Advertisement

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

08:24 PM May 24, 2022 | Team Udayavani |

ವಾಡಿ (ಚಿತ್ತಾಪುರ) : ಪಠ್ಯಪುಸ್ತಕ ಪರೀಷ್ಕರಣೆ ಹೆಸರಿನಲ್ಲಿ ಶಿಕ್ಷಣವನ್ನು ಕೇಸರೀಕರಣಗೊಳಿಸಲು ರಾಜ್ಯ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಬಹು ಸಂಸ್ಕೃತಿಯ ಈ ಕನ್ನಡ ನಾಡಿನಲ್ಲಿ ಏಕ ಜಾತಿ ಪ್ರಭಾವದ ಮನುವಾದ ಬೇರನ್ನು ಪಠ್ಯದಲ್ಲಿ ನೆಟ್ಟಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

Advertisement

ರಾಜ್ಯದಲ್ಲಿ ಭುಗಿಲೆದ್ದಿರುವ ಪಠ್ಯ ಪುಸ್ತಕ ಪರೀಷ್ಕರಣೆ ವಿವಾದದ ಕುರಿತು ಮಂಗಳವಾರ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಂದೇಶವನ್ನು ಹಂಚಿಕೊಂಡಿರುವ ಪ್ರಿಯಾಂಕ್, ಬಲು ತೀಕ್ಷಣವಾಗಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಶೇ.40 ಕಮಿಷನ್ ದಂಧೆಯಲ್ಲಿ ತೊಡಗಿರುವ ಭಾಜಪ ಸರ್ಕಾರ ಅಪರಿಮಿತವಾದ ಭ್ರಷ್ಟಾಚಾರದಲ್ಲಿ ತೊಡಗಿದೆ. ಪ್ರಾಯೋಜಿತ ಕೋಮುದಳ್ಳುರಿ ಮತ್ತು ಹಂಗಿಲ್ಲದ ಬೆಲೆ ಏರಿಕೆಗಳು ಜನಸಾಮಾನ್ಯರ ಜೀವನ ಹಾಳುಗೆಡವಿದೆ. ಈಗ ಪಠ್ಯಪುಸ್ತಕದಲ್ಲಿ ಕೋಮುವಾದಿ ಹಿನ್ನೆಲೆಯ ಬಾಡಿಗೆ ಭಾಷಣಕಾರನ ಲೇಖಕನವನ್ನು ಸೇರಿಸಿ ಮಕ್ಕಳ ಭವಿಷ್ಯವನ್ನು ಮಣ್ಣುಪಾಲು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತಿಹಾಸ ಮರೆತವರು ಇತಿಹಾಸವನ್ನು ರಚಿಸುವುದಿಲ್ಲ ಎಂದು ಅಂಬೇಡ್ಕರರು ಹೇಳಿರುವಂತೆ, ಕೋಮುಸೌಹಾರ್ಧತೆ ಎಂಬುದು ಅರಿಯದವರು ಇಂದು ಈ ನಾಡಿನ ಇತಿಹಾಸವನ್ನೇ ತಿರುಚಲು ಮುಂದಾಗಿದ್ದಾರೆ. ತಾಯಿನಾಡನ್ನೇ ಬ್ರಿಟೀಷರಿಗೆ ಮಾರಲು ಹೊರಟಿದ್ದ ಹೇಡಿಗಳನ್ನು ವೀರರಂತೆ ಬಿಂಬಿಸಲು ಮುಂದಾಗಿರುವುದು ದೇಶಕ್ಕಾಗಿ ಪ್ರಾಣತೆತ್ತ ನಿಜವಾದ ದೇಶಭಕ್ತರಿಗೆ ಮಾಡಿದ ಘೋರ ಅಪಮಾನವಾಗಿದೆ. ಈಟಿ ಸೆಲ್‌ನ ಟ್ರೋಲ್‌ಗಳು ಇಂದು ಪಠ್ಯಪುಸ್ತಕ ಪರೀಷ್ಕರಣೆಯ ಸೂತ್ರದಾರಿಗಳಾಗಿದ್ದಾರೆ. ಜಾತಿ ಸಮಾನತೆ, ಕೋಮು ಸೌಹಾರ್ಧತೆ ಸಾರಿದ ಕವಿಗಳು ಹಾಗೂ ಬಡ ಜನರ ಗ್ರಾಮೀಣ ಜನಪದ ನುಡಿಗಳು ಇವರಿಗೆ ಬೇಕಾಗಿಲ್ಲ. ಬಾಯಿಬಿಟ್ಟರೆ ಸುಳ್ಳು ಹೇಳುವ ಬಾಡಿಗೆ ಭಾಷಣಕಾರರ ಲೇಖನಗಳು ಪಠ್ಯಪುಸ್ತಕದ ಭಾಗವಾಗಿವೆ ಎಂದು ಪ್ರಿಯಾಂಕ್ ಖರ್ಗೆ ವಿಷಾಧಿಸಿದ್ದಾರೆ.

