Advertisement

Professional Life: ಕಂಡಂತಿಲ್ಲ ವೃತ್ತಿ ಜೀವನ

03:50 PM Dec 21, 2023 | Team Udayavani |

ಯಾವುದೇ ಒಂದು ವಿಷಯದ ಬಗ್ಗೆ ನಮಗೆ ಪೂರ್ತಿಯಾಗಿ ತಿಳಿಯುವುದು ಆ ವಿಷಯದೊಳಗೆ ಹೊಕ್ಕಾಗ ಮಾತ್ರ ಎಂದು ತಿಳಿದವರು ಹೇಳ್ತಾರೆ. ಅಂತೆಯೇ ಯಾವುದೇ ವೃತ್ತಿಯನ್ನು ನಿಭಾಯಿಸುವುದು ಹೊರಗಿನಿಂದ ನೋಡಲು ಸುಲಭವಾಗಿ ಕಂಡರೂ ಅದರೊಳಗೆ ಪ್ರವೇಶಿಸಿದಾಗಲೇ ಅದರ ಆಳ ಅರಿಯುವುದು. ಹೀಗೆ ಸೆಮಿಸ್ಟರ್‌ ಪರೀಕ್ಷೆ ಮುಗಿದ ಬಳಿಕ ಒಂದು ತಿಂಗಳು ಇಂಟರ್ನ್ ಶಿಪ್‌ ಮಾಡಬೇಕೆಂದು ಕಾಲೇಜಿನಲ್ಲಿ ಆಜ್ಞೆಯಾಗಿತ್ತು. ಇದಕ್ಕಾಗಿ ನಾನು ಆಯ್ಕೆ ಮಾಡಿದ್ದು ಮುದ್ರಣ ಮಾಧ್ಯಮ. ಪತ್ರಿಕೆಗಳು ದಿನಂಪ್ರತಿ ಮುದ್ರಿತವಾಗಿ ಜನರ ಕೈಸೇರುವ ಪರಿಯನ್ನೊಮ್ಮೆ ಕಣ್ಣಾರೆ ಕಾಣುವ ಹಂಬಲದಿಂದ ಪರೀಕ್ಷೆ ಮುಗಿದ ಮಾರನೇ ದಿನವೇ ಬೆಂಗಳೂರಿಗೆ ಹೊರಟೆ.

Advertisement

ಮೊದಲ ದಿನ ಪತ್ರಿಕಾ ಲೋಕಕ್ಕೆ ಕಾಲಿಟ್ಟಾಗ ಕೊಂಚ ಭಯ ನಡುಕ ನನ್ನನ್ನು ಕಾಡಿತ್ತು. ಅಲ್ಲಿ ಸಬ್‌ ಎಡಿಟರ್‌ ಸರ್‌ ವಾರಕ್ಕೆ ಒಂದೊಂದು ಡೆಸ್ಕ್ ನಲ್ಲಿ ಕೆಲಸ ಮಾಡುವಂತೆ ಸೂಚಿಸಿದರು. ಮೊದಲ ವಾರವೇ ಅನುವಾದ ಮಾಡುವ ಕೆಲಸ ನನಗೆ ಸಿಕ್ಕಿದ ಕಾರಣ ಬೇರೆ ವಿಷಯಗಳ ಮೇಲೆ ಗಮನಹರಿಸಲು ಕಷ್ಟವಾಯಿತು. ಮೊದಲೇ ನನಗೆ ಅನುವಾದದ ಗಂಧ ಗಾಳಿ ಗೊತ್ತಿಲ್ಲ. ಕಾಲೇಜಿನಲ್ಲಿ ಅಧ್ಯಾಪಕರು ಅನುವಾದ ಕೊಟ್ಟಾಗ ಹೇಗಾದರೂ ಮಾಡಿ, ಏನಾದರೊಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆವು. ಇಂಟರ್ನ್ ಶಿಪ್‌ ನಲ್ಲಿ ಅನುವಾದ ಮಾಡದೆ ಬೇರೆ ದಾರಿಯಿರಲಿಲ್ಲ. ಹೀಗಾಗಿ ಅನುವಾದದ ಬಗ್ಗೆ ಸಂಪೂರ್ಣವಾಗಿ ಅರಿತುಕೊಳ್ಳಲು ಸಹಾಯವಾಗುವುದರ ಜತೆಗೆ ಕನ್ನಡ ಟೈಪಿಂಗ್‌ ಸಹ ಸುಧಾರಿಸಿತು. ಮೊದಲಿಗೆ ಕಷ್ಟವೆನಿಸಿದರೂ ದಿನ ಕಳೆದಂತೆ ತಪ್ಪುಗಳು ಕಡಿಮೆಯಾದವು. ವಿದ್ಯಾರ್ಥಿ ಜೀವನವನ್ನೇ ನೋಡಿದ ನನಗೆ ವೃತ್ತಿಜೀವನದ ಕಡೆ ಆಸಕ್ತಿ ಮೂಡಿತು.

