Advertisement

ಸಾಹಿತಿಗೆ ಗನ್‌ಮ್ಯಾನ್‌ ರಕ್ಷಣೆಯ ಸ್ಥಿತಿ!

12:34 PM Sep 30, 2017 | Sharanya Alva |

ಪ್ರಚಾರಕ್ಕೆ ಎಂದೂ ಹಾತೊರೆಯದ ನಾ. ಡಿಸೋಜಾ ನಮ್ಮ ರಾಜ್ಯ ಕಂಡ ಸಜ್ಜನ, ಸರಳ ವ್ಯಕ್ತಿತ್ವದ ಸಾಹಿತಿ. ಇತ್ತೀಚೆಗೆ ಮಣಿಪಾಲ ಸಾಹಿತ್ಯೋತ್ಸವದ ವಿರಾಮದಲ್ಲಿ ಇಂದಿನ ನಮ್ಮ ಸಾಹಿತಿ ಮತ್ತು ವೈಚಾರಿಕರು ತುಳಿಯುತ್ತಿರುವ ದಾರಿಯ ಕುರಿತಂತೆ ಅವರು ನೀಡಿದ ಹೇಳಿಕೆಯ ಕುರಿತು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಸಾಹಿತಿ ಗಳಿಗೂ ಗನ್‌ಮ್ಯಾನ್‌ ಒದಗಿಸುವ ಪರಿಸ್ಥಿತಿ ನಿರ್ಮಾಣ ವಾಯಿತಲ್ಲ ಎನ್ನುವ ಅವರ ನೋವು ನಾಡಿನ ಸಮಸ್ತ ಪ್ರಜ್ಞಾವಂತರ ಹೃದಯಾಂತರಾಳದ ನೋವಾಗಿದೆ ಎಂದರೆ ತಪ್ಪಾಗದು. “ಅನ್ಯರ ಮನ ನೋಯಿಸಿ ಬರೆಯದ ನನಗೆ ಸರಕಾರ ಗನ್‌ಮ್ಯಾನ್‌ ಕೊಟ್ಟರೂ ಬೇಡ’ ಎನ್ನುವ ಅವರ ದಿಟ್ಟತನ, ಆತ್ಮಬಲ ನಮ್ಮ ಇಂದಿನ ಎಷ್ಟು ಸಾಹಿತಿಗಳಲ್ಲಿದೆ?

Advertisement

ಜನಭಾವನೆಯ ಅನಾದರ ಓರ್ವ ಸಾಹಿತಿ ದೇವರ ವಿಗ್ರಹಗಳ ಮೇಲೆ ತಾವು ಮೂತ್ರ ವಿಸರ್ಜಿಸಿರುವುದಾಗಿ ಅಸಭ್ಯ ಹೇಳಿಕೆ ನೀಡಿದರೆ, ಇನ್ನೋರ್ವರು ಶ್ರೀರಾಮನ ಜನ್ಮದ ಹಿನ್ನೆಲೆಗೆ ಅಸಭ್ಯ ಅರ್ಥಕೊಡಲು ಯತ್ನಿಸುತ್ತಾರೆ. ಮಗದೋರ್ವ ವೈಚಾರಿಕರು ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ ಎಂದು ಜರೆಯಲೂ ಹಿಂಜರಿಯುವುದಿಲ್ಲ. ಆಸ್ತಿಕರ ನಿರುಪದ್ರವಿ ನಂಬಿಕೆ ಯನ್ನು ನಷ್ಟ ಪಡಿಸುವುದರಿಂದ ಕೀಳು ಪ್ರಚಾರ ದೊರೆಯುವುದರ ಜತೆಯಲ್ಲಿ ಕೆಲವು ವೈರಿಗಳನ್ನು ಪಡೆಯಬಹುದಷ್ಟೇ ವಿನಾ ಸಮಾಜ ಸುಧಾರಣೆ ಸಾಧ್ಯವಿಲ್ಲ. ಸಮಾಜವನ್ನು ಈ ರೀತಿಯ ವೈಚಾರಿಕತೆಯ ದಾರಿಯಲ್ಲಿ ಕೊಂಡೊಯ್ಯುವುದು ಖಂಡಿತ ಅಸಾಧ್ಯ.
ಅವರವರ ನಂಬಿಕೆಗಳು ಅವರವರಿಗೆ. ಭಾವನಾತ್ಮಕ ನಂಬಿಕೆಗಳನ್ನು ಟೀಕಿಸುವಾಗಲೂ ಸಭ್ಯತೆಯ ಸೀಮೋಲ್ಲಂಘನೆ ಸರಿಯಲ್ಲ.

