Advertisement

“ಐಪಿಎಲ್‌ಗೆ ಸರಿಸಮಾನವಾಗಿ ಬೆಳೆಯುತ್ತಿದೆ ಪ್ರೊ ಕಬಡ್ಡಿ’

11:05 PM Dec 18, 2021 | Team Udayavani |

ಕಬಡ್ಡಿಗೆ ವೃತ್ತಿಪರ ಸ್ವರೂಪ ಬಂದದ್ದೇ ಪ್ರೊ ಕಬಡ್ಡಿ ಶುರು ವಾದ ಬಳಿಕ. ಕಬಡ್ಡಿಯ ನೈಜಶಕ್ತಿ ಬೆಳಕಿಗೆ ಬಂದದ್ದೂ ಈ ಕೂಟದಿಂದಲೇ. ಇಂತಹ ಪ್ರೊ ಕಬಡ್ಡಿ ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಸಂಪೂರ್ಣ ಜೈವಿಕ ಸುರûಾ ವಲಯದಲ್ಲಿ ನಡೆ ಯಲಿದೆ. ಡಿ. 22ರಂದು ಆರಂಭವಾಗುವ ಕೂಟದ ಅಷ್ಟೂ ಪಂದ್ಯಗಳು ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರಟಾನ್‌ ಗ್ರ್ಯಾಂಡ್‌ ಹೊಟೇಲ್‌ನಲ್ಲೇ ಸಾಗುತ್ತವೆ. ಈ ಬಾರಿ ಪ್ರೊ ಕಬಡ್ಡಿ ಇತಿಹಾಸದ ಬಲಿಷ್ಠ ತಂಡ ಪಾಟ್ನಾ ಪೈರೇಟ್ಸ್‌ಗೆ ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆಟಗಾರನೊಂದಿಗೆ “ಉದಯವಾಣಿ’ ವಿಶೇಷ ಸಂದರ್ಶನ.

Advertisement

ಬಲಿಷ್ಠ ಪಾಟ್ನಾ ತಂಡದ ನಾಯಕರಾಗಿದ್ದೀರಿ. ಇದನ್ನು ಸವಾಲೆಂದು ಭಾವಿಸುತ್ತೀರೋ, ಸಾಮರ್ಥ್ಯವನ್ನು ಸಾಬೀತು ಮಾಡಲು ಅವಕಾಶವೆಂದು ಪರಿಗಣಿಸುತ್ತೀರೋ?
ಈ ಅವಕಾಶ ಸಿಕ್ಕಿರುವುದಕ್ಕೆ ಬಹಳ ಸಂತೋಷವಾಗಿದೆ. ಮೂರು ಬಾರಿ ಚಾಂಪಿಯನ್‌ ಆಗಿರುವ ತಂಡಕ್ಕೆ ನಾಯಕನಾಗಿರುವುದು ಸವಾಲೂ ಹೌದು, ಸಾಮರ್ಥ್ಯ ತೋರಿಸಲು ಅವಕಾಶವೂ ಹೌದು. ತಂಡದ ನಿರ್ವಾಹಕ ಮಂಡಳಿ ನನ್ನ ಸಾಮರ್ಥ್ಯವನ್ನು ಪರಿಗಣಿಸಿಯೇ ಈ ಅವಕಾಶ ನೀಡಿದೆ.

