Advertisement

ಪ್ರಿಯಾಂಕ್‌ ಖರ್ಗೆ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ: ವೀರಯ್ಯ

12:56 AM Jun 29, 2019 | Lakshmi GovindaRaj |

ಬೆಂಗಳೂರು: “ರಾಜ್ಯದ ಎಲ್ಲ 7 ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ದಲಿತ ಸಮುದಾಯ ಬಿಜೆಪಿ ಬೆಂಬಲಿಸುತ್ತಿರುವುದು ಸ್ಪಷ್ಟವಾಗುತ್ತಿದ್ದಂತೆ ರಾಜಕೀಯ ಅಭದ್ರತೆಗೆ ಒಳಗಾಗಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ’ ಎಂದು ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಡಿ.ಎಸ್‌.ವೀರಯ್ಯ ದೂರಿದರು.

Advertisement

ಬಿ.ಎಸ್‌.ಯಡಿಯೂರಪ್ಪ ಅವರು ದಲಿತರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಾಮಾಣಿಕ ಕಳಕಳಿಯಿಂದ ದಲಿತರ ಮನೆಗಳಿಗೆ ಭೇಟಿ ನೀಡಿ ಉಪಾಹಾರ, ಭೋಜನ ಸೇವಿಸಿದ್ದಾರೆ. ಆದರೆ ಒಮ್ಮೆಯೂ ದಲಿತರ ಕೇರಿಗೆ ಹೋಗದ, ದಲಿತರ ಮನೆಯ ಊಟವನ್ನೇ ಸೇವಿಸದ ಪ್ರಿಯಾಂಕ್‌ ಖರ್ಗೆಯವರು ಯಡಿಯೂರಪ್ಪ ಅವರನ್ನು ಟೀಕಿಸುವ ಮೂಲಕ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಡಿಯೂರಪ್ಪ ಅವರು ದಲಿತರ ಮನೆಗಳಿಗೆ ಭೇಟಿ ನೀಡಿದಾಗ ಹೋಟೆಲ್‌ನಿಂದ ಉಪಾಹಾರ, ಊಟ ತರಿಸಿ ಸೇವಿಸುತ್ತಿದ್ದರು ಎಂಬುದಾಗಿ ಪ್ರಿಯಾಂಕ್‌ ಖರ್ಗೆ ಹೇಳಿಕೆ ನೀಡಿರುವುದು ಅತ್ಯಂತ ಬಾಲಿಶ. ಯಡಿಯೂರಪ್ಪ ಅವರು ದಲಿತರ ಮನೆಗಳಿಗೆ ಭೇಟಿ ನೀಡಿದಾಗ ನಾನೂ ಅವರೊಂದಿಗಿದ್ದೆ. ದಲಿತರ ಕುಟುಂಬದಲ್ಲಿ ಸಿದ್ಧಪಡಿಸಿದ ಊಟವನ್ನೇ ಸೇವಿಸಿದ್ದಾರೆಯೇ ಹೊರತು ಹೋಟೆಲ್‌ನಿಂದ ತರಿಸಿದ ಆಹಾರ ಸೇವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆಯವರು ಯಡಿಯೂರಪ್ಪ ಅವರ ದಲಿತ ಪರ ಕಾಳಜಿಯನ್ನು ಗುರುತಿಸಿ ಅವರ ಹಿರಿತನಕ್ಕೆ ಗೌರವ ನೀಡುವುದನ್ನು ಕಲಿಯಬೇಕು. ಬಾಲಿಶ ಹೇಳಿಕೆ ನೀಡುವ ಮೂಲಕ ದಲಿತರನ್ನು ದಾರಿ ತಪ್ಪಿಸಬಾರದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next