ರಾಮಾಯಣ, ಮಹಾಭಾರತಗಳೆರಡೂ ಭಾರತದ ರಾಷ್ಟ್ರೀಯ ಮಹಾಕಾವ್ಯಗಳು. ಈ ಮೇರು ಕೃತಿಗಳ ಆಶಯಕ್ಕೆ ಕುಂದುಬರದಂತೆ ಅವುಗಳ ಆಧಾರದ ಮೇಲೆ ಕಾಲಕಾಲಕ್ಕೆ ಅನೇಕ ಕವಿಗಳು, ಪಂಡಿತರು ಕಾವ್ಯ, ಗ್ರಂಥಗಳನ್ನು ರಚಿಸಿದ್ದಾರೆ. ಅವರಾರೂ ಅದರ ಘನತೆಗೆ ಕುಂದು ತರುವ ಕೆಲಸ ಮಾಡಲಿಲ್ಲ. ವಿವಿಧ ಕಾಲಘಟ್ಟಗಳಲ್ಲಿ ಜನಾನುರಾಗಿಯಾಗಿ ವ್ಯಾಪಕ ಸಮ್ಮಾನ ಗಳಿಸಿದ ಪ್ರಾಚೀನ ಗ್ರಂಥಗಳು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಬದುಕಿನಲ್ಲಿ ಹಾಸು ಹೊಕ್ಕಾಗಿವೆ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಸಮೃದ್ಧಗೊಳಿಸಿವೆ.

ವಿಶ್ವದ ಅನೇಕ ದೇಶದಲ್ಲಿ ಧಾರ್ಮಿಕ ನಂಬಿಕೆಗಳ, ಮಹಾಪುರುಷರ, ಧರ್ಮಗ್ರಂಥದ ಕುರಿತ ಅಭದ್ರ ಟೀಕೆ-ಟಿಪ್ಪಣಿಗಳಿಗೆ ಧರ್ಮ ನಿಂದನೆ ಕಾನೂನು ಪ್ರಕಾರ ಶಿಕ್ಷಿಸಲಾಗುತ್ತದೆ. ಭಾರತದಂತಹ ಬಹು ಧರ್ಮೀಯ ದೇಶದಲ್ಲಿ ಧಾರ್ಮಿಕ ಟೀಕೆ ಟಿಪ್ಪಣಿಗಳು
ಬಲು ಬೇಗ ಸಾಮಾಜಿಕ ಶಾಂತಿ ಕದಡುವ ಕಾರಣ ವಾಗಿ ಬಿಡುತ್ತವೆ. ಸಾಮಾನ್ಯ ವ್ಯಕ್ತಿಯೂ ಈ ಕುರಿತು ಅತ್ಯಂತ ಜಾಗರೂಕನಾಗಿರಬೇಕಾಗುತ್ತದೆ. ಮಾಧ್ಯಮ ಕ್ರಾಂತಿಯ ಇಂದಿನ ಯುಗದಲ್ಲಿ ಸಾಹಿತಿಗಳು, ವಿಮರ್ಶಕರು, ವಿಚಾರವಾದಿಗಳು,
ಸಮಾಜದ ಗಣ್ಯರು ಕೊಂಚ ಎಡವಿದರೂ ದೊಡ್ಡ ವಿವಾದವಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತಿಗಳು, ವೈಚಾರಿಕರೆನಿಸಿಕೊಂಡವರು ಬಹುಸಂಖ್ಯಾತರ ಹಿಂದೂ ಧರ್ಮವನ್ನು ಟೀಕಿಸುವ ಮೂಲಕ ಪ್ರಸಿದ್ಧಿಯ ಶಿಖರವೇರ ಬಯಸುವ
ಕಳವಳಕಾರಿ ಘಟನೆಗಳು ಹೆಚ್ಚುತ್ತಿವೆ.

