Advertisement

ಯಾರಿಗೆ ಒಲಿಯಲಿದೆ ಪ್ರೊ ಕಬಡ್ಡಿ ಸೀಸನ್‌ ಒಂಭತ್ತರ ಕಿರೀಟ?

02:24 PM Dec 13, 2022 | Team Udayavani |

ಮುಂಬೈ: ಕಬಡ್ಡಿ ಪ್ರೇಮಿಗಳಿಗೆ ಹುಚ್ಚೆಬ್ಬಿಸಿದ್ದ ಪ್ರೊ ಕಬಡ್ಡಿ 9ನೇ ಆವೃತ್ತಿಗೆ ತೆರೆ ಬೀಳುವ ಸಮಯ ಹತ್ತಿರವಾಗಿದೆ. 12 ತಂಡಗಳ ನಡುವೆ ನಡೆದ ಜಿದ್ದಾಜಿದ್ದಿ ಕಾಳಗದಲ್ಲಿ 6 ತಂಡಗಳು ಪ್ಲೇ ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ.

Advertisement

ಡಿ. 17ರಂದು ಮುಂಬಯಿಯ ಡಿ.ವೈ. ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಯಾವ ತಂಡ ಕಪ್‌ ಎತ್ತಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಲೀಗ್‌ ಹಂತದ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವ, ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿರುವ ಜೈಪುರ್‌ ಪಿಂಕ್‌ ಪ್ಯಾಂಥರ್ಸ್ , ಪುಣೇರಿ ಪಲ್ಟನ್‌, ಬೆಂಗಳೂರು ಬುಲ್ಸ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳು ಎನ್ನಬಹುದಾಗಿದೆ.

ಆರಂಭದಿಂದಲೂ ಸಾಂಘಿಕ ಪ್ರದರ್ಶನ ನೀಡುತ್ತಾ ಬಂದಿರುವ ಜೈಪುರ್‌ ಪಿಂಕ್‌ ಪ್ಯಾಂಥರ್ಸ್ 82 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ರೈಡಿಂಗ್‌ನಲ್ಲಿ ಅರ್ಜುನ್‌ ದೇಶ್ವಾಲ್‌ (286 ಅಂಕ) ತಂಡದ ಬಲವಾಗಿದ್ದರೆ, ಡಿಫೆನ್ಸ್ ನಲ್ಲಿ ಲೆಫ್ಟ್ ಕಾರ್ನರ್‌ ಅಂಕುಶ್‌ ಮತ್ತು ನಾಯಕ ಸುನೀಲ್‌ ಕುಮಾರ್‌ ಉತ್ತಮ ಲಯದಲ್ಲಿರುವುದು ತಂಡಕ್ಕೆ ವರದಾನವಾಗಿದೆ. ಜೈಪುರ್‌ ಆಡಿರುವ 22 ಪಂದ್ಯಗಳಲ್ಲಿ 15 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದರೆ, ಒಂದು ಪಂದ್ಯ ಟೈಯಲ್ಲಿ ಮುಗಿದಿದೆ. ಪ್ರೊ ಕಬಡ್ಡಿಯ ಮೊದಲ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಜೈಪುರ್‌ ಈ ಬಾರಿ ಮತ್ತೆ ತನ್ನ ಅದ್ಭುತ ಪ್ರದರ್ಶನದ ಮೂಲಕ ಎರಡನೇ ಬಾರಿ ಕಪ್‌ ಎತ್ತುವ ಸನ್ನಾಹದಲ್ಲಿದೆ.