ಎರಡನೇ ವಾರ ವರದಿ ಮಾಡಿಕೊಂಡು ಬರುವಂತೆ ಹೇಳಿದಾಗ ಮನಸ್ಸು ದಿಗಿಲುಗೊಂಡಿತು. ಕಾರಣ ಬೆಂಗಳೂರಿನಲ್ಲಿ ಯಾವತ್ತೂ ಒಬ್ಬಳೇ ಪ್ರಯಾಣಿಸಿದವಳಲ್ಲ. ಜತೆಗೆ ಊರಿನಿಂದ ಬಂದವರು ಬೆಂಗಳೂರಿನಲ್ಲಿ ಜಾಸ್ತಿ ಮೋಸ ಹೋಗ್ತಾರೆಂದು ಕೇಳಿದ್ದೆ. ಹಾಗೆಂದು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವುದು ಸಹ ನನಗೆ ಇಷ್ಟವಿರಲಿಲ್ಲ. ಧೈರ್ಯ ಮಾಡಿ ವರದಿ ಮಾಡಲು ಹೊರಟ ನನಗೆ ಸಹಾಯ ಮಾಡಿದ್ದು ಗೂಗಲ್‌ ಮ್ಯಾಪ್‌ ಮತ್ತು ಪರ್ಸಿನಲ್ಲಿದ್ದ ಪುಡಿಗಾಸು. ಹಾಗೋ ಹೀಗೋ ವರದಿ ಮಾಡಿ ಪುನಃ ಆಫೀಸಿನತ್ತ ಬರುವಾಗ ನನಗೆ ಅರ್ಥವಾದದ್ದು ಏನೆಂದರೆ ಪಟ್ಟಣದಲ್ಲಿ ಪಾರಾಗಲು ಬೇಕಾದದ್ದು ಧೈರ್ಯದ ಜತೆ ಹಣ. ಇವೆರಡಿದ್ದರೆ ಮನುಷ್ಯ ಎಲ್ಲಿಯೂ ಬದುಕಬಲ್ಲ. ನಾನು ಇಂಟರ್ನ್ಶಿಪ್‌  ಗೆಂದು ಹೋದ ಕಾರಣ ದಿನದಲ್ಲಿ ಒಂದು ಅಥವಾ ಎರಡು ವರದಿ ಮಾಡಲು ಸಿಗುತ್ತಿತ್ತು. ಆದರೆ ಅಲ್ಲಿದ್ದ ವರದಿಗಾರರಿಗೆ ಪ್ರತಿದಿನ ನಗರದಲ್ಲಿ ನಡೆದ ಘಟನೆಗಳನ್ನೆಲ್ಲ ವರದಿ ಮಾಡಬೇಕಿತ್ತು. ಅವರ ಕಷ್ಟ ಒಮ್ಮೆ ಕಣ್ಣೆದುರು ಬಂದು ಹೋಯಿತು.

ಹೀಗೆ ಒಂದು ತಿಂಗಳು ಒಂದಾದ ಮೇಲೊಂದು ಡೆಸ್ಕ್ ನಲ್ಲಿ ಕೆಲಸ ಮಾಡಿದೆ. ನಾನು ಕಲಿಯುವ ಜತೆಗೆ ಅಲ್ಲಿದವರ ಕೆಲಸಗಳನ್ನು ಗಮನಿಸುತ್ತಿದ್ದೆ. ಆಫೀಸ್‌ ಎಂಬ ನಾಲ್ಕು ಗೋಡೆಯ ಮಧ್ಯೆ ಇಷ್ಟೆಲ್ಲ ಕೆಲಸ ನಡೆಯುತ್ತಾ ಎಂದು ಬೆರಗಾದೆ.