ಅವಹೇಳನ ಸಲ್ಲದು ನಮ್ಮ ನಂಬಿಕೆಗಳು ಎಲ್ಲಿಯವರೆಗೆ ಇತರರಿಗೆ ತೊಂದರೆಯಾಗುವುದಿಲ್ಲವೋ, ಅನ್ಯರ ಸಾಂವಿಧಾನಿಕ ಹಕ್ಕುಗಳಿಗಾಗಲೀ ಅಥವಾ ಮಾನವ ಹಕ್ಕುಗಳಿಗಾಗಲೀ ಅಪಚಾರ ಎಸಗುವುದಿಲ್ಲವೋ ಅಲ್ಲಿಯವರೆಗೆ ಅವು ನಿರುಪದ್ರವಿ ನಂಬಿಕೆಗಳೆನಿಸುತ್ತವೆ. ಅಂತಹ ನಂಬಿಕೆಯಿಂದ ಸಮಾಜಕ್ಕೇನೂ ತೊಂದರೆ ಇಲ್ಲ. ಇಂತಹ ವೈಯಕ್ತಿಕ ಮತ್ತು ಖಾಸಗಿ ನಂಬಿಕೆಗಳ ಕುರಿತು ಅಸಹಿಷ್ಣು ಟೀಕೆ-ಟಿಪ್ಪಣಿ ಅನವಶ್ಯಕ ಮತ್ತು ಅನಪೇಕ್ಷಣೀಯ. ಆದರೆ ವೈಚಾರಿಕರೆನ್ನಿಸಿಕೊಳ್ಳಲು,
ಸಾಹಿತ್ಯ ಕ್ಷೇತ್ರದ ಉತ್ತುಂಗಕ್ಕೆ ಏರುವ ಮಹತ್ವಾಕಾಂಕ್ಷೆ ಯುಳ್ಳವರು ಇಂತಹ ಸುಲಭ ದಾರಿ ಹಿಡಿಯುತ್ತಾರೆ. ಇನ್ನು ಕೆಲವರು ತಮ್ಮ ಪುಸ್ತಕಗಳಿಗೆ ಅಗ್ಗದ ಪ್ರಚಾರಕ್ಕಾಗಿ ಇಂತಹ ಅಡ್ಡ ಮಾರ್ಗ ಕಂಡುಕೊಳ್ಳುತ್ತಾರೆ.

Advertisement

ಹಿಂದುಯೇತರ ಧರ್ಮಗಳನ್ನು ಟೀಕಿಸಿದರೆ ಸಮಾಜವಿರೋಧಿ, ಕೋಮು ಸಾಮರಸ್ಯ ಕಂಟಕ ಎನಿಸಿದರೆ ಬಹುಸಂಖ್ಯಾತರ ಹಿಂದೂ ಧರ್ಮವನ್ನು ಟೀಕಿಸಿದರೆ ಜಾತ್ಯತೀತವಾದಿ ಎನ್ನುವ ಸ್ಥಿತಿ ಅತಿರೇಕಕ್ಕೆ ತಲುಪಿದ್ದರಿಂದಲೇ ದೇಶದಲ್ಲಿ ಅನೇಕ ಸಂಘಟನೆಗಳ ಹುಟ್ಟಿಗೆ, ಮತ್ತು ಹಿಂಸೆಯ ವೃದ್ಧಿಗೆ ಕಾರಣವಾಗಿದೆ. ಭಾಷಾ ಸಂಯಮ ಅಗತ್ಯ ವೈಚಾರಿಕರ ಉದ್ರೇಕಕಾರಿ ಭಾಷಣಗಳಿಂದ ಸಾಕಷ್ಟು ಹಿಂಸೆ ನಡೆಯುತ್ತಿದೆ. ಅರಿವಿನ ಕೊರ ತೆಯಿಂದ ಸಾಮಾನ್ಯರು ಹಿಂಸೆಯಲ್ಲಿ ತೊಡಗಿದರೆ, ವೈಚಾರಿಕ ರೆನ್ನಿಸಿಕೊಂಡವರು ತಮ್ಮ ಶಬ್ದಪ್ರಯೋಗದಿಂದ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಸೈದ್ಧಾಂತಿಕ ಮತಬೇಧಗಳನ್ನು ವ್ಯಕ್ತಪಡಿಸುವಾಗಲೂ ಭಾಷಾ ಸಂಯಮವನ್ನು ತೋರಬೇಕೆನ್ನುವ ಕನಿಷ್ಟ ಸಭ್ಯತೆಯೂ ಹಲವು ವೈಚಾರಿಕರೆನ್ನಿಸಿಕೊಂಡವರಲ್ಲಿ ಇಲ್ಲದಿರುವುದು ದುರದೃಷ್ಟಕರ.

