Advertisement

‘ಪ್ರಾಜೆಕ್ಟ್ ಈಗಲ್‌ ಐ’ಸಿಸಿ ಟಿವಿ ಕಂಟ್ರೋಲ್‌ ರೂಂ ಉದ್ಘಾಟನೆ 

03:52 PM Nov 09, 2017 | Team Udayavani |

ಪುತ್ತೂರು: ರಾಜ್ಯದಲ್ಲೇ ಪ್ರಥಮವಾಗಿ ಸಾರ್ವಜನಿಕ ನೆರವಿನಲ್ಲಿ ಪುತ್ತೂರು ನಗರದ 13 ಕಡೆಗಳಲ್ಲಿ ಅಳವಡಿಸಲಾದ ಸಿ.ಸಿ. ಕೆಮರಾ ವ್ಯವಸ್ಥೆ -ಪ್ರಾಜೆಕ್ಟ್ ಈಗಲ್‌ ಐ ಇದರ ಕಂಟ್ರೋಲ್‌ ರೂಂ ಉದ್ಘಾಟನೆ ಬುಧವಾರ ನಡೆಯಿತು.

Advertisement

ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ಅಪರಾಧ ಮುಕ್ತ ನಗರವಾಗುವತ್ತ ಹೆಜ್ಜೆ ಹಾಕುತ್ತಿದೆ. ಸಿ.ಸಿ. ಕೆಮರಾಗಳು ಒಂದೊಂದೇ ಜಂಕ್ಷನ್‌ಗಳಲ್ಲಿ ಅಳವಡಿಕೆಯಾಗುತ್ತಿದ್ದಂತೆ ಇಲ್ಲಿನ ಅಪರಾಧ ಪ್ರಮಾಣ ಕಡಿಮೆಯಾಗುತ್ತ ಬಂದಿದೆ. ಇದಕ್ಕಾಗಿ ಶ್ರಮಿಸಿದ ಪುತ್ತೂರು ನಗರ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌, ಸಿ.ಸಿ. ಕೆಮರಾಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳು, ಕಂಟ್ರೋಲ್‌ ರೂಂ ಸ್ಥಾಪನೆಗೆ ಮುಂದಾದ ಪುತ್ತೂರು ಕ್ಲಬ್‌ ಅಭಿನಂದನಾರ್ಹರು ಎಂದರು.

ನಿಯಂತ್ರಣಕ್ಕೂ ಸಹಕಾರಿ
ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ವಿ.ಜೆ. ಸಜೀತ್‌ ಮಾತನಾಡಿ, ಪ್ರಮುಖ ನಗರವಾಗಿ ಬೆಳೆಯುತ್ತಿರುವ ಪುತ್ತೂರು ಈಗ ಸಂಪೂರ್ಣವಾಗಿ ಸಿ.ಸಿ. ಕೆಮರಾ ಕಣ್ಗಾವಲಿಗೆ ಒಳಪಟ್ಟಿದೆ. ಇದರಿಂದ ಅಪರಾಧಗಳ ಪತ್ತೆಯ ಜತೆಗೆ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ. ಸಾರ್ವಜನಿಕರೇ ನೀಡಿದ ದೇಣಿಗೆಯಲ್ಲಿ ನಗರದ ವಿವಿಧೆಡೆ ಇಷ್ಟೊಂದು ಸಂಖ್ಯೆಯಲ್ಲಿ ಸಿ.ಸಿ. ಕೆಮರಾ ಅಳವಡಿಸಿರುವುದು ಬಹುದೊಡ್ಡ ಸಾಧನೆ. ಈ ಎಲ್ಲ ಕೆಮರಾಗಳ ಕಂಟ್ರೋಲ್‌ ರೂಂ ಪೊಲೀಸ್‌ ಠಾಣೆಯಲ್ಲೇ ಇರುವುದು ಇನ್ನೊಂದು ಬಹುದೊಡ್ಡ ಬೆಳವಣಿಗೆ ಎಂದರು.