ಸುಲ್ತಾನ್‌ ಫಜಲ್‌ ಅಟ್ರಾಚಲಿ ನಾಯಕತ್ವದಲ್ಲಿ ಹೊಸ ಹುರುಪಿನೊಂದಿಗೆ ಆಡಳಿದ ಪುಣೇರಿ ಪಲ್ಟನ್ ಉತ್ತಮ ಪ್ರದರ್ಶನದ ಮೂಲಕ ಕಪ್‌ ಎತ್ತುವ ಫೇವರಿಟ್‌ ತಂಡವಾಗಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಪುಣೇರಿ ಜೈಪುರ್‌ ಗಿಂತ ಕೇವಲ ಎರಡೇ ಅಂಕದಿಂದ ಹಿಂದಿದೆ. ಡಿಫೆನ್ಸ್ ನಲ್ಲಿ ನಾಯಕ ಫಜಲ್‌ ತಂಡದ ಶಕ್ತಿಯಾಗಿದ್ದರೆ, ರೈಡಿಂಗ್‌ನಲ್ಲಿ ಅಸ್ಲಾಂ ಇಮಾನ್ದಾರ್‌, ಅಮಿತ್‌ ಗೊಯಟ್‌, ಆಕಾಶ್‌ ಶಿಂಧೆ ಮಿಂಚುತ್ತಿದ್ದಾರೆ. ಆಡಿರುವ 22 ಪಂದ್ಯಗಳಲ್ಲಿ 14 ಪಂದ್ಯಗಳಲ್ಲಿ ಗೆದ್ದು ಎರಡು ಪಂದ್ಯ ಟೈ ಮಾಡಿಕೊಂಡಿರುವ ಪುಣೇರಿ ಪಲ್ಟನ್‌ ಚೊಚ್ಚಲ ಕಪ್‌ ಎತ್ತಲು ಕಾತರವಾಗಿದೆ.

ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿರುವ ಬೆಂಗಳೂರು ಬುಲ್ಸ್ ಭರತ್‌ ರೈಡಿಂಗ್‌ ಮೇಲೆ ಹೆಚ್ಚು ಅವಲಂಬಿತವಾಗಿದೆ. ಡಿಫೆನ್ಸ್ ನಲ್ಲಿ ಸೌರಭ್‌ ನಂದಲ್‌ ಮತ್ತು ಅಮನ್‌ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ದುಬಾರಿ ಆಟಗಾರ ವಿಕಾಸ್‌ ಕಂಡೋಲ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದೇ ಇರುವುದು ಚಿಂತಿಸಬೇಕಾದ ಸಂಗತಿಯಾಗಿದೆ. ಜತೆಗೆ ಕಪ್ತಾನ ಮಹೇಂದರ್‌ ಸಿಂಗ್‌ ನಾಯಕನ ಆಟವಾಡಬೇಕು. ಇವರೆಲ್ಲರಿಂದಲೂ ಉತ್ತಮ ಪ್ರದರ್ಶನ ಬಂದಲ್ಲಿ ಬೆಂಗಳೂರು ಬುಲ್ಸ್ ಎರಡನೇ ಬಾರಿ ಕಪ್‌ ಎತ್ತುವುದರಲ್ಲಿ ಅನುಮಾನವಿಲ್ಲ.

Advertisement

ರೆಕಾರ್ಡ್‌ ಬ್ರೇಕರ್‌ ಪರ್ದಿಪ್‌ ನರ್ವಾಲ್‌ ನಾಯಕತ್ವದ ಯುಪಿ ಯೋಧಾಸ್‌ ತಂಡವೂ ತನ್ನ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ಲೇ ಆಪ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ರೈಡರ್‌ ಸುರೇಂದ್ರ ಗಿಲ್‌ ಆಪತ್ತಿನ ಸಮಯದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಡಿಫೆನ್ಸ್ ನಲ್ಲಿ ಇನ್ನೂ ಉತ್ತಮ ಪ್ರದರ್ಶನ ಬಂದಲ್ಲಿ ಯೋಧಾಸ್‌ ಕೂಡ ಪ್ರಶಸ್ತಿ ಹತ್ತಿರ ತೆರಳಬಹುದು.

