Advertisement

ಸಮಸ್ಯೆಗಳ ಆಗರ ಜೋಯಿಡಾ ಗ್ರಂಥಾಲಯ

05:16 PM Nov 10, 2019 | Suhan S |

ಜೋಯಿಡಾ: ಗ್ರಂಥಾಲಯ ಎನ್ನುವುದು ಜ್ಞಾನ ದೇಗುಲವಿದ್ದಂತೆ, ಓದುವ ಅಭಿರುಚಿವುಳ್ಳವರೆಲ್ಲರೂ ಈ ದೇಗುಲದ ಭಕ್ತರಿದ್ದಂತೆ. ಇಂತಹ ಜ್ಞಾನ ದೇಗುಲವಿದ್ದ ಗ್ರಾಮದ ಜ್ಞಾನದೀವಿಗೆ ಸದಾ ಉರಿಯುತ್ತಿರಲಿದ್ದು, ಊರು ಸದಾ ಬೆಳಗುತ್ತಿರುತ್ತದೆ ಎನ್ನುವ ಮಾತಿದೆ. ಆದರೆ ಜೋಯಿಡಾ ತಾಲೂಕಿನ ಮಟ್ಟಿಗೆ ಈ ಜ್ಞಾನ ದೇಗುಲ ಎಣ್ಣೆಯಿಲ್ಲದ ದೀಪದಂತಾಗಿದ್ದು ಮಾತ್ರ ವಿಪರ್ಯಾಸ.

Advertisement

1988 ರಲ್ಲಿ ಜೋಯಿಡಾ ತಾಲೂಕು ಕೇಂದ್ರದಲ್ಲಿ ಗ್ರಾಪಂ ಗ್ರಂಥಾಲಯ ಎಂಬ ಹೆಸರಿನಲ್ಲಿ ಆರಂಭಗೊಂಡ ಗ್ರಂಥಾಲಯ ಈವರೆಗೂ ಮೇಲ್ದರ್ಜೆಗೇರದೆ ಉಳಿದಿರುವುದು ವಿಪರ್ಯಾಸವೇ ಸರಿ. ಇದು ತಾಲೂಕು ಕೇಂದ್ರದಲ್ಲಿರುವ ಗ್ರಂಥಾಲಯವಾದರೂ ಆರಂಭದಲ್ಲಿ ಸ್ವಂತ ಕಟ್ಟಡವಿರಲಿಲ್ಲ. ದಿನನಿತ್ಯ ಎರಡರಿಂದ ಮೂರು ದಿನ ಪತ್ರಿಕೆ, ಎರಡು ವಾರಪತ್ರಿಕೆ, ಇಲಾಖೆ ನೀಡಿದ ವಿವಿಧ ಪ್ರಕಾರದ ನೂರಾರು ಪುಸ್ತಕಗಳನ್ನು ಬಿಟ್ಟರೆ ಇನ್ನೇನೂ ಇರಲಿಲ್ಲ. ಮರಾಠಿ ಭಾಷಿಕ ನಾಡಾಗಿದ್ದ ಜೋಯಿಡಾದಲ್ಲಿ ಕನ್ನಡ ಓದುಗರ ಸಂಖ್ಯೆಯೂ ಕಡಿಮೆಯಾಗಿತ್ತು. ವಿದ್ಯಾರ್ಥಿಗಳು, ಇಲಾಖೆ ನೌಕರರು, ಕೆಲವೆ ಕೆಲವು ಓದುವ ಅಭಿರುಚಿಯುಳ್ಳ ಗ್ರಾಮಸ್ಥರನ್ನು ಬಿಟ್ಟರೆ ಈ ಗ್ರಂಥಾಲಯಕ್ಕೆ ಮತ್ತಿನ್ನಾರೂ ಬರುತ್ತಿರಲ್ಲ. ಅನ್ಯ ಇಲಾಖೆಯ ಕಟ್ಟಡದಲ್ಲಿ ಆರಂಭಗೊಂಡು ನಂತರ ಮತ್ತೆ ಅಂಬೇಡ್ಕರ್‌ ಭವನ, ಕನ್ನಡ ಭವನ ಹೀಗೆ ಹಲವು ಬಾರಿ ಸ್ಥಳಾಂತರಗೊಂಡು ಈಗ 2019ರ ಜನೆವರಿಯಲ್ಲಿ ಸ್ವಂತ ಕಟ್ಟಡ ಉದ್ಘಾಟನೆಯೊಂದಿಗೆ ಒಂದೆಡೆ ನೆಲೆ ನಿಲ್ಲುವಂತಾಗಿದೆ.