ಗಣ್ಯರೆನ್ನಿಸಿಕೊಂಡವರೇ ಸಂಯಮ ಮೀರಿ  ಜನಭಾವನೆಗಳನ್ನು ಉದ್ರೇಕಿಸುವ ಮಾತನಾಡು ವುದು ಸರಿಯೇ? ಜನಾಕ್ರೋಶಕ್ಕೆ ಗುರಿಯಾದ ಇಂತಹ ಚಿಂತಕರಿಗೆ ಸರಕಾರ ಇದೀಗ ಪೊಲೀಸ್‌ ಭದ್ರತೆ ಕೊಡುವ ಚಿಂತನೆ ಮಾಡುತ್ತಿರುವುದು ಜನರ ತೆರಿಗೆ ಹಣದ ದುರ್ಬಳಕೆಯೇ ಸರಿ. ಪೊಲೀಸ್‌ ಸಂರಕ್ಷಣೆ ಬಯಸುವ ಇಂತಹ ಚಿಂತಕರ ಕುರಿತು ಜನಸಾಮಾನ್ಯರ ಅಭಿಪ್ರಾಯಗಳೇನು ಎಂದು ಸರಕಾರ ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲ ವಾದರೆ, ಮುಂಬರುವ ದಿನಗಳಲ್ಲಿ ಇಂತಹವರ ಸಂಖ್ಯೆಯಲ್ಲಿ ಇನ್ನಷ್ಟು ವೃದ್ಧಿ ಕಾಣಬಹುದು. ನಾ. ಡಿಸೋಜಾರೆಂದಂತೆ ಗನ್‌ ಮ್ಯಾನ್‌ ಇರುವವರು ಮತ್ತು ಇಲ್ಲದವರು ಎಂದು ಎರಡು ಹೊಸ ವರ್ಗ
ಸೃಷ್ಟಿಯಾಗಬಹುದು.

ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಧೀಮಂತ ಸಾಹಿತಿಗಳ ದೊಡ್ಡ ಪರಂಪರೆಯೇ ನಮ್ಮಲ್ಲಿದೆ. ಕುವೆಂಪು, ಬೇಂದ್ರೆ,  ಕಾರಂತರಂತಹ ಸಾಹಿತಿಗಳು ತಮ್ಮ ಚಿಂತನೆಗಳನ್ನು ಬರವಣಿಗೆಯಲ್ಲಿ ದಾಖಲಿಸುವಾಗಲೀ ಅಥವಾ ತಮ್ಮ ಭಾಷಣಗಳಲ್ಲಾಗಲೀ ಜನಭಾವನೆಯನ್ನು ಕೆರಳಿಸಿದ ಉದಾಹರಣೆಯಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಹುಸಂಖ್ಯಾತರ ಧರ್ಮ, ಆಚಾರ-ವಿಚಾರಗಳನ್ನು ಸಾರಾಸಗಟಾಗಿ ಅವಹೇಳನ ಮಾಡುವ ಚಿಂತಕರು ಹುಟ್ಟಿಕೊಳ್ಳುತ್ತಿರುವುದು ವಿಷಾದನೀಯ. ನಿಜವಾದ
ಚಿಂತಕ ತನ್ನ ನಡೆ-ನುಡಿಗಳಿಂದ ದೊಡ್ಡತನವನ್ನು ಮೆರೆಯುತ್ತಾನೆ. ಢೋಂಗಿ ಸಾಹಿತಿಗಳನ್ನು, ಅವರನ್ನು ಸಂರಕ್ಷಿಸುವ ರಾಜಕಾರಣಿಗಳನ್ನು ಜನರು ತಿರಸ್ಕರಿಸಲಿ.

*ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next