ಐಪಿಎಲ್‌ಗೆ ಸರಿಯಾಟಿ ಪ್ರೊ ಕಬಡ್ಡಿ ಬೆಳೆಯುತ್ತಿದೆ. ಇದರಿಂದ ದೇಶೀಯವಾಗಿ ಕಬಡ್ಡಿ ಬೆಳೆಯುವುದಕ್ಕೆ ಅವಕಾಶವಾಗಿದೆ. ಕಬಡ್ಡಿಯನ್ನು ವಿಶ್ವಮಟ್ಟದಲ್ಲಿ ಬೆಳೆಸಲು ಏನು ಮಾಡಬೇಕು?
ಐಪಿಎಲ್‌ಗೆ ಸರಿಯಾಟಿಯಾಗಿ ಪ್ರೊ ಕಬಡ್ಡಿ ಬೆಳೆದಿದೆ. ವಿಶ್ವಮಟ್ಟದಲ್ಲೂ ಕಬಡ್ಡಿ ಬೆಳೆಯುವುದಕ್ಕೆ ನೆರವಾಗಿದೆ. ಅಬೊಲ್‌ ಫ‌ಜಲ್‌ ಮಘ…ಸೊಡ್ಲು, ಮೊಹಮ್ಮದ್‌ರೆಜಾ  ಇದ್ದಾರೆ. ಹಾಗೆಯೇ ಮೆರಾಜ್‌ ಶೇಖ್‌ರಂತಹ ಖ್ಯಾತನಾಮರು ಇಲ್ಲಿ ಆಡಿದ್ದಾರೆ. ಇದು ವಿದೇಶಗಳಲ್ಲೂ ಕಬಡ್ಡಿ ಬೆಳೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಈ ಬೆಳವಣಿಗೆಯನ್ನು ನೋಡಿದರೆ ಒಲಿಂಪಿಕ್ಸ್‌ನಲ್ಲೂ ಸ್ಥಾನ ಪಡೆಯುವ ಒಂದು ಭರವಸೆ ಹುಟ್ಟಿಸಿದೆ.

ಕೊರೊನಾದಂತಹ ಸವಾಲು ಎದುರಿದ್ದರೂ ಐಪಿಎಲ್‌ ನಡೆದೇ ಹೋಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ. ಪ್ರೊ ಕಬಡ್ಡಿಯಲ್ಲಿ ಇದೇಕೆ ಸಾಧ್ಯವಾಗುತ್ತಿಲ್ಲ?
ಕಬಡ್ಡಿ ಕ್ರೀಡೆಯ ಸ್ವರೂಪ ಬಹಳ ವಿಶೇಷವಾದದ್ದು. ನೇರವಾಗಿ ಆಟಗಾರರ ನಡುವೆ ದೈಹಿಕ ಸ್ಪರ್ಶ ಇಲ್ಲಿ ನಡೆಯುತ್ತದೆ. ಇದರಿಂದ ಕೊರೊನಾ ಸುಲಭವಾಗಿ ಮತ್ತೊಬ್ಬರಿಗೆ ದಾಟಿಕೊಳ್ಳಬಹುದು. ಹೀಗಾಗಿ ಈ ಆವೃತ್ತಿಯಲ್ಲಿ ಪ್ರೇಕ್ಷಕರಿಗೆ ಪ್ರವೇಶ ನೀಡಿಲ್ಲ. ಹೀಗಾಗಿ ಸುರಕ್ಷತೆಗೆ ಆದ್ಯತೆ ನೀಡಿ ಜೈವಿಕ ಸುರಕ್ಷಾ ವಲಯದಲ್ಲಿ ಆಡಿಸಲಾಗುತ್ತಿದೆ. ಆಟಗಾರರೆಲ್ಲ 7 ದಿನ ಕ್ವಾರಂಟೈನ್‌ ಮುಗಿಸಿದ್ದಾರೆ.

ಕನ್ನಡ ನಾಡು-ಕಬಡ್ಡಿ ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಈ ಪರಂಪರೆ ಹೀಗೆಯೇ ಮುಂದುವರಿಯಲು ಏನೇನು ಮಾಡಬೇಕಿದೆ?
ಕರ್ನಾಟಕ ಮತ್ತು ಕಬಡ್ಡಿ ನಿಕಟ ಸಂಬಂಧ ಹೊಂದಿವೆ. ಈ ಪರಂಪರೆ ಹೀಗೆಯೇ ಮುಂದುವರಿಯುತ್ತದೆ. ಕರ್ನಾಟಕದಲ್ಲಿ ಹಲವು ಕ್ಲಬ್‌ ತಂಡಗಳಿವೆ. ಬ್ಯಾಂಕ್‌ ಆಫ್ ಬರೋಡಾ, ಎಸ್‌ಬಿಐ, ಎಸ್‌ಬಿಎಂ, ಪೊಲೀಸ್‌ ತಂಡ, ಆರ್‌ಡಬ್ಲ್ಯುಎಫ್ ಇದೆ. ಇದರಿಂದ ಕಬಡ್ಡಿ ಬೆಳವಣಿಗೆ ನಿರಂತರವಾಗಿ ಸಾಗುತ್ತದೆ. ಪ್ರೊ ಕಬಡ್ಡಿಯಿಂದ ಯುವ ಆಟಗಾರರಿಗೆ ಅನುಕೂಲವಾಗುತ್ತಿದೆ. ಭವಿಷ್ಯದಲ್ಲಿ ಹಲವು ಯುವಪ್ರತಿಭೆಗಳು ಹೊರಹೊಮ್ಮುವುದು ಖಚಿತ.