ನಿಖರ ದಾಖಲೆ
ನಗರ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ವರ್ಷಗಳ ಹಿಂದೆ ಆರಂಭಗೊಂಡ ಯೋಜನೆ ಇದು. ಸಾರ್ವಜನಿಕರ ದೇಣಿಗೆಯಿಂದಾಗಿ ಈಗ ನಗರದ 13 ಕಡೆ ಸಿ.ಸಿ. ಕೆಮರಾ ಅಳವಡಿಸಲಾಗಿದೆ. ಎಲ್ಲವೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಇವುಗಳ ಕಂಟ್ರೋಲ್‌ ರೂಂ ನಗರ ಠಾಣೆಯಲ್ಲಿರುವುದರಿಂದ ನಾವು ಕೂತಲ್ಲಿಂದಲೇ ಆಯಾ ಪ್ರದೇಶದ ಎಲ್ಲ ಚಿತ್ರಣಗಳನ್ನು ಗಮನಿಸಬಹುದಾಗಿದೆ. ಇದರಿಂದ ಪೊಲೀಸರ ಶ್ರಮ ಕಡಿಮೆಯಾಗಿದೆ. ಅಪರಾಧ ಪತ್ತೆಗೆ ನಿಖರ ದಾಖಲೆಯನ್ನು ಇದು ಕೊಡುತ್ತದೆ ಎಂದರು.

ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಶ್ರೀನಿವಾಸ ಬಿ.ಎಸ್‌., ತಹಶೀಲ್ದಾರ್‌ ಅನಂತ ಶಂಕರ್‌ ಉಪಸ್ಥಿತರಿದ್ದರು. ಸಿ.ಸಿ. ಕೆಮರಾ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಶೇಟ್‌ ಇಲೆಕ್ಟ್ರಾನಿಕ್ಸ್‌ನ ರೂಪೇಶ್‌ ಶೇಟ್‌ ಸಹಕರಿಸಿದರು. ಸಿ.ಸಿ. ಕೆಮರಾ ಅಳವಡಿಸಲು ಪ್ರಾಯೋಜಕತ್ವ ವಹಿಸಿದ್ದ ಎಲ್ಲ ದಾನಿಗಳನ್ನು ಗೌರವಿಸಲಾಯಿತು. ಪುತ್ತೂರು ಕ್ಲಬ್‌ ಅಧ್ಯಕ್ಷ ದೀಪಕ್‌ ರೈ ಸ್ವಾಗತಿಸಿ, ನಗರ ಠಾಣೆ ಸಬ್‌ ಇನ್‌ ಸ್ಪೆಕ್ಟರ್‌ ಅಜಯ್‌ ಕುಮಾರ್‌ ವಂದಿಸಿದರು. ಹರೀಶ್‌ ಕುಮಾರ್‌ ನಿರೂಪಿಸಿದರು.

Advertisement

ಒಟ್ಟು 13 ಸಿ.ಸಿ. ಕೆಮರಾ
ಒಟ್ಟು 13 ಸಿ.ಸಿ. ಕೆಮರಾಗಳಿಗೆ 11. 16 ಲಕ್ಷ ರೂ. ವೆಚ್ಚವಾಗಿದ್ದು, ದಾನಿಗಳೇ ನೀಡಿದ್ದಾರೆ. 1.80ಲಕ್ಷ ರೂ. ವೆಚ್ಚದ ಕಂಟ್ರೋಲ್‌ ರೂಂನ್ನು ಪುತ್ತೂರು ಕ್ಲಬ್‌ ಪ್ರಾಯೋಜಿಸಿದೆ. 24 ಗಂಟೆಯೂ ಕೆಲಸ ಮಾಡುವ ಕೆಮರಾಗಳು ಪೊಲೀಸರ ಅನುಪಸ್ಥಿತಿಯಲ್ಲೂ ಮತ್ತೂಂದು ಶಕ್ತಿ ಕೆಲಸ ಮಾಡುವುದನ್ನು ಖಾತ್ರಿಪಡಿಸುತ್ತದೆ ಎಂದು ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next