Advertisement

ಪ್ರಿಯಾಂಕಾ ಸೆಕೆಂಡ್‌ ಹಾಫ್ ಮಾತು

11:10 AM May 22, 2018 | Team Udayavani |

“ಸೆಕೆಂಡ್‌ ಹಾಫ್’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾದಾಗ ಅನೇಕರು ಅಚ್ಚರಿಪಟ್ಟಿದ್ದರು. ಅದಕ್ಕೆ ಕಾರಣ ಪ್ರಿಯಾಂಕಾ ಉಪೇಂದ್ರ ಅವರ ಗೆಟಪ್‌. ಕಾನ್ಸ್‌ಟೇಬಲ್‌ ಆಗಿ ಟಿವಿಎಸ್‌ ಓಡಿಸಿಕೊಂಡು ಬರುವ ಗೆಟಪ್‌ನಲ್ಲಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಂಡಿದ್ದರು. ಈಗ “ಸೆಕೆಂಡ್‌ ಹಾಫ್’ ಚಿತ್ರ ಬಿಡುಗಡೆಯಾಗಿದೆ. ಯೋಗಿ ದೇವಗಂಗೆ ಈ ಚಿತ್ರದ ನಿರ್ದೇಶಕರು. ಚಿತ್ರ ಜೂನ್‌ ಮೊದಲ ವಾರ ತೆರೆಕಾಣುತ್ತಿದೆ. ಇಡೀ ಸಿನಿಮಾ ಪ್ರಿಯಾಂಕಾ ಸುತ್ತವೇ ಸುತ್ತಲಿದೆ. ವಿಭಿನ್ನ ಪಾತ್ರ ಮಾಡಿರುವ ಖುಷಿಯಲ್ಲಿರುವ ಪ್ರಿಯಾಂಕಾ ಉಪೇಂದ್ರ ಅವರು “ಸೆಕೆಂಡ್‌ ಹಾಫ್’ ಬಗ್ಗೆ ಮಾತನಾಡಿದ್ದಾರೆ ….

Advertisement

* ನಿಮ್ಮ “ಸೆಕೆಂಡ್‌ಹಾಫ್’ ಚಿತ್ರ ಬಿಡುಗಡೆಯಾಗುತ್ತಿದೆ. ಇದರ ವಿಶೇಷತೆಯೇನು?
ಈ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮೊದಲ ಬಾರಿಗೆ ನಾನು ಪೊಲೀಸ್‌ ಪೇದೆಯಾಗಿ ನಟಿಸಿದ್ದೇನೆ. ಉಪ್ಪಿ ಅಣ್ಣನ ಮಗ ನಿರಂಜನ್‌ ಈ ಚಿತ್ರದ ಮೂಲಕ ಲಾಂಚ್‌ ಆಗುತ್ತಿದ್ದಾನೆ. ತುಂಬಾ ಫ್ರೆಶ್‌ ಆದ ಕಥೆ ಇದೆ. ಚಿತ್ರದಲ್ಲಿ ಸಿಸಿಟಿವಿ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾವನ್ನು ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗುವ ವಿಶ್ವಾಸವಿದೆ. 

* ನಿಮ್ಮ ಪಾತ್ರದ ಬಗ್ಗೆ ಹೇಳಿ?
ನಾನಿಲ್ಲಿ ಅನುರಾಗ ಎಂಬ ಪಾತ್ರ ಮಾಡಿದ್ದೇನೆ. ಪೊಲೀಸ್‌ ಕಾನ್ಸ್‌ಟೇಬಲ್‌ ಪಾತ್ರ. ಪೊಲೀಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕಾನ್ಸ್‌ಟೇಬಲ್‌ಗ‌ಳ ಕೆಲಸ ಹೇಗಿರುತ್ತದೆ, ಪ್ರಕರಣವೊಂದನ್ನು ಪತ್ತೆಹಚ್ಚುವಲ್ಲಿ ಅವರ ಶ್ರಮ ಏನು ಎಂಬ ಅಂಶವನ್ನು ತೋರಿಸಿದ್ದೇನೆ. ಅದರಲ್ಲೂ ಮಹಿಳಾ ಕಾನ್ಸ್‌ಟೇಬಲ್‌ಗ‌ಳ ಬಗ್ಗೆ ಹೆಚ್ಚು ಫೋಕಸ್‌ ಮಾಡಲಾಗಿದೆ. ಇದು ಪೊಲೀಸ್‌ ಇಲಾಖೆ ಸೇರುವ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಬಹುದು. 