Advertisement

ಮೊದಲು ತೆಲುಗು ಟೈಟಾನ್ಸ್‌, ಯುಪಿ ಯೋಧಾಸ್‌, ಆಮೇಲೆ ಹರ್ಯಾಣ ಸ್ಟೀಲರ್ ಪರ ಆಡಿದ್ದೀರಿ. ಈ ಎಲ್ಲ ಕಡೆ ಭಾಷೆಗಳು ಬದಲಾಗುತ್ತವೆ. ಇದು ಸವಾಲು ಎನಿಸಿದೆಯೇ?
ಪ್ರೊ ಕಬಡ್ಡಿಯಲ್ಲಿ ಕರ್ನಾಟಕದವರ ಸಂಖ್ಯೆ ಕಡಿಮೆ. ಎಲ್ಲೋ ಅಪರೂಪಕ್ಕೆ ಕನ್ನಡಿಗ ಆಟಗಾರರು ಸಿಕ್ಕಿದಾಗ ಕನ್ನಡದಲ್ಲೇ ಮಾತನಾಡುತ್ತೇವೆ. ಆದರೆ ತಂಡದ ಆಟಗಾರರ ಜತೆ ಹಿಂದಿಯನ್ನು ಅವಲಂಬಿಸುತ್ತೇವೆ. ವಿದೇಶಿ ಆಟಗಾರರು ಇದ್ದಾಗ ಇಂಗ್ಲಿಷ್‌ ಬಳಸುತ್ತೇವೆ. ಇನ್ನೊಂದು ರೀತಿಯಲ್ಲಿ ನೋಡಿದರೆ ಪ್ರೊ ಕಬಡ್ಡಿಯಲ್ಲಿ ಕನ್ನಡ ಮಾತನಾಡುವ ಸಂದರ್ಭ ಎದುರಾಗುವುದೇ ಬಹಳ ಕಡಿಮೆ.

ಕಬಡ್ಡಿಗೆ ಇಡೀ ದೇಶವನ್ನು ಒಂದುಗೂಡಿಸು ಶಕ್ತಿಯಿದೆ. ಕ್ರಿಕೆಟ್‌ ಇಷ್ಟು ಬೆಳೆದರೂ ಕಬಡ್ಡಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಅದಕ್ಕೆ ಹೀಗೊಂದು ಶಕ್ತಿ ಬರಲು ಕಾರಣವೇನು?
ಕ್ರಿಕೆಟ್‌ಗೆ ಹೋಲಿಸುವುದಾದರೆ ಕಬಡ್ಡಿಗೆ ಅದರದ್ದೇ ಆದ ಸ್ಥಾನವಿದೆ. ಒಂದಲ್ಲ ಒಂದು ಹಂತದಲ್ಲಿ ಕಬಡ್ಡಿಯನ್ನು ನಾವು ಆಡಿರುತ್ತೇವೆ. ಬಹುತೇಕರಿಗೆ ಇದರ ನಿಯಮಗಳು ಗೊತ್ತಿರುತ್ತವೆ. ಇದೊಂದು ರೋಚಕ ಆಟ, ಪ್ರತೀ ನಿಮಿಷಕ್ಕೂ ಇಲ್ಲೊಂದು ರಹಸ್ಯವಿರುತ್ತದೆ. ಕ್ಯಾಚಿಂಗ್‌, ರೈಡಿಂಗ್‌ನಲ್ಲಿ ಅನೂಹ್ಯ ತಿರುವುಗಳಿರುತ್ತವೆ. ಆದ್ದರಿಂದಲೇ ಅದನ್ನು ಜನ ಇಷ್ಟಪಡುವುದು.