ಕೆಲ ವರ್ಷದಿಂದ ಗ್ರಂಥಾಲಯ ಇಲಾಖೆ ಓದುಗರಿಗಾಗಿ ಪ್ರತಿಗ್ರಂಥಾಲಯಕ್ಕೆ ಪುಸ್ತಕಗಳನ್ನು ಸರಬರಾಜು ಮಾಡುತ್ತಿದ್ದು, ಭಂಡಾರ ವೃದ್ಧಿಸುತ್ತಿದೆ. ಮಕ್ಕಳಿಗಾಗಿ ನೀತಿಕಥೆ, ಪಂಚತಂತ್ರ ಕಥೆಯಿಂದ ಹಿಡಿದು ದಾಸ ಸಾಹಿತ್ಯ, ರಾಮಾಯಣ ಮಹಾಭಾರದಂತ ಪೌರಾಣಿಕ ಕಥೆಗಳ ಪುಸ್ತಕಗಳು, ಜ್ಞಾನ ಪೀಠ ಪುರಸ್ಕೃತ ದಿಗ್ಗಜ ಸಾಹಿತಿಗಳ ಕಾದಂಬರಿ, ವಿವಿಧ ಐತಿಹಾಸಿಕ, ವಿಜ್ಞಾನ ಸಂಶೋಧನೆಗಳು, ಅಭಿನಂದನಾ ಗ್ರಂಥ, ಮರಾಠಿ, ಇಂಗ್ಲಿಷ ಕಾಂದಂರಿ ಹೀಗೆ ವಿವಿಧ ಪ್ರಕಾರದ ಓದುಗರ ಆಸಕ್ತಿಗೆ ಅನುಕೂಲವಿರುವಂತೆ ಸುಮಾರು 10,000 ಪುಸ್ತಕಗಳು ಇಲ್ಲಿವೆ.

ಓದುಗರ ಸಂಖ್ಯೆ ಕ್ಷೀಣ: ಗ್ರಂಥಾಲಯ ಕಳೆದ ಮೂರು ದಶಕಗಳಿದ ಸ್ಥಳಾಂತರಗೊಳ್ಳುತ್ತಾ ಬಂದ ಕಾರಣ ಓದುಗರು ಗ್ರಂಥಾಲಯದ ಮಾರ್ಗದಿಂದ ವಿಮುಖರಾಗುತ್ತಿದ್ದರೆ, ತಾಲೂಕು ಕೇಂದ್ರದ ಎಲ್ಲಾ ವ್ಯಾಪಾರಿ ಮಳಿಗೆಯಲ್ಲಿ, ಹೋಟೆಲ್‌ಗ‌ಳಲ್ಲಿ ಎಲ್ಲಾ ರೀತಿಯ ದಿನಪತ್ರಿಕೆಗಳು ಸಿಗುತ್ತಿದ್ದ ಕಾರಣ ಗ್ರಂಥಾಲಯಕ್ಕೆ ಬಂದು ಓದುವವರ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದೆ ಎನ್ನಲಾಗುತ್ತಿದೆ.

ಅನುದಾನ ಕೊರತೆ: ಗ್ರಂಥಾಲಯಕ್ಕೆ ದೈನಂದಿನ ಎಲ್ಲಾ ಪತ್ರಿಕೆ, ವಾರಪತ್ರಿಕೆಗಳು ಹಾಗೂ ಮಾಸಿಕ ಪತ್ರಿಕೆಗಳನ್ನು ಖರೀದಿಸಲು ಇಲಾಖೆ ನೀಡುವ ಅನುದಾನ ಕಡಿಮೆಯಾಗುತ್ತಿದೆ ಎನ್ನಲಾಗಿದೆ. ಸ್ವತಃ ಗ್ರಂಥಪಾಲಕರೇ ಸ್ವಂತ ನೂರಾರು ರೂ. ಖರ್ಚುಮಾಡಿ ಹೆಚ್ಚುವರಿ ದಿನಪತ್ರಿಕೆ, ವಾರಪತ್ರಿಕೆ ಖರಿದಿಸುತ್ತಿದ್ದಾರೆ.