* ಪಾತ್ರಕ್ಕಾಗಿ ನಿಮ್ಮ ತಯಾರಿ?
ಮುಖ್ಯವಾಗಿ ನಾನು ಟಿವಿಎಸ್‌ ಓಡಿಸಬೇಕಿತ್ತು. ಅದನ್ನು ಕಲಿತೆ. ಈ ಪಾತ್ರಕ್ಕೆ ಬಾಡಿ ಲಾಂಗ್ವೇಜ್‌ ಕೂಡಾ ಮುಖ್ಯ. ಹಾಗಾಗಿ, ಬಾಡಿ ಲಾಂಗ್ವೇಜ್‌ ಮೇಲೆ ಹೆಚ್ಚು ಗಮನಹರಿಸಿದ್ದೇನೆ. ಮೇಕಪ್‌ ಇಲ್ಲದೇ ನಟಿಸಿದ್ದೇನೆ. ಇಡೀ ಪಾತ್ರಕ್ಕೆ ಬೇರೆ ತರಹದ ಲುಕ್ಸ್‌ ಬೇಕಿತ್ತು. ಪಾತ್ರ ಏನು ಬಯಸಿತ್ತೋ, ಅವೆಲ್ಲವನ್ನು ನೀಡಲು ನಾನಿಲ್ಲಿ ಪ್ರಯತ್ನಿಸಿದ್ದೇನೆ. 

* ಕಾನ್ಸ್‌ಟೇಬಲ್‌ಗ‌ಳ ಬಗ್ಗೆ ಏನು ಹೇಳಲು ಹೊರಟಿದ್ದೀರಿ?
ಮೊದಲೇ ಹೇಳಿದಂತೆ ಪೊಲೀಸ್‌ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ಗ‌ಳ ಪಾತ್ರ ಕೂಡಾ ಮಹತ್ವದ್ದಾಗಿರುತ್ತದೆ. ಆದರೆ, ಕೆಲವೊಮ್ಮೆ ಅವರ ಶ್ರಮ ಬೆಳಕಿಗೆ ಬರೋದಿಲ್ಲ. ಒಳ್ಳೆಯ ಕೆಲಸ ಮಾಡಲು ಹುದ್ದೆ ಮುಖ್ಯವಾಗುವುದಿಲ್ಲ, ಜಾಣ್ಮೆ ಹಾಗೂ ಕೆಲಸದ ಮೇಲಿನ ಶ್ರದ್ಧೆ ಸಾಕು ಎಂಬ ಅಂಶವನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಇದೊಂದು ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾ. ಒಂದು ಘಟನೆಯ ಸುತ್ತ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಸ್ವಲ್ಪ ಮಟ್ಟಿನ ಆ್ಯಕ್ಷನ್‌ ಕೂಡಾ ಇದೆ. 

Advertisement

* ಈ ಚಿತ್ರವನ್ನು ಪೊಲೀಸ್‌ ಇಲಾಖೆ ನೋಡಬೇಕು ಅಂತೀರಾ?
ನೋಡಿದ್ರೆ ಒಳ್ಳೆಯದು. ಸಾಕಷ್ಟು ಸೂಕ್ಷ್ಮ ವಿಚಾರಗಳನ್ನು ಇಲ್ಲಿ ಹೇಳಿದ್ದೇವೆ. ಇಡೀ ಸಿನಿಮಾ ನೈಜವಾಗಿ ಮೂಡಿಬಂದಿದೆ. ನಿರ್ದೇಶಕ ಯೋಗಿ ದೇವಗಂಗೆ ಅವರು ಹೊಸ ಕಾನ್ಸೆಪ್ಟ್ನೊಂದಿಗೆ ಚಿತ್ರ ಮಾಡಿದ್ದಾರೆ. 

