ವಿಶಾಖಪಟ್ಟಣ: ಪ್ರೊ ಕಬಡ್ಡಿ 6ನೇ ಆವೃತ್ತಿಯ ವಿಶಾಖಪಟ್ಟಣ ಚರಣದಲ್ಲೂ ಯು ಮಂಬಾ ತಂಡದ ಪಾರಮ್ಯ ಮುಂದುವರಿದಿದೆ. ಶನಿವಾರ “ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣ’ದಲ್ಲಿ ನಡೆದ ಪಂದ್ಯದಲ್ಲಿ ಯು ಮುಂಬಾ 31-20 ಅಂಕಗಳ ಅಂತರ ದಿಂದ ಬೆಂಗಾಲ್ ವಾರಿಯರ್ ತಂಡವನ್ನು ಮಣಿಸಿತು. ಇದರೊಂದಿಗೆ ಮುಂಬೈ ತಂಡ ಗೆಲುವಿನ ಸಂಖ್ಯೆಯನ್ನು 14ಕ್ಕೆ ಏರಿಸಿಕೊಂಡಿತು. ದಿನದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ 36-26 ಅಂಕಗಳಿಂದ ಜೈಪುರ್ಪಿಂಕ್ ಪ್ಯಾಂಥರ್ಗೆ ಸೋಲುಣಿಸಿತು.
ಮುಂಬಾ ಭರ್ಜರಿ ಆಟ
ಚಾಂಪಿಯನ್ನರ ಪ್ರದರ್ಶನ ನೀಡುತ್ತಿರುವ ಯು ಮುಂಬಾ ಸಂಘಟಿತ ಸಾಮರ್ಥ್ಯದಿಂದ ಗೆಲುವನ್ನು ತನ್ನದಾಗಿಸಿಕೊಂಡಿತು. ಸಿದ್ಧಾರ್ಥ್ ದೇಸಾಯಿ (7 ಅಂಕ), ರೋಹಿತ್ ಬಲಿಯಾನ್ (4 ಅಂಕ) ರೈಡಿಂಗ್ನಿಂದ ತಂಡಕ್ಕೆ ನೆರವಾದರು. ಸುರೇಂದ್ರ ಸಿಂಗ್ (4 ಅಂಕ), ಫಜಲ್ ಅತ್ರಾಚಲಿ (4 ಅಂಕ) ಹಾಗೂ ಧರ್ಮರಾಜ್ ಚೆರಾಥನ್ (3 ಅಂಕ) ಅತ್ಯಾಕರ್ಷಕ ಟ್ಯಾಕಲ್ ಮೂಲಕ ಗಮನ ಸೆಳೆದರು.
ಮಣೀಂದರ್ ಸಿಂಗ್ (5 ಅಂಕ) ಅವರ ಅಮೋಘ ರೈಡಿಂಗ್, ರಾಣಾ ಸಿಂಗ್ (4 ಅಂಕ) ಅವರ ಆಲ್ರೌಂಡ್ ಆಟದ ಹೊರತಾಗಿಯೂ ಬೆಂಗಾಲ್ ವಾರಿಯರ್ ತಂಡ ಸೋಲನುಭವಿಸಿತು. ಶನಿವಾರದ ಎರಡೂ ಪಂದ್ಯಗಳಿಗೆ ಕ್ರಿಕೆಟಿಗ ಶಿಖರ್ ಧವನ್ ಸಾಕ್ಷಿಯಾದರು. ಅವರು ಸ್ಟೇಡಿಯಂನಲ್ಲಿ ಕುಳಿತು ಕಬಡ್ಡಿ ರೋಮಾಂಚನವನ್ನು ಸವಿದರು.
ಇಂದಿನ ಪಂದ್ಯಗಳು
1. ತಮಿಳ್-ಜೈಪುರ್
ಸ್ಥಳ: ವಿಶಾಖಪಟ್ಟಣ
ಆರಂಭ: ರಾತ್ರಿ 8.00
2. ತೆಲುಗು-ಹರ್ಯಾಣ
ಸ್ಥಳ: ವಿಶಾಖಪಟ್ಟಣ
ಆರಂಭ: ರಾತ್ರಿ 9.00