ಕಬಡ್ಡಿಯನ್ನು ಹೊರತುಪಡಿಸಿ ನಿಮ್ಮ ಮೆಚ್ಚಿನ ಕ್ರೀಡೆ ಯಾವುದು?
ಕಾಲೇಜು ಹಂತದಲ್ಲಿ ನಾನು ವೇಟ್‌ಲಿಫ್ಟರ್‌ ಆಗಿದ್ದೆ. ಅದರ ಮೂಲಕವೇ ಕ್ರೀಡಾಜೀವನ ಶುರುವಾಗಿದ್ದು. ಅನಂತರ ಕಬಡ್ಡಿ ಪ್ರವೇಶ ಮಾಡಿದೆ. ಇದರ ಮೂಲಕವೇ ಇಷ್ಟು ಬೆಳೆಯಲು ಆಗಿದ್ದು. ಒಂದು ವೇಳೆ ಕಬಡ್ಡಿಗೆ ನಾನು ಪ್ರವೇಶ ಮಾಡದಿದ್ದಿದ್ದರೆ.. ಇದರ ಬಗ್ಗೆ ಯೋಚಿಸಿಲ್ಲ!

ಪ್ರೊ ಕಬಡ್ಡಿಯಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆಯಲ್ಲ?
ಇಲ್ಲಿ ಕರ್ನಾಟಕದ ತರಬೇತುದಾರರು ಹಲವರಿದ್ದಾರೆ. ಬಿ.ಸಿ. ರಮೇಶ್‌, ರವಿ ಶೆಟ್ಟಿ, ಜಗದೀಶ್‌ ಕುಂಬ್ಳೆ ಇದ್ದಾರೆ. ಇವರಿಂದ ಮುಂದಿನ ಋತುವಿನಲ್ಲಿ ಹೆಚ್ಚಿನ ಕನ್ನಡದ ಪ್ರತಿಭೆಗಳನ್ನು ನಿರೀಕ್ಷಿಸಬಹುದು. ಹರ್ಯಾಣಕ್ಕೆ ಹೋಲಿಸಿದರೆ ರಾಜ್ಯದ ಆಟಗಾರರ ಸಂಖ್ಯೆ ಬಹಳ ಕಡಿಮೆ. ಹಾಗಂತ ರಾಜ್ಯದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಆದರೆ ಕೊರೊನಾದಿಂದಾಗಿ ಬಹುತೇಕ ಕೂಟಗಳೇ ನಡೆದಿಲ್ಲ. ಇದು ಉದಯೋನ್ಮುಖ ಆಟಗಾರರಿಗೆ ದೊಡ್ಡ ಹೊಡೆತ. ಇದೇ ಕಾರಣಕ್ಕೆ ಈ ವರ್ಷ ರಾಜ್ಯದ ಆಟಗಾರರು ಕಡಿಮೆಯಿದ್ದಾರೆ. ಈ ಬಾರಿ ಬೆಂಗಾಲ್‌ ತಂಡದಲ್ಲಿ ರಾಜ್ಯದ ಆಟಗಾರರು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಹೀಗೆ ನೋಡಿದರೆ ಕಬಡ್ಡಿಯನ್ನು ಯಾರೂ ಬೆಳೆಸಬೇಕಿಲ್ಲ. ಅದಕ್ಕೆ ತನ್ನಷ್ಟಕ್ಕೆ ತಾನೇ ಬೆಳೆದುಕೊಳ್ಳುವ ಶಕ್ತಿಯಿದೆ.

-ಕೆ. ಪೃಥ್ವಿಜಿತ್‌

Advertisement

Udayavani is now on Telegram. Click here to join our channel and stay updated with the latest news.

Next