ಹೈ ಪ್ಲೈಯರ್‌ ಪವನ್‌ ಸೆಹ್ರಾವತ್‌ ಅವರನ್ನು ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಖರೀದಿಸಿ ಅವರ ನಾಯಕತ್ವದಲ್ಲಿ ಆಡಲಿಳಿದ ತಮಿಳ್‌ ತಲೈವಾಸ್‌ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ದುರದೃಷ್ಟವಶಾತ್‌ ಪವನ್‌ ಮೊದಲ ಪಂದ್ಯದಲ್ಲಿಯೇ ಗಾಯಾಳಾಗಿ ಕೂಟದಿಂದಲೇ ನಿರ್ಗಮಿಸುವಂತಾಯಿತು. ಪವನ್‌ ಇಲ್ಲದೆ ಆರಂಭದಲ್ಲಿ ಸೋಲಿನ ಸುಳಿಗೆ ಸಿಲುಕಿದ ತಂಡ ಅನಂತರ ರೈಡರ್‌ ನರೇಂದರ್‌, ಡಿಫೆಂಡರ್‌ ಸಾಗರ್‌ ಅವರ ಉತ್ತಮ ಪ್ರದರ್ಶನ ಹಾಗೂ ತಂಡದ ಸದಸ್ಯರ ಸಾಂಘಿಕ ಪ್ರದರ್ಶನದ ಮೂಲಕ ಪ್ಲೇ ಆಪ್‌ಗೆ ಲಗ್ಗೆ ಇಟ್ಟಿದೆ. ಯುವಕರೇ ತುಂಬಿರುವ ತಂಡದಲ್ಲಿ ಅನುಭವದ ಕೊರತೆಯಿದ್ದರೂ, ಸಾಮರ್ಥ್ಯಕ್ಕೆ ಕೊರತೆಯಿಲ್ಲ.

ಹಾಲಿ ಚಾಂಪಿಯನ್‌ ದಂಬಾಗ್‌ ಡೆಲ್ಲಿ ಸಂಪೂರ್ಣವಾಗಿ ಸ್ಟಾರ್‌ ರೈಡರ್‌ ನಾಯಕ ನವೀನ್‌ ಕುಮಾರ್‌ ಅವರ ಮೇಲೆ ಅವಲಂಬಿತವಾಗಿದೆ. ಡಿಫೆನ್ಸ್ ನಲ್ಲಿ ವಿಶಾಲ್‌ ಉತ್ತಮ ಪ್ರರ್ಶನ ತೋರುತ್ತಿದ್ದಾರಾದರೂ ಕಪ್‌ ಗೆಲ್ಲಲು ಇದು ಸಾಲದು. ಕಷ್ಟಪಟ್ಟು ಪ್ಲೇ ಆಪ್‌ ಪ್ರವೇಶಿಸಿರುವ ದಂಬಾಗ್‌ ತನ್ನ ಚಾಂಪಿಯನ್‌ ಆಟವನ್ನು ತೋರದೆ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಅಂದ ಮಾತ್ರಕ್ಕೆ ದಬಾಂಗ್‌ ಅನ್ನು ಕಡೆಗಣಿಸುವಂತಿಲ್ಲ. ಅದು ಯಾವ ಸಂದರ್ಭದಲ್ಲಿಯೂ ಎದುರಾಳಿಯ ಮೇಲೆ ಎರಗಿ ಕಪ್‌ ಅನ್ನು ತನ್ನಲ್ಲಿ ಉಳಿಸಿಕೊಳ್ಳಲುಬಹುದು.

ಇಂದಿನಿಂದ ಪ್ಲೇ ಆಪ್‌ ಪಂದ್ಯಗಳು ಆರಂಭವಾಗಲಿದ್ದು, ಯಾವ ತಂಡ ಉತ್ತಮ ಪ್ರದರ್ಶದ ಮೂಲಕ ಫೈನಲ್‌ ಪ್ರವೇಶಿಸಿ ಕಪ್‌ ಎತ್ತಿ ಸಂಭ್ರಮಿಸುವುದೋ ಕಾದು ನೋಡಬೇಕಾಗಿದೆ.

ಸುಶ್ಮಿತಾ ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next