Advertisement

ತಿಪ್ಪರ್ಲಾಗ ಹಾಕಿದರೂ ಚಿತ್ತಾಪುರದಲ್ಲಿ ಬಿಜೆಪಿ ಗೆಲ್ಲಲ್ಲ : ಪ್ರಿಯಾಂಕ್ ಖರ್ಗೆ

05:11 PM Apr 17, 2023 | Team Udayavani |

ವಾಡಿ: ಬಿಜೆಪಿ ಎಷ್ಟೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಪ್ರಿಯಾಂಕ್ ಖರ್ಗೆ ಮಾತಿನೇಟು ನೀಡಿದರು.

Advertisement

ನಾಮಪತ್ರ ಸಲ್ಲಿಸಿದ ನಂತರ ಚಿತ್ತಾಪುರ ಪಟ್ಟಣದಲ್ಲಿ ಏರ್ಪಡಿಸಿದ್ದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಇದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಇದ್ದಾರೆ. ಬಿಜೆಪಿಯಲ್ಲಿ ಯಾರು ಇದ್ದಾರೆ. ಅಲ್ಲೇ ಇದ್ದ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಯನ್ನು ಕೀಳಾಗಿ ನಡೆಸಿಕೊಂಡಿದ್ದರಿಂದ ಅವರಿಬ್ಬರೂ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಪಾಪ, ಯಡಿಯೂರಪ್ಪನವರನ್ನು ಕಣ್ಣೀರು ಹಾಕಿಸಿ‌ ಸಿಎಂ ಹುದ್ದೆಯಿಂದ ಕೆಳಗಿಳಿಸಲಾಯಿತು ಎಂದು ತಿವಿದರು.

ಈ ಭಾಗದಿಂದ ಹೋಗಿ ಬೆಂಗಳೂರಿನಲ್ಲಿ ಇರುವ ಯುವಕ ಯುವತಿಯರು ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗಾಗಿ ಲೈಬ್ರರಿಯಲ್ಲಿ ಓದಲು ಅಲ್ಲಿದ್ದಾರೆ. ಅವರಿಗೆ ಊಟಕ್ಕೂ ಸಂಕಷ್ಟವಿದೆ. ಅವರೊಂದು ವಾಟ್ಸಪ್ ಗ್ರೂಪ್ ಮಾಡಿಕೊಂಡು ಯಾವ ಭಾಗದಲ್ಲಿ ಮದುವೆ ಮುಂತಾದ ಕಾರ್ಯಕ್ರಮ ಇದ್ದರೆ ಅಲ್ಲಿ ಫ್ರೀ ಊಟ ಇರುವ ಮಾಹಿತಿ ಹಂಚಿಕೊಂಡು ಅಲ್ಲಿ ಊಟ ಮಾಡುತ್ತಿದ್ದಾರೆ. ಕಾರಣ ಅವರು ಊಟ ಮಾಡುತ್ತಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಬಿಜೆಪಿ ಸರ್ಕಾರ ಬಂದ್ ಮಾಡಿದೆ ಎಂದು ಟೀಕಿಸಿದರು.

ಕೆಕೆಆರ್ ಡಿಬಿಯಲ್ಲಿ ಅವ್ಯಾಹತವಾದ ಭ್ರಷ್ಟಾಚಾರ ನಡೆದಿದೆ. ಜನಸಾಮಾನ್ಯರ ದುಡ್ಡು ಲೂಟಿ ಮಾಡಿದ ಅಧಿಕಾರಿಗಳನ್ನು ನಾವು ಅಧಿಕಾರಕ್ಕೆ ಬಂದ ನಂತರ ಜೈಲಿಗೆ ಕಳಿಸುತ್ತೇವೆ. ಇದು ನಾನು ನಿಮಗೆ ಕೊಡುವ ಗ್ಯಾರೆಂಟಿ ಎಂದರು.