ಅಲ್ಲಿ ಸುಮಾರು 10 ರಿಂದ 15 ಡೆಸ್ಕ್ ಗಳಿದ್ದವು. ಪ್ರತಿಯೊಂದು ಡೆಸ್ಕಿಗೂ  ಒಬ್ಬ ಮುಖ್ಯಸ್ಥ. ಅವರು ಹೇಳಿದಂತೆ ಉಳಿದವರ ಕೆಲಸ ಸಾಗುತ್ತಿತ್ತು. ನಗರದಲ್ಲಾದ ಘಟನೆಯನ್ನು ವರದಿ ಮಾಡಿ ಅದನ್ನು ತಿದ್ದುದರಿಂದ ಹಿಡಿದು ವಿಷಯವನ್ನು ಹಾಳೆಯ ಮೇಲೆ ಹಾಕುವವರೆಗೂ ಅಲ್ಲಿ ಬಹಳಷ್ಟು ಕೆಲಸಗಳು ನಡೆಯುತ್ತವೆ. ಜತೆಗೆ ಫೋಟೋಶಾಪ್‌, ಪೇಜ್‌ ಡಿಸೈನಿಂಗ್‌ ಡೆಸ್ಕ್ಗಳು ಬೇರೇನೇ.

Advertisement

ಬೆಳಗ್ಗೆಯಿಂದಲೇ ಸುದ್ದಿಗಳು ಬರಲು ಪ್ರಾರಂಭವಾಗುತ್ತದೆ. ಸುದ್ದಿಗಳಲ್ಲಿ ಯಾವುದನ್ನು ಹಾಕಬೇಕು ಎಂಬುದನ್ನು ನಿರ್ಧಾರ ಮಾಡುವವರು ಎಡಿಟರ್‌. ಎಲ್ಲ ಸುದ್ದಿಗಳು ಒಮ್ಮೆಗೆ ಕೈ ಸೇರಿದ ತತ್‌ಕ್ಷಣ ಮಧ್ಯಾಹ್ನ ಎಡಿಟರ್‌ ರೂಮ್‌ನಲ್ಲಿ ಎಲ್ಲ ಡೆಸ್ಕಿನ ಮುಖ್ಯಸ್ಥರ ಜತೆಗೆ ಸಭೆ ನಡೆಯುತ್ತದೆ. ಎಡಿಟರ್‌ ನಿರ್ಧಾರದಂತೆ ಯಾವ ಸುದ್ದಿಗಳು ಪತ್ರಿಕೆಯಲ್ಲಿ ಮುದ್ರಣವಾಗಬೇಕು ಎಂದು ತಿಳಿಯುತ್ತದೆ. ಎಲ್ಲ ಸುದ್ದಿಗಳು ತಿದ್ದಿ ಪತ್ರಿಕೆಯಲ್ಲಿ ಕೂರಿಸಿದ ಮೇಲೆ ಯಾವುದಾದರೂ ಮುಖ್ಯವಾದ ವರದಿ ದೊರೆತರೆ ಮೊದಲು ಹಾಕಿದ ಸುದ್ದಿಯನ್ನು ತೆಗೆದು ಮತ್ತೆ ಬಂದ ಸುದ್ದಿಯನ್ನು ಹಾಕಬೇಕು. ಇದು ವರದಿಗಾರ ಮತ್ತು ಪುಟ ವಿನ್ಯಾಸಗಾರನಿಗೆ ಇರುವ ಬಹುದೊಡ್ಡ ಸವಾಲು.

ರಾತ್ರಿ 10ಗಂಟೆಗೆ ಪುಟವಿನ್ಯಾಸವಾಗಿ ಮುದ್ರಣಕ್ಕೆ ಹೋಗಬೇಕಾಗಿರುವುದರಿಂದ ಅದರ ಮೊದಲಿನ ಒಂದೆರಡು ಗಂಟೆ ಅಲ್ಲಿದ್ದವರು ಬಹಳ ಬ್ಯುಸಿ ಆಗಿರುತ್ತಾರೆ. ಆ ಸಮಯದಲ್ಲಿ ಅವರ ಜತೆ ಮಾತನಾಡಿದರೆ ಬೈಗುಳದ ಉಡುಗೊರೆಯಂತೂ  ಗ್ಯಾರಂಟಿ.

ಹೀಗೆ ಪತ್ರಿಕೆ ಮುದ್ರಣವಾಗಿ ಮುಂಜಾನೆಯ ಅಷ್ಟರಲ್ಲಿ ಜನರ ಕೈ ಸೇರುತ್ತದೆ. ಸುದ್ದಿ ಮಾಡುವುದರಿಂದ ಹಿಡಿದು ಜನರಿಗೆ ಸುದ್ದಿ ತಲುಪಿಸುವುದರ ನಡುವೆ ಇರುವ ಪತ್ರಿಕೆಯವರ ಪರಿಶ್ರಮ ಅಗಾಧ. ಇದು ಕೈ ಎತ್ತಿ ಮುಗಿಯುವಂತಹದ್ದೇ ಸರಿ.

-ಲಾವಣ್ಯ ಎಸ್‌.

ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು

 

Advertisement

Udayavani is now on Telegram. Click here to join our channel and stay updated with the latest news.

Next