* ಮೊದಲ ಬಾರಿಗೆ ಒಂದೇ ಮನೆಯ ಇಬ್ಬರು ಒಟ್ಟಿಗೆ ನಟಿಸಿದ್ದೀರಿ?
ಹೌದು, ಉಪ್ಪಿ ಅಣ್ಣನ ಮಗ ನಿರಂಜನ್‌ ಈ ಚಿತ್ರದ ಮೂಲಕ ಲಾಂಚ್‌ ಆಗುತ್ತಿದ್ದಾರೆ. ನಾನು ಮದುವೆಯಾಗಿ ಉಪ್ಪಿ ಮನೆಗೆ ಬರುವಾಗ ಆತ ಪುಟ್ಟ ಪಾಪು. ಈಗ ಹೀರೋ ಆಗಿದ್ದೇನೆ. ಖುಷಿಯಾಗುತ್ತದೆ. ಈ ಚಿತ್ರದಲ್ಲಿ ಆತ ಪಾತ್ರ ಮಾಡುತ್ತಾನೆಂದು ನನಗೆ ಗೊತ್ತಿರಲಿಲ್ಲ. ಅದೊಂದು ದಿನ ಮನೆಗೆ ಬಂದ ನಿರ್ದೇಶಕರು ನಿರಂಜನ್‌ ನೋಡಿ, ಈ ಪಾತ್ರಕ್ಕೆ ಹೊಂದಿಕೆಯಾಗುತ್ತಾರೆಂದು ಅವಕಾಶ ಕೊಟ್ಟಿದ್ದಾರೆ. ನಿರಂಜನ್‌ ಕೂಡಾ ಚೆನ್ನಾಗಿ ನಟಿಸಿದ್ದಾನೆ. ಆತನಿಗೆ ರಂಗಭೂಮಿಯ ಹಿನ್ನೆಲೆಯೂ ಇದೆ. 

* ನಿಮ್ಮ ಪಾತ್ರದ ಬಗ್ಗೆ ಉಪ್ಪಿ ಏನಂತ್ತಾರೆ?
ಅವರಿಗೆ ನಾನು ಯೂನಿಫಾರಂನಲ್ಲಿರುವ ಗೆಟಪ್‌ ಇಷ್ಟವಾಗಿದೆ. “ಆ ಗೆಟಪ್‌ನಲ್ಲಿ ತುಂಬಾ ಕ್ಯೂಟ್‌ ಆಗಿ ಕಾಣುತ್ತೀಯಾ’ ಅಂತಾರೆ.

* ಬೇರೆ ಸಿನಿಮಾಗಳ ಬಗ್ಗೆ ಹೇಳಿ?
ಸದ್ಯ “ಸೆಕೆಂಡ್‌ ಹಾಫ್’ ಬಿಡುಗಡೆಗೆ ರೆಡಿಯಾಗಿದೆ. ಅದು ಬಿಟ್ಟರೆ “ಹೌರಾ ಬ್ರಿಡ್ಜ್’ ಬಹುತೇಕ ಪೂರ್ಣಗೊಂಡಿದೆ. ಇನ್ನೊಂದಿಷ್ಟು ಕಥೆಗಳನ್ನು ಕೇಳುತ್ತಿದ್ದೇನೆ. ಮನರಂಜನೆ ಜೊತೆಗೆ ಸಣ್ಣ ಸಂದೇಶವಿರುವ ಸಿನಿಮಾಗಳನ್ನು ಮಾಡುವ ಆಸೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next