Advertisement

ಬಿಜೆಪಿ ಸರ್ಕಾರದ ಆಡಳಿತದಲ್ಲಿ ರೈತರ ರಸಗೊಬ್ಬರ, ಪೆಟ್ರೋಲ್, ಅಡುಗೆ ಎಣ್ಣೆ, ಅನಿಲ‌ ಬೆಲೆ ದುಬಾರಿಯಾಗಿದೆ. ಹಾಗಾಗಿ, ಪ್ರತಿ‌ಕುಟುಂಬದ ಯಜಮಾನಿಗೆ ಸಂಸಾರಿಕ ತೊಂದರೆ ನೀಗಿಸಲು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ರೂ‌. 2000 ನೀಡುತ್ತೇವೆ. 200 ಯೂನಿಟ್ ವಿದ್ಯುತ್ ನ್ನು ಉಚಿತವಾಗಿ ಗೃಹಜ್ಯೋತಿ ಯೋಜನೆಯಡಿಯಲ್ಲಿ ನೀಡುತ್ತೇವೆ. ನಿರುದ್ಯೋಗಿ ಪದವಿಧರ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಉದ್ಯೋಗ ಸಿಗುವವರೆಗೆ ಅಂತಹ ಯುವಕರಿಗೆ ಯುವ ನಿಧಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ಮುಗಿದವರಿಗೆ ರೂ. 1500 ನೀಡುತ್ತೇವೆ. ಪ್ರತಿ ಕುಟುಂಬಕ್ಕೆ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಹತ್ತು ಕೆಜಿ ಅಕ್ಕಿ ಉಚಿತ ನೀಡುತ್ತೇವೆ. ಈ ನಾಲ್ಕು ಯೋಜನೆಗಳು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಾಗಿವೆ. ಈ ನಾಲ್ಕು ಯೋಜನೆಯಲ್ಲಿ ಮೂರಕ್ಕೆ ವಿರೋಧಿಸುವ ಬಿಜೆಪಿ ಅದರಲ್ಲೂ ಚಿತ್ತಾಪುರದ‌ ಬಿಜೆಪಿ ನಾಯಕರು ಅನ್ನಭಾಗ್ಯಕ್ಕೆ ಒಪ್ಪಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿಗರಿಗೆ ಸಮಾಜ ಕಲ್ಯಾಣ ಬೇಕಿಲ್ಲ ಸ್ವಯಂ ಕಲ್ಯಾಣ ಪ್ರಮುಖವಾಗಿದೆ. ಚಿತ್ತಾಪುರದಲ್ಲಿ‌ ಬಿಜೆಪಿ ಆಯ್ಕೆ ಮಾಡಿಕೊಂಡಿರುವ ವ್ಯಕ್ತಿಯ ಹಿನ್ನೆಲೆಬಗ್ಗೆ ಯೋಚಿಸಿದಾಗ ಲೂಟಿಗೆ ಪರೋಕ್ಷವಾಗಿ ಬೆಂಬಲವಿದೆ ಎಂದು ಒಪ್ಪಿಕೊಂಡಂತಾಗುತ್ತದೆ. ಬಡವರಿಗೆ ಹಂಚಲು ಉದ್ದೇಶಿಸುವ ಅಕ್ಕಿ ಹಾಗೂ ಹಾಲಿನ‌ ಪೌಡರ ಕದಿಯುವವರಿಗೆ ಟಿಕೇಟ್ ನೀಡಲಾಗಿದೆ. ಇದು ನಾನು ಹೇಳುತ್ತಿಲ್ಲ‌ ಇದನ್ನು ಯಾದಗಿರಿಯ ಕೋರ್ಟ್ ಹೇಳಿದೆ. ನಿಮಗೆ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ‌ಮುಖ್ಯವಲ್ಲ. ನಿಮ್ಮ ಚುನಾವಣೆ ಹೋರಾಟ ಮೋದಿ, ಶಾ ಹಾಗೂ ಆರ್ ಎಸ್ ಎಸ್ ವಿರುದ್ದವಿರಬೇಕು ಎಂದು ಮನವಿ ಮಾಡಿದರು.