Advertisement

ಸೇವೆಗೆ ಪ್ರತಿಫಲವಿಲ್ಲ: ಜೋಯಿಡಾದ ಗ್ರಂಥಾಲಯ ಮೇಲ್ವಿಚಾರಕ ಲಕ್ಷ್ಮಣ ಬಾಬು ಮಿರಾಶಿ 1993 ರಿಂದ ಈವರೆಗೂ ಗ್ರಂಥಾಲಯದಲ್ಲಿ ಸಮಯಕ್ಕೆ ಸರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಇಲಾಖೆ ನೀಡುವ ಸಂಬಳ ಕುಟುಂಬನಿರ್ವಹಣೆ ಮಾಡಲಾಗದೆ ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ನಿಷ್ಠೆಯಿಂದ ದುಡಿಯುತ್ತಿರುವ ಇಂತಹ ಗ್ರಂಥ ಪಾಲಕರಿಗೆ ಸರಕಾರದ ಕನಿಷ್ಠ ವೇತನವನ್ನಾದರು ನೀಡುವ ಮೂಲಕ ಗ್ರಂಥಾಲಯ ಇಲಾಖೆ ಅವರ ಬದುಕಿಗೆ ಆಸರೆಯಾಗಬೇಕಿದೆ.

ವಿದ್ಯುತ್‌ ಇಲ್ಲದ ಕಟ್ಟಡ: ಗ್ರಂಥಾಲಯ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕವಿಲ್ಲದೆ ಸಂಜೆ ವೇಳೆ ಓದಲಾಗುತ್ತಿಲ್ಲ. ಗುತ್ತಿಗೆದಾರನ ಅಸಮರ್ಪಕ ಕಾಮಗಾರಿಯ ಪರಿಣಾಮ ಗ್ರಂಥಾಲಯ ಉದ್ಘಾಟನೆ ಕಂಡರೂ ವಿದ್ಯುತ್‌ ಇಲ್ಲದ ಕಗ್ಗತ್ತಲೆಯ ತಾಣವಾಗಿದೆ. ಮಳೆಗಾಲದಲ್ಲಿ ಗ್ರಂಥಾಲಯದ ಮುಂಭಾಗದಿಂದ ಒಳಗೆ ನೀರು ಹರಿಯುತ್ತಿದ್ದು, ಗ್ರಂಥಪಾಲಕನೆ ಇದನ್ನು ಶುಚಿಗೊಳಿಸಬೇಕಾದ ಅವಾರ್ಯತೆ ಇದೆ.

ಮೇಲ್ದರ್ಜೆಗೆ ಏರಬೇಕಿದೆ: ತಾಲೂಕು ಕೇಂದ್ರದಲ್ಲಿರುವ ಈ ಗ್ರಂಥಾಲಯ ಮೂರು ದಶಕಗಳಿಂದ ಗ್ರಾ.ಪಂ ಗ್ರಂಥಾಲಯವಾಗಿಯೇ ಉಳಿದಿದೆ. ತಾಲೂಕು ಕೇಂದ್ರವಾಗಿದ್ದರಿಂದ ಇದನ್ನು ಮೇಲ್ದರ್ಜೆಗೇರಿಸಿ, ಗ್ರಂಥಾಲಯಕ್ಕೆ ಹೆಚ್ಚಿನ ಅನುದಾನ ಹಾಗೂ ಅಗತ್ಯ ಮೂಲ ಸೌಕರ್ಯ, ಪುಸ್ತಕಗಳನ್ನು ಒದಗಿಸಬೇಕೆನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.

 

-ಪಾಂಡುರಂಗ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next