೆ.

ಪವಿತ್ರಾ ಪ್ರಕರಣದ ತೀರ್ಪಿನ ಬಳಿಕ ರಾಜ್ಯ ಸರಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ನೇತೃತ್ವದ ಪರಿಶೀಲನಾ ಸಮಿತಿಯೊಂದನ್ನು ರೂಪಿಸಿದ್ದು, ಈ ಸಮಿತಿ, ಪರಿಶಿಷ್ಟ ಜಾತಿ/ವರ್ಗಗಳಲ್ಲಿ ಆರ್ಥಿಕವಾಗಿ ಹಿಂದುಳಿ ದಿರುವಿಕೆ ಇನ್ನೂ ಇದೆಯೆಂದೂ, ನಾಗರಿಕ/ಆಡಳಿತ ಸೇವೆಗಳಲ್ಲಿ ಇಂಥ ಉದ್ಯೋಗಿಗಳಿಗೆ ಸಾಕಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲವೆಂದೂ, ಭಡ್ತಿ ಮೀಸಲಾತಿಯ ಕಾರಣದಿಂದ ಆಡಳಿತ ಕಾರ್ಯಕ್ಕೆ ಯಾವುದೇ ಹಾನಿ ತಟ್ಟಿಲ್ಲವೆಂದೂ ತನ್ನ ವರದಿಯಲ್ಲಿ ದೃಢಪಡಿಸಿದೆ. ಆದರೂ ಲೋಕೋಪಯೋಗಿ ಇಲಾಖೆ, ವಿದ್ಯುತ್‌ ವಿತರಕ ಕಂಪೆನಿಗಳು, ವಿದ್ಯುತ್‌ ನಿಗಮ ಹಾಗೂ ಬೆಂಗಳೂರು ಚರಂಡಿ ಮತ್ತು ಜಲ ಸರಬರಾಜು ಮಂಡಳಿಯಂಥ ಸಂಸ್ಥೆಗಳಲ್ಲಿನ ಉನ್ನತ ಹುದ್ದೆಗಳು ಪರಿಶಿಷ್ಟ ಜಾತಿ-ವರ್ಗಗಳ ಪಾಲಾಗುತ್ತಿದ್ದು, ಉಳಿದ ವರ್ಗಗಳ ಉದ್ಯೋಗಿಗಳು ಅವಕಾಶ ವಂಚಿತರಾಗಿದ್ದಾರೆಂಬುದನ್ನು ಎಲ್ಲರೂ ಬಲ್ಲರು. ಆದರೂ ಈ ವಿಷಯದಲ್ಲಿ ರಾಜ್ಯ ಸರಕಾರಕ್ಕೆ ನ್ಯಾಯ ಒದಗಿಸುವಂಥ ಅಂಶವೊಂದಿದೆ: ಭಡ್ತಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಖುದ್ದು ಕೇಂದ್ರ ಸರಕಾರವೇ ಒಪ್ಪಿಕೊಳ್ಳಲು ಸಿದ್ಧವಿಲ್ಲ! 1992ರಷ್ಟು ಹಿಂದೆಯೇ ಸರ್ವೋಚ್ಚ ನ್ಯಾಯಾಲಯ ಭಡ್ತಿ ಮೀಸಲಾತಿ ಕ್ರಮ ಸಂವಿಧಾನ ಬಾಹಿರವೆಂದು ಇಂದ್ರಾ ಸಾಹಿ° ಮತ್ತು ಭಾರತ ಸರಕಾರದ ನಡುವಿನ ಪ್ರಕರಣದಲ್ಲಿ ಅಭಿಪ್ರಾಯ ಪಟ್ಟಿತ್ತು. ಆದರೆ 2001ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ, ಸಂವಿಧಾನದಲ್ಲಿ 16 (4ಎ) ವಿಧಿಯನ್ನು ಸೇರ್ಪಡೆಗೊಳಿಸಿ 1995ರಿಂದ ಅನ್ವಯವಾಗುವಂತೆ ಭಡ್ತಿ ಮೀಸಲಾತಿಗೆ ಅವಕಾಶ ಕಲ್ಪಿಸಿತ್ತು. ಇದು 85ನೆಯ ತಿದ್ದುಪಡಿ. ಇದಲ್ಲದೆ, ಸಂವಿಧಾನವನ್ನು ಇದೇ ಅಥವಾ ಬೇರೆ ಕಾರಣಗಳಿಗಾಗಿ ತಿದ್ದುಪಡಿ ಮಾಡಲಾಗಿದೆ.

1995ರಲ್ಲಿ ಮಾಡಿದ 77ನೆಯ ತಿದ್ದುಪಡಿ- ಇಂಥ ಮೀಸಲಾತಿ ಕ್ರಮವನ್ನು ರಕ್ಷಣೆಗಾಗಿ; 2000ದಲ್ಲಿ ಮಾಡಿದ 81ನೆಯ ತಿದ್ದುಪಡಿ – ಭಡ್ತಿ ಹಿಂದುಳಿಕೆ ಕುರಿತಂತೆ; 82ನೆಯ ತಿದ್ದುಪಡಿ – ಇಂಥ ಮೀಸಲಾತಿ ಸಂದರ್ಭದಲ್ಲಿ ಅರ್ಹತಾ ಅಂಕಗಳಲ್ಲಿ ಮತ್ತಿತರ ಮಾನದಂಡಗಳಲ್ಲಿ ಸಡಿಲ ನೀತಿ ಅಳವಡಿಕೆಗಾಗಿ. 1978ರಷ್ಟು ಹಿಂದೆಯೇ ಕರ್ನಾಟಕ ಸರಕಾರ ಭಡ್ತಿಗಳಲ್ಲಿ ಮೀಸಲಾತಿ ನೀಡುವ ಕ್ರಮವನ್ನು ಜಾರಿಗೊಳಿಸಿತ್ತು. ಸರಕಾರದ ಈ ಕ್ರಮ ಮೊದಲಿಗೆ ಇಂಜಿನಿಯರಿಂಗ್‌ ಹುದ್ದೆಗಳಿಗಷ್ಟೇ ಸೀಮಿತ ವಾಗಿತ್ತು. ಮುಂದೆ ಇದನ್ನು ಎಲ್ಲ 63 ಸರಕಾರಿ ಇಲಾಖೆಗಳಿಗೂ ಅನ್ವಯಿಸಲಾಯಿತು. ಒಂದು ಅಂಶವನ್ನು ಸ್ಪಷ್ಟಪಡಿಸಬೇಕಾಗಿದೆ. ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗುವ ಪ್ರಕರಣಗಳು, ಸರಕಾರಿ ಸೇವೆಗಳ ಆರಂಭಿಕ ಹಂತದಲ್ಲೇ ಪರಿಶಿಷ್ಟ ಜಾತಿ- ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿರುವ ಕ್ರಮವನ್ನು ಪ್ರಶ್ನಿಸುತ್ತಿಲ್ಲ.

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next