ಚಿತ್ತಾಪುರ ಹಿತ‌ಕಾಪಾಡುವುದು, ಇಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು,‌ ಮಹಿಳೆಯರಿಗೆ ಸುರಕ್ಷತೆಯ ನೀಡುವುದಕ್ಕಾಗಿ ಈ ತಾಲೂಕಿನ ಮೊಮ್ಮಗನಾದ ನನ್ನಿಂದ ಮಾತ್ರ ಸಾಧ್ಯ ಯಾವ ಬಿಜೆಪಿ ಅಭ್ಯರ್ಥಿಯಿಂದ ಸಾಧ್ಯವಿಲ್ಲ ಹಾಗಾಗಿ ನನಗೆ ಆಶೀರ್ವಾದ ಮಾಡಿ ಎಂದು ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ತಾಲೂಕಿನಲ್ಲಿ ಪ್ರಬುದ್ಧ ಸಮಾಜ‌ ನಿರ್ಮಾಣ‌ ಮಾಡುವ ಜವಾಬ್ದಾರಿ ನನಗೆ‌ ಬಿಡಿ. ಹೋದ ಸಲವೂ ನನಗೆ ಆರಿಸಿ ತಂದಿದ್ದೀರಿ ಆದರೆ ಪಗಾರ ಕಡಿಮೆ ಮಾಡಿದ್ದೀರಿ ಆದರೆ ಈ ಸಲ ಜಾಸ್ತಿ ಪಗಾರ ನೀಡಿ. ಕನಿಷ್ಠ 25,000 ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿ. ನಿಮ್ಮ ಹದಿನೈದು ದಿನ ನಿಮ್ಮ ಶ್ರಮ ನೀಡಿ ಆಮೇಲೆ ಮುಂದಿನ ಐದು ವರ್ಷದ ಅವಧಿ ನಿಮ್ಮ ಕಾಳಜಿ ನನಗೆ ಬಿಡಿ. ನಿಮ್ಮ ಅಭಿವೃದ್ದಿ ನನಗೆ ಸೇರಿದ್ದು ಎಂದು ಭರವಸೆ ನೀಡಿದರು.

ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಎಲ್ಲ ಸಮುದಾಯದ ಜನರಿಗೆ ಒಳಿತು ಬಯಸುವ ಪ್ರಿಯಾಂಕ್ ಖರ್ಗೆ ಅವರ ಕೈ ಹಿಡಿಯಬೇಕು. ಅವರನ್ನು ಗೆಲ್ಲಿಸುವ ಮೂಲಕ ಇಡೀ ರಾಜ್ಯಕ್ಕೆ ಅಭಿವೃದ್ದಿ ಪರವಾದ ಸಂದೇಶ ಕಳಿಸಬೇಕು ಎಂದರು.

ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ ಮಾತನಾಡಿ ಚಿತ್ತಾಪುರದಲ್ಲಿ ಒಂದು ಕಡೆ ಮೃಷ್ಠಾನ್ನವಿದೆ ಮತ್ತೊಂದು ಕಡೆ ಮುಸುರೆ‌ ಇದೆ ನೀವು ಆಯ್ಕೆ ಮಾಡಬೇಕಿರುವುದು ಮೃಷ್ಠಾನ್ನವನ್ನು.. ಅಭಿವೃದ್ದಿಪರ ಇರುವ ಪ್ರಿಯಾಂಕ್ ಖರ್ಗೆ ಮೃಷ್ಠಾನ್ನವಿದ್ದಂತೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷವನ್ನು ಹಲವಾರು ಕಾರ್ಯಕರ್ತರು ಸೇರ್ಪಡೆಗೊಂಡರು.

ವೇದಿಕೆಯ ಮೇಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ಸಾಲಿ, ಭಾಗನಗೌಡ ಸಂಕನೂರು, ಡಾ‌ ಎಸ್ ಬಿ ಕಾಮರೆಡ್ಡಿ, ಸಿದ್ದಲಿಂಗರೆಡ್ಡಿ ಉಳ್ಳೆಸೂಗೂರು, ರಾಜ್ಯ ಚುನಾವಣೆ ಸಹ ಸಂಯೋಜಕ ರಮೇಶ ಮರಗೋಳ, ಮಾಜಿ ಎಂ ಎಲ್ ಸಿ ಶರಣಪ್ಪ ಮಟ್ಟೂರು, ಮಲ್ಲಿಕಾರ್ಜುನ ಕಾಳಗಿ, ಅಬ್ಧುಲ್ ಅಜೀಜ ಸೇಠ, ಶ್ರೀನಿವಾಸ ಸಗರ, ಶಿವಾನಂದ ಪಾಟೀಲ, ನೀಲಕಂಠರಾವ ಮೂಲಗೆ, ಮಹೇಮೂದ್ ಸಾಹೇಬ, ನಾಗರೆಡ್ಡಿ ಪಾಟೀಲ ಕರದಾಳ, ಶೃತಿ ಪೂಜಾರಿ, ಗೋಪಾಲರೆಡ್ಡಿ, ಶೀಲಾ ಕಾಶಿ, ರೇಣುಕಾ ಶಿಂಘೆ, ಮಾಪಣ್ಣ ಗಂಜೀಗೇರ, ಜುಮ್ಮಣ್ಣ ಪೂಜಾರಿ, ಮುಕ್ತಾರ ಪಟೇಲ, ಶರಣಗೌಡ ಹೇರೂರು ಸೇರಿದಂತೆ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next