ಇದನ್ನೂ ಓದಿ : ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ

ಸ್ವಾತಂತ್ರ್ಯಕ್ಕಾಗಿ ಗಲ್ಲುಗಂಭಕ್ಕೇರಿದ ಶಹೀದ ಭಗತ್‌ಸಿಂಗ್ ಹಾಗೂ ಮೂರು ಸಲ ಬ್ರಿಟೀಷರ ವಿರುದ್ಧ ಯುದ್ಧ ಮಾಡಿದ ಟಿಪ್ಪು ಅವರ ಇತಿಹಾಸ ಬಿಜೆಪಿಗೆ ಬೇಡವಾಗಿದೆ. ಬದಲಾದ ಶಿಕ್ಷಣ ವ್ಯವಸ್ಥೆಯಿಂದ ದೇಶದ ತ್ರೀವರ್ಣ ಧ್ವಜದ ಬದಲು ಆರ್‌ಎಸ್‌ಎಸ್‌ನ ಭಗ್ವಾ ಧ್ವಜಕ್ಕೆ ಮಂಡಿಯೂರಬೇಕಾದ ಪರಸ್ಥಿತಿ ಬರಲಿದೆ. ಸಾರಾ ಅಬೂಬಕರ್, ಕೆ.ಲೀಲಾ, ಬಿ.ಟಿ.ಲಲಿತಾ ನಾಯ್ಕ್ ಅವರ ಚೇತೋಹಾರಿ ಲೇಖನಗಳನ್ನು ಕೈಬಿಟ್ಟು, ಹೆಣ್ಣೊಬ್ಬಳನ್ನು ಹಣದ ರಾಶಿಗೆ ಹೋಲಿಸುವ ಆರ್‌ಎಸ್‌ಎಸ್ ಪ್ರೇಮಿಯ ಲೇಖನಗಳನ್ನು ಪಠ್ಯದಲ್ಲಿ ಸೇರಿಸಲಾಗಿದ್ದು, ಮನುವಾದದ ಸ್ತ್ರೀ ವಿರೋಧಿ ನೀತಿಗಳನ್ನು ೨೧ನೇ ಸತಮಾನದ ಮಕ್ಕಳಿಗೆ ಕಲಿಸುವ ನೀಚ ಸ್ಥಿತಿಗೆ ನಾವು ಬಂದಿದ್ದೇವಾ? ಜಾತಿ ಶೋಷಣೆ ವಿರುದ್ಧ ಹೋರಾಡಿದವರನ್ನ ಬದಿಗೆ ಸರಿಸುತ್ತಾ, ಮನುವಾದ ಸಾರಿದವರನ್ನ ಮುನ್ನೆಲೆಗೆ ತರಲಾಗುತ್ತಿದೆ. ಇಂತಹ ಶಿಕ್ಷಣವನ್ನು ಬಿಜೆಪಿ ನಾಯಕರ ಮಕ್ಕಳು ಎಂದಿಗೂ ಕಲಿಯುವುದಿಲ್ಲ. ಕಾರಣ ಅವರೆಲ್ಲರೂ ವಿದೇಶದಲ್ಲಿ ಓದುತ್ತಾರೆ ಎಂದು ತಿವಿದಿರುವ ಪ್ರಿಯಾಂಕ್, ಹೇಳೋದು ಸಬ್‌ಕಾ ಸಾಥ್-ಸಬ್‌ಕಾ ವಿಕಾಸ್, ಆದರೆ ಮಾಡುತ್ತಿರೋದು ಮಾತ್ರ ಸಬ್‌ಕಾ ಸರ್ವನಾಶ ಎಂದು ಕಿಡಿಕಾರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next